ದೆಹಲಿಯ ನಿಗೂಢ ಆತ್ಮಹತ್ಯೆಗೆ ಕುಜದೋಷ ಕಾರಣವೇ? ಇಲ್ಲಿದೆ ಉತ್ತರ
ನವದೆಹಲಿ, ಜುಲೈ 04: ದೆಹಲಿಯ ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರ ವಿಚಿತ್ರ ಮಾಹಿತಿಗಳು ಹೊರಬೀಳುತ್ತಿವೆ. ಮಗಳಿಗೆ ಕುಜ ದೋಷವಿದ್ದಿದ್ದೇ ಕುಟುಂಬಕ್ಕೆ ತಲೆನೋವಾಗಿತ್ತು. ಆತ್ಮಹತ್ಯೆಗೂ ಅದೇ ಕಾರಣ ಎಂದೆಲ್ಲ ವದಂತಿಗಳು ಹಬ್ಬುತ್ತಿವೆ.
ಆದರೆ ಜ್ಯೋತಿಷಿಗಳೇ ಹೇಳುವ ಪ್ರಕಾರ ಮಂಗಳ ದೋಷವಿದೆ ಎಂದೆಲ್ಲ ಯಾರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಏಕೆಂದರೆ ಪ್ರತಿ 10 ಜನರಲ್ಲಿ 5-6 ಜನರಿಗೆ ಕುಜದೋಷ ವಿರುತ್ತದೆ. ಜಾತಕದಲ್ಲಿ ಜನ್ಮ ಲಗ್ನ ಹಾಗೂ ಜನ್ಮ ರಾಶಿಯಿಂದ ಕುಜ ಹಾಗೂ ಶುಕ್ರ ಎಲ್ಲಿ ಸ್ಥಿತರಾಗಿದ್ದಾರೆ ಎನ್ನುವುದರ ಮೇಲೆ ಕುಜ ದೋಷ ಬರುತ್ತದೆ.
ಏನಿದು ಕುಜದೋಷ?
ಜನ್ಮ ಲಗ್ನ, ಚಂದ್ರ, ಶುಕ್ರರಿಂದ 1,2,4,7,8,12 ಈ ಸ್ಥಾನಗಳಲ್ಲಿ ಕುಜನಿದ್ದರೆ ಅಂಗಾರಕ ದೋಷವೆಂದು ತಿಳಿಯಬೇಕು. ಕುಜದೋಷವಿರುವ ಸ್ತ್ರೀಯೊಂದಿಗೆ ಕುಜದೋಷದ ಪುರುಷ ವಿವಾಹವಾದಲ್ಲಿ ವಿರಸ, ವಿರಹ ದುಃಖ, ವಿಚ್ಛೇದನ ದೋಷಗಳು ಸಂಭವಿಸುವುದಿಲ್ಲ. ಮನಸ್ಸಿಗೆ ನೋವೂ ಉಂಟಾಗದೆ ಉತ್ತಮ ದಾಂಪತ್ಯ ನಡೆಸಿ, ಜೀವನದ ಸುಖವೃದ್ಧಿಸುತ್ತದೆ. ಕನ್ಯಾ ಜಾತಕದಲ್ಲಿ ಕುಜನಿರುವ ಸ್ಥಾನದಲ್ಲಿ ಪುರುಷ ಜಾತಕದಲ್ಲೂ ಕುಜನಿದ್ದರೂ, ಅಥವಾ ಶನಿ, ರವಿ, ರಾಹು, ಕೇತುಗಳಿದ್ದರೆ ಭಾಗಶಃ ದೋಷ ನಿವೃತ್ತಿಯಾಗುವುದು ಎಂಬುದು ಖ್ಯಾತ ಜ್ಯೋತಿಷಿಗಳು ನೀಡಿದ ಮಾಹಿತಿ.

ಜೂನ್ 30 - ಜುಲೈ 1ರ ನಡುವೆ ದೆಹಲಿಯ ಬುರಾರಿ ಎಂಬಲ್ಲಿ ಒಂದು ಮನೆಯಲ್ಲಿ ಒಂದೇ ಕುಟುಂಬದ 11 ಜನರ ಶವ ಪತ್ತೆಯಾಗಿತ್ತು. ಇವುಗಳಲ್ಲಿ 10 ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, 1 ಶವ ಮಾತ್ರ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಈ ಎಲ್ಲ ಆತ್ಮಹತ್ಯೆಗಳ ರೂವಾರಿ ಎನ್ನಲಾಗುತ್ತಿರುವ ಈ ಕುಟುಂಬದ ಯಜಮಾನ ಲಲಿತ್ ಭಾಟಿಯಾ ಅವರಿಗೆ ತಮ್ಮ ಮಗಳು ಪ್ರಿಯಾಂಕಾಗೆ ಕುಜ ದೋಷವಿರುವುದು ಸಾಕಷ್ಟು ಬೇಸರ ಮೂಡಿಸಿತ್ತು. ಅದನ್ನೇ ಅವರು ತೀರಾ ತಲೆಗೆ ಹಚ್ಚಿಕೊಂಡಿದ್ದರು ಎಂದು ಡೈರಿಯ ಮೂಲಕ ತಿಳಿದುಬಂದಿತ್ತು.ದೆಹಲಿಯ ಕ್ರೈಂ ಬ್ರಾಂಚ್ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ 33 ವರ್ಷದ ಪ್ರಿಯಾಂಕಾ ಅವರಿಗೆ ಕುಜ ದೋಷವಿತ್ತು. ಅದಕ್ಕೆಂದೇ ಅವರಿಗೆ ಮದುವೆಯೂ ತಡವಾಗಿ ನಿಶ್ಚಯವಾಗಿತ್ತು.












Click it and Unblock the Notifications