ಕಲ್ಕಡ್ಕ ಪ್ರಭಾಕರ ಭಟ್ಟರಿಗೆ ಭದ್ರತೆ ನೀಡುವಂತೆ ಬಿಜೆಪಿ ಆಗ್ರಹ
ಮಂಗಳೂರು, ಜುಲೈ 9: ಆರ್ಎಸ್ಎಸ್ನ ಹಿರಿಯ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್ ರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಬ್ರಜೇಶ್ ಚೌಟ ಆಗ್ರಹಿಸಿದ್ದಾರೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮಂಗಳೂರು ಮುಸ್ಲಿಮ್ಸ್' ಎನ್ನುವ ಹೆಸರಿನ ಫೇಸ್ಬುಕ್ ಪುಟದಲ್ಲಿ ಬರೆದಂತೆಯೇ ಎಸ್ಡಿಪಿಐ ಮುಖಂಡ ಅಶ್ರಫ್ ಕೊಲೆಯಾದ ನಂತರಆರ್ಎಸ್ಎಸ್ನ ಮುಖಂಡ ಶರತ್ನ ಕೊಲೆಯಾಗಿದೆ. ಸದ್ರಿ ಖಾತೆಯಲ್ಲಿ ನಿನ್ನೆಯ ದಿನ ಕೂಡಾ ಕೋಮುದ್ವೇಷ ಹರಡುವ ಹಾಗೂ ಆರ್ಎಸ್ಎಸ್ ಹಿರಿಯ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್ರನ್ನು ಕೊಲೆ ಮಾಡುವ ಬಗ್ಗೆ ಬರೆಯಲಾಗಿದೆ. ಹೀಗಾಗಿ ಸದ್ರಿ ಮತಾಂಧರ ಮುಂದಿನ ಗುರಿ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಅನ್ನುವುದು ಸ್ಪಷ್ಟ," ಎಂದು ಹೇಳಿದರು.
ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಕುಮಾರ್ ಹತ್ಯಾ ಯತ್ನವನ್ನು ಖಂಡಿಸಿ ಶುಕ್ರವಾರ ಬಿ.ಸಿ.ರೋಡ್ ನಲ್ಲಿ ಶಾಂತಿಯುತ ಪ್ರತಿಭಟನೆ ಹಿಂದೂ ಹಿತರಕ್ಷಣಾ ಸಮಿತಿಯ ನೇತ್ರತ್ವದಲ್ಲಿ ನಡೆದಿತ್ತು. ಬಿಜೆಪಿ ಕೂಡ ಇದಕ್ಕೆ ಬೆಂಬಲ ನೀಡಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ನಿನ್ನೆ ಸಂಜೆ ಶರತ್ ನಿಧನದ ನಂತರ ಶನಿವಾರ ನಡೆದ ಶವಯಾತ್ರೆಯಲ್ಲಿ ಸಾವಿರಾರು ಜನ ಸಾರ್ವಜನಿಕರು ಸ್ವ ಇಚ್ಚೆಯಿಂದ ಭಾಗವಹಿಸಿದ್ದರು. ಆದರೆ ಕೈಕಂಬದವರೆಗೆ ಶಾಂತಿಯುತ ಮೆರವಣಿಗೆ ನಡೆದಿದ್ದು , ಕೈಕಂಬದಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿ ಶವಯಾತ್ರೆಯ ಮೇಲೆ ಕೂಡ ಸೇಡು ತೀರಿಸುವ ಮತಾಂಧತೆಯನ್ನು ಮೆರೆಸಿರುವುದನ್ನು ಬಿಜೆಪಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
"ಸದ್ರಿ ಘಟನೆಯ ನಂತರ ಹಿಂದೂ ಸಂಘಟನೆಯ ಕಾರ್ಯಕರ್ತರನ್ನೇ ಗುರಿಯಾಗಿಸಿ ಬಂಧನ ನಡೆಸಿ, ಪೊಲೀಸ್ ಇಲಾಖೆಯ ಬಲದ ಮೂಲಕ ಕಾಂಗ್ರೆಸ್ ನಮ್ಮ ಕಾರ್ಯವನ್ನು ಹತ್ತಿಕ್ಕಿದೆ. ಇದನ್ನೂ ಬಿಜೆಪಿ ಖಂಡಿಸುತ್ತದೆ. ತಕ್ಷಣವೇ ಬಂಧನಕ್ಕೆ ಒಳಗಾದ ಅಮಾಯಕ ಕಾರ್ಯಕರ್ತರ ಬಿಡುಗಡೆ ಮಾಡಬೇಕು," ಎಂದು ಬ್ರಜೇಶ್ ಚೌಟ ಆಗ್ರಹಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದಲೂ ನಿಷೇಧಾಜ್ಞೆ ಹೇರಿಕೆಯ ಜತೆಗೆ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಆಕ್ರಮವಾಗಿ ದನ ಕಳ್ಳ ಸಾಗಾಣೆ, ಅಕ್ರಮ ಮರಳುಗಾರಿಕೆ ಹಾಗೂ ಡ್ರಗ್ಸ್ ಮಾಫಿಯಾದ ಹಣದ ಬಲದ ಮುಖಾಂತರ ಮುಸ್ಲಿಂ ಭಯೋತ್ಪಾದಕರು ಹಿಂದೂಗಳ ಮೇಲೆ ಆಕ್ರಮಣ ನಡೆಸುತ್ತಿದ್ದಾರೆ. ಇದಕ್ಕೆ ಕಾರಣರಾದ ಉಸ್ತುವಾರಿ ಸಚಿವರು ತಕ್ಷಣ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸುತ್ತದೆ ಎಂದು ಹೇಳಿದರು.