ಭೂಮಿಗಿಂತ ಹೆಚ್ಚು ನಡುಗಿಸುವ ಮಾಧ್ಯಮ ವರದಿಗಳು

ಈ ಪತ್ರ ನಿಮ್ಮ ಪೋರ್ಟಲ್ಲಿಗೆ ಮಾತ್ರ ಉದ್ದೇಶಿಸಿ ಬರೆಯುತ್ತಿಲ್ಲ. ಇಡೀ ಮಾಧ್ಯಮವನ್ನು ಉದ್ದೇಶಿಸಿ ಬರೆಯುತ್ತಿದ್ದೇನೆ. ಏ.11ರಂದು ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪವಾದ ನಂತರ ಏ.12ರಂದು ಮೆಕ್ಸಿಕೋದಲ್ಲಿ, ಏ. 14ರಂದು ನಂತರ ಭಾರತದ ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮತ್ತೆ ಭೂಕಂಪ ಸಂಭವಿಸಿದೆ. ಇಂಡೋನೇಷ್ಯಾದಲ್ಲಿ ಆದದ್ದು ಬೃಹತ್ ಪ್ರಮಾಣದ್ದಾಗಿದ್ದರೂ ಉಳಿದಲ್ಲಿ ಆಗಿರುವ ಭೂಕಂಪಗಳು ಕಡಿಮೆ ಪ್ರಮಾಣದ್ದವು.
ನಾನು ಹೇಳುತ್ತಿರುವುದೇನೆಂದರೆ, ಭೂಮಿ ನಡುಗಿಸಿದ್ದಕ್ಕಿಂತ ಹೆಚ್ಚಾಗಿ ಜನರನ್ನು ಈ ಮಾಧ್ಯಮಗಳು ನಡುಗಿಸುತ್ತಿರುವುದು. ಭೂಕಂಪನವಾಗುತ್ತಿದ್ದಂತೆ ಪೇಪರುಗಳ ಮುಖಾಂತರ, ಇಂಟರ್ನೆಟ್, ಟಿವಿ, ರೇಡಿಯೋ ಮುಖಾಂತರ ಸುದ್ದಿ ತಿಳಿಸುವುದು ಮಾಧ್ಯಮಗಳ ಕರ್ತವ್ಯವೇನೋ ಸರಿ. ಆದರೆ, ಸುದ್ದಿ ತಿಳಿಸುವ ನೆಪದಲ್ಲಿ ಟಿವಿ ಮಾಧ್ಯಮಗಳು ಕ್ಯಾಮೆರಾ, ಮೈಕನ್ನು ಹೊತ್ತು ಕಂಡಕಂಡವರನ್ನು ಸಂದರ್ಶಿಸುತ್ತ ಇನ್ನೂ ಹೆಚ್ಚಿನ ಭೀತಿ ಹುಟ್ಟಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿರುವ ನಾನು, ಮಹಾರಾಷ್ಟ್ರದಲ್ಲಿ ಭೂಕಂಪವಾಗಿದೆ ಎಂದು ಟಿವಿ ಮುಖಾಂತರ ತಿಳಿಯುತ್ತಿದ್ದಂತೆ ಪುಣೆಯಲ್ಲಿರುವ ನನ್ನ ಸೋದರ ಸಂಬಂಧಿಗೆ ಫೋನಾಯಿಸಿದೆ. ನಾನು ಭೂಕಂಪದ ಬಗ್ಗೆ ತಿಳಿಸುವವರೆಗೆ ನನ್ನ ಸಂಬಂಧಿಗೆ ಭೂಕಂಪವಾಗಿದೆ ಎಂಬುದೂ ತಿಳಿದಿರಲಿಲ್ಲ. ನಾನು ತಿಳಿಸಿದ ನಂತರ ಟಿವಿ ನೋಡಿ, ಅವರು ಸುದ್ದಿ ತಿಳಿಸುವ ವೈಖರಿ ನೋಡಿ, ತನ್ನವರಿಗೆ ಏನಾಯಿತೋ ಏನೋ ಎಂದು ಹೆದರಿ ಎಲ್ಲ ಕಡೆ ಫೋನ್ ಮಾಡಲು ಶುರು ಮಾಡಿದ. ಅವರ ಮನೆಯವರಿಗೆ ಕೂಡ ಭೂಕಂಪ ಆಗಿರುವುದು ತಿಳಿದಿರಲಿಲ್ಲ.
ಭೂಕಂಪದ ಬಗ್ಗೆ ನಿಖರ ಮಾಹಿತಿ ನೀಡಬೇಕಾಗಿರುವುದು ಭೂಕಂಪ ಮಾಪನ ಕೇಂದ್ರಗಳು. ಅವುಗಳ ಪ್ರಕಾರ ಭೂಮಿಯಲ್ಲಿ ಆಗಾಗ ಅತಿ ಕಡಿಮೆ ಪ್ರಮಾಣದ ಕಂಪನಗಳು ಆಗುತ್ತಲೇ ಇರುತ್ತವೆ. ಭೂವಿಜ್ಞಾನಿಗಳೇ ಜನರಿಗೆ ಹೆದರದಂತೆ, ಭೂಕಂಪದಿಂದ ಭಾರತದಲ್ಲಿ ಯಾವುದೇ ಅಪಾಯವಿಲ್ಲ ಎಂದು ಅಭಯ ನೀಡುತ್ತಿದ್ದಾಗ, ಮಾಧ್ಯಮಗಳು ಭೂಕಂಪದ ಬಗ್ಗೆ ಅತಿರಂಜನೀಯ ಸುದ್ದಿಗಳನ್ನು, ಜನರು ಹೆದರುವ ಹಾಗೆ ಪ್ರಸಾರ ಮಾಡುವುದೇಕೆ?
ಈ ಪತ್ರದ ಉದ್ದೇಶವೇನೆಂದರೆ, ಇಂಥ ಸುದ್ದಿ ಬ್ರೇಕ್ ಆಗುತ್ತಿದ್ದಂತೆಯೆ ಬಿಲ್ಡಿಂಗಿಂದ ಬಿಲ್ಡಿಂಗಿಗೆ ನೆಗೆಯುತ್ತ, ಸಣ್ಣ ನೀರಿನ ಬಾಟಲಿ ಸಣ್ಣಗೆ ಅಲುಗಾಡಿದ್ದನ್ನು ಗಂಟೆಗಟ್ಟಲೆ ತೋರಿಸುವ ಅಗತ್ಯವೇನಿರುತ್ತದೆ? ಮೊದಲೇ ಇದ್ದ ಬಿರುಕನ್ನು ತಾಸುಗಟ್ಟಲೆ ತೋರಿಸುತ್ತ, ಇದು ಭೂಕಂಪದಿಂದಲೇ ಆಗಿದ್ದೆಂದು ವೀಕ್ಷಕರಿಗೆ ತೋರಿಸುವುದೇಕೆ? ಇಂಡೋನೇಷ್ಯಾದಲ್ಲಿ ಭೂಕಂಪವಾದಾಗಲೂ, ಇನ್ನೇನು ಸುನಾಮಿ ಎದ್ದೇಬಿಟ್ಟಿತು, ಭಾರತದ ಕರಾವಳಿಗೆ ಅಪ್ಪಳಿಸಿಯೇಬಿಟ್ಟಿತು, ಎಲ್ಲ ಸರ್ವನಾಶವಾಯಿತು ಎಂಬಂತೆ ಎಲ್ಲ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿದ್ದವು. ಇಂಟರ್ನೆಟ್ ಸುದ್ದಿಗಳು ಕೂಡ ಇದಕ್ಕೆ ಹೊರತಲ್ಲ.
ಪತ್ರಕರ್ತರ ಮೇಲೆ ವಕೀಲರಿಂದ ಹಲ್ಲೆಯಾದಾಗಲೂ ಇಂಥದೇ ಅನೇಕ ಗಾಳಿಸುದ್ದಿಗಳು ವೀಕ್ಷಕರ ಕಿವಿಗಳನ್ನು ಅಪ್ಪಳಿಸುತ್ತಿದ್ದವು. ವಕೀಲರ ಹಲ್ಲೆಯಿಂದ ಒಬ್ಬ ಪೊಲೀಸ್ ಸತ್ತೇ ಹೋದ, ವಕೀಲನೊಬ್ಬ ಮತ್ತೊಬ್ಬ ಪೊಲೀಸನ ಕಣ್ಣುಗಳನ್ನು ಬೆರಳು ಹಾಕಿ ಕಿತ್ತೇಬಿಟ್ಟ ಎಂಬಿತ್ಯಾದಿ ಸುದ್ದಿಗಳನ್ನು ಬಿತ್ತರಿಸಲಾಗುತ್ತಿತ್ತು. ಇನ್ನು, 'ಭೀಮಾ ತೀರದಲ್ಲಿ' ವಿವಾದಕ್ಕೆ ಸಂಬಂಧಿಸಿದ ಎಲ್ಲ ಟಿವಿಗಳಲ್ಲಾದ ಚರ್ಚೆಗಳ ಬಗ್ಗೆ ಮಾತನಾಡುವುದೇ ಬೇಡ. ನನ್ನ ವಿನಂತಿ ಇಷ್ಟೆ. ಮಾಧ್ಯಮಗಳು ಎಲ್ಲರಿಗಿಂತ ಮೊದಲು ಸುದ್ದಿ ತಿಳಿಸುವ ಧಾವಂತದಲ್ಲಿ ಒಮ್ಮೆಲೆ ತೀರ್ಮಾನಕ್ಕೆ ಬರುವ ಬದಲು ಸಂಯಮದಿಂದ ನಿಖರವಾದ ಸುದ್ದಿಗಳನ್ನು ಬಿತ್ತರಿಸುವತ್ತ ಗಮನ ಹರಿಸಲಿ.












Click it and Unblock the Notifications