ಬಿಲ್ ಗೇಟ್ಸ್, ರತನ್ ಟಾಟಾ ಸಾಲಿನಲ್ಲಿ ಈಗ ನೀತಾ ಅಂಬಾನಿ; ರಿಲಯನ್ಸ್ ಫೌಂಡೇಶನ್ ಸ್ಥಾಪಕಿಗೆ ಕಳಿಂಗ ಮಾನವೀಯ ಪ್ರಶಸ್ತಿಯ ಗರಿ
ಭುವನೇಶ್ವರ್ : ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷರಾದ ನೀತಾ ಅಂಬಾನಿ ಅವರಿಗೆ ಪ್ರತಿಷ್ಠಿತ ಕಳಿಂಗ ಇನ್ ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (KISS) ವತಿಯಿಂದ '2025ರ ಸಾಲಿನ ಹ್ಯುಮಾನಿಟೇರಿಯನ್' (ಮಾನವೀಯ ಸೇವಾ) ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಗೌರವವನ್ನು ನೊಬೆಲ್ ಪ್ರಶಸ್ತಿ ವಿಜೇತ ಪ್ರೊ. ಮೋಹನ್ ಮುನಸಿಂಘೆ ಅವರು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕರಾದ ಡಾ. ಅಚ್ಯುತ ಸಮಂತ ಅವರು ಉಪಸ್ಥಿತರಿದ್ದು, ಮಾನವೀಯ ಸೇವೆಗೆ ನೀತಾ ಅಂಬಾನಿ ಅವರ ಬದ್ಧತೆಯನ್ನು ಶ್ಲಾಘಿಸಿದರು.
ರಿಲಯನ್ಸ್ ಫೌಂಡೇಶನ್ ಮೂಲಕ ನೀತಾ ಅಂಬಾನಿ ಅವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕೈಗೊಂಡಿರುವ ಅಮೋಘ ಬದಲಾವಣೆಗಳನ್ನು ಈ ಪ್ರಶಸ್ತಿಯು ಗುರುತಿಸಿದೆ. ಮುಖ್ಯವಾಗಿ ಶಿಕ್ಷಣ, ಆರೋಗ್ಯ ರಕ್ಷಣೆ, ಮತ್ತು ಗ್ರಾಮೀಣಾಭಿವೃದ್ಧಿಗಾಗಿ ಅವರು ಸಲ್ಲಿಸಿದ ಸೇವೆ ಅಪಾರವಾದುದು. ಇದರೊಂದಿಗೆ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಮೂಲಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಯುವ ಪ್ರತಿಭೆಗಳನ್ನು ಉತ್ತೇಜಿಸುವ ಮೂಲಕ ಅವರು ಸಮಾಜದ ಸರ್ವತೋಮುಖ ಏಳಿಗೆಗೆ ಶ್ರಮಿಸುತ್ತಿರುವುದನ್ನು ಈ ಪ್ರಶಸ್ತಿಯ ಮೂಲಕ ಗೌರವಿಸಲಾಗಿದೆ.

ಕಳೆದ ಹದಿನೆಂಟು ವರ್ಷಗಳಿಂದ ಈ ಹ್ಯುಮಾನಿಟೇರಿಯನ್ ಪ್ರಶಸ್ತಿ ನೀಡುತ್ತಾ ಬರಲಾಗುತ್ತಿದೆ. ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ವಿಶ್ವದಾದ್ಯಂತ ಮಾನವೀಯ ಕಾಳಜಿ ಕೆಲಸಗಳನ್ನು ಮಾಡುತ್ತಾ ಬಂದಿರುವುದನ್ನು ಗುರುತಿಸುತ್ತಾ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಗೋಲ್ಡ್ ಪ್ಲೇಟೆಡ್ ಟ್ರೋಫಿ ಹಾಗೂ ಸಾಧನೆಯ ಬಗೆಗಿನ ವಿವರಗಳು ಇರುವಂಥ ಫಲಕವನ್ನು ಪ್ರಶಸ್ತಿಯು ಒಳಗೊಂಡಿರುತ್ತದೆ.
ಈ ಹಿಂದೆ ದಲೈ ಲಾಮಾ, ಬಿಲ್ ಗೇಟ್ಸ್, ಮಾಮಾ ರಚೆಲ್ ರುಟೋ ಮತ್ತು ರತನ್ ಟಾಟಾ ಅವರಂಥ ಗಣ್ಯರಿಗೆ ಈ ಮಾನವೀಯ ಪ್ರಶಸ್ತಿಯ ಗೌರವ ಸಂದಿದೆ. ಇದೀಗ ಆ ಸಾಲಿನಲ್ಲಿ ನೀತಾ ಅಂಬಾನಿ ಅವರು ಸೇರ್ಪಡೆ ಆಗಿದ್ದಾರೆ.
ನೀತಾ ಅಂಬಾನಿಯವರು ಭಾರತದ ಪ್ರಮುಖ ಸಮಾಜಸೇವಕರಲ್ಲಿ ಒಬ್ಬರಾಗಿದ್ದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹಲವಾರು ಮಹತ್ವದ ಯೋಜನೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಸಬಲೀಕರಣದತ್ತ ಅವರಿಗೆ ವಿಶೇಷ ಒಲವಿದ್ದು, ಅವರ ನೇತೃತ್ವದ 'ರಿಲಯನ್ಸ್ ಫೌಂಡೇಶನ್' (Reliance Foundation) ದೇಶದಾದ್ಯಂತ ಹಲವಾರು ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ.












Click it and Unblock the Notifications