ಮಹಿಳಾ ದೌರ್ಜನ್ಯ ವಿಚಾರಣೆಗೆ 10 ತ್ವರಿತ ನ್ಯಾಯಾಲಯ
ಮಂಗಳೂರು, ನ. 25: ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು 10 ತ್ವರಿತ ವಿಚಾರಣಾ ನ್ಯಾಯಾಲಯಗಳನ್ನು ಸ್ಥಾಪಿಸಲು ಯೋಚಿಸಲಾಗಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಮಂಗಳೂರಿನ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮಂಗಳವಾರ ಕರಾವಳಿ ಕಾವಲು ಪೊಲೀಸ್ ಆಡಳಿತ ಕಚೇರಿ ಉದ್ಘಾಟಿಸಿ ಅವರು ಈ ಮಾಹಿತಿ ನೀಡಿದರು. [ಮಹಿಳಾ ಆಯೋಗ ಪುರುಷರ ಕುರಿತೂ ಚಿಂತಿಸಲಿ]
ಈ ಕುರಿತು ಸರ್ಕಾರ ಈಗಾಗಲೇ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ. ಮೂರು ತ್ವರಿತ ನ್ಯಾಯಾಲಯಗಳ ಸ್ಥಾಪನೆಗೆ ಒಪ್ಪಿಗೆ ಸಿಕ್ಕಿದೆ. ಈ ನ್ಯಾಯಾಲಯಗಳಿಗೆ ಶೀಘ್ರ ನ್ಯಾಯಾಧೀಶರನ್ನು ನೇಮಿಸಬೇಕೆಂದು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ಕೋರಲಾಗಿದೆ ಎಂದು ತಿಳಿಸಿದರು.
ರಾಜ್ಯದ ಜನರಲ್ಲಿ ಜಾಗೃತಿ ಹೆಚ್ಚುತ್ತಿರುವ ಕಾರಣ ದೌರ್ಜನ್ಯ ಪ್ರಕರಣಗಳೂ ಹೆಚ್ಚುತ್ತಿದೆ. ಮಹಿಳೆ ಮತ್ತು ಮಕ್ಕಳ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ಕುರಿತು ಶೀಘ್ರ ಸ್ಪಂದಿಸಬೇಕೆಂದು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು. [ಮಹಿಳಾ ಘಟಕದಲ್ಲಿರುವ ವಿಶೇಷ ಸೌಲಭ್ಯವೇನು]
ಸಮಿತಿ ನೇಮಕ: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ಸಲಹೆ ನೀಡಲು ಮಾಜಿ ಸಚಿವ ಎಂ.ಸಿ. ನಾಣಯ್ಯ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವರು ಹೇಳಿದರು.
ಕರಾವಳಿಯಲ್ಲಿ ಉಗ್ರರ ಭೀತಿ: ಕರ್ನಾಟಕ ರಾಜ್ಯವು 360 ಕಿ.ಮೀ.ಗಳಷ್ಟು ದೂರದ ಕರಾವಳಿ ಪ್ರದೇಶ ಹೊಂದಿದೆ. ಇಲ್ಲಿ ಉಗ್ರರು ನುಸುಳದಂತೆ ನಿಗ್ರಹಿಸುವುದು ಅತ್ಯಂತ ಮುಖ್ಯ ವಿಷಯ. ಆದ್ದರಿಂದಲೇ ರಾಜ್ಯ ಸರ್ಕಾರ ಕರಾವಳಿ ಕಾವಲು ಪೊಲೀಸ್ ಪಡೆ ರಚಿಸಿದೆ ಎಂದು ತಿಳಿಸಿದರು. [ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ತ್ವರಿತಗತಿ ನ್ಯಾಯಾಲಯ]
ಇದೇ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಪೊಲೀಸ್ ಸಿಬ್ಬಂದಿ ವಸತಿ ಗೃಹಗಳನ್ನು ಉದ್ಘಾಟಿಸಿದರು.
ಬಿಜೆಪಿ ಮುತ್ತಿಗೆ-ರಾಜೀನಾಮೆಗೆ ಆಗ್ರಹ: ರಾಜ್ಯದಲ್ಲಿ ನಡೆದಿರುವ ಸರ್ಕಾರಿ ಭೂ ಕಬಳಿಕೆ ಪ್ರಕರಣಗಳಿಗೆ ಸಂಬಂಧಿಸಿ ಗೃಹ ಸಚಿವ ಕೆ.ಜೆ. ಜಾರ್ಜ್, ಸಚಿವರಾದ ಮಹಾದೇವ ಪ್ರಸಾದ್, ದಿನೇಶ್ ಗುಂಡೂರಾವ್ ಹಾಗೂ ಖಮರುಲ್ ಇಸ್ಲಾಂ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಪ್ರತಿಭಟಿಸಿದೆ. [ಭೂ ಇಕ್ಕಟ್ಟಿನಲ್ಲಿ ದಿನೇಶ ಗುಂಡೂರಾವ್]
ಮಂಗಳೂರಿನ ಮಲ್ಪೆ ಬಂದರಿನಲ್ಲಿ ಕರಾವಳಿ ತಟ ರಕ್ಷಣಾ ಪಡೆಯ ಕಚೇರಿ ಉದ್ಘಾಟೆನೆಗೆ ಆಗಮಿಸಿದ್ದ ಕೆ.ಜೆ. ಜಾರ್ಜ್ ಅವರಿಗೆ ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಿದರು.
ಬಿಜೆಪಿ ಕಾರ್ಯಕರ್ತರಾದ ಯಶ್ ಪಾಲ್ ಸುವರ್ಣ, ಗ್ಲಾಡಿಸ್ ಆಲ್ಮೇಡಾ ಹಾಗೂ ಇತರರು ಇದ್ದ ತಂಡ ಕಪ್ಪು ಧ್ವಜ ಪ್ರದರ್ಶಿಸಿತು. ಆಗ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಬಿಜೆಪಿಯ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದರು.