ಮರದ ಚಿಗುರಿನಿಂದಲೇ ಉರಿಯುತ್ತದೆ ದೀಪ; ಸುಳ್ಯದಲ್ಲಿ ಪೃಕೃತಿಯ ವಿಸ್ಮಯ!
ಮಂಗಳೂರು, ನವೆಂಬರ್ 3: ದೀಪ ಉರಿಯುವುದಕ್ಕೆ ಬತ್ತಿ ಬೇಕು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಒಂದು ಪ್ರದೇಶದಲ್ಲಿ ಬತ್ತಿ ಇಲ್ಲದೇ ದೀಪ ಉರಿಯುತ್ತದೆ. ಇದೇನು ಪವಾಡನಾ? ಅಲ್ಲಾ ಜಾದೂನಾ ಅಂತಾ ಯೋಚಿಸಬೇಡಿ. ಇದು ಪ್ರಕೃತಿಯ ವಿಸ್ಮಯ. ನಂಬಿಕೆ ಬರದಿದ್ದರೂ ನೀವು ನಂಬಲೇಬೇಕು. ಗಿಡವೊಂದರ ಚಿಗುರಿನಿಂದ ದೀಪ ಉರಿಯುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಎಂಬಲ್ಲಿ ಈ ಅಪರೂಪದ ಗಿಡ ಪತ್ತೆಯಾಗಿದೆ. ಪಂಜದ ಅಳ್ಪೆ ನಿವಾಸಿ ಜಿನ್ನಪ್ಪ ಎನ್ನುವವರ ರಬ್ಬರ್ ತೋಟದಲ್ಲಿ ಈ ಗಿಡ ಪತ್ತೆಯಾಗಿದ್ದು, ದೀಪಕ್ಕೆ ಬತ್ತಿಯ ಬದಲು ಈ ಗಿಡದ ಚಿಗುರನ್ನಿಟ್ಟರೆ ಪ್ರಕಾಶಮಾನವಾಗಿ ದೀಪ ಬೆಳಗುತ್ತದೆ.
ಮೊದಮೊದಲು ಅಪರೂಪವಾದ ಈ ಗಿಡ ಜಿನ್ನಪ್ಪರವರ ಗಮನಕ್ಕೂ ಬಂದಿರಲಿಲ್ಲ. ಜಿನ್ನಪ್ಪ ಗೌಡರು ಬೆಳದಿಂಗಳ ಒಂದು ರಾತ್ರಿಯಲ್ಲಿ ಈ ಗಿಡದ ಎಲೆಯ ಚಿಗುರುಗಳು ಪ್ರಕಾಶಮಾನವಾಗಿ ಮಿಂಚುತ್ತಿರುವುದನ್ನು ಗಮನಿಸಿದ್ದ ಜಿನ್ನಪ್ಪರು ಬೆಳಗಿನ ಜಾವ ಈ ಗಿಡದ ಬಳಿ ಬಂದು ಪರಿಶೀಲನೆ ನಡೆಸಿದ್ದರು. ಆದರೆ ಯಾವುದೇ ರೀತಿಯ ವಿಶೇಷತೆಯನ್ನು ಅಂದು ಅವರು ಗಮನಿಸಿರಲಿಲ್ಲ.
ಮತ್ತೆ ರಾತ್ರಿ ಸಂದರ್ಭದಲ್ಲಿ ಅದೇ ರೀತಿಯ ಹೊಳಪು ಆ ಗಿಡದ ಎಲೆಗಳ ಚಿಗುರುಗಳಿಂದ ಕಂಡು ಬಂದ ಹಿನ್ನಲೆಯಲ್ಲಿ ಯಾವುದೇ ಬೆಳಕಿನ ಅಂಶವಿರುವ ಗಿಡವಾಗಿರಬಹುದೆಂದು ತಿಳಿದುಕೊಂಡಿದ್ದಾರೆ.
ಈ ಕಾರಣಕ್ಕೆ ಗಿಡದ ಚಿಗುರುಗಳನ್ನು ಮನೆಗೆ ಕೊಂಡೊಯ್ದು, ದೀಪಕ್ಕೆ ಎಣ್ಣೆ ಹಾಕಿ ಹತ್ತಿಯ ಬತ್ತಿ ಬದಲು ಈ ಚಿಗುರುಗಳನ್ನು ಎಣ್ಣೆಯಲ್ಲಿ ಅದ್ದಿ ಬೆಂಕಿ ಕೊಟ್ಟಿದ್ದಾರೆ. ಹತ್ತಿಯ ಬತ್ತಿಗಿಂತಲೂ ಪ್ರಕಾಶಮಾನವಾಗಿ ಈ ಎಲೆಯ ಚಿಗುರು ಉರಿಯುತ್ತಿರುವುದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಈ ವಿಚಾರವನ್ನು ತಮ್ಮ ಪರಿಚಯವಿರುವ ಧಾರ್ಮಿಕ ಆಚರಣೆಯ ವ್ಯಕ್ತಿಯೊಬ್ಬರಲ್ಲಿ ತಿಳಿಸಿದಾಗ ಅವರು ಈ ಗಿಡದ ಬಗ್ಗೆ ಜಿನ್ನಪ್ಪರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಜಿನ್ನಪ್ಪ ಗೌಡರು ಅಪರೂಪವಾಗಿ ಕಂಡ ಈ ಗಿಡ ಪ್ರಣತಿಪತ್ರ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಹತ್ತಿ ಅಥವಾ ಬಟ್ಟೆಯ ಬತ್ತಿಯನ್ನು ನಿರಂತರ ಒಂದೆರಡು ಗಂಟೆಗಳ ಕಾಲ ಉರಿಸಿದಲ್ಲಿ ಬತ್ತಿಯು ಕರಗಿ ಹೋದರೆ, ಈ ಚಿಗುರು ಎಣ್ಣೆ ಹಾಕುತ್ತಿರುವವರೆಗೂ ನಿರಂತರವಾಗಿ ಉರಿಯುತ್ತದೆ. ಜಿನ್ನಪ್ಪರ ಪ್ರಕಾರ ಈ ಗಿಡ ಪತ್ತೆಯಾದ ಬಳಿಕ ಅವರ ಮೂಲ ಮನೆಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯ ಸಂದರ್ಭದಲ್ಲಿ ಇದೇ ಎಲೆಯ ಚಿಗುರುಗಳನ್ನು ಬತ್ತಿಯ ರೂಪದಲ್ಲಿ ಬಳಸಿಕೊಂಡಿದ್ದು, ಬೆಳಗಿನಿಂದ ಸಂಜೆಯ ತನಕ ಇದು ನಿರಂತರ ಉರಿಯುವುದನ್ನು ಪರಿಶೀಲನೆ ನಡೆಸಿರುವುದಾಗಿಯೂ ಜಿನ್ನಪ್ಪರು ಹೇಳುತ್ತಾರೆ.
ಗಿಡವನ್ನು ಹತ್ತಿರದಿಂದ ಗಮನಿಸಿದ ಜಿನ್ನಪ್ಪರ ಈ ಗಿಡದ ಕುರಿತು ಹಲವರ ಜೊತೆ ಮಾಹಿತಿ ಪಡೆದುಕೊಂಡಿದ್ದು, ಮಾನವ ಕಾಡಿನಲ್ಲಿ ಇರುವ ಸಂದರ್ಭದಲ್ಲಿ ಪ್ರಕೃತಿಯಲ್ಲೇ ಸಿಗುವ ವಸ್ತುಗಳನ್ನು ಬಳಸಿಕೊಂಡು ತನ್ನ ಅವಶ್ಯಕತೆಗಳನ್ನು ಪೂರೈಸುತ್ತಿದ್ದ. ಇಂತಹ ಅವಶ್ಯಕತೆಗಳಲ್ಲಿ ಈ ಪ್ರಣತಿಪತ್ರ ಗಿಡವೂ ಆಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಲ್ಲುಗಳನ್ನು ಉಜ್ಜಿ ಬೆಂಕಿ ತಯಾರಿಸುತ್ತಿದ್ದ ಜನ, ಕಾಡಿನಲ್ಲೇ ಸಿಗುವ ಪುಂಡಿ ಮರ ಎನ್ನುವ ಮರದಿಂದ ಸಿಗುವ ಕಾಯಿಯನ್ನು ಬಳಸಿಕೊಂಡು ಎಣ್ಣೆಯನ್ನು ಪಡೆಯುತ್ತಿದ್ದು, ಈ ಗಿಡದ ಎಲೆಯ ಚಿಗುರುಗಳನ್ನು ಬತ್ತಿಯಾಗಿ ಬಳಸಿಕೊಂಡು ರಾತ್ರಿ ಕಳೆಯುತ್ತಿದ್ದರು. ಅತ್ಯಂತ ಅಪರೂಪವಾಗಿ ಕಾಣಸಿಗುವ ಈ ಗಿಡ ಜಿನ್ನಪ್ಪರ ತೋಟದಲ್ಲಿ ಸುರಕ್ಷಿತವಾಗಿದ್ದು, ಈ ಬಾರಿಯ ದೀಪಾವಳಿಯಲ್ಲಿ ದೀಪಗಳನ್ನು ಇದೇ ಎಲೆಯ ಚಿಗುರುಗಳನ್ನು ಬಳಸಿ ಉರಿಸಲಿದ್ದಾರೆ.
Recommended Video