ಸಾಲುಮರದ ತಿಮ್ಮಕ್ಕ ನಿಧನ ಸುದ್ದಿ ಹಬ್ಬಿಸಿದ್ದು ನಾನಲ್ಲ: ಪ್ರದೀಪ್ ಗೌಡ
ಮೈಸೂರು, ಮೇ 30 : ಸಾಲು ಮರದ ತಿಮ್ಮಕ್ಕ ಸಾವಿಗೀಡಾಗಿದ್ದಾರೆ ಎಂದು ಸುಖಾ ಸುಮ್ಮನೆ ಸುಳ್ಳು ವದಂತಿ ಹಬ್ಬಿಸಿದ ಕೆಲ ಕಿಡಿಗೇಡಿಗಳನ್ನು ಮೈಸೂರು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಸಾಲು ಮರದ ತಿಮ್ಮಕ್ಕ ಮತ್ತು ದತ್ತು ಪುತ್ರ ಉಮೇಶ್ ನೀಡಿದ್ದ ದೂರಿನ ಅನ್ವಯ ತನಿಖೆ ನಡೆಸುತ್ತಿದ್ದ ಪೊಲೀಸರು ವದಂತಿಗೆ ಸಂಬಂಧಿಸಿದಂತೆ ಮೊದಲಿಗೆ ಪ್ರದೀಪ್ ಗೌಡ ಎಂಬುವನನ್ನು ಬಂಧಿಸಿದರು.
ಸಾಲು ಮರದ ತಿಮ್ಮಕ್ಕ ನೆರವಿಗೆ ಧಾವಿಸಿದ ರಾಜೀವ್ ಚಂದ್ರಶೇಖರ್
ಆದರೆ ಬಂಧಿತ ಪ್ರದೀಪ್ ಗೌಡ ಆ ಸುದ್ದಿ ಹಬ್ಬಿಸಿದ್ದು ನಾನಲ್ಲ ಎನ್ನುತ್ತಿದ್ದಾನೆ. ಈತ ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಸಾಲಿಗ್ರಾಮ ಹೋಬಳಿಯ ಹರದನಹಳ್ಳಿ ಗ್ರಾಮದ ಯುವಕ. ಪ್ರದೀಪ್ ಗೌಡ ಎಂಬ ಹೆಸರಿನಲ್ಲಿ ಫೇಸ್ ಬುಕ್ ಖಾತೆ ಹೊಂದಿದ್ದ.
ತನ್ನ ಖಾತೆಯಿಂದಲೇ ಆತ ಸ್ನೇಹ ಲೋಕ ಎಂಬ ಫೇಸ್ ಬುಕ್ ಗ್ರೂಪ್ ನಲ್ಲಿ ಸಾಲು ಮರದ ತಿಮ್ಮಪ್ಪ ನಿಧನಪಟ್ಟರು ಎಂಬ ವದಂತಿ ಹಬ್ಬಿಸಿದ್ದ ಎನ್ನಲಾಗಿದೆ.
ಇದೇ ಮೇ. 25ರಂದು ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪೋಸ್ಟ್ ಮಾಡಿದ್ದ. ಈ ಫೋಟೊವನ್ನು ಪೋಟೊ ಶಾಪ್ ನಲ್ಲಿ ಎಡಿಟಿಂಗ್ ಮಾಡಿ ಬಳಿಕ ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಲಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಪ್ರದೀಪ್ ಗೌಡನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. "ಸಾಲು ಮರದ ತಿಮ್ಮಕ್ಕ ಮೃತಪಟ್ಟ ಸುದ್ದಿ ನಾನು ಹಬ್ಬಿಸಿದ ವದಂತಿಯಲ್ಲ. ಬದಲಿಗೆ ಮನಸ್ಸುಗಳ ಮಾತು ಮಧುರ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಲಾಗಿತ್ತು.
ನಾನು ಅದನ್ನೇ ಡೌನ್ ಲೋಡ್ ಮಾಡಿಕೊಂಡು, ಮತ್ತೆ ಎಡಿಟ್ ಮಾಡಿ ಸ್ನೇಹ ಲೋಕ ಫೇಸ್ ಬುಕ್ ಪೇಜ್ ನಲ್ಲಿ ರೀ-ಪೋಸ್ಟ್ ಮಾಡಿದೆ ಅಷ್ಟೆ" ಎಂದು ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ಇದೀಗ ಸಿಸಿಬಿ ಪೊಲೀಸರು ಮನಸ್ಸುಗಳ ಮಾತು ಮಧುರ ಪೇಜ್ ನ ಹುಡುಕಾಟ ನಡೆಸಿದ್ದು, ಪ್ರದೀಪ್ ಗೌಡ ನೀಡಿದ ಹೇಳಿಕೆ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದಾರೆ.