ನೂತನ ಬಿಜೆಪಿ ಸರ್ಕಾರದಲ್ಲಿ ದಕ್ಷಿಣ ಕನ್ನಡದ ಯಾರಿಗೆ ಒಲಿಯುತ್ತೆ ಸಚಿವ ಸ್ಥಾನ?
ಮಂಗಳೂರು, ಜುಲೈ 24: ರಾಜ್ಯದಲ್ಲಿ ಸೃಷ್ಟಿಯಾಗಿದ್ದ ರಾಜಕೀಯ ಬಿಕ್ಕಟ್ಟಿಗೆ ನಿನ್ನೆ ತೆರೆಬಿದ್ದಿದೆ. ಮೈತ್ರಿ ಸರಕಾರ ಪತನಗೊಂಡಿದೆ. ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಬಿಸಿ ರಾಜಕೀಯ ಚರ್ಚೆ ಆರಂಭವಾಗಿದೆ.
ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಶಾಸಕರಿದ್ದಾರೆ. ಇವರಲ್ಲಿ ಯಾರಿಗೆಲ್ಲ ಸಚಿವ ಸ್ಥಾನ ಸಿಗಬಹುದು, ಯಾರು ಜಿಲ್ಲೆಯ ಉಸ್ತುವಾರಿ ಸಚಿವರಾಗಬಹುದು ಎಂಬ ಚರ್ಚೆ ಆರಂಭವಾಗಿದೆ.
ಕುರುಕ್ಷೇತ್ರ ಮುಗಿಯಿತು, ಇನ್ನು ಧರ್ಮರಾಯನ ಆಡಳಿತ ಶುರು; ಕೋಟಾ ಶ್ರೀನಿವಾಸ್ ಪೂಜಾರಿ
ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಕರಾವಳಿಗೆ ಗರಿಷ್ಠ ಮೂರು ಸ್ಥಾನಗಳು ಸಿಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಆದರೆ ಅವಳಿ ಜಿಲ್ಲೆಗೆ ಒಂದು ಸ್ಥಾನ ಮಾತ್ರ ಸಿಗಬಹುದು ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಒಂದು ಅಥವಾ ಎರಡು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳ ಬೇಕಾದ ಸ್ಥಿತಿ ಬಂದರೆ, ಸುಳ್ಯದ ಶಾಸಕ ಸಚಿವ ಸ್ಥಾನ ಆಕಾಂಕ್ಷಿಯಾಗದೇ ಇದ್ದರೆ ಆಗ ಆ ಸ್ಥಾನ ಉಡುಪಿ ಜಿಲ್ಲೆಗೆ ದೊರಕುವ ಸಾಧ್ಯತೆ ಅಧಿಕ ಎಂದು ಹೇಳಲಾಗುತ್ತಿದೆ.
ಸುಳ್ಯ ಶಾಸಕ ಅಂಗಾರ ಹೊರತುಪಡಿಸಿ ಉಳಿದ 6 ಮಂದಿ ಮೊದಲ ಬಾರಿಗೆ ಶಾಸಕರಾದವರು. ಸುಳ್ಯ ಕ್ಷೇತ್ರದಲ್ಲಿ ಸೋಲರಿಯದ ಸರದಾರ ಎಂದೇ ಗುರುತಿಸಲಾಗುವ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ದೊರಕುವ ಎಲ್ಲಾ ಸಾಧ್ಯತೆಗಳಿವೆ. ಈ ಬಾರಿ ಸಚಿವ ಸ್ಥಾನಕ್ಕೆ ಅಂಗಾರ ಲಾಬಿ ಮಾಡಿದರೆ ಅವರಿಗೆ ನಿಶ್ಚಿತವಾಗಿಯೂ ಸಚಿವ ಸ್ಥಾನ ಲಭಿಸುತ್ತದೆ ಎಂದು ಹೇಳಲಾಗಿದೆ. ಆದರೆ ಅಂಗಾರ ಅವರಿಗೆ ಲಾಬಿ ಮಾಡುವಷ್ಟು ಜಾಣ್ಮೆ ಇಲ್ಲದೇ ಹೋದರೂ ಅವರ ಪರವಾಗಿ ಅವರ ಆತ್ಮೀಯ ಗೆಳೆಯ ಕೇಂದ್ರ ಸಚಿವ ಸದಾನಂದ ಗೌಡರು ಲಾಬಿ ಮಾಡುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.
ಸರ್ಕಾರ ಉರುಳಿದರೂ ಅತೃಪ್ತರಿಗೆ ತಪ್ಪಿಲ್ಲ ಅನರ್ಹತೆ ಭೀತಿ
ಇಡೀ ಜಿಲ್ಲೆಯಲ್ಲಿ 2013ರ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿದಾಗ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಕೇವಲ ಸುಳ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಕಮಲ ಪಕ್ಷದ ಬಾವುಟವನ್ನು ಅಂಗಾರ ಎತ್ತಿ ಹಿಡಿದಿದ್ದರು. ಸುದೀರ್ಘ ಅವಧಿಗೆ ಶಾಸಕರಾಗಿದ್ದರೂ ಕೈ, ಬಾಯಿ ಕೆಡಿಸಿ ಕೊಳ್ಳದಿರುವುದು, ಯಾವುದೇ ಗುಂಪು ರಾಜಕೀಯದಲ್ಲಿ ಶಾಮೀಲಾಗದೆ ಇರುವುದು, ಪಕ್ಷ ಹಾಗೂ ಸಂಘ ಪರಿವಾರಕ್ಕೆ ವಿಧೇಯವಾಗಿಯೇ ವರ್ತಿಸುವುದು ಅಂಗಾರ ಅವರಿಗಿರುವ ಪ್ಲಸ್ ಪಾಯಿಂಟ್. ಆದರೆ ಆಡಳಿತಾತ್ಮಕ ಅನುಭವ ಕಡಿಮೆ ಮತ್ತು ತುಂಬಾ ಸೌಮ್ಯ ಸ್ವಭಾವ ಅಂಗಾರ ಅವರ ಮೈನಸ್ ಪಾಯಿಂಟ್.
ಆದರೆ ಆರ್ ಎಸ್ ಎಸ್ ಪ್ರಭಾವಿ ಮುಖಂಡ ಸಂತೋಷ್ ಟೀಮ್ ಕರಾವಳಿಯಲ್ಲಿ ತನ್ನ ಪಾರುಪತ್ಯವನ್ನು ಮುಂದುವರಿಸಲು ಪುತ್ತೂರು ಶಾಸಕ ಸಂಜೀವ ಮಠಂದೂರು ಹೆಸರನ್ನು ಮುನ್ನಲೆಗೆ ತರುವ ಸಾಧ್ಯತೆ ಇದೆ. ಸಂಜೀವ ಮಠಂದೂರು ಮೊದಲ ಬಾರಿಗೆ ಶಾಸಕರಾದರೂ 30 ವರ್ಷಗಳ ರಾಜಕೀಯ ಅನುಭವ ಅವರಿಗಿದೆ. ಪಕ್ಷದ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯಲ್ಲಿ ನಡೆದ ಎಲ್ಲಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವುದು ಶಾಸಕರ ಅವಧಿಯಲ್ಲಿ ಪ್ರಚಾರ ಬಯಸದೇ ಕೆಲಸ ನಿರ್ವಹಿಸಿದ ಅವರ ಆಡಳಿತ ವೈಖರಿ ಹಾಗೂ ಯಾವುದೇ ವಿವಾದಕ್ಕೂ ಒಳಗಾಗದೇ ಕಾರ್ಯ ನಿರ್ವಹಿಸಿದ್ದು ಅವರಿಗೆ ಪ್ಲಸ್ ಪಾಯಿಂಟ್.
ಈ ನಡುವೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರ ಹೆಸರು ಕೇಳಿಬರುತ್ತಿದೆ. ಅತ್ಯಂತ ಉತ್ಸಾಹದಿಂದ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವೇದವ್ಯಾಸ್ ಕಾಮತ್ ತಮ್ಮ ಕಾರ್ಯ ವೈಖರಿಯಿಂದ ಬಿಜೆಪಿ ಹಿರಿಯ ನಾಯಕರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ಎಲ್ಲಾ ಅಂಶಗಳೂ ನೂತನ ಬಿಜೆಪಿ ಸರ್ಕಾರ ರಚನೆಯಲ್ಲಿ ಸಚಿವ ಸ್ಥಾನಕ್ಕೆ ನಿರ್ಣಾಯಕವಾಗಿವೆ ಎಂದರೆ ತಪ್ಪಿಲ್ಲ.