'ನಾಮಪತ್ರ ಹಾಕುವಾಗ ಸಿದ್ದರಾಮಯ್ಯ ನಾಮ ಧರಿಸಿದ್ದನ್ನು ಕಂಡಿದ್ದೇನೆ'
ಉಡುಪಿ, ಮಾರ್ಚ್ 06: ಉದ್ದದ ತಿಲಕ ಕಂಡರೆ ಭಯವಾಗುತ್ತದೆ ಎಂಬ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ .
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಕುಂಕುಮ ಹಾಕಿದವರು ಸಿದ್ದರಾಮಯ್ಯಗೆ ಭಯೋತ್ಪಾದಕರಂತೆ ಕಾಣ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಿಲಕ ಇಟ್ಟು ಸೆಲ್ಫಿಗೆ ಫೋಸು ಕೊಡೋರು ಕ(ಳ್ಳ?) ಭಕ್ತರು: ಸಿದ್ದರಾಮಯ್ಯ
ಸಿದ್ದರಾಮಯ್ಯ ಹೇಳಿಕೆಗೆ ನಾವು ಪ್ರತಿಕ್ರಿಯೆ ನೀಡಬೇಕಾಗಿಲ್ಲ. ನಾಮಪತ್ರ ಹಾಕುವಾಗ ಸಿದ್ದರಾಮಯ್ಯ ನಾಮ ಧರಿಸಿದ್ದನ್ನು ಕಂಡಿದ್ದೇನೆ. ಚುನಾವಣೆ ಮುನ್ನಾ ದಿನ ನಾಮ ಧರಿಸಿ ದೇವಸ್ಥಾನಕ್ಕೆ ಹೋಗ್ತಾರೆ ಎಂದು ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು.
ರಾಹುಲ್ ಗಾಂಧಿ ದೇವಸ್ಥಾನಕ್ಕೆ ಭೇಟಿ ಕೊಡುವಾಗ ಉದ್ದದ ನಾಮ ಧರಿಸುತ್ತಾರೆ ಎಂದ ಶ್ರೀನಿವಾಸ ಪೂಜಾರಿ, ಬಿಜೆಪಿಗೆ ನಾಮ, ಖಾವಿ ಆಧ್ಯಾತ್ಮದ ಸಂಕೇತ. ಆದರೆ ಸಿದ್ದರಾಮಯ್ಯ, ರಾಹುಲ್ ಗಾಂಧಿಗೆ ನಾಮ ಚುನಾವಣೆಯ ಸಂಕೇತ. ಕಾಂಗ್ರೆಸ್ ಗೆ ಚುನಾವಣೆ ಬಂದ್ರೆ ನಾಮ, ಖಾವಿ, ದೇವಸ್ಥಾನ ನೆನಪಾಗ್ತದೆ ಎಂದರು.
ತಿಲಕ ಇಡುವವರನ್ನು ಕಂಡ್ರೆ ಭಯ: ಸಿದ್ದರಾಮಯ್ಯ ವಿಡಿಯೋ ವೈರಲ್
ಯೋಗಿ ಅವರು ಸಿಎಂ ಆಗಿ ಮಾಡಿದ ಕೆಲಸ ಎಲ್ಲರೂ ಮೆಚ್ಚುತ್ತಾರೆ. ರಾಷ್ಟ್ರಭಕ್ತನ ಅವಹೇಳನ ಮಾಡಿದ್ರೆ ಚುನಾವಣೆಯಲ್ಲಿ ಜನ ಪಾಠ ಕಲಿಸ್ತಾರೆ ಎಂದು. ಬಿಜೆಪಿ ನಾಮದ ಸಂಕೇತವನ್ನು ಹಾಳು ಮಾಡಿಲ್ಲ. ಹಾಳು ಮಾಡಲು ಹೊರಟ ಕಾಂಗ್ರೆಸ್ ಗೆ ಎಚ್ಚರ ನೀಡ್ತೇವೆ ಎಂದು ಶ್ರೀನಿವಾಸ ಪೂಜಾರಿ ಕಿಡಿಕಾರಿದರು.