ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿಗೆ ಬಿಎಸ್ಪಿ ಬೆಂಬಲ
ಲಕ್ನೋ, ಜೂನ್ 25: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಆಯ್ಕೆ ಮಾಡಿರುವ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬಹುಜನ ಸಮಾಜ ಪಕ್ಷ ಬೆಂಬಲ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿ ಘೋಷಿಸಿದ್ದಾರೆ.
"ಎನ್ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ನೀಡಬೇಕೆಂದು ನಿರ್ಧರಿಸಿದ್ದೇವೆ. ಇದು ಬಿಜೆಪಿಗಾಗಲೀ ಎನ್ಡಿಎಗಾಗಲೀ ನಾವು ನೀಡುತ್ತಿರುವ ಬೆಂಬಲವಲ್ಲ. ಅಥವಾ ವಿಪಕ್ಷದ ವಿರುದ್ಧ ನಮ್ಮ ಅಸಮಾಧಾನವೆಂದೂ ಭಾವಿಸುವಂತಿಲ್ಲ. ನಮ್ಮ ಪಕ್ಷದ ಸಿದ್ಧಾಂತ ಮತ್ತು ಚಳವಳಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ದ್ರೌಪದಿ ಮುರ್ಮುಗೆ ಬೆಂಬಲ ನೀಡಬೇಕೆಂದಿದ್ದೇವೆ" ಎಂದು ಮಾಯಾವತಿ ಹೇಳಿದರೆಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ಬಹುಜನ ಸಮಾಜ ಪಕ್ಷದ ಹೋರಾಟದಲ್ಲಿ ಬುಡಕಟ್ಟು ಸಮುದಾಯದ ಪ್ರಮುಖ ಪಾತ್ರ ಇರುವುದು ನಮಗೆ ಗೊತ್ತಿದೆ. ಹೀಗಾಗಿ, ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮುಗೆ ನಾವು ಬೆಂಬಲ ನೀಡುತ್ತೇವೆ" ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅಭಿಪ್ರಾಯಪಟ್ಟಿದ್ಧಾರೆ.
ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಇದೇ ವೇಳೆ ವಿಪಕ್ಷಗಳ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲ ವಿಪಕ್ಷಗಳ ಜಾತೀಯತೆಯ ಮನಃಸ್ಥಿತಿ ವಿರುದ್ಧ ಕಿಡಿಕಾರಿದ್ದಾರೆ.

ವಿಪಕ್ಷಗಳು ನಮ್ಮನ್ನು ಕರೆಯಲೇ ಇಲ್ಲ
ರಾಷ್ಟ್ರಪತಿ ಆಯ್ಕೆಯ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರದಲ್ಲಿ ಇತರೆ ಪಕ್ಷಗಳು ನಮ್ಮ ಸಲಹೆಯನ್ನು ಕೇಳಲೇ ಇಲ್ಲ ಎಂಬುದು ಮಾಯಾವತಿ ಅಸಮಾಧಾನ.
"ವಿಪಕ್ಷಗಳ ಮೊದಲ ಸಭೆಗೆ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೆಲ ಆಯ್ದ ಪಕ್ಷಗಳನ್ನು ಮಾತ್ರ ಆಹ್ವಾನಿಸಿದರು. ಶರದ್ ಪವಾರ್ ಕೂಡ ಬಿಎಸ್ಪಿಯನ್ನು ಸಭೆಗೆ ಕರೆಯಲಿಲ್ಲ. ರಾಷ್ಟ್ರಪತಿ ಅಭ್ಯರ್ಥಿಯಲ್ಲಿ ವಿಪಕ್ಷಗಳಿಂದ ನೆಪ ಮಾತ್ರಕ್ಕೆ ಒಮ್ಮತದ ಅಭ್ಯರ್ಥಿ ನಿಲ್ಲಿಸಲಾಗಿದೆ" ಎಂದು ಮಾಯಾವತಿ ತರಾಟೆಗೆ ತೆಗೆದುಕೊಂಡಿದ್ಧಾರೆ.
ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ವಿಪಕ್ಷಗಳು ಆಯ್ಕೆ ಮಾಡಿರುವುದಕ್ಕೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿರುವ ಮಾಯಾವತಿ, ವಿಪಕ್ಷಗಳದ್ದು ಮತೀಯತೆಯ ಬುದ್ಧಿ ಎಂದು ಲೇವಡಿ ಮಾಡಿದ್ದಾರೆ.

ದಲಿತರ ಪರ ಇರುವುದು ಬಿಎಸ್ಪಿ ಮಾತ್ರ
ಇತರೆ ಪಕ್ಷಗಳು ಬಿಎಸ್ಪಿ ಬಗ್ಗೆ ಜಾತಿ ತಾರತಮ್ಯ ಮಾಡುತ್ತವೆ ಎಂದು ಆರೋಪಿಸಿರುವ ಮಾಯಾವತಿ, "ದಲಿತರ ಪರವಾಗಿ ಯಾವುದಾದರೂ ರಾಷ್ಟ್ರೀಯ ಪಕ್ಷ ಇದ್ದರೆ ಅದು ಬಿಎಸ್ಪಿ ಮಾತ್ರ. ನಾವು ಬಿಜೆಪಿಯನ್ನಾಗಲೀ, ಕಾಂಗ್ರೆಸ್ಸನ್ನಾಗಲೀ ಅಥವಾ ಉದ್ಯಮಿಗಳೊಂದಿಗೆ ನಂಟಿರುವ ಪಕ್ಷವನ್ನಾಗಲೀ ಅನುಸರಿಸುವುದಿಲ್ಲ. ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ದುರ್ಬಲ ಸಮುದಾಯದ ಪರವಾಗಿ ಯಾರೇ ನಿರ್ಧಾರ ತೆಗೆದುಕೊಂಡರೂ ನಮ್ಮ ಪಕ್ಷ ಬೆಂಬಲ ಕೊಡುತ್ತದೆ" ಎಂದು ತಿಳಿಸಿದ್ದಾರೆ.

ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು
ಒಡಿಶಾದ ಬುಡಕಟ್ಟು ಸಮುದಾಯಕ್ಕೆ ಸೇರಿದ ಹಾಗೂ ಮಾಜಿ ಸಚಿವೆ ಮತ್ತು ಮಾಜಿ ರಾಜ್ಯಪಾಲೆಯೂ ಆಗಿರುವ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದು ವಿಪಕ್ಷಗಳು ಯಶವಂತ್ ಸಿನ್ಹಾರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಒಂದೆರಡು ದಿನದಲ್ಲೇ ಬಿಜೆಪಿಯಿಂದ ಅನಿರೀಕ್ಷಿತವಾಗಿ ಬಂದ ನಿರ್ಧಾರ.
ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿ ಚುನಾಯಿತರಾದರೆ ಈ ಹುದ್ದೆ ಅಲಂಕರಿಸಿದ ಮೊದಲ ಮಹಿಳಾ ಬುಡಕಟ್ಟು ವ್ಯಕ್ತಿ ಎನಿಸುತ್ತಾರೆ. ಪ್ರತಿಭಾ ಪಾಟೀಲ್ ಬಳಿಕ ರಾಷ್ಟ್ರಪತಿಯಾದ ಮೊದಲ ಮಹಿಳೆ ಎನಿಸಲಿದ್ದಾರೆ. ಹಾಗೆಯೇ, 64 ವರ್ಷದ ದ್ರೌಪದಿ ಮುರ್ಮು ನೀಲಂ ಸಂಜೀವ್ ರೆಡ್ಡಿ ನಂತರ ಅತ್ಯಂತ ಕಿರಿಯ ವಯಸ್ಸಿನ ರಾಷ್ಟ್ರಪತಿ ಎಂಬ ಶ್ರೇಯಕ್ಕೂ ಪಾತ್ರರಾಗಲಿದ್ದಾರೆ.

ಬಿಜೆಪಿಯಿಂದ ದೇವೇಗೌಡ ಮತ್ತಿತರರ ಸಂಪರ್ಕ
ದ್ರೌಪದಿ ಮುರ್ಮು ಮೂಲಕ ಅಚ್ಚರಿಯ ಅಭ್ಯರ್ಥಿ ಆಯ್ಕೆ ಮಾಡಿರುವ ಬಿಜೆಪಿ ವಿಪಕ್ಷ ನಾಯಕರ ಬೆಂಬಲ ಕೋರುವ ಕೆಲಸ ಮಾಡುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಜನಾಥ್ ಸಿಂಗ್ ಎನ್ಡಿಎ ಮೈತ್ರಿಪಕ್ಷಗಳು ಮತ್ತು ವಿಪಕ್ಷಗಳ ಜೊತೆ ಮಾತನಾಡುವ ಜವಾಬ್ದಾರಿ ಹೊಂದಿದ್ದಾರೆ. ನಡ್ಡಾ ಇಂದು ಜೆಡಿಎಸ್ ಪಕ್ಷದ ಸಂಸ್ಥಾಪಕ ಎಚ್ ಡಿ ದೇವೇಗೌಡ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಬೆಂಬಲ ಕೋರಿದ್ಧಾರೆ. ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೂ ಮನವಿ ಮಾಡಿದ್ದಾರೆ. ದ್ರೌಪದಿ ಮುರ್ಮು ಅವರನ್ನು ಎಲ್ಲಾ ಪಕ್ಷಗಳೂ ಒಮ್ಮತದಿಂದ ಬೆಂಬಲಿಸಬೇಕೆಂದು ಅವರು ಕೋರಿದ್ದಾರೆ.
ಎನ್ಡಿಎಗೆ ಹೆಚ್ಚು ಸಂಖ್ಯೆ ಇರುವುದರಿಂದ ದ್ರೌಪದಿ ಮುರ್ಮುಗೆ ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಹೆಚ್ಚಿದೆ. ದ್ರೌಪದಿ ಮುರ್ಮು ವಿವಾದರಹಿತ ವ್ಯಕ್ತಿಯಾಗಿರುವದರಿಂದ ಎನ್ಡಿಎಯಲ್ಲಿಲ್ಲದ ಪಕ್ಷಗಳಿಂದಲೂ ಬೆಂಬಲ ಸಿಗುವ ನಿರೀಕ್ಷೆ ಇದೆ. ಅದಕ್ಕೆ ಬಿಎಸ್ಪಿ ಬೆಂಬಲ ನೀಡಿರುವುದೇ ಸಾಕ್ಷಿ.
ಜುಲೈ 18ರಂದು ರಾಷ್ರಪತಿ ಚುನಾವಣೆ ಇದೆ. ಇದೇ ಜೂನ್ 29ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜುಲೈ 21ರಂದು ಮತ ಎಣಿಕೆಯಾಗಿ ಫಲಿತಾಂಶ ಘೋಷಣೆ ಆಗಲಿದೆ.
(ಒನ್ಇಂಡಿಯಾ ಸುದ್ದಿ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications