ಮೈಸೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಸಿಡಿಲಿಗೆ ಬಲಿ
ಮೈಸೂರು, ಮೇ 09 : ಮಂಗಳವಾರ ಚಿತ್ರದುರ್ಗ ಜಿಲ್ಲೆಯಲ್ಲಿ ಮೂವರು ಸಿಡಿಲಿಗೆ ಬಲಿಯಾಗಿದ್ದಾರೆ ಎನ್ನುವ ವರದಿಯಾಗುತ್ತಿದ್ದಂತೆ ಇತ್ತ ಮೈಸೂರಿನಲ್ಲೂ ಓರ್ವ ಮಹಿಳೆ ಸಿಡಿಲಿನ ಹೊಡೆತಕ್ಕೆ ಮೃತಪಟ್ಟಿದ್ದಾಳೆ.
ಕೆ.ಆರ್.ನಗರ ತಾಲೂಕಿನ ಭೇರ್ಯ ಸಮೀಪದ ಕುಪ್ಪಳ್ಳಿ ಗ್ರಾಮದ ಸಮೀಪ ಜಮೀನಿನಲ್ಲಿ ತಂಬಾಕು ನಾಟಿ ಮಾಡುತ್ತಿದ್ದ 60 ವರ್ಷದ ಈರಮ್ಮ ಎಂಬ ಮಹಿಳೆಗೆ ಸಿಡಿಲು ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.[ಹಿರಿಯೂರು: ಈಜಲು ತೆರಳಿದ್ದ ಮೂವರು ಸಿಡಿಲಿಗೆ ಬಲಿ]
ಈರಮ್ಮ ಅವರು ತಮ್ಮ ಜಮೀನಿನಲ್ಲಿ ಕುಟುಂಬದವರ ಜತೆಯಲ್ಲಿ ತಂಬಾಕು ಸಸಿ ನಾಟಿ ಮಾಡುವುದರಲ್ಲಿ ನಿರತರಾಗಿದ್ದ ವೇಳೆ ದಿಢೀರನೇ ಗುಡುಗು, ಮಿಂಚು ಸಮೇತ ಮಳೆ ಸುರಿಯಲಾರಂಭಿಸಿ ಸಿಡಿಲು ಹೊಡೆದಿದೆ. ಪರಿಣಾಮ ತಂಬಾಕು ಸಸಿ ನಾಟಿ ಕಾರ್ಯದಲ್ಲಿ ತೊಡಗಿದ್ದ ಈರಮ್ಮ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸಾಲಿಗ್ರಾಮ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಭೇರ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ನೀಡಿದರು.
ಕಳೆದ ಕೆಲ ದಿನಗಳಿಂದ ಮಳೆಯೊಂದಿಗೆ ಸಿಡಿಲು-ಗುಡುಗು ಬರುತ್ತಿದ್ದು, ಹಲವೆಡೆ ಸಿಡಿಲು ಬಡಿದು ಜನ-ಜಾನುವಾರುಗಳು ಸಾವನ್ನಪ್ಪುತ್ತಿರುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದು ಜನರಲ್ಲಿ ಅದರಲ್ಲೂ ಜಮೀನಿನಲ್ಲಿ ಕೆಲಸ ಮಾಡುವ ರೈತರಲ್ಲಿ ಆತಂಕ ಮೂಡಿಸಿದೆ.