ಕೊಡಗಿನಲ್ಲಿ ಜೇನುತುಪ್ಪ ಕೊಳ್ಳುವ ಮುನ್ನ ಒಮ್ಮೆ ಈ ಸ್ಟೋರಿ ಓದಿ...
ಮೈಸೂರು, ಏಪ್ರಿಲ್ 23:ಜೇನು ತುಪ್ಪ ಎಂದರೆ ಸಾಕು ಮೊದಲು ನಮಗೆ ನೆನಪಾಗುವುದು ದಟ್ಟ ಕಾನನದ ಕೊಡಗು. ಕಾಫಿ ಬೆಳೆಗಾರರು ಹೆಚ್ಚಿರುವ ಕೊಡಗಿನಲ್ಲಿ ಜೇನು ತುಪ್ಪದ ಮಾರಾಟವೂ ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ.
ಆದರೆ ಈ ಜೇನು ತುಪ್ಪವೇ ನಕಲಿಯಾಗಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿದೆ. ಪ್ರವಾಸಿಗರು ಇದರಿಂದ ಮೋಸ ಹೋಗುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ, ರಸ್ತೆ ಬದಿ ಹಾಗೂ ಎಲ್ಲ ಅಂಗಡಿಗಳಲ್ಲೂ ನಕಲಿ ಜೇನುತುಪ್ಪ ರಾರಾಜಿಸುತ್ತಿದೆ. ನಕಲಿಯನ್ನು ಜನರು ಅಸಲಿ ಎಂದು ನಂಬಿ ಮೋಸ ಹೋಗುತ್ತಿದ್ದಾರೆ.
ಸವಿ ಜೇನಿಗೆ ಹೆಸರಾಗಿರುವ ಕೊಡಗಿನ ಹೆಸರಿಗೆ ಮಸಿ ಬಳಿಯುವ ಕಾಯಕ ನಿರಾತಂಕವಾಗಿ ಸಾಗುತ್ತಿದೆ. ಬಸ್ ಗಳ ಮೂಲಕವೇ ದೊಡ್ಡ ದೊಡ್ಡ ಕ್ಯಾನ್ ಗಳಲ್ಲಿ ತರಲಾಗುವ ಈ ನಕಲಿ ಜೇನುತುಪ್ಪವನ್ನು ಕೊಡಗಿನ ಕುಶಾಲನಗರದಲ್ಲಿಯೇ ಬಾಟಲಿಗಳಿಗೆ ತುಂಬಲಾಗುತ್ತದೆ.
ಅಷ್ಟೇ ಅಲ್ಲ, ಎಲ್ಲಿಯೂ ಸಹ ಸಾರ್ವಜನಿಕರಿಗೆ ಸಂಶಯ ಬಾರದಂತೆ ಪಕ್ಕದಲ್ಲೇ ಜೇನಿನ ಗೂಡನ್ನು ಸಹ ಇಟ್ಟುಕೊಂಡಿರುತ್ತಾರೆ. ಈಗಷ್ಟೇ ತಾವು ತೆಗೆದ ಜೇನು ಎಂದು ಸುಳ್ಳು ಹೇಳಿ ಜನರನ್ನು ವಂಚಿಸುತ್ತಾರೆ.

ಸಕ್ಕರೆ ಅಥವಾ ಬೆಲ್ಲದ ಪಾಕದಿಂದ ತಯಾರು
ಈ ದಂದೆಯಲ್ಲಿ ತೊಡಗಿಸಿಕೊಂಡಿರುವವರು ತಿಂಗಳಿಗೊಮ್ಮೆ ಆಗಮಿಸಿ ಹಲವೆಡೆ ನಕಲಿ ಜೇನನ್ನು ಪೂರೈಸಿ ವಾಪಸ್ಸಾಗುತ್ತಾರೆ.ಇದು ಅಸಲಿ ಜೇನಿಗೆ ಸೆಡ್ಡು ಹೊಡೆಯುವಂಥ ರುಚಿಯನ್ನು ಹೊಂದಿರುತ್ತದೆ. ಸಕ್ಕರೆ ಅಥವಾ ಬೆಲ್ಲದ ಪಾಕದಿಂದ ನಕಲಿ ಜೇನನ್ನು ತಯಾರಿಸಿದ್ದು, ಪರಿಮಳ ಮತ್ತು ಜೇನಿನಂತೆ ಮಂದವಾಗಲು ಕೆಲ ಅಪಾಯಕಾರಿ ರಾಸಾಯನಿಕಗಳನ್ನು ಮಿಶ್ರ ಮಾಡಿರುತ್ತಾರೆ.

ಸುಳ್ಳು ಹೇಳಿ ಅಂಗಡಿಗಳಿಗೆ ಪೂರೈಕೆ
10 - 15 ರೂಗಳೊಳಗೆ ಒಂದು ಬಾಟಲಿ ನಕಲಿ ಜೇನುತುಪ್ಪ ಕ್ಷಣಾರ್ಧದಲ್ಲಿ ಸಿದ್ಧವಾಗುತ್ತದೆ. ಇದರ ಅರಿವೆಯೇ ಇರದ ಗ್ರಾಹಕರು ದುಬಾರಿ ಹಣವನ್ನು ನೀಡಿ ಈ ಜೇನುತುಪ್ಪವನ್ನು ಖರೀದಿಸುತ್ತಾರೆ. ಬಹುತೇಕ ನಕಲಿ ಜೇನು ಕೊಡಗಿನ ಕುಶಾಲನಗರದಲ್ಲಿ ಸಿದ್ಧಗೊಳ್ಳುತ್ತದೆ. ಬಿಳಿಗಿರಿ ರಂಗನ ಬೆಟ್ಟ ಪ್ರದೇಶದಲ್ಲಿ ಕಾಡಿನಲ್ಲಿ ಜೇನು ಸಂಗ್ರಹಿಸಿದ್ದೇವೆ ಎಂದು ಸುಳ್ಳು ಹೇಳಿ ಅಂಗಡಿಗಳಿಗೆ ಪೂರೈಸುತ್ತಾರೆ.

ನಕಲಿ ಜೇನು ತುಪ್ಪ ಮಾರಾಟಗಾರರಿಗೆ ಎಚ್ಚರಿಕೆ
ಒಂದು ಬಾಟಲಿಗೆ 100-150ರೂ.ಹಣವನ್ನು ಇಟ್ಟು ಕೊನೆಗೆ 60-70ರವರೆಗೆ ಕೊಟ್ಟು ಹೋಗುತ್ತಾರೆ. ಇದನ್ನೇ ವ್ಯಾಪಾರಸ್ಥರು ಅಂಗಡಿಗಳಲ್ಲಿ 250- 300ರೂ ತನಕ ಮಾರಾಟ ಮಾಡುತ್ತಾರೆ. ಭಾಗಮಂಡಲದಲ್ಲಿರುವ ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದ ವತಿಯಿಂದ ಈ ಹಿಂದೆ ನಕಲಿ ಜೇನು ತುಪ್ಪದ ವಿರುದ್ಧ ಜಾಗೃತಿ ಕಾರ್ಯಕ್ರಮ ಕೂಡ ನಡೆಸಿದರು. ಅಂಗಡಿಗಳಿಗೆ ದಿಢೀರ್ ದಾಳಿ ನೀಡಿ ನಕಲಿ ಜೇನು ತುಪ್ಪ ಮಾರಾಟಗಾರರಿಗೆ ಎಚ್ಚರಿಕೆಯನ್ನೂ ಸಹ ನೀಡಿದ್ದರು.

ಜೇನಿನ ಉತ್ಪಾದನೆ ತೀವ್ರವಾಗಿ ಕುಸಿದಿದೆ
ಎಚ್ಚರಿಕೆಯ ನಂತರ ನಿರ್ಲಕ್ಷ್ಯ ತಾಳಿದ್ದರಿಂದ ನಕಲಿ ಜೇನು ತುಪ್ಪ ಮಾರಾಟ ಜಾಲ ಮತ್ತೊಮ್ಮೆ ಸಕ್ರಿಯವಾಗಿದೆ. ಜಿಲ್ಲೆಯಲ್ಲಿ ಜೇನಿನ ಉತ್ಪಾದನೆ ತೀವ್ರವಾಗಿ ಕುಸಿದಿದ್ದರೂ ದೊಡ್ಡ ಪ್ರಮಾಣದಲ್ಲಿ ಈ ದಂದೆಗೆ ಕಡಿವಾಣ ಹಾಕದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications