ಜೆಡಿಎಸ್-ಬಿಜೆಪಿ ಮೈತ್ರಿ ಸಾಧ್ಯತೆ ನಿಚ್ಚಳ ಅಂತಾರೆ ಸಂಖ್ಯಾಶಾಸ್ತ್ರಜ್ಞೆ ಶೀಲಾ ಬಜಾಜ್
Recommended Video
"ಈ ಸಲದ ಕರ್ನಾಟಕ ವಿಧಾನಸಭೆ ಚುನಾವಣೆಯ ಬಗ್ಗೆ ಭವಿಷ್ಯ ಹೇಳುವುದಕ್ಕೆ ಶುರುವಿನಲ್ಲಿ ಒಂದು ವಿಚಾರ ತಿಳಿಸಿಬಿಡ್ತೀನಿ. ಇದು ಸಂಖ್ಯಾಶಾಸ್ತ್ರದ ಆಧಾರದಲ್ಲಿ ಹೇಳಲಾಗುತ್ತಿದೆ. ಹಾಗೆ ನೋಡಿದಾಗ ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಬಹಳ ಪ್ರಬಲವಾಗಿದೆ. ಆ ನಂತರ ತುಂಬ ಚೆನ್ನಾಗಿರುವುದು ದೇವೇಗೌಡ ಅವರಿಗೆ" ಎನ್ನುತ್ತಾರೆ ದೇಶದ ಖ್ಯಾತ ಸಂಖ್ಯಾಶಾಸ್ತ್ರಜ್ಞೆ ಶೀಲಾ ಎಂ. ಬಜಾಜ್.
ಇದೇನು ಇಬ್ಬರಿಗೆ ತುಂಬ ಚೆನ್ನಾಗಿದೆ ಅಂದರೆ ಏನರ್ಥ ಎಂದು ಕೇಳಿದರೆ, ಜೆಡಿಎಸ್ ಗೆ ಬಹಳ ಹೆಚ್ಚಿನ ಸ್ಥಾನ ಬಾರದೆ ಇರಬಹುದು. ಆದರೆ ಯಡಿಯೂರಪ್ಪ ಅವರ ಹೆಸರು ಹಾಗೂ ಜನ್ಮ ದಿನಾಂಕ ಚೆನ್ನಾಗಿರುವುದರಿಂದ ಹೆಚ್ಚಿನ ಸ್ಥಾನಗಳನ್ನು ಪಡೆಯುತ್ತಾರೆ. ಆದರೆ ಸರಕಾರ ರಚಿಸುವ ಮಟ್ಟದಲ್ಲಿ ಸಂಖ್ಯಾ ಬಲ ಸಿಗುವುದಿಲ್ಲ.
ಏಷ್ಯಾದಲ್ಲೇ ಬೆಸ್ಟ್ ಸಂಖ್ಯಾಶಾಸ್ತ್ರಜ್ಞೆ ಶೀಲಾ ಬಜಾಜ್ ಬಗ್ಗೆ ಗೊತ್ತೆ?
ಜೆಡಿಎಸ್ ಬೆಂಬಲ ಇಲ್ಲದೆ ಸರಕಾರ ಮಾಡುವುದಕ್ಕೆ ಸಾಧ್ಯ ಇಲ್ಲ. ಆದರೆ ಇಲ್ಲಿ ಜೆಡಿಎಸ್ ಗೆ ಕುಮಾರಸ್ವಾಮಿ ಅವರಿಗಿಂತ ದೇವೇಗೌಡರ ಹೆಸರು, ಗ್ರಹಾನುಕೂಲ ಸಹಾಯ ಮಾಡಲಿದೆ. ಮುಂದಿನ ಸರಕಾರವು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ರಚಿಸುವಂಥ ಸನ್ನಿವೇಶಗಳು ಹೆಚ್ಚು ಸ್ಫುಟವಾಗಿ ಕಾಣಿಸುತ್ತಿದೆ.
ಸಿದ್ದರಾಮಯ್ಯ ಅವರಿಗೆ ಅನುಕೂಲ ಮಾಡಿಕೊಟ್ಟಿರುವ ರವಿ
ಸಂಖ್ಯಾಶಾಸ್ತ್ರದ ಪ್ರಕಾರ ಕಾಂಗ್ರೆಸ್ ನ ಸಿದ್ದರಾಮಯ್ಯ ಅವರ ಆಧಿಪತ್ಯವನ್ನು ಗುರು ಹಾಗೂ ಶುಕ್ರ ಮಾಡುತ್ತಿದೆ. ಆದರೆ ಅವರಿಗೆ ಅದು ಶತ್ರು ಗ್ರಹಗಳಂತಿವೆ. ಇನ್ನು ಹೆಸರಿನ ಸಂಖ್ಯೆ ಕೂಡ ಅಷ್ಟೇ ಮುಖ್ಯ. ಅವರ ಹೆಸರಿನ ಸಂಖ್ಯೆ ಪ್ರಕಾರ ರವಿ ಬರುತ್ತದೆ. ಇದರಿಂದ ಅವರಿಗೆ ಕೆಲ ಅನುಕೂಲ ಮಾಡಿಕೊಟ್ಟಿದೆ, ಮಾಡಿಕೊಡುತ್ತಿದೆ. ಆ ಗ್ರಹ ಬಹಳ ಸಹಾಯ ಮಾಡುತ್ತಿದೆ.
ಯಡಿಯೂರಪ್ಪ ಹೆಸರಿನ ಸಂಖ್ಯೆ ಬಲಿಷ್ಠವಾಗಿದೆ
ಇನ್ನು ಯಡಿಯೂರಪ್ಪ ಅವರ ಆಧಿಪತ್ಯವಾಗಿ ಕುಜ ಮತ್ತು ಶನಿ ಗ್ರಹ ಇದೆ. ಕುಜ ಗ್ರಹವು ಬಹಳ ಅನುಕೂಲ ಮಾಡಿಕೊಡುತ್ತದೆ. ಅದರಲ್ಲೂ ರಾಜಕೀಯದಲ್ಲಿರುವವರಿಗೆ ಬಹಳ ಸಹಾಯ ಮಾಡುತ್ತದೆ. ಇನ್ನು ಯಡಿಯೂರಪ್ಪ ಅವರ ಹೆಸರಿನ ಸಂಖ್ಯೆ ಬಹಳ ಪ್ರಬಲವಾಗಿದೆ. ಆ ಹೆಸರಿನ ಆಧಿಪತ್ಯವನ್ನು ಬುಧ, ಶುಕ್ರ ವಹಿಸಿದೆ.
ಕುಮಾರಸ್ವಾಮಿ ಅವರಿಗಿಂತ ದೇವೇಗೌಡರ ಗ್ರಹಗಳು ಪ್ರಬಲವಾಗಿವೆ
ಕುಮಾರಸ್ವಾಮಿ ಅವರ ಜನ್ಮ ದಿನಾಂಕ ಹಾಗೂ ಗಮ್ಯದ ಸಂಖ್ಯೆ ಕೇತು ಇದೆ. ಆದ್ದರಿಂದ ಅವರಿಗೆ ರಾಜಕೀಯವಾಗಿ ಅಂತಹ ಅನುಕೂಲಕರ ಸನ್ನಿವೇಶವಿಲ್ಲ. ಆದರೆ ದೇವೇಗೌಡರ ಗ್ರಹಗಳು ಬಹಳ ಪ್ರಬಲವಾಗಿದೆ ಮತ್ತು ರಾಜಕೀಯವಾಗಿ ಹೇಳಿ ಮಾಡಿಸಿದಂತಿದೆ. ಬಲಿಷ್ಠವಾದ ಕುಜ ಹಾಗೂ ಗುರು ಇರುವುದರಿಂದ ಅದರ ಪ್ರಭಾವ ಕುಮಾರಸ್ವಾಮಿ ಅವರ ಮೇಲಿದೆ. ದೇವೇಗೌಡರ ಹೆಸರು ಬುಧ ಗ್ರಹವನ್ನು ಸೂಚಿಸುತ್ತದೆ.
ಜೆಡಿಎಸ್- ಬಿಜೆಪಿ ಮೈತ್ರಿ ಸರಕಾರದ ಸೂಚನೆ
ಚುನಾವಣೆ ದಿನಾಂಕ ಗುರುವನ್ನು ಸೂಚಿಸುತ್ತದೆ. ಈ ಗ್ರಹ ಎಲ್ಲರಿಗೂ ಚೆನ್ನಾಗಿದೆ. ಆದರೆ ಜೆಡಿಎಸ್ ಶಕ್ತಿ ಎಲ್ಲರಿಗಿಂತ ಹೆಚ್ಚಾಗಿದೆ. ಆದರೆ ಜೆಡಿಎಸ್ ಇಲ್ಲದೆ ಯಾರಿಗೂ ಅಧಿಕಾರ ನಡೆಸುವುದು ಕಷ್ಟವಾಗುತ್ತದೆ. ಮತ ಎಣಿಕೆ ಅಮಾವಾಸ್ಯೆ ಬರುತ್ತದೆ. ಸಾಮಾನ್ಯವಾಗಿ ಆ ದಿನ ಒಳ್ಳೆ ಕೆಲಸ ಮಾಡುವುದಿಲ್ಲ. ಆ ದಿನ ಶುಕ್ರ-ರಾಹು ಆಧಿಪತ್ಯ ಬರುತ್ತದೆ. ಆ ದಿನ ಯಡಿಯೂರಪ್ಪ ಅವರಿಗೆ ಹೆಚ್ಚು ಅನುಕೂಲವಾಗಿದೆ. ದೇವೇಗೌಡರಿಗೆ ಹಾಗೂ ಯಡಿಯೂರಪ್ಪ ಅವರಿಗೆ ಅನುಕೂಲ ಕಾಣಿಸಿಕೊಳ್ಳುತ್ತಿರುವುದರಿಂದ ಜೆಡಿಎಸ್- ಬಿಜೆಪಿ ಮೈತ್ರಿ ಸರಕಾರ ರಚನೆ ಸಾಧ್ಯತೆ ತುಂಬ ಹೆಚ್ಚಾಗಿದೆ.