ಸಾಮೂಹಿಕ ಆತ್ಮಹತ್ಯೆಯ ನಿಗೂಢ ಪ್ರಕರಣ: ಮೃತರಿಗೆ ಮಾನಸಿಕ ಅಟಾಪ್ಸಿ!
ನವದೆಹಲಿ, ಜುಲೈ 06: ದಿನೇ ದಿನೇ ನಿಗೂಢತೆ ಸೃಷ್ಟಿಸುತ್ತಿರುವ ದದೆಹಲಿಯ ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಮಾನಸಿಕ ಅಟಾಪ್ಸಿ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
ಒಬ್ಬ ವ್ಯಕ್ತಿಯ ಸಾವು ಹೇಗೆ ಸಂಭವಿಸಿದ್ದು ಎಂಬುದನ್ನು ಆತನ ದೇಹದ ಅಟಾಪ್ಸಿ(ಶವಪರೀಕ್ಷೆ) ನಡೆಸುವ ಮೂಲಕ ತಿಳಿಯಬಹುದು. ಆದರೆ ಕೆಲವು ಅಪರೂಪದ ಪ್ರಕರಣಗಳಲ್ಲಿ ಸಾವಿಗೆ ಕಾರಣವನ್ನು ಪತ್ತೆ ಮಾಡಲು ಮಾನಸಿಕ ಅಟಾಪ್ಸಿ ನಡೆಸಲಾಗುತ್ತದೆ.
ಸೈಕಾಲಾಜಿಕಲ್ ಅಟಾಪ್ಸಿ ಅಂದ್ರೇನು?
ಮೃತರ ಮಾನಸಿಕ ಸ್ಥಿತಿ ಹೇಗಿತ್ತು ಎಂಬುದನ್ನು ಈ ಪರೀಕ್ಷೆಯ ಮೂಲಕ ತಿಳಿಯಲಾಗುತ್ತದೆ. ತೀರಾ ಅಪರೂಪದ ಆತ್ಮಹತ್ಯೆ ಪ್ರಕರಣಗಳಲ್ಲಿ, ಕಾರಣವನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಾಗದ ಸನ್ನಿವೇಶಗಳಲ್ಲಿ ಸೈಕಾಲಾಜಿಕಲ್ ಅಟಾಪ್ಸಿ ನಡೆಯುತ್ತದೆ.

ಮೃತರ ಆತ್ಮೀಯರು, ಕುಟುಂಬಸ್ಥರು, ಸ್ನೇಹಿತರನ್ನು ಸಂದರ್ಶನ ಮಾಡಿ ಮೃತರ ಸ್ವಭಾವದ ಕುರಿತು ಮಾಹಿತಿ ಕಲೆ ಹಾಕಲಾಗುತ್ತದೆ. ಅವರ ವೈದ್ಯಕೀಯ ದಾಖಲೆಗಳನ್ನು ತನಿಖೆ ಮಾಡಲಾಗುತ್ತದೆ. ಸಾಯುವ ಕೆಲವು ಗಂಟೆ, ದಿನಗಳ ಮೊದಲು ಆತ ಯಾರೆಲ್ಲರ ಬಳಿ ಮಾತನಾಡಿದ್ದ ಮತ್ತು ಏನೆಲ್ಲ ಮಾತನಾಡಿದ್ದ ಎಂಬುದನ್ನು ತಿಳಿಯಲಾಗುತ್ತದೆ. ಇದರಿಂದ ವ್ಯಕ್ತಿಯ ಮನಸ್ಥಿತಿ ಹೇಗಿತ್ತು ಎಂಬುದು ಅರ್ಥವಾಗುತ್ತದೆ. ಇದರಿಂದ ಆತ್ಮಹತ್ಯೆಗೆ ಕಾರಣ ಹುಡುಕುವುದು ಸುಲಭವಾಗುತ್ತದೆ. ಇದೇ ಮಾನಸಿಕ ಅಟಾಪ್ಸಿ.
ಏನಿದು ಪ್ರಕರಣ?
ದೆಹಲಿಯಲ್ಲಿ ಒಂದೇ ಕುಟುಂಬದ 11 ಜನ ಆತ್ಮಹ್ತಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರ ವಿಚಿತ್ರ ಸಂಗತಿಗಳು ಹೊರಬರುತ್ತಿದ್ದು, ಮೃತರು ಸಾಯುವ ಮುನ್ನ ಅವರ ಮನಸ್ಥಿತಿ ಹೇಗಿತ್ತು ಮತ್ತು ಅವರ ಸ್ವಭಾವ ಎಂಥದ್ದು ಎಂಬುದನ್ನು ಅರಿಯುವುದಕ್ಕಾಗಿ ಈ ಪರೀಕ್ಷೆ ನಡೆಸಲಾಗುತ್ತದೆ.
ಜೂನ್ 30 - ಜುಲೈ 1ರ ನಡುವೆ ದೆಹಲಿಯ ಬುರಾರಿ ಎಂಬಲ್ಲಿ ಒಂದು ಮನೆಯಲ್ಲಿ ಒಂದೇ ಕುಟುಂಬದ 11 ಜನರ ಶವ ಪತ್ತೆಯಾಗಿತ್ತು. ಇವುಗಳಲ್ಲಿ 10 ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, 1 ಶವ ಮಾತ್ರ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರ ಮನೆಯಲ್ಲಿ ಸಿಕ್ಕ 11 ಡೈರಿಗಳು ಚಿತ್ರ-ವಿಚಿತ್ರ ಸಂಕೇತಗಳನ್ನು ಹೊಂದಿರುವುದು ತಿಳಿದುಬಂದಿತ್ತು.
ಸಾಯುವ ಮುನ್ನ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆಂದೇ ಮನೆಯ ಸದಸ್ಯರು ಸ್ಟೂಲ್ ಮತ್ತು ಇಲೆಕ್ಟ್ರಿಕಲ್ ವೈಯರ್ ಗಳನ್ನು ಒಯ್ಯುತ್ತಿರುವ ದೃಶ್ಯಗಳು ಸಿಸಿಟಿವಿ ಫೂಟೇಜ್ ನಲ್ಲಿ ದಾಖಲಾಗಿ ಮತ್ತಷ್ಟು ಆತಂಕ ಸೃಷ್ಟಿಸಿದ್ದವು.
ಮನೆ ಜನರಲ್ಲಿದ್ದ ವಿಚಿತ್ರ ಮೂಢನಂಬಿಕೆಯೇ ಈ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆ.












Click it and Unblock the Notifications