ಅತ್ಯಾಚಾರಿಗಳನ್ನು ಬಿಡುಗಡೆ ಮಾಡುವವರಿಂದ ಮಹಿಳಾ ಸುರಕ್ಷತೆ ಸಾಧ್ಯವೇ: ರಾಹುಲ್
ಲಕ್ನೋ, ಸೆಪ್ಟೆಂಬರ್ 15: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಇಬ್ಬರು ದಲಿತ ಬಾಲಕಿಯರ ಹತ್ಯೆಯ ಘಟನೆಯನ್ನು ಗುರುವಾರ ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವವರಿಂದ ಮತ್ತು ಮಹಿಳೆಯರ ಸುರಕ್ಷತೆಯನ್ನು ನಿರೀಕ್ಷಿಸಲಾಗುವುದಿಲ್ಲ ಎಂದು ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಲಖಿಂಪುರದಲ್ಲಿ ಹಗಲು ಹೊತ್ತಿನಲ್ಲಿ ಇಬ್ಬರು ಅಪ್ರಾಪ್ತ ದಲಿತ ಸಹೋದರಿಯರನ್ನು ಅಪಹರಿಸಿ ಹತ್ಯೆಗೈದಿರುವುದು ಅತ್ಯಂತ ಆತಂಕಕಾರಿ ಘಟನೆಯಾಗಿದೆ. ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿ ಅವರನ್ನು ಗೌರವಿಸುವವರಿಂದ ಮಹಿಳೆಯರ ಸುರಕ್ಷತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಆಗಸ್ಟ್ 15 ರಂದು ಗುಜರಾತ್ ಸರ್ಕಾರವು ಬಿಲ್ಕಿಸ್ ಬಾನು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಕ್ರಮವನ್ನು ರಾಹುಲ್ ಉಲ್ಲೇಖಿಸಿ ಖಂಡಿಸಿದ್ದಾರೆ. 2008ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಗುಜರಾತ್ನಲ್ಲಿ ಚಾಲ್ತಿಯಲ್ಲಿರುವ ಕ್ಷಮಾ ನೀತಿಯ ಪ್ರಕಾರ ಪ್ರಕರಣದ ಎಲ್ಲಾ 11 ಜೀವಾವಧಿ ಅಪರಾಧಿಗಳನ್ನು ಬಿಡುಗಡೆ ಮಾಡಲಾಯಿತು.
ಲಿಖಿಂಪುರಖೇರಿಯಲ್ಲಿ ದಲಿತ ಬಾಲಕಿಯರ ಹತ್ಯೆ ಪ್ರಕರಣ: 6 ಮಂದಿ ಬಂಧನ
2002ರ ಮಾರ್ಚ್ನಲ್ಲಿ ಗೋಧ್ರಾ ನಂತರದ ಗಲಭೆಗಳ ಸಮಯದಲ್ಲಿ ಬಿಲ್ಕಿಸ್ ಬಾನೊ ಅವರನ್ನು ಸಾಮೂಹಿಕ ಅತ್ಯಾಚಾರ ಮಾಡಲಾಯಿತು. ಅಲ್ಲದೆ ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಅವರ ಕುಟುಂಬದ 14 ಮಂದಿಯನ್ನು ಸಾಯಿಸಲಾಯಿತು. ವಡೋದರಾದಲ್ಲಿ ಆಕೆಯ ಕುಟುಂಬದ ಮೇಲೆ ಗಲಭೆಕೋರರು ದಾಳಿ ನಡೆಸಿದಾಗ ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದಳು.
ಸರ್ಕಾರದ ಆದ್ಯತೆಗಳು ತಪ್ಪಾಗಿವೆ: ಮಾಯಾವತಿ
ಇದಕ್ಕೂ ಮುಂಚೆ ಲಖಿಂಪುರ ಖೇರಿ ಇಬ್ಬರು ಬಾಲಕಿಯರ ಹತ್ಯೆ ಸಂಬಂಧ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಟ್ವಿಟರ್ನಲ್ಲಿ ಘಟನೆಯನ್ನು ಖಂಡಿಸಿ ಸರ್ಕಾರದ ಆದ್ಯತೆಗಳು ತಪ್ಪಾಗಿರುವುದರಿಂದ ಉತ್ತರ ಪ್ರದೇಶದಲ್ಲಿ ಅಪರಾಧಿಗಳು ಸ್ವತಂತ್ರವಾಗಿ ತಿರುಗಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಯುಪಿ ಅತ್ಯಾಚಾರ ಪ್ರಕರಣ: 'ಆತ್ಮಗಳು ನಡುಗಿಸುವ ಶಿಕ್ಷೆ ನೀಡಲಾಗುವುದು' ಯುಪಿ ಸರ್ಕಾರದ ಭರವಸೆ
ವಿಷಯವನ್ನು ರಾಜಕೀಯಗೊಳಿಸಬೇಡಿ: ಡಿಸಿಎಂ
ಏತನ್ಮಧ್ಯೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಇಬ್ಬರು ಸಹೋದರಿಯರ ಹತ್ಯೆಯ ಘಟನೆ ಹೃದಯ ವಿದ್ರಾವಕ ಎಂದು ಹೇಳಿದ್ದಾರೆ. ಆದಾಗ್ಯೂ, ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಇಬ್ಬರು ದಲಿತ ಬಾಲಕಿಯರ ಅತ್ಯಾಚಾರ ಮತ್ತು ಹತ್ಯೆಯ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿಗಳಾದ ಬ್ರಜೇಶ್ ಪಾಠಕ್ ಮತ್ತು ಕೆಪಿ ಮೌರ್ಯ ಗುರುವಾರ ಭರವಸೆ ನೀಡಿದ್ದಾರೆ. ವಿಷಯವನ್ನು ರಾಜಕೀಯಗೊಳಿಸುವ ಬದಲು ಕುಟುಂಬಕ್ಕೆ ಸಾಂತ್ವನ ಹೇಳುವಂತೆ ಪ್ರತಿಪಕ್ಷಗಳನ್ನು ಒತ್ತಾಯಿಸಿದ್ದಾರೆ.
ಒಬ್ಬನ ಕಾಲಿಗೆ ಫೈರಿಂಗ್ ಮಾಡಿ ಬಂಧನ
ಈ ಪ್ರಕರಣದಲ್ಲಿ ಚೋಟು, ಜುನೈದ್, ಸೊಹೈಲ್, ಹಫೀಜುಲ್, ಕರಿಮುದ್ದೀನ್ ಮತ್ತು ಆರಿಫ್ ಎಂಬ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಲಖಿಂಪುರ ಖೇರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸುಮನ್ ತಿಳಿಸಿದ್ದಾರೆ. ಆರೋಪಿ ಜುನೈದ್ನನ್ನು ಕಾಲಿಗೆ ಫೈರಿಂಗ್ ಮಾಡಿ ಬಂಧಿಸಲಾಯಿತು. ಆರೋಪಿಗಳು ಮೃತ ಹುಡುಗಿಯರೊಂದಿಗೆ ಸ್ನೇಹಿತರಾಗಿದ್ದರು ಎಂದು ಹೇಳಿದರು.
ಸಾಕ್ಷ್ಯ ನಾಶಪಡಿಸಲು ನೇಣು ಹಾಕಿದರು
ಬಾಲಕಿಯರನ್ನು ನಿನ್ನೆ ಜಮೀನಿಗೆ ಕರೆದೊಯ್ದು ಸೊಹೈಲ್ ಮತ್ತು ಜುನೈದ್ ಅತ್ಯಾಚಾರವೆಸಗಿದ್ದರು. ಆರೋಪಿಗಳು ತಮ್ಮನ್ನು ಮದುವೆಯಾಗಲು ಹುಡುಗಿಯರು ಬಯಸಿದ ನಂತರ, ಸೊಹೈಲ್, ಹಫೀಜುಲ್ ಮತ್ತು ಜುನೈದ್ ಬಾಲಕಿಯರನ್ನು ಕತ್ತು ಹಿಸುಕಿ ಕೊಂದರು. ನಂತರ ಅವರು ಕರೀಮುದ್ದೀನ್ ಮತ್ತು ಆರಿಫ್ ಅವರನ್ನು ಕರೆಸಿ ಪುರಾವೆಗಳನ್ನು ನಾಶಪಡಿಸಲು ಹುಡುಗಿಯರನ್ನು ನೇಣು ಹಾಕಿದರು ಎಂದು ಎಸ್ಪಿ ಸಂಜೀವ್ ಸುಮನ್ ಹೇಳಿದರು.