ಪಂಕ್ತಿ ಭೇದದ ಕಥೆಯುಳ್ಳ ಗಾಂಧಿ ಬಂದ ನಾಟ್ಕ ನೋಡಿ
ಮಂಗಳೂರು, ಏ.23: ಡಾ.ಎಚ್.ನಾಗವೇಣಿ ಬರೆದಿರುವ 'ಗಾಂಧಿ ಬಂದ' ಕೃತಿಯನ್ನು ರಂಗಮಂಟಪ ಬೆಂಗಳೂರು ತಂಡ ರಂಗದ ಮೇಲೆ ಪ್ರದರ್ಶಿಸುತ್ತಿದೆ. ರಂಗಮಂಟಪ ತಂಡ ಕರಾವಳಿ ಭಾಗವನ್ನು ಪ್ರವೇಶಿಸಿದ್ದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರದರ್ಶನಕ್ಕೆ ಮುಂದಾಗಿದೆ.
ಡಾ.ಎಚ್.ನಾಗವೇಣಿಯವರ ಕಾದಂಬರಿ ಗಾಂಧಿ ಬಂದ ಮಹಾನ್ ಕೃತಿಯಾಗಿ ಸಾಹಿತ್ಯವಲಯದಲ್ಲಿ ಗುರುತಿಸಿಕೊಂಡಿದೆ.ಆದರೆ, ಮಂಗಳೂರು ವಿವಿಯಲ್ಲಿ ಪಠ್ಯವಾಗುವ ಸಂದರ್ಭದಲ್ಲಿ ವಿಶ್ವಕರ್ಮ ಸಮುದಾಯದವರು ಕೃತಿಯ ನಿಷೇಧಕ್ಕೆ ಆಗ್ರಹಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡ್ ಸದಾಶಿವರಾಯರ ಹೆಸರು ವಿವಾದದಲ್ಲಿ ಕೇಳಿ ಬಂದಿತ್ತು. ಜಿಲ್ಲೆಯಲ್ಲಿರುವ ಜಾತಿಭೇದ, ಮಠಗಳಲ್ಲಿನ ಪಂಕ್ತಿಭೇದದ ಬಗ್ಗೆ ಉಲ್ಲೇಖವಿದೆ. ವಿಶ್ವಕರ್ಮ ಸಮುದಾಯದವರು ಮೇಲ್ವರ್ಗದ ಜತೆ ಪಂಕ್ತಿಯಲ್ಲಿ ಊಟಕ್ಕೆ ಕೂರಲು ಆಕ್ಷೇಪ ವ್ಯಕ್ತಪಡಿಸುವ ಸನ್ನಿವೇಶವೂ ಇದೆ. ಹಲವಾರು ಪ್ರಶ್ನೆಗಳಿಗೆ ಉತ್ತರವೂ ಇದೆ.
ಚಂಪಾಶೆಟ್ಟಿ ನಿರ್ದೇಶನ ಮತ್ತು ಪ್ರಕಾಶ್ ಶೆಟ್ಟಿ ಸುರತ್ಕಲ್ ಇವರ ಸಾರಥ್ಯದಲ್ಲಿ 'ಗಾಂಧಿಬಂದ' ಈಗ ಜಿಲ್ಲೆ, ರಾಜ್ಯ ಹೊರರಾಜ್ಯಗಳಲ್ಲಿ ಪ್ರದರ್ಶನಗೊಂಡು ಸುದ್ದಿ ಮಾಡಿದೆ. 'ಗಾಂಧಿಬಂದ' ನಾಟಕ ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯಿಂದ ಏಪ್ರಿಲ್ 25 ರಂದು ಶುಕ್ರವಾರ ಸಂಜೆ 6 ಗಂಟೆಗೆ ಬಂಟ್ಸ್ ಹಾಸ್ಟೆಲ್ ನಲ್ಲಿರುವ ಎ.ಬಿ.ಶೆಟ್ಟಿ ಆಡಿಟೋರಿಯಂನಲ್ಲಿ ಪ್ರದರ್ಶನಗೊಳ್ಳಲಿದೆ. ಗಾಂಧಿ ಬಂದ ನಾಟಕದ ಚಿತ್ರಗಳು ಹಾಗೂ ಇನ್ನಷ್ಟು ವಿವರ ಮುಂದೆ ಓದಿ...
ಚಂಪಾಶೆಟ್ಟಿ ನಿರ್ದೇಶನದ ಗಾಂಧಿ ಬಂದ ನಾಟಕ
ಚಂಪಾಶೆಟ್ಟಿ ನಿರ್ದೇಶನ ಮತ್ತು ಪ್ರಕಾಶ್ ಶೆಟ್ಟಿ ಸುರತ್ಕಲ್ ಇವರ ಸಾರಥ್ಯದಲ್ಲಿ ಮೊದಲ ಬಾರಿಗೆ ತುಳುನಾಡನ್ನು ಈ ನಾಟಕ ಪ್ರವೇಶಿಸಿದೆ. ಬೆಂಗಳೂರು, ಮುಂಬೈ, ದೆಹಲಿ, ಒರಿಸ್ಸಾಗಳಲ್ಲಿ ಈ ನಾಟಕ ಈಗಾಗಲೇ ಯಶಸ್ವಿ ಪ್ರದರ್ಶನ ಕಂಡಿದೆ. ಈ ನಾಟಕಕ್ಕೆ ಉಚಿತ ಪ್ರವೇಶವಿದೆ.
ಡಾ.ಎಚ್.ನಾಗವೇಣಿಯವರ ಕಾದಂಬರಿ ಗಾಂಧಿ ಬಂದ
ತುಳು ಜಿಲ್ಲೆಗೆ ಗಾಂಧಿ ಬಂದ ವಿಷಯವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಈ ನಾಟಕ ನಮ್ಮ ಸಾಮಾಜಿಕ ಸಾಂಸ್ಕೃತಿಕ ಲೋಕವನ್ನು ನಮ್ಮೆದುರು ತೆರೆದಿಟ್ಟಿರುವ ಪರಿ ಅಗಾಧವಾಗಿದೆ. ಎಂಭತ್ತು ವರ್ಷಗಳ ಹಿಂದಿನ ತುಳು ಸಮಾಜದ ಸಂಸ್ಕೃತಿಯನ್ನು, ಜಾತಿ ತಾರತಮ್ಯವನ್ನು, ವರ್ಗ ಬೇಧವನ್ನು, ಬಡತನವನ್ನು ಸಾಮಾನ್ಯ ಪ್ರೇಕ್ಷಕನು ಅರ್ಥೈಸುವಂತೆ ನಿರ್ದೇಶಕಿ ಚಂಪಾಶೆಟ್ಟಿಯವರು ನಿರೂಪಿಸಿದ್ದಾರೆ. ಕೋಲ, ಕಂಬಳ, ಕಂಗಿಲೂಗಳನ್ನೂ ಈ ನಾಟಕದಲ್ಲಿ ಸಂಯೋಜಿಸಿದ್ದಾರೆ.
ಗಾಂಧೀಜಿಯವರ ಬದುಕು, ಆದರ್ಶ, ತತ್ವ
ಎಂದಿಗಿಂತ ಇಂದು ಗಾಂಧೀಜಿಯವರ ಬದುಕು, ಆದರ್ಶ, ತತ್ವ, ಚಿಂತನೆಗಳು ನಮ್ಮ ಸಮಾಜ ಎದುರಿಸುತ್ತಿರುವ ಅನೇಕ ಬಿಕ್ಕಟ್ಟುಗಳಿಗೆ ಉತ್ತರದಾಯಿಯಾಗಬಹುದು. ಸ್ತ್ರೀ ಸ್ವಾತಂತ್ರ್ಯ, ಆಕೆಯ ಬೇಕು ಬೇಡಗಳ ಬಗ್ಗೆ, ಅದು ಬದಲಾಗಬೇಕಾದ ಅಗತ್ಯಗಳ ಬಗ್ಗೆ ನಾಟಕ ಚರ್ಚಿಸುತ್ತದೆ. ಸಮಾಜದ ಕೆಳಸ್ತರದ ಜನರಲ್ಲಿ ಗಾಂಧೀಜಿಯವರು ಮೂಡಿಸಿದ ಸಂಚಲನ ನಾಟಕದ ಗಾಂಭಿರ್ಯವನ್ನು ಹೆಚ್ಚಿಸಿದೆ.
ನಮ್ಮನ್ನೆ ನಾವು ಹುಡುಕುವಂತೆ ಮಾಡುತ್ತದೆ
ಈ ರಂಗಕೃತಿ ಒಂದು ನಿರ್ದಿಷ್ಟ ಅಂಶವನ್ನು ಪ್ರತಿಪಾದಿಸುತ್ತಲೇ, ಸಾಮಾಜಿಕ ಪರಿವರ್ತನೆಯತ್ತ ತನ್ನನ್ನು ಒಡ್ಡಿಕೊಂಡಿದೆ.ನಾಟಕದ ಮೊದಲಿನಿಂದ ಕೊನೆಯವರೆಗೂ ನೇಪತ್ಯದಲ್ಲೇ ಇದ್ದು ಪ್ರೇಕ್ಷಕರ ಕಣ್ಣಿಗೆ ಕಾಣಸಿಗದೆ ಜುಮಾದಿ ಭೂತದ ರೂಪದಲ್ಲೂ, ಕಂಗಿಲೂ ರೂಪದಲ್ಲೂ, ಜೋಗಿ ಪುರುಷನಂತೆ ರಂಗಕ್ಕೆ ಬಂದು ಮಾಯವಾಗುವ ಗಾಂಧಿಯನ್ನು ಚಂಪಾಶೆಟ್ಟಿ ಉತ್ತಮವಾಗಿ ಕಲ್ಪಿಸಿದ್ದಾರೆ. ಪ್ರತಿ ಪಾತ್ರದಲ್ಲೂ ನಮ್ಮನ್ನೆ ನಾವು ಹುಡುಕುವಂತೆ ಪ್ರೇರೇಪಿಸಿದ್ದಾರೆ.
ವಿಶ್ವಕರ್ಮ ಜನಾಂಗದಿಂದ ನಿಷೇಧಕ್ಕೆ ಆಗ್ರಹ ಬಂದಾಗ
ವಿಶ್ವಕರ್ಮ ಜನಾಂಗದಿಂದ ನಿಷೇಧಕ್ಕೆ ಆಗ್ರಹ ಬಂದಾಗ ಟಿವಿ 9 ಸುದ್ದಿ ವಾಹಿನಿ ಜತೆ ಮಾತನಾಡಿದ್ದ ಲೇಖಕಿ ಎಚ್. ನಾಗವೇಣಿ ಅವರು ವಿಶ್ವಕರ್ಮ ಜನಾಂಗದ ತಾಯಿ ಎದೆ ಹಾಲು ಕುಡಿದು ಬೆಳೆದ ನಾನು ಅದೇ ಸಮುದಾಯವನ್ನು ಅವಮಾನಿಸುವುದು ಹೇಗೆ ಸಾಧ್ಯ. ನಾನು ಅಂದಿನ ಸಾಮಾಜಿಕ ಚಿತ್ರಣವನ್ನು ನೀಡಿದ್ದೇನೆ ಅಷ್ಟೇ ಎಂದು ಹೇಳಿದ್ದರು.