ದೆಹಲಿ: ಒಂದೇ ಕುಟುಂಬದ 11 ಮಂದಿ ಸಾವಿನ ಪ್ರಕರಣಕ್ಕೆ ಹೊಸ ತಿರುವು
ನವದೆಹಲಿ, ಸೆಪ್ಟೆಂಬರ್ 15: ಉತ್ತರ ದೆಹಲಿಯ ಬುರಾರಿಯಲ್ಲಿ ಜುಲೈನಲ್ಲಿ ಒಂದೇ ಕುಟುಂಬದ 11 ಮಂದಿಯ ಮೃತದೇಹ ದೊರೆತ ಪ್ರಕರಣದ ಮರಣೋತ್ತರ ಪರೀಕ್ಷೆ ವರದಿ ಬಹಿರಂಗವಾಗಿದೆ.
ಮೃತರಲ್ಲಿ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಈ ಎಲ್ಲ ಸಾವುಗಳೂ ಆರಚಣೆಯೊಂದರ ಸಂದರ್ಭದಲ್ಲಿ ಆಕಸ್ಮಿಕ ಅವಘಡದಿಂದ ಸಂಭವಿಸಿವೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ.
ಈ ಪ್ರಕರಣ ತೀವ್ರ ಕಗ್ಗಂಟಾಗಿ ಪರಿಣಮಿಸಿದ್ದರಿಂದ ದೆಹಲಿ ಪೊಲೀಸರು ಮಾನಸಿಕ ಮರಣೋತ್ತರ ಪರೀಕ್ಷೆ ನಡೆಸುವಂತೆ ಜುಲೈನಲ್ಲಿ ಕೇಂದ್ರ ಅಪರಾಧ ದಳಕ್ಕೆ ಪತ್ರ ಬರೆದಿದ್ದರು. ಈ ಮರಣೋತ್ತರ ಪರೀಕ್ಷೆಯ ವರದಿ ಬುಧವಾರ ತಲುಪಿದೆ.
ಈ ವರದಿ ನೀಡಿರುವ ಮಾಹಿತಿ ಪ್ರಕರಣವನ್ನು ಇನ್ನಷ್ಟು ಜಟಿಲಗೊಳಿಸಿದೆ.

ಆಕಸ್ಮಿಕ ಅವಘಡ
ಮೃತರ ಕುರಿತು ನಡೆಸಿದ ಮಾನಸಿಕ ಮರಣೋತ್ತರ ಪರೀಕ್ಷೆಯ ಅಧ್ಯಯನದ ಆಧಾರದಲ್ಲಿ ಈ ಘಟನೆಯು ಸಾಮೂಹಿಕ ಆತ್ಮಹತ್ಯೆಯಲ್ಲ, ಆದರೆ ಆಚರಣಾ ಕ್ರಮವೊಂದನ್ನು ಪಾಲಿಸುವಾಗ ಉಂಟಾಗಿರುವ ಅಪಘಾತ. ಮೃತರಲ್ಲಿ ಯಾರೊಬ್ಬರೂ ತನ್ನ ಅಂತ್ಯವನ್ನು ಕಾಣಲು ಬಯಸಿರಲಿಲ್ಲ ಎಂದು ವರದಿ ತಿಳಿಸಿದೆ.

ಸಿಎಫ್ಎಸ್ಎಲ್ ಅಧ್ಯಯನ ವರದಿ
ಮಾನಸಿಕ ಮರಣೋತ್ತರ ಪರೀಕ್ಷೆ (ಸೈಕಾಲಾಜಿಕಲ್ ಅಟಾಪ್ಸಿ) ಅಧ್ಯಯನದ ವೇಳೆ ಸಿಬಿಐನ ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಮನೆಯಲ್ಲಿ ಪತ್ತೆಯಾದ ನೋಟ್ಗಳು ಮತ್ತು ಪೊಲೀಸರು ದಾಖಲಿಸಿಕೊಂಡ ಚುಂಡಾವತ್ ಕುಟುಂಬದ ಸ್ನೇಹಿತರು ಹಾಗೂ ಸಂಬಂಧಿಕರ ಹೇಳಿಕೆಗಳನ್ನು ವಿಶ್ಲೇಷಿಸಿದ್ದಾರೆ.
ಕುಟುಂಬದ ಹಿರಿಯ ಮಗ ದಿನೇಶ್ ಸಿಂಗ್ ಚುಂಡಾವತ್ ಮತ್ತು ಆಕೆಯ ಸಹೋದರಿ ಸುಜಾತಾ ನಾಗಪಾಲ್ ಹಾಗೂ ಅವರ ಕುಟುಂಬವನ್ನು ಸಿಎಫ್ಎಸ್ಎಲ್ ಸಂದರ್ಶಿಸಿದೆ.

ಸೈಕಾಲಾಜಿಕಲ್ ಅಟಾಪ್ಸಿ ಹೇಗೆ?
ಮಾನಸಿಕ ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯಕೀಯ ದಾಖಲೆಗಳ ವಿಶ್ಲೇಷಣೆ, ಮೃತರ ಸ್ನೇಹಿತರು ಮತ್ತು ಸಂಬಂಧಿಕರನ್ನು ಸಂದರ್ಶಿಸುವುದು ಮತ್ತು ಸಾವಿಗೂ ಮುನ್ನ ಅವರ ಮಾನಸಿಕ ಸ್ಥಿತಿಯ ಕುರಿತ ಸಂಶೋಧನೆ ಮಾಡುವುದರ ಮೂಲಕ ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಅಧ್ಯಯನ ಮಾಡುವ ಪ್ರಯತ್ನಿಸಲಾಗುತ್ತದೆ.

ಗೊಂದಲ ಸೃಷ್ಟಿಸಿರುವ ಬರಹ
ಕುಟುಂಬ ಬರೆದಿರುವ 11 ವರ್ಷಗಳವರೆಗಿನ ಡೈರಿಯಲ್ಲಿ ದೇವರನ್ನು ತಲುಪುವ ಕುರಿತು ಬರೆದಿರುವುದು ಪೊಲೀಸ್ ತನಿಖೆಯಲ್ಲಿ ಗೊಂದಲ ಸೃಷ್ಟಿಸಿತ್ತು.
ಮೃತರಲ್ಲಿ ಒಬ್ಬರಾದ ಲಲಿತ್ ಚುಂಡಾವತ್, ತಾವು ಮೃತ ತಂದೆಯನ್ನು ಕಾಣುತ್ತಿದ್ದು, ಕುಟುಂಬದ ಸದಸ್ಯರಿಗೆ ಕೆಲವು ಸಂಗತಿಗಳನ್ನು ಮಾಡುವಂತೆ ಸೂಚಿಸುತ್ತಿದ್ದಾರೆ ಎಂಬುದನ್ನು ಹೇಳಿಕೊಳ್ಳುತ್ತಿದ್ದದ್ದು ತನಿಖೆ ವೇಳೆ ತಿಳಿದುಬಂದಿತ್ತು.

ಘಟನೆ ಏನು?
ಜೂನ್ 30 - ಜುಲೈ 1ರ ನಡುವೆ ದೆಹಲಿಯ ಬುರಾರಿ ಎಂಬಲ್ಲಿ ಒಂದು ಮನೆಯಲ್ಲಿ ಒಂದೇ ಕುಟುಂಬದ 11 ಜನರ ಶವ ಪತ್ತೆಯಾಗಿತ್ತು. 11 ಸದಸ್ಯರ ಪೈಕಿ 10 ಮಂದಿಯ ಮೃತದೇಹಗಳು ಮನೆಯ ಸೀಲಿಂಗ್ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಆದರೆ, ಕುಟುಂಬದ ಯಜಮಾನತಿ 77 ವರ್ಷದ ನಾರಾಯಣದೇವಿ ಅವರ ದೇಹ ಮತ್ತೊಂದು ಕೊಠಡಿಯಲ್ಲಿ ನೆಲದ ಮೇಲೆ ದೊರೆತಿತ್ತು.
ಆಕೆಯ ಮಗಳು ಪ್ರತಿಭಾ (57), ಮಗ ಭವನೇಶ್ (50), ಲಲಿತ್ ಭಾಟಿಯಾ (45), ಭವನೇಶ್ ಪತ್ನಿ ಸವಿತಾ (48) ಮತ್ತು ಅವರ ಮೂರು ಮಕ್ಕಳು ಮೀನು (23), ನೀತು (25), ಧ್ರುವ್ (15). ಲಲಿತ್ ಭಾಟಿಯಾ ಹೆಂಡತಿ ಟೀನಾ (42), ಅವರ ಮಗ ಶಿವಂ (15), ಪ್ರತಿಭಾ ಮಗಳು ಪ್ರಿಯಾಂಕಾ (33) ಮೃತಪಟ್ಟಿದ್ದರು.

ಇನ್ನೂ ಬಗೆಹರಿಯದ ಗೊಂದಲ
ಪ್ರಾಥಮಿಕ ಮರಣೋತ್ತರ ಪರೀಕ್ಷೆಯು ಎಲ್ಲ ಹನ್ನೊಂದು ಮಂದಿಯೂ ನೇಣು ಬಿಗಿದ ಕಾರಣದಿಂದಲೇ ಮೃತಪಟ್ಟಿದ್ದಾರೆ ಎಂದು ಹೇಳಿತ್ತು. ಆದರೆ, ಮಾನಸಿಕ ಮರಣೋತ್ತರ ಪರೀಕ್ಷೆಯ ವರದಿಯಿಂದ ಈ ಪ್ರಕರಣ ಮತ್ತಷ್ಟು ಕಗ್ಗಂಟಾಗಿದೆ. ಆಚರಣೆಯೊಂದರ ಸಂದರ್ಭದಲ್ಲಿ ಎಲ್ಲರೂ ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಕುತ್ತಿಗೆಗೆ ಹಗ್ಗ ಹಾಕಿಕೊಳ್ಳುವಂತಹ ಆಚರಣೆ ಯಾವುದು, ಅಂತಹ ಆಚರಣೆಗೆ ಅವರು ಏಕೆ ಮುಂದಾದರು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಅಲ್ಲದೆ, ನಾರಾಯಣ ದೇವಿ ಅವರ ಮೃತದೇಹ ಮತ್ತೊಂದು ಕೊಠಡಿಯ ನೆಲದ ಮೇಲೆ ಪತ್ತೆಯಾಗಿರುವುದು ಕೂಡ ಗೊಂದಲವನ್ನು ಹೆಚ್ಚಿಸಿದೆ. ಅವುಗಳಿಗೆ ಇನ್ನೂ ಉತ್ತರ ಸಿಗಬೇಕಿದೆ.












Click it and Unblock the Notifications