ಅಸಲಿಗೆ, ಬೆಂಗಳೂರಿನಲ್ಲಿ ಧರಿತ್ರಿ ಕಂಪಿಸಿದ್ದೇಕೆ?

A warning bell from the earth
ಕಾನೂನಿನ ಅಡಿಯಲ್ಲೇ ಭೂಮಿಯಲ್ಲಿ ಹುದುಗಿರುವ ಸಂಪತ್ತನ್ನು ರಾಜಕಾರಣಿಗಳು, ಅಧಿಕಾರಿಗಳು ಕೊಳ್ಳೆಹೊಡೆಯುತ್ತಿದ್ದಾರೆ, ಅಧಿಕಾರಕ್ಕಾಗಿ ಭೂಮಿಯ ಮೇಲೆ ಬಲವಾಗಿ ತಳವೂರಿರುವ ಮುಖ್ಯಮಂತ್ರಿಗಳು ಶರಂಪರ ಕಿತ್ತಾಡುತ್ತಿದ್ದಾರೆ, ಹಣದ ಆಸೆಗಾಗಿ ಪರೀಕ್ಷೆ ಪೇಪರುಗಳು ಲೀಕಾಗಿ ವಿದ್ಯಾರ್ಥಿಗಳು ಒದ್ದಾಡುತ್ತಿದ್ದಾರೆ, ಹೆಣ್ಣು ಎಂಬ ಕಾರಣಕ್ಕೆ ಅಪ್ಪ ಮಗಳನ್ನು ನಿರ್ದಯವಾಗಿ ಸಾಯಿಸುತ್ತಿದ್ದಾನೆ.

ಇಷ್ಟೆಲ್ಲ ಅನಾಚಾರಗಳು ಈ ನೆಲದ ಮೇಲೆ, ಅದರಲ್ಲೂ ರಾಜ್ಯ ಅಧಿಕಾರದ ಕೇಂದ್ರಬಿಂದು ಬೆಂಗಳೂರಿನಲ್ಲಿ ನಡೆಯುತ್ತಿರುವಾಗ, ಸ್ವತಃ ಹೆಣ್ಣಿನ ಸಂಕೇತವಾಗಿರುವ ಧರಿತ್ರಿ ಗಡಗಡನೆ ನಡುಗದೆ ಇನ್ನೇನು ಮಾಡಿಯಾಳು? ಏ.11ರಂದು ಮಧ್ಯಾಹ್ನ ಬೆಂಗಳೂರು ಕಂಪಿಸಿದ್ದು ಭೂಕಂಪನದಿಂದ ಅಲ್ಲವೇ ಅಲ್ಲ. ಈ ಎಲ್ಲ ದೌರ್ಜನ್ಯ, ಕ್ರೌರ್ಯಗಳನ್ನು ನೋಡಿಯೂ ಏನೂ ಮಾಡಲಾಗದೆ ನಿಸ್ಸಹಾಯಕಳಾಗಿದ್ದಕ್ಕೆ ಥರಥರಿಸಿದ್ದಾಳೆ ಭೂಮಿ.

ಭೂಮಿಯ ಹೊಟ್ಟೆಯನ್ನೇ ಬಗೆದಿರುವ ಹಣಪಿಪಾಸುಗಳಿಗೆ, ಸ್ವಹಿತಕ್ಕಾಗಿ ಮಕ್ಕಳಹಿತಕ್ಕಾಗಿ ಭೂಮಿಯನ್ನು ಕಬಳಿಸುತ್ತಿರುವವರಿಗೆ, ಕಂಡವರ ಹೆಂಡಿರ ಸೆರಗಿಗೆ ಕೈಹಾಕಿದ್ದರೂ ಬಿರಬಿರನೆ ಅಡ್ಡಾಡುತ್ತಿರುವವರಿಗೆ, ತನ್ನ ಸ್ವಂತ ಮಗಳನ್ನೇ ನಿರ್ದಯವಾಗಿ ಕೊಂದವನಿಗೆ, ದುರಾಸೆಯಿಂದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವವರಿಗೆ ಶಿಕ್ಷೆ ಎಂದು? ಎಂದು ಎಲ್ಲವನ್ನೂ ಸುಮ್ಮನೆ ಸಹಿಸಿಕೊಂಡಿದ್ದ ಪೃಥ್ವಿ ಸಣ್ಣಗೆ ಕಂಪಿಸಿ ಈ ಜನಸಮುದಾಯವನ್ನು ಕೇಳಿದ್ದಾಳೆ.

ಸರಕಾರಿ ಕಚೇರಿಗಳಲ್ಲಿ ಮಾತ್ರವಲ್ಲ ಖಾಸಗಿ ಕಂಪನಿಗಳಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವಿಧಾನಸೌಧದ ಕೊಠಡಿಗಳಿಂದ ಹಿಡಿದು, ಆರ್ಟಿಓ, ಆಸ್ಪತ್ರೆ, ಕಾಲೇಜು, ಪೊಲೀಸ್ ಇಲಾಖೆಗಳಲ್ಲಿ ಭ್ರಷ್ಟಾಚಾರ ರುದ್ರನರ್ತನ ಮಾಡುತ್ತಿದೆ. ಅಣ್ಣಾ ಹಜಾರೆ ಅಂಥವರು ಏಕಾಂಗಿಯಾಗಿ ಹೋರಾಡುತ್ತಿದ್ದರೂ ಲಂಚಾವತಾರದ ಮೇಲೆ ಎಳ್ಳಷ್ಟೂ ಕಡಿವಾಣ ಬಿದ್ದಿಲ್ಲ. ಲೆಸೆನ್ಸ್ ಪಡೆಯಬೇಕಾದರೆ ಲಂಚ, ಮನೆ ನೊಂದಾವಣಿ ಮಾಡಬೇಕಾದರೆ ಲಂಚ, ಟ್ರಾಫಿಕ್ ಪೊಲೀಸ್ ಕೈಯಲ್ಲಿ ಸಿಕ್ಕುಬಿದ್ದಾಗಲೂ ಲಂಚ, ಉತ್ತಮ ಸೇವೆಗಾಗಿ ವೈದ್ಯರಿಗೆ ಲಂಚ.... ಮಾನವರೇ, ಇದನ್ನು ಎಲ್ಲಿಯವರೆಗೆ ನಡೆಸಿಕೊಂಡು ಹೋಗುತ್ತೀರಿ ಎಂದು ನಮ್ಮನ್ನೇ ಧರಿತ್ರಿ ಅಲ್ಲಾಡಿಸಿದ್ದಾಳೆ.

ಒಂದೆಡೆ ಉತ್ತರ ಕರ್ನಾಟಕದಲ್ಲಿ, ದಕ್ಷಿಣ ಕರ್ನಾಟಕದಲ್ಲಿ ಭೂಮಿ ಬಾಯಿ ಬಿರಿದು ಕೂತಿದೆ. ಕುಡಿಯಲು ಹನಿ ನೀರಿಲ್ಲ, ದನಕರುಗಳಿಗೆ ಮೇವಿಲ್ಲ, ರೈತರಿಗೆ ವಿಷದ ಬಾಟಲಿಯೊಂದು ಬಿಟ್ಟು ಬೇರೇನೂ ಉಳಿದಿಲ್ಲ. ಇನ್ನೊಂದೆಡೆ ಅರಣ್ಯ ಪ್ರದೇಶವನ್ನು ಹಣದಾಹಿಗಳು ಎಲ್ಲೆಡೆಯಿಂದ ಸವರಿಹಾಕುತ್ತ ಬರುತ್ತಿದ್ದಾರೆ. ಅರಣ್ಯವೇ ನಿರ್ನಾಮವಾದ ಮೇಲೆ ಮಳೆಯಾದರೂ ಎಲ್ಲಿಂದ ಬಂದೀತು? ಬೆಳೆಯಾದರೂ ಎಲ್ಲಿಂದ ಹುಟ್ಟೀತು?

ಇದೆಲ್ಲ ಒಂದು ರೀತಿಯದಾದರೆ, ಹಳ್ಳಿಯಿಂದ, ಪಕ್ಕದ ರಾಜ್ಯಗಳಿಂದ, ದೂರದ ನಗರಗಳಿಂದ ಬೆಂಗಳೂರಿಗೆ ನದಿಯೋಪಾದಿಯಲ್ಲಿ ಬಂದು ಸೇರಿಕೊಳ್ಳುತ್ತಿದ್ದಾರೆ. ಅಪಾರ್ಟ್‌ಮೆಂಟುಗಳನ್ನು ಎಬ್ಬಿಸಿ, ಭೂಮಿಗೆ ನೀರಿಗಾಗಿ ತೂತು ಕೊರೆದು ಕೊರೆದು ಅಂತರ್ಜಲ ಬತ್ತಿಹೋಗಿದೆ. ಬಹುಶಃ ಜನರ ಭಾರವನ್ನು, ಈ ಭೂಮಿಯ ಮೇಲಾಗುತ್ತಿರುವ ಅನಾಚಾರವನ್ನು ಸಹಿಸಿಕೊಳ್ಳಲಾಗದೆ ಭೂಮಿ ಒಂದೆರಡು ಕ್ಷಣ ಕದಲಿದ್ದರೂ ಆಶ್ಚರ್ಯವಿಲ್ಲ. ಇನ್ನು ಮುಂದೆ ಏನು ಮಾಡಬೇಕೆಂದು ನೀವೇ ಸರಿಯಾದ ರೀತಿಯಲ್ಲಿ ನಿರ್ಧರಿಸದೆ ಹೋದರೆ, ಮುಂದಿನ ಅನಾಹುತಗಳಿಗೆ ನೀವೇ ಹೊಣೆಗಾರರಾಗುತ್ತೀರಿ ಎಂದು ಇಳೆ ನಮ್ಮನ್ನು ಎಚ್ಚರಿಸಿದ್ದಾಳೆ. ಏನಂತೀರಿ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+