ಕಪಿಲಾ ನದಿ ತೀರದಲ್ಲಿ ಅಕ್ರಮ ಮರಳು ದಂಧೆ: ವ್ಯಕ್ತಿ ಬಂಧನ
ನಂಜನಗೂಡಿನ ಲಿಂಗಭಟ್ಟರ ಗುಡಿ ಬಳಿ ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಯನ್ನು ನಂಜನಗೂಡು ಪೊಲೀಸರು ಗುರುವಾರ ಬಂಧಿಸಿದ್ದು, 4 ಟ್ರಾಕ್ಟರ್ ಮರಳು ವಶಕ್ಕೆ ಪಡೆದಿದ್ದಾರೆ.
ನಂಜನಗೂಡು, ನವೆಂಬರ್, 27: ಪೊಲೀಸರು ಅಕ್ರಮ ಮರಳು ದಂಧೆಯ ಮೇಲೆ ದಾಳಿ ನಡೆಸುತ್ತಿದ್ದರೂ ನಂಜನಗೂಡು ತಾಲ್ಲೂಕಿನ ಕಪಿಲಾ ನದಿ ದಡದಲ್ಲಿ ಮಾತ್ರ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟುವುದು ಸಾಧ್ಯವಾಗುತ್ತಿಲ್ಲ.
ಒಂದು ಕಡೆ ದಾಳಿ ಮಾಡುತ್ತಿದ್ದಂತೆಯೇ ಮತ್ತೊಂದೆಡೆ ರಾಜಾರೋಷವಾಗಿ ದಂಧೆ ನಡೆಯುತ್ತಿರುವುದು ಕಂಡು ಬರುತ್ತಿದೆ. ಇದೀಗ ನಗರ ವ್ಯಾಪ್ತಿಯಲ್ಲೇ ಮರಳು ದಂಧೆ ನಡೆಸಲು ಆರಂಭಿಸಿರುವುದು ಅಚ್ಚರಿ ಮೂಡಿಸಿದೆ.
ನಂಜನಗೂಡು ನಗರ ವ್ಯಾಪ್ತಿಯ ಕಪಿಲಾನದಿ ತೀರದ ಲಿಂಗಾಭಟ್ಟರ ಗುಡಿಯ ಬಳಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವೇಳೆ ದಾಳಿ ನಡೆಸಿದ ಪಿಎಸೈ ಚೇತನ್ ಹಾಗೂ ಸಿಬ್ಬಂದಿ ಮರಳು ತೆಗೆಯಲು ಉಪಯೋಗಿಸುತ್ತಿದ್ದ 6 ಕೊಪ್ಪರಿಕೆ, ಸಾಗಾಟಕ್ಕೆ ಬಳಸುತ್ತಿದ್ದ 3 ಎತ್ತಿನಗಾಡಿಗಳು ಹಾಗೂ 4 ಟ್ರ್ಯಾಕ್ಟರ್ ಮರಳನ್ನು ವಶಕ್ಕೆ ಪಡೆದುಕೊಂಡು ಚಾಮಲಾಪುರ ಬೀದಿಯ ಕೃಷ್ಣ(35) ಎಂಬಾತನ್ನು ಬಂಧಿಸಿದ್ದಾರೆ.
ನಗರ ವ್ಯಾಪ್ತಿಯ ಕಪಿಲಾನದಿ ತೀರದ ಲಿಂಗಾಭಟ್ಟರ ಗುಡಿಯ ಬಳಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಆದರೆ ಇಲ್ಲಿ ಕಳೆದ ಹಲವಾರು ವರ್ಷಗಳಿಂದ ಮರಳನ್ನು ಕೊಪ್ಪರಿಕೆ ಮೂಲಕ ಸಂಗ್ರಹಿಸಿ ಎತ್ತಿನಗಾಡಿಗಳಲ್ಲಿ ಸಾಗಿಸುತ್ತಿದ್ದರು ಎನ್ನಲಾಗಿದೆ. ಸದ್ಯ ಪೊಲೀಸರು ದಾಳಿ ನಡೆಸಿದ್ದರಿಂದ ಅಕ್ರಮ ಮರಳು ದಂಧೆಗೆ ತೆರೆಬಿದ್ದಿದೆ.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮ ಮರಳು ದಂಧೆಯಲ್ಲಿ ಕಾಣದ ಕೈಗಳ ಕೈವಾಡವಿದ್ದು, ಶಾಶ್ವತವಾಗಿ ಕಪಿಲಾನದಿ ತೀರದಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕಾಗಿದ್ದು, ಈ ನಿಟ್ಟಿನಲ್ಲಿ ಎಸ್ಪಿ ರವಿ ಡಿ.ಚನ್ನಣ್ಣನವರ್ ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.