ತುಮಕೂರು ದೇವಾಲಯದ ಶಿವಲಿಂಗದಲ್ಲಿ ಕಣ್ಣು ಉದ್ಭವ!
ತುಮಕೂರು, ಸೆ 28: ತುಮಕೂರು ಜಿಲ್ಲೆಯ ದೇವಾಲಯವೊಂದರ ಶಿವಲಿಂಗದಲ್ಲಿ ಕಳೆದ ಒಂದು ವಾರದಿಂದ ಕಣ್ಣಿನ ರೂಪವನ್ನೇ ಹೋಲುವ ಆಕೃತಿಯೊಂದು ಕಾಣಿಸಿ ಕೊಂಡಿದ್ದು ಭಕ್ತರು ಭಾವ ಪರವಶೆಯಿಂದ ಮೆರೆಯುವಂತೆ ಮಾಡಿದೆ. ಸುತ್ತಮುತ್ತಲಿನ ಹಳ್ಳಿಗಳಿಂದ ದೇವಾಲಯಕ್ಕೆ ಜನರ ಮಹಾಪೂರವೇ ಹರಿದು ಬರುತ್ತಿದೆ.
ತುಮಕೂರು ಜಿಲ್ಲೆಯ ಬಿನಿವಾರ ಹಳ್ಳಿಯ ಸೋಮೇಶ್ವರ ದೇವಾಲಯದ ಶಿವಲಿಂಗದಲ್ಲಿ ಈ ಘಟನೆ ನಡೆದಿದೆ. ಕಳೆದ ಒಂದು ವಾರದಿಂದ ಕಂದು ಬಣ್ಣದ ಶಿವಲಿಂಗದ ಒಂದು ಭಾಗ ಕೆಂಪು ಬಣ್ಣಕ್ಕೆ ತಿರುಗಿ ಕಣ್ಣಿನ ಆಕಾರವನ್ನೇ ಹೋಲುವ ವೃತ್ತಾಕಾರದ ಆಕೃತಿ ಮೂಡಿದೆ.
ಶಿವ ಮೂರನೇ ಕಣ್ಣನ್ನು ತೆರೆದಿದ್ದು ಗ್ರಾಮಕ್ಕೆ ಇನ್ಮುಂದೆ ಸನ್ಮಂಗಳವಾಗಲಿದೆ. ಮಳೆ, ಬೆಳೆ ಚೆನ್ನಾಗಿ ಎಲ್ಲರೂ ಬದಕು ಹಸನಾಗಲಿದೆ ಎಂದು ಆಸ್ತಿಕರು ತಂಡೋಪತಂಡವಾಗಿ ಬಂದು ಶಿವನಿಗೆ ಸಾಷ್ಟಾಂಗ ಪ್ರಣಾಮ ಸಲ್ಲಿಸುತ್ತಿದ್ದಾರೆ.
ಕಲ್ಲಿನಲ್ಲಿ ಪೊರೆ ಬರುವುದು ಸಾಮಾನ್ಯ, ಇದಕ್ಕೆ ಪವಾಡದ, ಮಾಯಾಶಕ್ತಿಯ ಲೇಪ ಹಚ್ಚುವುದು ಬೇಡ. ಕಲ್ಲಿಗೆ ನೀರು, ಹಾಲು, ಮೊಸರು ಇತ್ಯಾದಿ ಬಿದ್ದಾಗ ಕೆಲವೊಂದು ಕಲ್ಲಿನಲ್ಲಿ ಪೊರೆ ರೀತಿಯ ಆಕೃತಿ ಮೂಡುತ್ತದೆ ಎಂದು ಗ್ರಾಮದಲ್ಲಿರುವ ನಾಸ್ತಿಕರ ವಾದ.
ಈ ದೇವಾಲಯದ ಬಗ್ಗೆ: 1979ರಲ್ಲಿ ಗ್ರಾಮದ ಹಿರಿಯರಾದ ರೇವಣ್ಣ ರೇಣುಕಾರಾಧ್ಯರವರು ಉತ್ತರ ಭಾರತದ ತೀರ್ಥ ಪ್ರವಾಸಕ್ಕೆ ತೆರಳಿದ್ದರು. ಗಂಗಾ ನದಿಯಲ್ಲಿ ತೀರ್ಥ ಸ್ನಾನ ಮಾಡುತ್ತಿರ ಬೇಕಾದರೆ ಲಿಂಗದ ರೂಪವನ್ನೇ ಹೋಲುವ ಕಲ್ಲೊಂದು ಅವರಿಗೆ ಸಿಕ್ಕಿದೆ.
ಅದನ್ನು ಗ್ರಾಮಕ್ಕೆ ತೆಗೆದು ಕೊಂಡು ಬಂದ ರೇವಣ್ಣ, ದೇವಾಲಯ ನಿರ್ಮಾಣ ಮಾಡಲು ತಾನಿದ್ದ ಮನೆಯನ್ನೇ ನೆಲಸಮ ಮಾಡಿ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರಿಂದ ಪ್ರತಿಷ್ಠಾಪನೆ ಮಾಡಿಸಿದ್ದಾರೆ.
ಅಂದಿನಿಂದ ದೇವಾಲಯದ ಅರ್ಚಕರಾಗಿರುವ ನಂಜಪ್ಪ ಅವರ ಪ್ರಕಾರ, ಸುಮಾರು ಮೂವತ್ತು ವರ್ಷದಿಂದ ಪೂಜೆ ಮಾಡಿಕೊಂಡು ಬರುತ್ತಿದ್ದೇನೆ. ಇದುವರೆಗೂ ಲಿಂಗದಲ್ಲಿ ಈ ರೀತಿಯ ಬದಲಾವಣೆ ನನಗೆ ಕಂಡು ಬಂದಿಲ್ಲ.
ಇದೊಂದು ಪವಾಡವೇ ಸರಿ. ಗ್ರಾಮಕ್ಕೆ ಇನ್ನು ಮುಂದೆ ಒಳ್ಳೆದಾಗಲಿದೆ. ಗ್ರಾಮದ ಹಿರಿಯರ ಸಮ್ಮುಖದಲ್ಲಿ ಶಿವನಿಗೆ ವಿಶೇಷ ರುದ್ರಾಭಿಷೇಕ ಮಾಡಿಸಿದ್ದೇವೆ ಎಂದು ನಂಜಪ್ಪ ಹೇಳಿದ್ದಾರೆ.