ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ದು ಕೊಡಬೇಕಾಗಿರುವುದು ರೋಗಕ್ಕಲ್ಲ ರೋಗಿಗೆ!

By Super
|
Google Oneindia Kannada News

(ಸಂದರ್ಶನ ಮುಂದುವರಿದಿದೆ) ಪ್ರ: ಹೋಮಿಯೋಪತಿ ಚಿಕಿತ್ಸೆ ನಿಧಾನವಾಗಿ ಕೆಲಸ ಮಾಡುತ್ತದೆ, ಕೆಲಸಲ ಬಳಸಿದಾಗ ಪೀಡೆ ಹೆಚ್ಚಾಗುತ್ತದೆ ಎನ್ನುತ್ತಾರೆ, ನೀವೇನೆನ್ನುತ್ತೀರಿ?

ಉ: ಮೂಢನಂಬಿಕೆ ಮತ್ತು ಆಚಾರಗಳು ಕೇವಲ ಅವಿದ್ಯಾವಂತರ ಮೊನಾಪಲಿ' ಅಲ್ಲ. ವಿದ್ಯಾವಂತರು, ಅದರಲ್ಲೂ ವಿಜ್ಞಾನಿಗಳು ಎಂದೆನಿಸಿಕೊಂಡವರು ವೈಜ್ಞಾನಿಕ ಮೂಢನಂಬಿಕೆ ಇಟ್ಟುಕೊಂಡಿರುತ್ತಾರೆ, ಅಷ್ಟೇ ಅಲ್ಲ ಅದನ್ನು ಪೋಷಿಸುತ್ತಲೂ ಬಂದಿರುತ್ತಾರೆ. ಕೆಲವು ರೋಗಿಗಳು ಬಹಳ ಕಡೆಗೆ ಸುತ್ತಾಡಿ ಕೊನೆಯ ಉಪಾಯವೆಂದು ಹೋಮಿಯೋಪತಿಯತ್ತ ದೃಷ್ಟಿ ಹೊರಳಿಸುತ್ತಾರೆ. ಅವರು ಚಮತ್ಕಾರವೆಂಬಂತೆ ಗುಣಹೊಂದಿದಾಗ, ಎಲ್ಲಿಯೋ ಸ್ಟಿರಾಯಿಡ್ ಕೊಟ್ಟಿರಬೇಕು'' ಎನ್ನುವವರೂ ಇದ್ದಾರೆ. ಯಾವುದೇ ನಿಷ್ಠಾವಂತ ಹೋಮಿಯೋಪತಿ ವೈದ್ಯ ಇಂಥ ವ್ಯಭಿಚಾರ ಮಾಡಲಾರ ಎಂದು ನಾನು ಹೇಳುತ್ತೇನೆ. ವೈದ್ಯಕೀಯ ರಂಗದಲ್ಲಿ ಕಳೆದ ಎರಡು ದಶಕಗಳ ಬೆಳವಣಿಗೆಯನ್ನು ನೋಡಿದರೆ ಮಹಾಮಾರಿ ರೂಪದ ಕಾಯಿಲೆಗಳ ಜೊತೆಗೆ ಮಾನವನು ಹೈಟೆಕ್ ಚಿಕಿತ್ಸೆಯ ರೂಪದಲ್ಲಿ ಮಹಾಮರಿಯನ್ನು ಕಟ್ಟಿಕೊಳ್ಳುತ್ತಿದ್ದಾನೆ. ರೋಗದ ಪತ್ತೆಗಾಗಿ, ನಂತರ ಚಿಕಿತ್ಸೆಗಾಗಿ ಸುರಿಯುವ ಹಣದ ರಾಶಿ ನೋಡಿದರೆ ತಲೆತಿರುಗುತ್ತದೆ. ಇದು ಮಧ್ಯಮವರ್ಗದವರಿಗೆ ಮತ್ತು ಬಡವರಿಗೆ ಅಸಾಧ್ಯ ಎನ್ನುವಂತಿದೆ. ಈ ಧನ್ವಂತರಿ ದೊರೆಯುವುದು ಧನವಂತರಿಗೆ ಎನ್ನಬೇಕಾಗುತ್ತದೆ. ಆದರೆ ಹೋಮಿಯೋಪತಿ ಚಿಕಿತ್ಸೆ ಸಿರಿವಂತರಿಗೆ ಮತ್ತು ಬಡವರಿಗೆ ಸಮಾನವಾಗಿ ದೊರೆಯುತ್ತದೆ. ಈ ಔಷಧಿಯನ್ನು ಮನುಷ್ಯರ ಮೇಲೆ ಪ್ರಯೋಗಿಸಿ ಕೊಡಲಾಗುತ್ತದೆ ಪ್ರಾಣಿಗಳ ಮೇಲಲ್ಲ. ಈ ಔಷಧಿ ಸುರಕ್ಷಿತವಾಗಿರುತ್ತದೆ, ಯಾವುದೇ ಪಾರ್ಶ್ವ ಪರಿಣಾಮ ಇದರಿಂದ ಇಲ್ಲ. ಇದರ ಹಿಂದಿನ ತತ್ತ್ವ, ಯಾವ ಔಷಧಿ ರೋಗವನ್ನು ಉಂಟುಮಾಡಬಲ್ಲದೋ ಅದೇ ನಿವಾರಣೆ ಮಾಡಲೂ ಸಮರ್ಥವಾಗಿದೆ. ಈ ಔಷಧಿಯನ್ನು ಸಸ್ಯ, ಖನಿಜ, ಪ್ರಾಣಿ ಸಂಪತ್ತಿನಿಂದ, ಅಷ್ಟೇ ಏಕೆ ಕ್ಯಾನ್ಸರ್, ಕ್ಷಯ ರೋಗಗಳ ಕೋಶದಿಂದಲೂ ಸಹ ತಯಾರಿಸಲಾಗುತ್ತದೆ. ಇಲ್ಲಿ ರೋಗಕ್ಕೆ ಅಲ್ಲ, ರೋಗಿಗೆ ಔಷಧಿ ಕೊಡಲಾಗುತ್ತದೆ. ರೋಗಿಯ ರೋಗವನ್ನು ಪ್ರತ್ಯೇಕವಾಗಿ ಪರಿಗಣಿಸದೇ ಅವನ ದೇಹ, ಮನ, ಬುದ್ಧಿಯನ್ನು ಒಟ್ಟಾರೆ ಪರಿಗಣಿಸಲಾಗುತ್ತದೆ. ಆನುವಂಶಿಕತೆ, ಪರಿಸರ, ಸಾಮಾಜಿಕ ಪರಿಣಾಮ, ಮನಸ್ಥಿತಿ ಇವುಗಳನ್ನೂ ಪರಿಗಣಿಸಲಾಗುತ್ತದೆ. ರೋಗಕ್ಕೆ ಭಾವನಾತ್ಮಕ ಮತ್ತು ಮಾನಸಿಕ ಉದ್ವೇಗ ಕೂಡ ಕಾರಣವಾಗಿರುತ್ತದೆ. ಇಲ್ಲಿ ಸಮಗ್ರ ವ್ಯಕ್ತಿತ್ವವನ್ನು ಅನುಲಕ್ಷಿಸಿ ಚಿಕಿತ್ಸೆ ನೀಡುವ ವಿಧಾನ (ಹೊಲಿಸ್ಟಿಕ್ ವಿಧಾನ) ಹೋಮಿಯೋಪತಿ ಅನುಸರಿಸುವ ವಿಧಾನ. ಕೆಮ್ಮಿನಿಂದ ಕ್ಯಾನ್ಸರ್‌ವರೆಗೆ ಇಲ್ಲಿ ಚಿಕಿತ್ಸೆ ಲಭ್ಯ.

ಪ್ರ: ನಿಮ್ಮ ಪ್ರಕಾರ ಹೋಮಿಯೋಪತಿ ಚಿಕಿತ್ಸೆಯ ವೈಶಿಷ್ಟ್ಯವೇನು?

ಉ: ರೋಗಕ್ಕೆ ಒಂದು ಹೆಸರಿಟ್ಟು ಎಲ್ಲ ರೋಗಿಗಳಿಗೂ ಒಂದೇ ಔಷಧಿ ಕೊಡುವುದರಲ್ಲಿ ಹೋಮಿಯೋಪತಿಗೆ ವಿಶ್ವಾಸವಿಲ್ಲ. ಇಲ್ಲಿ ರೋಗದಷ್ಟೇ ರೋಗಿಗೂ ಪ್ರಾಮುಖ್ಯತೆ ನೀಡಲಾಗುತ್ತದೆ. ರೋಗಿಯನ್ನು ಸರಿಪಡಿಸಿದರೆ, ರೋಗವೂ ತಾನಾಗಿಯೇ ಹೋಗುತ್ತದೆ ಎಂಬ ತತ್ವದಲ್ಲಿ ಇದಕ್ಕೆ ವಿಶ್ವಾಸವಿದೆ. ರೋಗಿಯನ್ನು ಸರಿಪಡಿಸದೆಯೆ ರೋಗಕ್ಕೆ ಮಾತ್ರ ಮದ್ದು ಕೊಟ್ಟರೆ ತಾತ್ಕಾಲಿಕ ಉಪಶಮನ ದೊರೆಯಬಹುದು. ಆದರೆ ಅಷ್ಟೇ ವೇಗದಲ್ಲಿ ರೋಗ ಮರಳಿ ಬರುವ ಸಂಭವವಿರುತ್ತದೆ. ಅಥವಾ ಇನ್ನೊಂದು ಸಮಸ್ಯೆಯನ್ನು ತಂದು ಮುಂದಿಡಬಹುದು. ರೋಗವು ಪ್ರಕೃತಿಯ ಒಂದು ಭಾಗ ಎನ್ನುವುದಾದರೆ, ಅದರ ನಿವಾರಣೆ, ಅಂದರೆ, ಆರೋಗ್ಯವನ್ನು ಮರಳಿ ತರುವುದೂ ಪ್ರಕೃತಿಯ ಒಂದು ಭಾಗವಾಗಿರಬೇಕು ಎನ್ನುವುದರಲ್ಲಿ ಹೋಮಿಯೋಪತಿ ಜನಕ ಡಾ| ಹಾನಿಮನ್ ಅವರಿಗೆ ಅಚಲ ವಿಶ್ವಾಸವಿತ್ತು. ಅವರು ತೋರಿದ ಹೊಸ ಪಥವೇ ಹೋಮಿಯೋಪತಿ.

ಪ್ರ: ನೀವು ಎಂಡಿ ಪದವಿಯನ್ನು ದೂರದ ಔರಂಗಾಬಾದ್ ವಿಶ್ವವಿದ್ಯಾಲಯದಿಂದ ಪಡೆದಿರಿ. ನಿಮ್ಮ ವಿಶೇಷ ಅಧ್ಯಯನದ ವಿಷಯ ಸಂತಾನಹೀನತೆ' (Infertility). ಈ ಡಿಗ್ರಿ ಪಡೆದಾಗ ನಿಮಗೆ ಐವತ್ತು ವರ್ಷ. ಹೆಚ್ಚಿನ ಡಾಕ್ಟರರು ಒಳ್ಳೆಯ ಪ್ರ್ಯಾಕ್ಟಿಸ್ ಇದ್ದಾಗ ಓದು ನಿಲ್ಲಿಸಿ ಬಿಡುತ್ತಾರೆ. ದಿನಕ್ಕೆ 200ರಿಂದ 250 ರೋಗಿಗಳನ್ನು ಪರೀಕ್ಷೆ ಮಾಡುವ ನಿಮಗೆ ಅಭ್ಯಾಸ ಮಾಡಲು ಸಮಯ ಹೇಗೆ ಸಿಕ್ಕಿತು?

ಉ: ಲೇಖನ ಕಾರ್ಯ ಮತ್ತು ಸಂಶೋಧನೆಗಾಗಿ ನಿರಂತರ ಓದಬೇಕಾಗುತ್ತದೆ. ನನಗೆ ಎಂಡಿ ದೊರೆಯುವ ಮೊದಲೇ ಸಾವಿರ ಜನ ಸಂತಾನಹೀನರಿಗೆ ಮಕ್ಕಳಾಗುವಂತೆ ಚಿಕಿತ್ಸೆ ಮಾಡಿದ್ದೆ. ಬೇರೆ ರೋಗಗಳನ್ನು ವಾಸಿ ಮಾಡಿದಾಗ ಅದಕ್ಕೆ ಹೆಚ್ಚಿನ ಪ್ರಚಾರ ಸಿಗುವುದಿಲ್ಲ. ಬಂಜೆ ಎಂಬ ಹಣೆಪಟ್ಟಿ ಕಟ್ಟಿಕೊಂಡವಳಿಗೆ ಮಕ್ಕಳಾದಾಗ ಆ ಸುದ್ದಿ ಬಹಳ ಬೇಗ ಹಬ್ಬುತ್ತದೆ.

ಪ್ರ: ಕೆಲವು ಅಲೋಪತಿ ಡಾಕ್ಟರರು ಹೋಮಿಯೋಪತಿಯನ್ನು ನಿಷ್ಕೃಷ್ಟ ವಿಜ್ಞಾನ (Exact Science)ಇದಲ್ಲ ಎಂದು ಟೀಕಿಸುತ್ತಾರೆ. ನಿಮ್ಮ ಉತ್ತರವೇನು?

ಉ: ಹಾಗೆ ನೋಡಿದರೆ ಫಿಜಿಕ್ಸ್, ಕೆಮೆಸ್ಟ್ರಿ, ಬಯಾಲಜಿ ಇವುಗಳಿಗೆ ತಾಪಮಾನ, ಒತ್ತಡ ಮತ್ತು ಪರಿಸರಗಳ ಪರಿಮಿತಿ ಇರುತ್ತದೆ. ಹಾಗೆ ನೋಡಿದರೆ ಗಣಿತವೊಂದೇ ನಿಷ್ಕೃಷ್ಟ ವಿಜ್ಞಾನ. ಚಂದ್ರಲೋಕಕ್ಕೆ ಹೋದರೂ 1+1=2 ಆಗಿರುತ್ತದೆ. (ಆದ್ದರಿಂದ ಎಲ್ಲ ವಿಜ್ಞಾನಗಳೂ ಗಣಿತದ ಪರೀಕ್ಷೆಯಲ್ಲಿ ಪಾಸಾಗಬೇಕಾಗುತ್ತದೆ.) ಹಾಗೆ ನೋಡಿದರೆ ಅಲೋಪತಿಯ ಸಾಧನೆ ಬೇರೆ ವಿಜ್ಞಾನಗಳಿಂದ ಎರವಲು ಪಡೆದದ್ದು ಅಲ್ಲವೆ? ಔಷಧಿಗಾಗಿ ನೋಬೆಲ್ ಪ್ರೈಜ್ ಪಡೆದವರ ಲಿಸ್ಟ್ ನೋಡಿದರೆ ಒಬ್ಬರಾದರೂ ಅಲೋಪತಿ ಡಾಕ್ಟರರು ಇದ್ದಾರೆಯೇ? ಅವರೆಲ್ಲ ಫಿಜಿಕ್ಸ್, ಕೆಮೆಸ್ಟ್ರಿ, ಬಯಾಲಜಿಯಲ್ಲಿ ಪರಿಣತರು. ಎಂಆರ್‌ಐ, ಸಿಟಿಸ್ಕ್ಯಾನ, ಅಲ್ಟ್ರಾಸೌಂಡ್, ಎಕ್ಸ್‌ರೇ ಮುತಾದವೆಲ್ಲ ಬೇರೆ ವಿಜ್ಞಾನಿಗಳ ಕೊಡುಗೆಗಳಾಗಿಲ್ಲವೇ?

ಪ್ರ: ರೋಗ ನಿರೋಧಕ ಲಸಿಕೆಗಳನ್ನು ಆಧುನಿಕರು ಕಂಡು ಹಿಡಿದಿದ್ದಾರೆ. ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉ: ಲಸಿಕೆ ಸಿದ್ಧಾಂತ ಮೂಲತಃ ಹೋಮಿಯೋಪತಿಯದು. ಯಾವ ವಸ್ತುವಿನಿಂದ ಕಾಯಿಲೆ ಬರುತ್ತದೋ ಅದೇ ವಸ್ತು ಕಾಯಿಲೆಯನ್ನು ಗುಣಪಡಿಸಬಲ್ಲದು.'' ಇದು ಹೋಮಿಯೋಪತಿಯ ಮೂಲ ಸಿದ್ಧಾಂತ. ಆದರೆ ಯಾವುದೋ ಪ್ರಾಣಿಯ ಮೇಲೆ ಪ್ರಯೋಗ ಮಾಡಿದ ಔಷಧಿಯನ್ನು ಮನುಷ್ಯನ ಮೇಲೆ ಪ್ರಯೋಗಿಸುವುದನ್ನು ಹೋಮಿಯೋಪತಿ ಒಪ್ಪುವುದಿಲ್ಲ.

ಪ್ರ: ನಿಮಗೆ ಅಲೋಪತಿಯ ಬಗ್ಗೆ ಗೌರವವಿಲ್ಲವೇ?

ಉ: ಗೌರವವಿದೆ. ಅಲೋಪತಿಯ ಸಾಧನೆಗಳನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ ಅಲೋಪತಿ ಡಾಕ್ಟರರು ರೋಗಿಯ ಸಮಗ್ರ ಅಭ್ಯಾಸ ಮಾಡಬೇಕು. ದೇಹದ ಭಾಗಗಳಾದ ತಲೆ, ಕಣ್ಣು, ಕಿವಿ, ಹೃದಯ, ಚರ್ಮ, ಮೂಳೆ ಇವುಗಳಿಗೆಲ್ಲ ಸ್ಪೆಶಾಲಿಸ್ಟ್ ಇದ್ದಾರೆ. ಒಂದು ಭಾಗದ ಚಿಕಿತ್ಸೆ ಇನ್ನೊಂದು ಭಾಗಕ್ಕೆ ಹಾನಿಯನ್ನುಂಟು ಮಾಡಬಹುದು. ಆದ್ದರಿಂದ ದೇಹವನ್ನು ಒಂದು ಎಂದು ಪರಿಗಣಿಸಿ ಚಿಕಿತ್ಸೆ ಮಾಡುವದು ಅವಶ್ಯ, ಮತ್ತು ಅನಿವಾರ್ಯ ಕೂಡ. ವ್ಯಕ್ತಿಯಸ್ವಭಾವ, ಮಾನಸಿಕಸ್ಥಿತಿ, ಉದ್ವಿಗ್ನತೆ, ದುರಾಸೆ, ಹೊಟ್ಟೆಕಿಚ್ಚು ಮುಂತಾದವು ಅವನ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡುತ್ತವೆ. ಅಲೋಪತಿ ಸೋತಲ್ಲಿ ಅನೇಕ ಕಡೆ ಹೋಮಿಯೋಪತಿ ಗೆಲ್ಲಲು ಕಾರಣವೇನೆಂದರೆ ನಾವು ರೋಗದ ಮೂಲಕಾರಣ ಕಂಡು ಹಿಡಿಯುತ್ತೇವೆ, ಅದಕ್ಕೆ ಮದ್ದುಕೊಡುತ್ತೇವೆ. ರೋಗ ವಾಸಿಯಾಗುತ್ತದೆ, ಮರುಕಳಿಸಿ ಬರುವುದಿಲ್ಲ, ಅಷ್ಟೇ ಅಲ್ಲ ಪಾರ್ಶ್ವಪರಿಣಾಮಗಳೂ ಉಂಟಾಗುವುದಿಲ್ಲ. ಅಲೋಪತಿಗೆ ಕೆಟ್ಟ ಹೆಸರು ಬರಲು ಕಾರಣ ಅದನ್ನು ಪ್ರೋತ್ಸಾಹಿಸುವ ಇಂಟರ್ ನ್ಯಾಶನಲ್ ಇಂಗ್ಲಿಷ್ ಮೆಡಿಸಿನ್ ಮಾಫಿಯಾ'. ಆ ಮಾಫಿಯಾದಿಂದಾಗಿ ರೋಗಪರೀಕ್ಷೆ ಹಾಗೂ ಉಪಚಾರ ಬಹಳ ದುಬಾರಿಯಾಗುತ್ತಿದೆ. ಬಡವರು, ಮಧ್ಯಮವರ್ಗದವರು ಕೂಡ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಇಲ್ಲಿ ನಡೆವಷ್ಟು ವಂಚನೆ ಬೇರೆಲ್ಲಿಯೂ ನಡೆಯುವುದಿಲ್ಲ. ಇಲ್ಲಿ ನೈತಿಕತೆ ಇಲ್ಲ, ಡಾಕ್ಟರರು ವೈದ್ಯಶಾಸ್ತ್ರದ ಜನಕನೆಂಬ ಖ್ಯಾತಿಯ ಗ್ರೀಕ್ ವೈದ್ಯ ಹಿಪ್ಪೊಕ್ರೇಟಸ್ ಹೆಸರಿನಲ್ಲಿ ತೆಗೆದುಕೊಳ್ಳುವ ಶಪಥ ಅರ್ಥಹೀನವಾಗುತ್ತದೆ.

ವಿಳಾಸ : ಡಾ।ರುದ್ರೇಶ್‌, ಅಶ್ವಿನಿ ಹೋಮಿಯೋ ಕ್ಲಿನಿಕ್‌, ಡಾ।ಡಿವಿಜಿ ರಸ್ತೆ , ಬಸವನಗುಡಿ, ಸಿಂಡಿಕೇಟ್‌ ಬ್ಯಾಂಕ್‌ ಮುಂಭಾಗ, ಬೆಂಗಳೂರು- 560004.

English summary
Homeopathy medicines are affordable by poor, unlike Alopathy says Dr. BT Rudresh in an interview to G.V. Kulkarni. Rudresh also unfolds his life history and myths about alopathy and homeopathy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X