ರಾಜಕೀಯ ಉತ್ತರಾಧಿಕಾರಿ ಹೆಸರು ಘೋಷಣೆ ಮಾಡಿದ ಮಾಯಾವತಿ
ಲಕ್ನೋ, ಡಿಸೆಂಬರ್ 10; ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ತಮ್ಮ ರಾಜಕೀಯ ಉತ್ತರಾಧಿಕಾರಿ ಹೆಸರು ಘೋಷಣೆ ಮಾಡಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಾಗಲೇ ಈ ಘೋಷಣೆ ಮಾಡಲಾಗಿದೆ.
ಭಾನುವಾರ ನಡೆದ ಮಹತ್ವದ ಸಭೆಯ ಬಳಿಕ ಆಕಾಶ್ ಆನಂದ್ ತಮ್ಮ ಉತ್ತರಾಧಿಕಾರಿ ಎಂದು ಮಾಯಾವತಿ ಘೋಷಣೆ ಮಾಡಿದರು. ಮಾಯಾವತಿ ಸಂಬಂಧಿಯೂ ಆಗಿರುವ ಆಕಾಶ್ ಆನಂದ್ ಮಾಯಾವತಿ ಬಳಿಕ ಬಿಎಸ್ಪಿ ಪಕ್ಷವನ್ನು ಮುನ್ನಡೆಸಲಿದ್ದಾರೆ.

2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆಕಾಶ್ ಆನಂದ್ ಎಲ್ಲರಿಗೂ ಪರಿಚಿತರಾದರು. ಮಾಯಾವತಿ ಅವರ ಚುನಾವಣಾ ಪ್ರಚಾರದ ಸಂಪೂರ್ಣ ಉಸ್ತುವಾರಿಯನ್ನು ಅವರೇ ನೋಡಿಕೊಳ್ಳುತ್ತಿದ್ದರು. ಈಗ ಅವರನ್ನು ಉತ್ತರಾಧಿಕಾರಿ ಎಂದು ಘೋಷಿಸಲಾಗಿದೆ.
ರಾಷ್ಟ್ರೀಯ ಸಂಚಾಲಕರಾಗಿದ್ದರು; ಬಿಎಸ್ಪಿ ಪಕ್ಷದ ಕಾರ್ಯಕರ್ತರಿಗೆ ಆಕಾಶ್ ಆನಂದ್ ಚಿರಪರಿಚಿತರು. ಈ ಹಿಂದೆ ಅವರು ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿದ್ದರು. ಶನಿವಾರ ಪಕ್ಷದ ಸಂಸದ ಡ್ಯಾನಿಷ್ ಅಲಿ ಉಚ್ಛಾಟನೆ ಮಾಡಿದ್ದ ಬಿಎಸ್ಪಿ ಪಕ್ಷ ಭಾನುವಾರ ಮಹತ್ವದ ಘೋಷಣೆಯೊಂದನ್ನು ಮಾಡಿದೆ.
28 ವರ್ಷದ ಯುವ ನಾಯಕ ಆಕಾಶ್ ಆನಂದ್ 2019ರ ಚುನಾವಣೆ ಮುನ್ನಡೆಸುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಬಿಎಸ್ಪಿ ನಾಯಕರು ಮತ್ತು ಮಾಯಾವತಿ ಜೊತೆ ಅವರು ಹಲವು ವೇದಿಕೆ ಹಂಚಿಕೊಂಡಿದ್ದು, ಫೋಟೋಗಳು ವೈರಲ್ ಆಗಿವೆ.
2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿಯೂ ಆಕಾಶ್ ಆನಂದ್ ಬಿಎಸ್ಪಿ ನಾಯಕರ ಜೊತೆ ವೇದಿಕೆ ಹಂಚಿಕೊಂಡಿದ್ದರು. ಈಗ ಅಧಿಕೃತವಾಗಿ ಪಕ್ಷದಲ್ಲಿ ಅವರಿಗೆ ಹುದ್ದೆಯನ್ನು ನೀಡಲಾಗಿದ್ದು, ಮಾಯಾವತಿ ಉತ್ತರಾಧಿಕಾರಿ ಎಂದು ಘೋಷಣೆ ಮಾಡಲಾಗಿದೆ.
ಉತ್ತರ ಪ್ರದೇಶ ಸೇರಿದಂತೆ ಯಾವುದೇ ರಾಜ್ಯದಲ್ಲಿ ಬಿಎಸ್ಪಿ ಪಕ್ಷ ಅಧಿಕಾರದಲ್ಲಿ ಇಲ್ಲ. ಸಂಸತ್ನಲ್ಲಿ ಪಕ್ಷದ 10 ಸಂಸದರು ಇದ್ದಾರೆ. ಮಾಯಾವತಿ ಬಳಿಕ ಸಮಾಜವಾದಿ ಪಕ್ಷವನ್ನು ಮುನ್ನಡೆಸುವವರು ಯಾರು? ಎಂಬ ಪ್ರಶ್ನೆ ಎದುರಾಗಿತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಬಿಎಸ್ಪಿ ಪಕ್ಷ ತನ್ನ ಪ್ರಭಾವ ಇದ್ದ ಉತ್ತರ ಪ್ರದೇಶ ರಾಜ್ಯದಲ್ಲಿಯೂ ಈಗ ಮಂಕಾಗಿದೆ. 2012ರ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷ 80 ಸ್ಥಾನಗಳಿಸಿತ್ತು. 2007ರಲ್ಲಿ 206 ಸ್ಥಾನ ಗೆದ್ದಿತ್ತು. 2002ರಲ್ಲಿ 98 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. 2017ರಲ್ಲಿ 19 ಸ್ಥಾನಗಳಿಸಿದೆ.
ಬಿಎಸ್ಪಿ ಮುಖ್ಯಸ್ಥೆ 2024ರ ಲೋಕಸಭೆ ಚುನಾವಣೆಗೆ ಎನ್ಡಿಎ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಯಾವುದೇ ಮೈತ್ರಿಕೂಟಕ್ಕೆ ಬೆಂಬಲ ನೀಡಿಲ್ಲ. ಏಕಾಂಗಿಯಾಗಿ ಚುನಾವಣೆ ಎದುರಿಸುತ್ತೇನೆ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ. ಇಂತಹ ಸಮಯದಲ್ಲಿಯೇ ಪಕ್ಷದ ಉತ್ತರಾಧಿಕಾರಿಯನ್ನು ಘೋಷಣೆ ಮಾಡಿದ್ದಾರೆ.
ಲೋಕಸಭೆ ಚುನಾವಣೆ ಕುರಿತು ಮಹತ್ವದ ಘೋಷಣೆ ಮಾಡಿದ್ದ ಮಾಯಾವತಿ, "ಎನ್ಡಿಎ ಮತ್ತು ಇಂಡಿಯಾ ಮೈತ್ರಿಕೂಟದಿಂದ ನಾವು ಸಮಾನ ಅಂತರ ಕಾಯ್ದುಕೊಂಡು ಪಕ್ಷ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಗಮನಹರಿಸಬೇಕು. ಸ್ವಂತ ಬಲದ ಮೇಲೆ ಚುನಾವಣೆಯನ್ನು ಎದುರಿಸಬೇಕು" ಎಂದು ಹೇಳಿದ್ದರು.
"ಲೋಕಸಭೆ ಚುನಾವಣೆಯ ವೇಳೆಗೆ ಬಿಎಸ್ಪಿ ಪಕ್ಷ ಎನ್ಡಿಎ ಅಥವ ಇಂಡಿಯಾ ಮೈತ್ರಿಕೂಟದ ಭಾಗವಾಗಿರಲಿದೆ ಎಂಬ ಸುಳ್ಳುಸುದ್ದಿಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು" ಎಂದು ಮಾಯಾವತಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದರು.












Click it and Unblock the Notifications