ಎಚ್ಎಸ್ಆರ್ ಬಡಾವಣೆಯ ರಸ್ತೆಯ ಮೇಲೆ ಜನರ ಕಣ್ಣೀರ ಕಾಲುವೆ
ಬೆಂಗಳೂರು, ಅಕ್ಟೋಬರ್ 07 : ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಕೇಳರಿಯದಂಥ ಮಳೆ ಸುರಿಯುತ್ತಿದೆ, ಜನ ಒದ್ದೆಮುದ್ದೆಯಾಗುತ್ತಿದ್ದಾರೆ, ಶೀತ ಜ್ವರದಿಂದ ನರಳುತ್ತಿದ್ದಾರೆ. ಆದರೆ, ಇದಾವುದರ ಬಗ್ಗೆ ಜನರಿಗೆ ತಕರಾರಿಲ್ಲ. ತಕರಾರಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕುತ್ತಿರುವ ಕಿತ್ತೋಗಿರುವ ರಸ್ತೆಗಳ ಬಗ್ಗೆ.
ಇನ್ನೂ ಮೂರು ದಿನ ಮಳೆ, ಬೆಂಗಳೂರಿಗರೇ ನಿಮ್ಮ ರಕ್ಷಣೆಗೆ ನೀವೇ ಹೊಣೆ
ವಿಬ್ ಗಯಾರ್ ಸುತ್ತಮುತ್ತಲಿರುವ ಜನರ ಸಂಕಟಕ್ಕೆ ಆ ವೆಂಕಟರಮಣನೂ ಸಹಾಯಕ್ಕೆ ಬರುತ್ತಿಲ್ಲ. ವಿಬ್ ಗಯಾರ್ ಅಂದ ಕೂಡಲೆ 'ಆ ಹೀನಾಯ' ಘಟನೆಗೆ ಕಾರಣವಾಗಿದ್ದ ಮಾರತ್ ಹಳ್ಳಿಯತ್ತ ಗಮನಹರಿಸಬೇಡಿ. ಇದು ಎಚ್ಎಸ್ಆರ್ ಲೇಔಟ್ ನಲ್ಲಿರುವ ವಿಬ್ ಗಯಾರ್ ಸುತ್ತ ವಾಸಿಸುತ್ತಿರುವ ಜನರ ಕಣ್ಣೀರ ಕಥೆ.
ಟ್ವಿಟ್ಟರ್ ವಿಡಿಯೋಗಳಲ್ಲಿ ನೋಡಿ ಬೆಂಗಳೂರು ಮಳೆಯ ಆರ್ಭಟ
ಅಂತಾರಾಷ್ಟ್ರೀಯ ಶಾಲೆ ಈಗ ಸುದ್ದಿಯಲ್ಲಿಲ್ಲದಿದ್ದರೂ ಆ ಶಾಲೆಗೆ ಹೋಗುವ ರಸ್ತೆ ಸುದ್ದಿಗಾರರ ಬೆನ್ನು ತಟ್ಟುತ್ತಿದೆ. ಇಲ್ಲಿಯ ಜನರ ಗೋಳು ಕೇಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 174ರಲ್ಲಿ ಬರುವ ಈ ಏರಿಯಾದ ಕಾರ್ಪೊರೇಟರ್ ಗುರುಮೂರ್ತಿ ರೆಡ್ಡಿ ಅವರಿಗೆ ಕಳೆದ ಏಳೆಂಟು ವರ್ಷಗಳಿಂದಲೂ ಪುರುಸೊತ್ತಿಲ್ಲ!
ಚಿತ್ರಗಳು: ಮತ್ತೆ ಇಂಥ ದೃಶ್ಯಗಳು ಬೆಂಗಳೂರಿನಲ್ಲಿ ಕಾಣಿಸದಿರಲಿ
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಧೋಧೋ ಎಂದು ಮಳೆ ಸುರಿಯುತ್ತಿರುವುದು ಎಲ್ಲರಿಗು ತಿಳಿದ ವಿಚಾರ. ಇದರಿಂದಾಗಿ ನಗರದಲ್ಲಿರುವ ಹಲವಾರು ಬಡಾವಣೆಯಲ್ಲಿರುವ ರಸ್ತೆಗಳು ಕಿತ್ತುಹೋಗಿವೆ, ಗುಂಡಿಗಳು ಬಾಯಿ ತೆರೆದುಕೊಂಡಿವೆ, ಅಲ್ಲಲ್ಲಿ ಕೆಲವರನ್ನು ಬಲಿ ಕೂಡ ತೆಗೆದುಕೊಂಡಿವೆ.
ರಸ್ತೆ ರಿಪೇರಿಯಾಗಿ ಏಳೆಂಟು ವರ್ಷಗಳಾಗಿವೆ
ಮಳೆಯಿಂದಾಗಿಯೇ ರಸ್ತೆಗಳೆಲ್ಲ ಹಾಳಾಗಿವೆ ಎಂದು ಕಾರ್ಪೊರೇಟರ್ ಸಾಹೇಬರು ಸಬೂಬು ಹೇಳಬಹುದು. ಆದರೆ ನೆನಪಿರಲಿ, ಸಾವಿರಾರು ಮಕ್ಕಳು, ಪೋಷಕರು, ನಾಗರಿಕರು ಬಳಸುವ ಈ ಪ್ರಮುಖ ರಸ್ತೆ ರಿಪೇರಿಯಾಗಿ ಏಳೆಂಟು ವರ್ಷಗಳಾಗಿವೆ ಎನ್ನುತ್ತಾರೆ ಅಲ್ಲಿಯ ನಿವಾಸಿ ಶಿಲ್ಪಶ್ರೀಯವರು.
ಮಳೆ ಸುರಿದರೆ ರಸ್ತೆಯೇ ಕಾಲುವೆ
ಮೊದಲೇ ರಸ್ತೆಯ ಡಾಂಬರು ಕಿತ್ತುಹೋಗಿದೆ, ರಸ್ತೆಯ ಮಧ್ಯದಲ್ಲಿಯೇ ಮೋರಿಯ ಚೇಂಬರ್ ಇರುವುದರಿಂದ ಭಾರೀ ಮಳೆ ಸುರಿದಾಗ ಚರಂಡಿ ನೀರು ಕೂಡ ರಸ್ತೆಯನ್ನು ಕಾಲುವೆ ಮಾಡುವುದರಿಂದ ಅಡ್ಡಾಡಲು ಭಾರೀ ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ ಶಿಲ್ಪಶ್ರೀಯವರು.
ಕಾರ್ಪೊರೇಟರ್, ಶಾಸಕರು ಏನು ಮಾಡುತ್ತಿದ್ದಾರೆ
ನಾವು ಈ ಬಡಾವಣೆಯಲ್ಲಿ ಕಳೆದ ಏಳು ವರ್ಷಗಳಿಂದ ವಾಸಿಸುತ್ತಿದ್ದೇವೆ. ಒಂದೇ ಒಂದು ಬಾರಿಯೂ ಈ ರಸ್ತೆ ರಿಪೇರಿಯನ್ನು ಕಂಡಿಲ್ಲ ಎಂಬುದು ಅವರ ದೂರು. ಸ್ಥಳೀಯ ಅಧಿಕಾರಿಗಳು, ಕಾರ್ಪೊರೇಟರ್, ಶಾಸಕರು ಏನು ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಚಿತ್ರಗಳೇ ಎಲ್ಲ ಕಥೆಗಳನ್ನು ಹೇಳುತ್ತವೆ
ಈ ಚಿತ್ರಗಳಲ್ಲಿ ನೋಡಿದರೆ ರಸ್ತೆ ಎಷ್ಟ ಹದಗೆಟ್ಟಿವೆ ಎಂಬುದು ಗೊತ್ತಾಗುತ್ತದೆ. ದ್ವಿಚಕ್ರ ವಾಹನ ಚಾಲಕರು ಕೈಯಲ್ಲಿ ಜೀವ ಹಿಡಿದುಕೊಂಡು ವಾಹನ ಚಲಾಯಿಸಬೇಕಾಗಿದೆ, ಶಾಲೆಗೆ ಹೋಗುವ ಮಕ್ಕಳು ಕೆಸರಿನಲ್ಲಿಯೇ ನಡೆದುಕೊಂಡು ಹೋಗಬೇಕಾಗಿದೆ. ಹಲವಾರು ವಾಹನ ಚಾಲಕರು ಬಿದ್ದು ಗಾಯಗೊಂಡಿದ್ದಾರೆ ಕೂಡ.
ಗುರುಮೂರ್ತಿ ರೆಡ್ಡಿಯವರ ಸಂಪರ್ಕ ಸಂಖ್ಯೆ ಇಲ್ಲಿದೆ
ಬಿಜೆಪಿಯ ಸದಸ್ಯರಾಗಿರುವ ಗುರುಮೂರ್ತಿ ರೆಡ್ಡಿ ಅವರ ಸಂಖ್ಯೆ ನೋಟ್ ಮಾಡಿಕೊಳ್ಳಿ - 9945890672. ಕನಿಷ್ಠಪಕ್ಷ ಈ ಕ್ಷೇತ್ರದ ಶಾಸಕರಾಗಿರುವ ಸತೀಶ್ ರೆಡ್ಡಿ (94480 51616) ಇತ್ತ ಗಮನ ಹರಿಸಿ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಸದ್ಯದಲ್ಲೇ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಜನ ಬುದ್ಧಿ ಕಲಿಸುವುದು ಗ್ಯಾರಂಟಿ.