ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ, ಬೆಂಗಳೂರಲ್ಲೂ

ಬೆಂಗಳೂರಿನ ಜಯನಗರ, ಕೋರಮಂಗಲ, ಇನ್ಫಂಟ್ರಿ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ, ಹಳೆ ಏರ್ ಪೋರ್ಟ್ಗಳಲ್ಲಿ ಮಧ್ಯಾಹ್ನ 2.20ರ ಸುಮಾರಿಗೆ ಕಂಪಿಸಿದ ಅನುಭವವಾಗಿದ್ದು, ಎತ್ತರದ ಕಚೇರಿ, ಅಪಾರ್ಟ್ಮೆಂಟ್ಗಳಲ್ಲಿದ್ದ ಜನ ಹೆದರಿ ಓಡಿ ಬಂದಿದ್ದಾರೆ. ಕೆಳಮಹಡಿಯಲ್ಲಿದ್ದವರಿಗೆ ಕಂಪಿಸಿದ ಅನುಭವವಾಗಿಲ್ಲ. ಕಂಪನದ ಅನುಭವವಾಗುತ್ತಿದ್ದಂತೆ ಜನ ಅಡ್ಡಾದಿಡ್ಡಿ ಓಡಿದ್ದರಿಂದ ಮೆಟ್ರೋ ರೈಲನ್ನು ಮಾರ್ಗಮಧ್ಯದಲ್ಲಿಯೇ ನಿಲ್ಲಿಸಲಾಯಿತು.
ಬೆಂಗಳೂರಿಗಿಂತ ಚೆನ್ನೈನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಕಂಪನದ ಅನುಭವವಾಗುತ್ತಿದ್ದಂತೆ ಹೆದರಿಕೆಯಿಂದ ಜನರು ಕಚೇರಿಯಿಂದ ಹೊರಗೆ ಓಡಿಬಂದಿದ್ದಾರೆ. ಕಟ್ಟಡಗಳಲ್ಲಿ ಅಲ್ಲಲ್ಲಿ ಸಣ್ಣಬಿರುಕುಗಳು ಕಂಡುಬಂದಿವೆ. ಸುನಾಮಿ ಸಂಭವನೀಯತೆ ಇರುವುದರಿಂದ ಕಡಲ ಬಳಿಗೆ ಯಾರೂ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕದ ಕರಾವಳಿಯಲ್ಲಿಯೂ ಕಡಲಿಗಿಳಿಯುವ ಸಾಹಸ ಮಾಡದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಸುನಾಮಿ ಎಚ್ಚರಿಕೆ : ಇಂಡೋನೇಷ್ಯಾದಲ್ಲಿ 2006ರ ಡಿಸೆಂಬರ್ 26ರಂದು ಸಂಭವಿಸಿದ ಭೂಕಂಪ ಸಂಭವಿಸಿ, ಸುನಾಮಿ ಹೊಡೆತ ನೀಡಿದ್ದ ನಂತರ ಇದು ಅತ್ಯಂತ ಪ್ರಬಲ ಭೂಕಂಪ ಎನ್ನಲಾಗಿದೆ. ಭೂಕಂಪದ ಕೇಂದ್ರಬಿಂದು ಉತ್ತರ ಸುಮಾತ್ರಾದ ಸಮುದ್ರದಲ್ಲಿ 33 ಕಿ.ಮೀ. ಆಳದಲ್ಲಿದೆ. ಸರಿಯಾಗಿ 2 ಗಂಟೆ 8 ನಿಮಿಷಕ್ಕೆ ಭೂಕಂಪ ಸಂಭವಿಸಿದೆ.
ಇಂಡೋನೇಷ್ಯಾದಲ್ಲಿ ಸುನಾಮಿಯ ಎಚ್ಚರಿಕೆ ನೀಡಲಾಗಿದ್ದು, ಜಪಾನ್, ಪಾಕಿಸ್ತಾನ, ಬಾಂಗ್ಲಾದೇಶ, ಮಲೇಶಿಯಾ, ಥೈಲ್ಯಾಂಡ್, ಶ್ರೀಲಂಕಾ ಮತ್ತು ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿಯೂ ಜನ ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಒಟ್ಟು 28 ರಾಷ್ಟ್ರಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.












Click it and Unblock the Notifications