ಫೇಸ್ ಬುಕ್ಕಿನಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ
ಮರಾಠಿ ಚಿತ್ರ ನಿರ್ಮಾಪಕ ಅತುಲ್ ತಾಪ್ಕೀರ್, ತನ್ನ ಹಾಗೂ ಪತ್ನಿಯ ನಡುವಿನ ಜಗಳದ ಕಾರಣ ಕೊನೆಯ ನಿರ್ಧಾರವೊಂದನ್ನು ತೆಗೆದುಕೊಳ್ಳುವುದಾಗಿ ಅವರು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿ, ನಂತರ ಆತ್ಯಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪುಣೆ, ಮೇ 15 : ಮರಾಠಿ ಚಿತ್ರ ನಿರ್ಮಾಪಕ ಅತುಲ್ ತಾಪ್ಕೀರ್, ತನ್ನ ಹಾಗೂ ಪತ್ನಿಯ ನಡುವಿನ ಜಗಳದ ಕಾರಣ ಕೊನೆಯ ನಿರ್ಧಾರವೊಂದನ್ನು ತೆಗೆದುಕೊಳ್ಳುವುದಾಗಿ ಅವರು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿ, ನಂತರ ಆತ್ಯಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತನ್ನ ಆತ್ಮಹತ್ಯೆಗೆ ಪತ್ನಿ ಹಾಗೂ ಆಕೆ ಕುಟುಂಬದ ಕಿರುಕುಳವೆ ಕಾರಣ ಎಂದು ದೂರಿದ್ದಾರೆ.
ಪಿಂಪಲ್ ನಿಲಾಖ್ ನಿವಾಸಿಯಾಗಿದ್ದ 35 ವರ್ಷದ ಮರಾಠಿ ಚಿತ್ರ ನಿರ್ಮಾಪಕ ಅತುಲ್ ತಾಪ್ಕೀರ್ ಅವರು ತನ್ನ ಮೇಲೆ ಕೌಟುಂಬಿಕ ದೌರ್ಜನ್ಯ ನಡೆದಿದೆ. ನನ್ನ ಪತ್ನಿ ವಿರುದ್ಧ ದೂರು ನೀಡಿದರೂ ಪ್ರಯೋಜನವಾಗಿಲ್ಲ. ವಿಧಿ ಇಲ್ಲದೆ ನಾನು ಅತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದಿದ್ದಾರೆ.
ತಾಪ್ಕೀರ್ ನಿರ್ಮಾಣದ 'ಧೋಲ್ ತಾಶೆ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುವಲ್ಲಿ ವಿಫಲವಾಗಿತ್ತು. ಇದರಿಂದ ಆರ್ಥಿಕ ನಷ್ಟವುಂಟಾಗಿ ಪತಿ, ಪತ್ನಿಯ ನಡುವೆ ದಿನನಿತ್ಯ ಜಗಳ ನಡೆಯುತ್ತಿತ್ತು. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಪ್ಕೀರ್ ಅವರು ಫೇಸ್ ಬುಕ್ ನಲ್ಲಿ ಮರಾಠಿ ಭಾಷೆಯಲ್ಲಿ ತಮಗಾಗಿರುವ ನೋವನ್ನು ತೋಡಿಕೊಂಡಿದ್ದರು.
ಮರಾಠಿ ನಿರ್ಮಾಪಕದ ದುರಂತ ಅಂತ್ಯ
ಮರಾಠಿ ಚಿತ್ರನಿರ್ಮಾಪಕ ಅತುಲ್ ತಾಪ್ಕಿರ್ ಅವರು ತಮ್ಮ ಕುಟುಂಬ ಕಲಹದ ಬಗ್ಗೆ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ. ಬಳಿಕ ಹೊಟೇಲ್ ರೂಂನಲ್ಲಿದ್ದ ತಾಪ್ಕೀರ್, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದ್ದು, ಫೇಸ್ಬುಕ್ ಪೋಸ್ಟ್ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಅತುಲ್ ಕುಟುಂಬದ ಬೆಂಬಲವಿತ್ತು
ನನ್ನ ನೋವನ್ನು ನನ್ನ ತಂದೆ, ಸೋದರಿಯರು ಹಂಚಿಕೊಂಡಿದ್ದಾರೆ. ಆದರೆ,ನನ್ನ ಪತ್ನಿ ಪ್ರಿಯಾಂಕಾ ನನ್ನ ಎಲ್ಲಾ ಕಾರ್ಯಕ್ಕೂ ಅಡ್ಡಿಪಡಿಸುತ್ತಿದ್ದಾಳೆ. ಕಳೆದ ಆರು ತಿಂಗಳಿನಿಂದ ನನ್ನನ್ನು ಮನೆಗೆ ಸೇರಿಸಿಲ್ಲ. ನನ್ನ ವಿರುದ್ಧ ಇಲ್ಲಸಲ್ಲದ ಊಹಾಪೋಹಗಳನ್ನು ಹಬ್ಬಿಸುತ್ತಿದ್ದಾಳೆ, ಮಕ್ಕಳಿಂದಲೂ ನಾನು ದೂರ ಇರುವಂತೆ ನೋಡಿಕೊಂಡಿದ್ದಾಳೆ.
ಅತುಲ್ ಮೇಲೆ ಹಲ್ಲೆ
ಕೆಲ ದಿನಗಳ ಹಿಂದೆ ಇದಕ್ಕೆಲ್ಲ ಒಂದು ಅಂತ್ಯ ಹಾಡಬೇಕು ಎಂದು ನಾನು ಕರೆ ಮಾಡಿದರೆ ನನಗೆ ಬರೀ ಬೈಗುಳವೆ ಸಿಕ್ಕಿತು. ನಾನು ಸಿಟ್ಟಿನಲ್ಲಿ ಕೂಗಾಡಿದೆ. ಆಕೆಯ ಸೋದರರು ನನ್ನ ಮೇಲೆ ಹಲ್ಲೆ ನಡೆಸಿದರು. ಪರಿಸ್ಥಿತಿ ಕೈಮೀರಿದ್ದರಿಂದ ನಾನು ಪೊಲೀಸರಿಗೆ ದೂರು ನೀಡಿದೆ. ಅವರು ಕೂಡಾ ನನ್ನ ವಿರುದ್ಧ ದೂರು ನೀಡಿದರು.
ಸಿಎಂ ಫಡ್ನವೀಸ್ ಗೆ ಮನವಿ
ಪೊಲೀಸರಿಂದ ನನಗೆ ನೆರವು ಸಿಗಲಿಲ್ಲ. ಮಹಿಳೆಯ ಕಣ್ಣೀರಿಗೆ ಮಾತ್ರ ಬೆಲೆ ನೀಡುತ್ತಾರೆ. ನಮಗಾದ ನೋವಿನ ಬಗ್ಗೆ ಕಾಳಜಿ ಇಲ್ಲ. ಮುಖ್ಯಮಂತ್ರಿ ಫಡ್ನವೀಸ್ ಅವರೇ ಈ ಬಗ್ಗೆ ದಯವಿಟ್ಟು ಗಮನ ಹರಿಸಿ, ದೂರು ನೀಡಿದ ತಕ್ಷಣ ನಮ್ಮನ್ನು ಅಪರಾಧಿಯಂತೆ ಕಾಣಬೇಡಿ ಎಂದು ನಿರ್ಮಾಪಕ ಅತುಲ್ ಮನವಿ ಸಿಎಂ ದೇವೇಂದ್ರ ಫಡ್ನವೀಸ್ ರಲ್ಲಿ ಮನವಿ ಮಾಡಿಕೊಂಡಿದ್ದರು.
ಪ್ರತಿಭಾವಂತನ ಕೊನೆಯಾಸೆ
ನನ್ನ ಪತ್ನಿ ಹಣದಾಹಿಯಾಗಿದ್ದು, ಆಕೆಯಿಂದ ನನ್ನ ಮಕ್ಕಳ ಪಾಲನೆ ಸಾಧ್ಯವಿಲ್ಲ. ಮಕ್ಕಳನ್ನು ನನ್ನ ಅಪ್ಪನ ಸುಪರ್ದಿಗೆ ಬಿಡಬೇಕು ಎಂಬುದು ನನ್ನ ಕೊನೆಯಾಸೆ ಎಂದು ಅತುಲ್ ಹೇಳಿದ್ದಾರೆ.
ನನಗಾದ ಕಿರುಕುಳದ ಎಲ್ಲಾ ದಾಖಲೆ, ಪುರಾವೆಗಳನ್ನು ಪೆನ್ ಡ್ರೈವ್ ನಲ್ಲಿ ಹಾಕಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಹೇಳಿಕೊಂಡಿದ್ದಾರೆ. ಪೊಲೀಸರು ಈಗ ಫೇಸ್ ಬುಕ್ ಪೋಸ್ಟ್, ಪೆನ್ ಡ್ರೈವ್ ಆಧಾರವಾಗಿಟ್ಟುಕೊಂಡು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.