ಈ ಹಿಂದಿನ ಬಿಜೆಪಿ ಮೈತ್ರಿ ಸರಕಾರವೇ ಚೆನ್ನಾಗಿತ್ತು: ಸಚಿವ ಪುಟ್ಟರಾಜು
ಮಂಡ್ಯ, ಜನವರಿ 30: ಕಾಂಗ್ರೆಸ್ ಜತೆಗೆ ಈಗಿನ ಮೈತ್ರಿ ಸರಕಾರದ ಪರಿಸ್ಥಿತಿಯನ್ನು ನೋಡಿದರೆ ಹತ್ತು ವರ್ಷಗಳ ಹಿಂದೆ ಬಿಜೆಪಿ ಜತೆಗೆ ಇದ್ದ ಮೈತ್ರಿಯೇ ಚೆನ್ನಾಗಿತ್ತು. ಈಗಿನ ಮೈತ್ರಿ ಸರಕಾರದಲ್ಲಿ ಪ್ರತಿಯೊಂದಕ್ಕೂ ಕಾಂಗ್ರೆಸ್ ನವರು ತಗಾದೆ ತೆಗೆಯುತ್ತಿದ್ದಾರೆ. ನಾವಂತೂ ಮೈತ್ರಿ ಧರ್ಮ ಪಾಲನೆ ಮಾಡುತ್ತಿದ್ದೇವೆ ಎಂದು ನೀರಾವರಿ ಸಚಿವ ಹಾಗೂ ಮೇಲುಕೋಟೆಯ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.
ಬಿಜೆಪಿಯ ಹಿರಿಯ ನಾಯಕರ ಭೇಟಿ ಮಾಡಿದ ಸಚಿವ ರೇವಣ್ಣ!
ಹಾಗಂತ ಈಗ ಬಿಜೆಪಿ ಜತೆಗೆ ಹೋಗುತ್ತೇವೆ ಅಂತಲ್ಲ. ಆದರೆ ಕಾಂಗ್ರೆಸ್ ನವರು ಬೀದಿಯಲ್ಲಿ ನಿಂತು ಮಾತನಾಡುವುದನ್ನು ನಿಲ್ಲಿಸಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಎಷ್ಟು ಅಂತ ಸಹಿಸಿಕೊಳ್ಳಲು ಸಾಧ್ಯ? ಅವರು ರಾಜೀನಾಮೆ ನೀಡುತ್ಟೇನೆ ಎಂಬ ಮಟ್ಟಕ್ಕೆ ಮಾತನಾಡಿರಬೇಕು ಅಂದರೆ ಎಷ್ಟು ಬೇಸರವಾಗಿರಬೇಕು ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ತನ್ನ ಶಾಸಕರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಮುಂದೆ ಎದುರಾಗುವ ಪರಿಸ್ಥಿತಿಗೆ ನಾವು ಖಂಡಿತಾ ಜವಾಬ್ದಾರರಲ್ಲ. ಜನಪರವಾದ ಬಜೆಟ್ ನೀಡಬೇಕು ಎಂಬ ಕಾರಣಕ್ಕೆ ಕುಮಾರಸ್ವಾಮಿ ಅವರು ಶ್ರಮ ಪಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ರೂಪಿಸಿದ್ದ ಯೋಜನೆಗಳ ಅನುಷ್ಠಾನಕ್ಕೂ ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.