ಬಿಜೆಪಿ ಸೇರ್ಪಡೆ ಸನ್ನಿಹಿತ, ಯಡಿಯೂರಪ್ಪ ಫುಲ್ ಖುಷ್!
ಶಿವಮೊಗ್ಗ, ಡಿ.24: ಒಂದು ವರ್ಷಕ್ಕೂ ಹೆಚ್ಚು ಕಾಲದ ವಿರಹವೇದನೆ ಮುಗಿಯುವ ಕಾಲ ಬಂದಿದೆ! ಕೆಜೆಪಿ ನಾಯಕ 70 ವರ್ಷದ ಬಿಎಸ್ ಯಡಿಯೂರಪ್ಪ ಹೊಸ ವರ್ಷಾಚರಣೆ ಬಿಜೆಪಿಯಲ್ಲಿಯೇ ಎಂಬುದು ಸ್ಪಷ್ಟವಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಅವರನ್ನು ನಿನ್ನೆ ಖುದ್ದಾಗಿ ಭೇಟಿ ಮಾಡಿದ ಬಳಿಕ, ವಿರಸ ಮುಗಿದಿದ್ದು ತಾವಿನ್ನು ತವರಿಗೆ ಮರಳುವುದು ಖಾತ್ರಿ ಎಂಬುದು ಖುದ್ದು ಯಡಿಯೂರಪ್ಪನವರಿಗೂ ಮನದಟ್ಟಾದಂತಿದೆ.
ಅಂದಹಾಗೆ ನಿನ್ನೆ ಸೋಮವಾರ ಸೊರಬದಲ್ಲಿ ರಾಜನಾಥ ಸಿಂಗ್ ಮತ್ತು ಬಿಎಸ್ವೈ ಅವರುಗಳು ಏಕಾಂತದಲ್ಲಿ ಗಹನ ಮಾತುಕತೆ ನಡೆದಿದ್ದಾರೆ. ಇದರ ಫಲಶೃತಿಯಾಗಿ ''ಯಾವುದೇ ಷರತ್ತುಗಳಿಲ್ಲದೆ'' ಮಾತೃಪಕ್ಷಕ್ಕೆ ಮರಳಲು ಯಡಿಯೂರಪ್ಪ ಒಪ್ಪಿದ್ದಾರೆ. ಹೀಗಾಗಿ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ಕುರಿತು ಅಧಿಕೃತ ನಿರ್ಧಾರ ಕೈಗೊಂಡು ಸೇರ್ಪಡೆ ದಿನಾಂಕ ನಿಗದಿಪಡಿಸುವುದೊಂದೇ ಬಾಕಿ ಉಳಿದಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಈ ಸಂಬಂಧ ನಿನ್ನೆ ಏನೆಲ್ಲಾ ಬೆಳವಣಿಗೆಗಳು ನಡೆದಿವೆ, ಸದ್ಯೋಭವಿಷ್ಯತ್ತಿನಲ್ಲಿ ಮುಂದೇನು? ಇಲ್ಲಿದೆ ಒಂದು ಚಿತ್ರಣ:

ಯಾವಾಗ ಎಂಬುದು ಯಡಿಯೂರಪ್ಪಾನೇ ನಿರ್ಧರಿಸಬೇಕು:
ಡಿಸೆಂಬರ್ 27ರಂದು ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಂದರ್ಭದಲ್ಲಿಯೇ ಮರಳಿ ಬಿಜೆಪಿ ಸೇರುವುದೇ ಅಥವಾ ಧನುರ್ಮಾಸ ಮುಗಿದ ಬಳಿಕ (ಅಂದರೆ ಸಂಕ್ರಾಂತಿ ಬಳಿಕ) ಬಿಜೆಪಿ ಸೇರಬೇಕೋ ಎಂಬ ಬಗ್ಗೆ ಯಡಿಯೂರಪ್ಪನವರೇ ಇನ್ನೂ ನಿರ್ಧರಿಸಿಲ್ಲ.
ಒಂದು ವೇಳೆ ಯಡಿಯೂರಪ್ಪ ಅವರು ಡಿ. 27 ರಂದೇ ಬಿಜೆಪಿಗೆ ಸೇರಿಕೊಳ್ಳುವುದಾದರೆ ಬುಧವಾರ ಸಂಜೆಯೊಳಗೆ ತುರ್ತು ಸಂಸದೀಯ ಮಂಡಳಿ ಸಭೆ ಕರೆದು ಅಧಿಕೃತ ನಿರ್ಧಾರ ಕೈಗೊಳ್ಳುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮೊಗ್ಯಾಂಬೋ ಖುಷ್ ಹುವಾ!
ಯಡಿಯೂರಪ್ಪ ಅವರನ್ನು ಬಿಜೆಪಿಗೆ ವಾಪಸ್ ಕರೆತರುವ ವಿಚಾರದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಯಡಿಯೂರಪ್ಪ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಎರಡೂ ಕಡೆಯಿದ್ದ ಇದ್ದ ಅನುಮಾನ, ಅಸಮಾಧಾನಗಳು ಬಗೆಹರಿದಿವೆ. ಏಕಾಂತದಲ್ಲಿ ಇಬ್ಬರೂ ಮಾತುಕತೆ ನಡೆಸಿದ ಬಳಿಕ ಉಭಯ ನಾಯಕರು ಹಸನ್ಮುಖಿಯಾಗಿ ಹೊರಬಂದಿದ್ದು ಈ ಮಾತುಗಳಿಗೆ ಪುಷ್ಠಿ ನೀಡಿದೆ.

ಮಾತುಕತೆ ನಡೆದಿದ್ದು ಎಲ್ಲಿ, ಹೇಗೆ?
ಆರ್ಎಸ್ಎಸ್ ಅಖಿಲ ಭಾರತ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರ ತಾಯಿ ಮೀನಾಕ್ಷಮ್ಮ ಅವರು ದೈವಾಧೀನರಾದ ಹಿನ್ನೆಲೆಯಲ್ಲಿ ಸಾಂತ್ವನ ಹೇಳಲು ರಾಜನಾಥ ಸಿಂಗ್ ಸೋಮವಾರ ಸೊರಬಕ್ಕೆ ಆಗಮಿಸಿದ್ದರು. ಮಧ್ಯಾಹ್ನ ಇಲ್ಲಿನ ಚಾಮರಾಜಪೇಟೆಯ ಪದ್ಮನಾಭ ನಡಹಳ್ಳಿಯವರ ಮನೆಯಲ್ಲಿ ರಾಜನಾಥ ಸಿಂಗ್ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಏಕಾಏಕಿ ಅಲ್ಲಿಗೆ ಬಿಎಸ್ ಯಡಿಯೂರಪ್ಪ ಮತ್ತು ಬಿವೈ ರಾಘವೇಂದ್ರ ಆಗಮಿಸಿದರು. ಈ ವೇಳೆ ರಾಜನಾಥ್ ಅವರೊಂದಿಗೆ ಬಿಜೆಪಿ ರಾಷ್ಟ್ರೀಯ ಮುಖಂಡರಾದ ಧರ್ಮೇಂದ್ರ ಪ್ರಧಾನ್, ಅನಂತ ಕುಮಾರ್, ಪ್ರಹ್ಲಾದ್ ಜೋಷಿ ಸೇರಿದಂತೆ ವಿವಿಧ ರಾಜ್ಯಗಳ ಬಿಜೆಪಿ ರಾಜ್ಯ ಪದಾಧಿಕಾರಿಗಳು ಇದ್ದರು.

ಮುಂದೇನಾಯ್ತು? ಯಡಿಯೂರಪ್ಪ ನಿರಾಳ!
ಮಧ್ಯಾಹ್ನ 2.30ಕ್ಕೆ ಬಿಎಸ್ವೈ ಅವರು ದತ್ತಾತ್ರೇಯ ಮನೆಗೆ ಆಗಮಿಸುತ್ತಿದ್ದಂತೆ ಇಡೀ ಮನೆಯ ಅಂಗಳದಲ್ಲಿ ಸಂಚಲನ. ಪಕ್ಷದ ಬಹುತೇಕ ಮುಖಂಡರು ಬಿಎಸ್ವೈ ಆಗಮನ ನಿರೀಕ್ಷಿಸಿರಲಿಲ್ಲ. ಬಿಎಸ್ವೈ ಅವರನ್ನು ರಾಜನಾಥ ಸಿಂಗ್ ಅವರೇ ಸ್ವಾಗತಿಸಿದರು. ನಂತರ ಇಬ್ಬರೂ ಮಾತುಕತೆಗಾಗಿ ಕೊಠಡಿಯೊಳಗೆ ತೆರಳಿದರು. ಐದು ನಿಮಿಷದ ತರುವಾಯ ಅನಂತ ಕುಮಾರ್ ಅವರನ್ನೂ ಕೊಠಡಿಗೆ ಕರೆಸಿಕೊಂಡು ಮಾತುಕತೆ ನಡೆಸಿದರು. ಸುಮಾರು 10 ನಿಮಿಷದ ಮಾತುಕತೆ ನಂತರ ಹಸನ್ಮುಖಿಯಾಗಿ ಹೊರಬಂದ ಯಡಿಯೂರಪ್ಪ ನಿರಾಳರಾಗಿ ಕಂಡುಬಂದರು.

ಸೂತ್ರದ ಪ್ರಧಾನ ಗೊಂಬೆ:
ಸಭೆಯ ನಂತರ ಮಧ್ಯಾಹ್ನ 2. 50ರ ವೇಳೆಗೆ ರಾಜನಾಥ ಸಿಂಗ್ ಅವರಿಗೆ ಬೀಳ್ಕೊಡುಗೆ ನೀಡಲು ಎಲ್ಲರೂ ಮುಂದಾದರು. ಬಿಎಸ್ವೈ ಕೂಡ ಅವರೊಟ್ಟಿಗೆ ಹೆಜ್ಜೆ ಹಾಕಿ ಮನೆಯ ಮುಖ್ಯದ್ವಾರಕ್ಕೆ ಬರುತ್ತಿದ್ದಂತೆಯೇ ಧರ್ಮೇಂದ್ರ ಪ್ರಧಾನ್ ಬಿಎಸ್ವೈಗೆ ಸನ್ನೆ ಮಾಡಿ, ಮನೆಯಿಂದ ಹೊರಹೋಗದಂತೆ ಸೂಚಿಸಿದರು. ಅದನ್ನು ಪಾಲಿಸಿದ ಬಿಎಸ್ವೈ ಹೆಜ್ಜೆ ಹಿಂದಿಟ್ಟರು. ರಾಜನಾಥ್ ಸಿಂಗ್ ನಿರ್ಗಮನದ ನಂತರ ಧರ್ಮೇಂದ್ರ ಪ್ರಧಾನ್ ಮತ್ತು ಯಡಿಯೂರಪ್ಪ ಸುಮಾರು 20 ನಿಮಿಷ ಚರ್ಚಿಸಿದರು. ಗಮನಾರ್ಹವೆಂದರೆ ಯಡಿಯೂರಪ್ಪ ಜತೆಗಿನ ಮಾತುಕತೆಯ ಕುರಿತು ಸುದ್ದಿಗಾರರ ಎದುರು ಮಾತನಾಡಲು ರಾಜನಾಥ ಸಿಂಗ್ ಬಿಲ್ಕುಲ್ ಒಪ್ಪಲಿಲ್ಲ.

ಯಡಿಯೂರಪ್ಪಗೆ ಆನಂದ/ ಬಿಗುಮಾನ
ಆದರೆ ಇತ್ತ, ರಾಜನಾಥರನ್ನು ಬೀಳ್ಕೊಟ್ಟ ನಂತರ ಊಟಕ್ಕೆ ಕುಳಿತ ಬಿಎಸ್ವೈ ಮುಖದಲ್ಲಿ ಆನಂದ/ಮಂದಹಾಸ ಇಮ್ಮಡಿಸಿತ್ತು. ಸಾಕಷ್ಟು ನಿರಾಳರಂತೆ ಕಂಡುಬಂದ ಅವರು, ಪುತ್ರ ರಾಘವೇಂದ್ರ, ಗುರುಮೂರ್ತಿಯವರೊಂದಿಗೆ ಊಟ ಮುಗಿಸಿದರು. ಈ ಸಂದರ್ಭದಲ್ಲಿ ಅಲ್ಲಿದ್ದ ವಿವಿಧ ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತಿಗಿಳಿದರು.ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆಯವರೊಂದಿಗೂ ಖುಷಿಯಲ್ಲಿ ಮಾತನಾಡಿದರು.

ರಾಜ್ಯ ಕೋರ್ ಕಮಿಟಿ ಸಭೆ ತೀರ್ಮಾನವೂ ಆಗಿದೆ
ಒಂದು ವೇಳೆ ಡಿ. 27ರಂದೇ ಯಡಿಯೂರಪ್ಪ ಅವರು ಬಿಜೆಪಿ ಸೇರುವುದಾದರೆ ಅದಕ್ಕೆ ಸಂಬಂಧಿಸಿದಂತೆ ಕೋರ್ ಕಮಿಟಿ ಸಭೆಯಲ್ಲಿ ಕೆಲ ಪ್ರಕ್ರಿಯೆ/ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ. ಇದಕ್ಕೆ ಅನುವು ಮಾಡಿಕೊಡುವಂತೆ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ನಿನ್ನೆ ಸೋಮವಾರ ರಾತ್ರಿಯೇ ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದ್ದು, ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಅಧಿಕೃತ ನಿರ್ಧಾರ ಕೈಗೊಂಡು ಸಂಸದೀಯ ಮಂಡಳಿಗೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ಪಕ್ಷದ ಮೂಲಗಳು ದೃಢಪಡಿಸಿವೆ.
ಅತ್ತ, ದೆಹಲಿಗೆ ವಾಪಸಾಗಿರುವ ರಾಜನಾಥ್ ಅವರು ಇತರ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಯಡಿಯೂರಪ್ಪ ವಾಪಸಾತಿಯನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications