ಕಾಂಗ್ರೆಸ್ ಸಹವಾಸ ಬಿಡಲು ಕಾರಣ ನೀಡಿದ ಎಸ್ಪಿ, ಬಿಎಸ್ಪಿ ಮೈತ್ರಿ
ಲಕ್ನೋ, ಜನವರಿ 12: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿತ್ತು. ಆದರೆ ಈ ಮೈತ್ರಿಯಿಂದ ಸಮಾಜವಾದಿ ಪಕ್ಷಕ್ಕೆ ಯಾವುದೇ ಲಾಭವಾಗಲಿಲ್ಲ, ಕಾಂಗ್ರೆಸ್ನ ಮತಗಳೂ ಕೂಡ ಕಾಂಗ್ರೆಸ್ಗೆ ಬಂದಿರಲಿಲ್ಲ.
ಹೀಗಾಗಿ ಕಾಂಗ್ರೆಸ್ ಜೊತೆ ಹೋಗುವುದರಿಂದ ಎಸ್ಪಿ ಹಾಗೂ ಬಿಎಸ್ಪಿಗೆ ಯಾವುದೇ ಲಾಭವಾಗುವುದಿಲ್ಲ ಇದರಿಂದ ಬಿಜೆಪಿಗೆ ಇನ್ನಷ್ಟು ಮತಗಳು ಹೋಗಲಿವೆ. ಇದನ್ನು ತಪ್ಪಿಸುವ ಸಲುವಾಗಿ ಕಾಂಗ್ರೆಸ್ ನ್ನು ಹೊರಗಿಟ್ಟು ಮೈತ್ರಿಯನ್ನು ಮಾಡಿಕೊಂಡಿರುವುದಾಗಿ ಬಿಎಸ್ಪಿಯ ನಾಯಕಿ ಮಾಯಾವತಿ ತಿಳಿಸಿದ್ದಾರೆ.
ಶನಿವಾರ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ಬಿಎಸ್ಪಿ ನಾಯಕಿ ಮಾಯಾವತಿ ನಡೆಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಆದರೆ ಉತ್ತರ ಪ್ರದೇಶದ ರಾಯ್ಬರೇಲಿ ಹಾಗೂ ಅಮೇಥಿ ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಹೊರತಾಗಿಯೂ ಕಾಂಗ್ರೆಸ್ ಗೆ ಹಲವು ಕ್ಷೇತ್ರಗಳನ್ನು ಬಿಟ್ಟುಕೊಡಲು ನಿರ್ಧರಿಸಲಾಗಿದೆ. ಆ ಕ್ಷೇತ್ರಗಳಲ್ಲಿ ಮೊದಲಿನಿಂದಲೂ ಗಾಂಧಿ ಕುಟುಂಬ ಸ್ಪರ್ಧಿಸುತ್ತಿದೆ.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಈ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದಾರೆ. ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ 76 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು ತಲಾ 38 ಸೀಟುಗಳನ್ನು ಎಸ್ ಪಿ ಹಾಗೂ ಬಿಎಸ್ಪಿ ಹಂಚಿಕೊಂಡಿದೆ.
ಉಳಿದ ಎರಡು ಸೀಟುಗಳನ್ನು ಕಾಂಗ್ರೆಸ್ಗೆ ಬೇಷರತ್ತಾಗಿ ಬಿಟ್ಟುಕೊಡಲಾಗಿದ್ದು, ಇನ್ನು ಎರಡು ಸೀಟುಗಳನ್ನು ಯಾರಿಗೆ ಎಂದು ಹೇಳಿಲ್ಲ, ಸಣ್ಣ ಪುಟ್ಟ ಪಕ್ಷಗಳಿಗೆ ಮೀಸಲಿಡುವುದಾಗಿ ಅಷ್ಟೇ ಮಾಯಾವತಿ ಹಾಗೂ ಅಖಿಲೇಶ್ ಯಾದವ್ ಘೋಷಿಸಿದ್ದಾರೆ, ಹೀಗಾಗಿ ಅಂತಿಮವಾಗಿ ಉತ್ತರ ಪ್ರದೇಶದ ಸೀಟು ಹಂಚಿಕೆ ಪ್ರಕ್ರಿಯೆ ಬಹಿರಂಗವಾದಂತಾಗಿದೆ.
ಕಳೆದ ಬಾರಿ ಎಸ್ಪಿ, 7 ಸೀಟುಗಳನ್ನು ಹಾಗೂ ಬಿಎಸ್ಪಿ ಒಂದೂ ಸೀಟುಗಳನ್ನೂ ಗೆದ್ದಿರಲಿಲ್ಲ.
ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಹಲವು ವರ್ಷಗಳ ಕಾಲ ಅಧಿಕಾರದಲ್ಲಿತ್ತು, ಆದರೆ ಆ ಅವಧಿಯಲ್ಲಿ ಭ್ರಷ್ಟಾಚಾರವೂ ಹೆಚ್ಚಾಗಿತ್ತು, ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಅಲ್ಪಸಂಖ್ಯಾತರ ರಕ್ಷಣೆ ಅಭಿವೃದ್ಧಿ ನಮ್ಮ ಜವಾಬ್ದಾರಿಯಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಯಾವುದೇ ವ್ಯತ್ಯಾಸ ಗೋಚರಿಸದ ಕಾರಣ ಹಾಗೂ ಜನವರೋದಿ ಪಕ್ಷವನ್ನು ದೂರವಿಡುವುದು ನಮ್ಮ ಗುರಿಯಾಗಿದೆ ಎಂದರು.
ನನ್ನ ಬೆಂಬಲ ಯಾರಿಗೆ ಎಂದು ನಿಮಗೆ ಗೊತ್ತಿದೆ, ಈ ಬಾರಿಯೂ ಉತ್ತರ ಪ್ರದೇಶದಿಂದಲೇ ಪ್ರಧಾನಿಯಾಗುತ್ತಾರೆ, ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಪರೋಕ್ಷವಾಗಿ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮಾಯಾವತಿಗೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಮಾಯಾವತಿಗೆ ಅವಮಾನ ಮಾಡಿದೆ ಅದು ನನಗೆ ಮಾಡಿದ ಅವಮಾನ ಎಂದು ಭಾವಿಸುತ್ತೇನೆ, ಎಲ್ಲಾ ವೈರತ್ವವನ್ನು ಮರೆತು ನಾವು ಮೈತ್ರಿ ಮಾಡಿಕೊಂಡಿದ್ದೇವೆ, ಉತ್ತಮ ಸಮಾಜ ನಿರ್ಮಾಣ ಮಾಡಲು ಶ್ರಮಿಸುತ್ತೇವೆ ಎಂದು ಹೇಳಿದರು.