ಹುಟ್ಟು ಹೋರಾಟಗಾರ ಜಾರ್ಜ್ ನಡೆದು ಬಂದ ದಾರಿ, ಸಾಧನೆ
ಮಂಗಳೂರು, ಜನವರಿ 29: ಬೆಂಕಿಯಂತಹ ಮಾತುಗಾರಿಕೆಯ ಜಾರ್ಜ್ ಫರ್ನಾಂಡಿಸ್ ಇನ್ನಿಲ್ಲ. ಬೆಂಕಿ ಚೆಂಡು ತಣ್ಣಗಾಗಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಇಂದು ಮುಂಜಾನೆ ನವದೆಹಲಿಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಅವರು ಅಲ್ಝಮೈರ್ ಕಾಯಿಲೆಯಿಂದ ಬಳಲುತ್ತಿದ್ದರು.
ಕರಾವಳಿಯ ಮಣ್ಣಿನ ಮಗ ಜಾರ್ಜ್ ಫರ್ನಾಂಡಿಸ್ ಮಂಗಳೂರಿನ ಬಿಜೈ ಕಾಪಿಕಾಡ್ ನಲ್ಲಿ ಹುಟ್ಟಿ ಬೆಳೆದರು. ಸೈಂಟ್ ಅಲೋಶಿಯಸ್ ನಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿದ ಬಳಿಕ ಜಾರ್ಜ್ ಅವರನ್ನು ಅವರ ಹೆತ್ತವರು ಧಾರ್ಮಿಕ ಶಿಕ್ಷಣ ಪಡೆಯಲು ಬೆಂಗಳೂರಿನ ಸೈಂಟ್ ಪೀಟರ್ಸ್ ಸೆಮಿನರಿಗೆ ಸೇರಿಸಿದ್ದರು. ಆದರೆ ಹುಟ್ಟು ಹೋರಾಟಗಾರ ಜಾರ್ಜ್ ತುಳಿದ ಹಾದಿಯೇ ಬೇರೆ.
Breaking News: ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ
ಸೆಮಿನರಿಗೆ ಗುಡ್ ಬೈ ಹೇಳಿ ಕಾರ್ಮಿಕ ಚಳುವಳಿಗೆ ಧುಮುಕಿದರು. ಕರಾವಳಿಯ ನಾಯಕರು ಸ್ವಕ್ಷೇತ್ರದಲ್ಲೇ ಮಿಂಚಿದರೆ ಜಾರ್ಜ್ ದೂರದ ಮುಂಬೈ , ಬಿಹಾರದಲ್ಲಿ ತನ್ನ ಸಾಮರ್ಥ್ಯ ಮೆರೆದರು. 9 ಬಾರಿ ಸಂಸತ್ ಪ್ರವೇಶಿಸಿ , ರೈಲ್ವೆ , ರಕ್ಷಣಾ ಸಚಿವರಾಗಿ ಮೆರೆದ ಜಾರ್ಜ್ ಹುಟ್ಟೂರನ್ನು ಮರೆಯಲಿಲ್ಲ. ಕೊಂಕಣ್ ರೈಲ್ವೆ ಯೋಜನೆ ಅವರು ಕರಾವಳಿಗೆ ನೀಡಿದ ಶಾಸ್ವತ ಕೊಡುಗೆ.

ಜಾರ್ಜ್ ಒಬ್ಬ ಅದ್ಭುತ ಸಂಸದೀಯ ಪಟು. ಸಮಾಜವಾದದ ನಾನಾ ನಮೂನೆಗಳನ್ನು ಕೂಡಿ ಕಳೆದು ಜನಮುಖಿಯಾಗಿ ಯೋಚಿಸುವ ಸ್ವತಂತ್ರಜೀವಿ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾಗಾಂಧಿ ನೇತೃತ್ವದ ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸಿದ ನಂತರ ಜೈಲುವಾಸಿಯಾಗಿ ಅಲ್ಲಿಂದಲೇ ಚುನಾವಣೆಯನ್ನು ಗೆದ್ದು ಲೋಕಸಭೆಗೆ ಆರಿಸಿ ಬಂದ ಕೀರ್ತಿ ಅವರದ್ದು.

ಯುದ್ಧವಿಮಾನದಲ್ಲಿ ಪ್ರಯಾಣ ಮಾಡಿದ ಮೊದಲ ರಕ್ಷಣಾ ಸಚಿವ ಎಂಬ ಕೀರ್ತಿಯೂ ಅವರದು. ಇದೆಲ್ಲಕ್ಕಿಂತ ಮಿಗಲಾಗಿ ವೈಚಾರಿಕತೆಗೆ ಕುರುಡಾಗದೆ ರಾಜಕೀಯ ಅಸ್ಪೃಶ್ಯತೆಗೆ ಶರಣಾಗದೇ 1998 ರಲ್ಲಿ ಭಾರತೀಯ ಜನತಾ ಪಕ್ಷ ನೇತೃತ್ವದ ಎನ್ಡಿಎ ಸರ್ಕಾರ ರಚನೆಗೆ ಪರಿಣಾಮಗಳನ್ನು ಲೆಕ್ಕಿಸದೆ ಜನತಾದಳ ಬೇಷರತ್ ಬೆಂಬಲಿಸುವಂತೆ ನೋಡಿಕೊಂಡ ಮುಕ್ತ ಚಿಂತನೆಯ ರಾಜಕಾರಣಿಯ ಗುಣ ಈಗಿನ ಕಾಲಕ್ಕೆ ಮಾದರಿ. ಆದರೆ, ಈಗ ಅವರದು ಮಹಾಮೌನದ ಮೂಲಕವೇ ಮಾತು.












Click it and Unblock the Notifications