ಗದ್ದಿಗೆಯ ಗುಂಡಿಬಿದ್ದ ರಸ್ತೆಯಲ್ಲಿ ಸಂಚರಿಸೋಕೆ ಗುಂಡಿಗೆ ಬೇಕು ರೀ..!
ಮೈಸೂರು, ಅಕ್ಟೋಬರ್ 11: ಹುಣಸೂರು ತಾಲೂಕಿನಲ್ಲಿರುವ ಪವಿತ್ರ ಕ್ಷೇತ್ರ ಕೆಂಡಗಣ್ಣಸ್ವಾಮಿ ಗದ್ದಿಗೆಗೆ ಪ್ರತಿದಿನ ವಿವಿಧ ಊರುಗಳಿಂದ ಭಕ್ತಾದಿಗಳು ಮತ್ತು ಪ್ರವಾಸಿಗರು ಬರುತ್ತಿರುತ್ತಾರೆ. ಹೀಗೆ ಬರುವವರು ಇಲ್ಲಿನ ಹಳ್ಳಕೊಳ್ಳಗಳಿಂದ ಕೂಡಿದ ರಸ್ತೆಯಲ್ಲಿ ಸಂಚರಿಸುವಾಗ ಹಿಡಿಶಾಪ ಹಾಕುವುದು ಮಾಮೂಲಿ.
ಗದ್ದಿಗೆಯಿಂದ ಮೈಸೂರು ಹಾಗೂ ಹುಣಸೂರಿಗೆ ತೆರಳುವ ಪ್ರಮುಖ ರಸ್ತೆಯು ಗುಂಡಿಮಯವಾಗಿದ್ದು ಸಂಚರಿಸಲಾಗದಷ್ಟು ದುಸ್ಥಿತಿಯಿಂದ ಕೂಡಿದ್ದು ವಾಹನದಲ್ಲಿ ತೆರಳುವವರು ಅದರಲ್ಲೂ ದ್ವಿಚಕ್ರವಾಹನಗಳಲ್ಲಿ ತೆರಳುವವರು ಸರ್ಕಸ್ ಮಾಡಿಕೊಂಡೇ ಸಾಗುವುದು ಅನಿವಾರ್ಯವಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿ.
ಎಚ್ಎಸ್ಆರ್ ಬಡಾವಣೆಯ ರಸ್ತೆಯ ಮೇಲೆ ಜನರ ಕಣ್ಣೀರ ಕಾಲುವೆ
ಕೆಂಡಗಣ್ಣಸ್ವಾಮಿ ಗದ್ದಿಗೆಯಿಂದ ಧರ್ಮಾಪುರ ಮಾರ್ಗವಾಗಿ ಹುಣಸೂರಿಗೆ ಸಾಗುವ ರಸ್ತೆ ಹಾಗೂ ಗದ್ದಿಗೆಯಿಂದ ಮೈಸೂರು ಹಾಗೂ ಬಿಳಿಕೆರೆಯನ್ನು ಸಂರ್ಪಕಿಸುವ ಪ್ರಮುಖ ರಸ್ತೆ ಒಟ್ಟು 21 ಕಿ.ಮೀ.ನಲ್ಲಿ 12ಕಿ.ಮೀ. ಮಾತ್ರ ಉತ್ತಮವಾಗಿದ್ದು, ಉಳಿದಂತೆ ರಸ್ತೆಯು ಹಳ್ಳಕೊಳ್ಳಗಳಿಂದ ಕೂಡಿದ್ದು ವಾಹನ ಸಂಚರಿಸುವುದೇ ಕಷ್ಟಕರವಾಗಿದೆ. ಈ ರಸ್ತೆಯು 70 ರಿಂದ 80ಕ್ಕೂ ಅಧಿಕ ಹಳ್ಳಿಗಳನ್ನು ಸಂಪರ್ಕಿಸುತ್ತಿದ್ದು, ಇಲ್ಲಿನವರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಇವರಿಗೆ ಪ್ರತಿದಿನವೂ ಈ ರಸ್ತೆಯಲ್ಲಿ ಸಂಚರಿಸುವುದು ಒಂದು ರೀತಿಯ ಶಿಕ್ಷೆಯಾಗಿ ಪರಿಣಮಿಸಿದೆ.
ಸ್ಥಗಿತಗೊಂಡ ದುರಸ್ತಿಕಾರ್ಯ
ರಸ್ತೆಯ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಯೇ ನಿರ್ವಹಿಸುತ್ತಿದ್ದರೂ ಅನುದಾನದ ಹಾಗೂ ಮಳೆಗಾಲದ ನೆಪವೊಡ್ಡಿ ಸ್ಥಗಿತಗೊಳಿಸಿದ್ದಾರೆ. ಇದರಿಂದ ದುಸ್ಥಿತಿಯ ರಸ್ತೆಯಲ್ಲಿ ಸಂಚರಿಸುವ ದೌರ್ಭಾಗ್ಯ ಜನರದ್ದಾಗಿದೆ.
ನಿಗಾ ವಹಿಸದಿದ್ದರೆ ಅವಘಡ ನಿಶ್ಚಿತ
ಗದ್ದಿಗೆಯಿಂದ ಹುಣಸೂರಿಗೆ ತೆರಳುವ ರಸ್ತೆಯು ಧರ್ಮಾಪುರದಿಂದ ಸಂತೆಕೆರೆಕೊಡಿವರೆಗೆ, ಗದ್ದಿಗೆ-ಮೈಸೂರು ಕಡೆಗೆ ಹೊಗುವ ರಸ್ತೆಯು ಗದ್ದಿಗೆಯಿಂದ ಆಸ್ವಾಳು ಗ್ರಾಮದವರೆಗೂ ರಸ್ತೆಯು ಅಲ್ಲಲ್ಲಿ ಗುಂಡಿಗಳಾಗಿದ್ದು, ಮಳೆಬಂದರೆ ಈ ಹೊಂಡಗಳಲ್ಲಿ ಕೆಸರು ತುಂಬಿ ಗದ್ದೆಯಂತಾಗಿದ್ದು, ವಾಹನದಲ್ಲಿ ತೆರಳುವವರು ಅದರಲ್ಲೂ ಬೈಕ್, ಸ್ಕೂಟರ್ ನಲ್ಲಿ ತೆರಳುವವರ ಸ್ಥಿತಿಯಂತೂ ಹೇಳತೀರದ್ದಾಗಿದೆ. ರಸ್ತೆಯತ್ತ ನಿಗಾ ವಹಿಸದೆ ಸಾಗಿದರೆ ಅವಘಡವಂತೂ ನಿಶ್ಚಿತ.
ಅಧಿಕಾರಿಗಳ ಸಮಜಾಯಿಷಿ
ಲೋಕೋಪಯೋಗಿ ಇಲಾಖೆಯೇ ರಸ್ತೆಯನ್ನು ನಿರ್ವಹಿಸುತ್ತಿದ್ದು, ಈಗಾಗಲೇ ಗದ್ದಿಗೆಯಿಂದ ಅಸ್ವಾಳು ಗ್ರಾಮದವರೆಗೆ, ಧರ್ಮಾಪುರದಿಂದ ಸಂತೆಕೆರೆಕೋಡಿವರೆಗೆ, ವಡ್ಡರಗುಡ್ಡಿ-ಹಳ್ಳದಕೊಪ್ಪಲಿನ 2 ಕಿ.ಮೀ ನಷ್ಟು ಮಣ್ಣಿನ ಅಡ್ಡರಸ್ತೆ ಸೇರಿದಂತೆ ರಸ್ತೆಯ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಲವು ಕಡೆ ಅನುದಾನ ಬಿಡುಗಡೆಯಾಗಿದ್ದು ಮಳೆ ಕಾರಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ, ಮಳೆನಿಂತ ಕಾಮಗಾರಿ ಮುಂದುವರೆಸಲಾಗುವುದು ಎಂಬುದು ಅಧಿಕಾರಿಗಳ ಸಮಜಾಯಿಷಿಯಾಗಿದೆ.
ತೊಂದರೆ ತಪ್ಪಿದ್ದಲ್ಲ
ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಲು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪರವರ ಬಳಿ ಮಾತನಾಡಿದ್ದು, ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆಗೊಂಡ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಮಂಜುನಾಥ್ ಹೇಳುತ್ತಿದ್ದಾರೆ. ಒಟ್ಟಾರೆ ಅಲ್ಲಿ ತನಕ ಈ ರಸ್ತೆಯಲ್ಲಿ ಸಂಚರಿಸುವವರಿಗೆ ತೊಂದರೆಯಂತೂ ತಪ್ಪಿದಲ್ಲ.