ಇಂಥ ಪರಿಸ್ಥಿತಿಯಲ್ಲಿ ಮೂರು ಡಿಸಿಎಂ ಬೇಕಿತ್ತಾ? ಸಂಸದ ಶ್ರೀನಿವಾಸ ಪ್ರಸಾದ್ ಪ್ರಶ್ನೆ
ಮೈಸೂರು, ಆಗಸ್ಟ್ 27: ಬಿಜೆಪಿ ಸರ್ಕಾರದ ಖಾತೆ ಹಂಚಿಕೆ ಹಾಗೂ ಮೂವರಿಗೆ ಡಿಸಿಎಂ ಪಟ್ಟ ನೀಡಿದ ವಿಚಾರವಾಗಿ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಇಂತಹ ಪರಿಸ್ಥಿತಿಯಲ್ಲಿ ಮೂರು ಮೂರು ಜನ ಉಪ ಮುಖ್ಯಮಂತ್ರಿಗಳು ಬೇಕಾಗಿರಲಿಲ್ಲ. ಬಿಜೆಪಿ ಹೈಕಮಾಂಡ್ ಈ ತೀರ್ಮಾನ ಮಾಡಿದ್ದರೂ ನಾನು ವಿರೋಧ ಮಾಡುತ್ತೇನೆ" ಎಂದು ಸ್ವಪಕ್ಷದ ವಿರುದ್ಧವೇ ಹರಿಹಾಯ್ದಿದ್ದಾರೆ.

"ಬಿಜೆಪಿ ಹೈಕಮಾಂಡ್ ನಿರ್ಧಾರ ಸರಿಯಿಲ್ಲ. ಹೈಕಮಾಂಡ್ ಗೆ ಸರಿಯಾದ ಮಾಹಿತಿ ನೀಡಬೇಕಿತ್ತು. ಹೈಕಮಾಂಡ್ ನಿರ್ಧಾರಕ್ಕೆ ನನ್ನ ವೈಯಕ್ತಿಕ ವಿರೋಧವಿದೆ. ಡಿಸಿಎಂ ಸ್ಥಾನ, ಖಾತೆಗಾಗಿ ಜಗಳ ಬಿಡಿ. ಅತೃಪ್ತ ಶಾಸಕರ ಭವಿಷ್ಯದ ಬಗ್ಗೆ ಗಮನಕೊಡಿ. ಆ 17 ಜನ ಹೊರಬಂದಿದ್ದಕ್ಕೆ ತಾನೇ ನೀವು ಸರ್ಕಾರ ಮಾಡಿದ್ದು. ನಿಮಗೇನು 113 ಸ್ಥಾನ ಇತ್ತಾ? ಯಾಕ್ರೀ ಈ ಥರ ಕಚ್ಚಾಡ್ತೀರಾ...?" ಎಂದು ಪಕ್ಷದ ನಾಯಕರ ವಿರುದ್ಧವೇ ಹರಿಹಾಯ್ದರು.

"ಜನ ಬಿಜೆಪಿಗೆ ಬಹುಮತ ನೀಡಿರಲಿಲ್ಲ. ಅಂತಹದರಲ್ಲಿ ನೀವು ಸರ್ಕಾರ ರಚನೆ ಮಾಡಿದ್ದಿರಿ. ನಾಲ್ಕು ವರ್ಷಗಳ ಕಾಲ ಉತ್ತಮ ಆಡಳಿತ ಕೊಡಬೇಕಿತ್ತು. ಈ ರೀತಿ ಕಚ್ಚಾಟ ಮಾಡೋದು ಸರಿಯಲ್ಲ. ನಾನು ಏನಾದ್ರೂ ಹೇಳಲು ಹೋದ್ರೆ ಯಾರು ಕೇಳ್ತಾರೆ. ಎಲ್ಲರೂ ಸ್ವಾರ್ಥ ಬಿಟ್ಟು ಕೆಲಸ ಮಾಡಬೇಕು" ಎಂದು ಸಲಹೆ ನೀಡಿದರು.

"ಅನರ್ಹ ಶಾಸಕರನ್ನು ಬಿಜೆಪಿಯವರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವುದಿಲ್ಲ. ಅವರ ಅನರ್ಹತೆ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಅದು ಇತ್ಯರ್ಥ ಆದ ಮೇಲೆ ಅವರಿಗೂ ಸಚಿವ ಸ್ಥಾನ ಸಿಗಲಿದೆ. ಹಾಗೇ ನೋಡುವುದಾದರೆ ಸಿದ್ದರಾಮಯ್ಯ ಸಹ ಅತೃಪ್ತ ಶಾಸಕರೇ" ಎಂದರು.
ಮೋಹನ್ ಭಾಗವತ್ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್, "ಮೋಹನ್ ಭಾಗವತ್ ಅವರದ್ದು ವೈಯಕ್ತಿಕ ಹೇಳಿಕೆ. ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಹೋದರೆ ಧರ್ಮ ಸಂಪೂರ್ಣವಾಗುವುದಿಲ್ಲ ಎಂದು ಭಾಗವತ್ ಹೇಳುತ್ತಾರೆ. ಅವರು ಅವರ ಅಭಿಪ್ರಾಯ ಹೇಳುತ್ತಿದ್ದಾರೆ. ಆದ್ರೆ ಅವರ ಅಭಿಪ್ರಾಯಗಳು ನಮಗೆ ಇಷ್ಟ ಆಗಲ್ಲ" ಎಂದರು.











Click it and Unblock the Notifications