ಬೆತ್ತಲಾಗಿ ತಿರುಗಾಡಿ ಎಂದು ರಾಹುಲ್ ಬೆಂಬಲಿಗರಿಗೆ ಹೇಳಿದ ಬಿಜೆಪಿ ನಾಯಕ
ನವದೆಹಲಿ, ಡಿಸೆಂಬರ್ 27: ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಸಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ವಿಚಾರವಾಗಿ ಮಾತನಾಡಿರುವ ಬಿಜೆಪಿ ನಾಯಕ ದುಷ್ಯಂತ್ ಗೌತಮ್, 'ರಾಹುಲ್ ಗಾಂಧಿ ರಾಮನ ಅವತಾರವಾಗಿದ್ದಾರೆಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಚಳಿಯಲ್ಲೂ ತಣ್ಣಗಾಗದಂತೆ ಇರಲು ಅವರು ಏನು ತಿನ್ನುತ್ತಾರೆಂದು ತಮ್ಮ ಸೇನೆಗೆ(ಬೆಂಬಲಿಗರು) ತಿಳಿಸಲಿ. ಅವರ ಸೇನೆ ಏಕೆ ಬಟ್ಟೆಯಿಲ್ಲದೆ ತಿರುಗುವುದಿಲ್ಲ. ಕಾಂಗ್ರೆಸ್ಸಿಗರು ಭಗವಂತನಂತೆ ಬೆತ್ತಲೆಯಾಗಿ ತಿರುಗಬೇಕು' ಎಂದು ಹೇಳಿದ್ದಾರೆ.
'ನಾವು ಚಳಿಯಲ್ಲಿ ಹೆಪ್ಪುಗಟ್ಟುತ್ತಿದ್ದೇವೆ. ಜಾಕೆಟ್ ಅನ್ನು ಧರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಟೀ-ಶರ್ಟ್ಗಳಲ್ಲಿ ಹೊರಗೆ ಹೋಗುತ್ತಿದ್ದಾರೆ. ತಪಸ್ಸು ಮಾಡುವ ಯೋಗಿಯಂತೆ ಭಾಸವಾಗುತ್ತಿದ್ದಾರೆ' ಎಂದು ಸಲ್ಮಾನ್ ಖುರ್ಷಿದ್ ಹೇಳಿಕೆ ನೀಡಿದ್ದರು.

ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯು ಶನಿವಾರ ರಾಷ್ಟ್ರ ರಾಜಧಾನಿ ದೆಹಲಿಯನ್ನು ತಲುಪಿದೆ. ದೆಹಲಿಯಲ್ಲಿ ಈಗ ವಿಪರೀತ ಚಳಿ ಇದೆ. ತಾಪಮಾನವನ್ನು ಐದು ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ. ಇಂತಹ ಸಂದರ್ಭದಲ್ಲಿಯೂ ರಾಹುಲ್ ಗಾಂಧಿ ಕೇವಲ ಟೀ ಶರ್ಟ್ ತೊಟ್ಟು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು.
ಈ ವಿಚಾರವಾಗಿ ಮಾತನಾಡಿದ್ದ ಪಕ್ಷದ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ಸುಪ್ರಿಯಾ ಶ್ರಿನೇಟ್ 'ಬಿಜೆಪಿ ನಾಯಕರು ಕಂಬಳಿಯಲ್ಲಿ ಅವಿತುಕೊಂಡಿದ್ದಾರೆ. ರಾಷ್ಟ್ರವನ್ನು ವಿಭಜಿಸಲು ಸಂಚು ಹೂಡುತ್ತಿದ್ದಾರೆ' ಎಂಬ ಟೀಕಿಸಿದ್ದರು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ರಾಷ್ಟ್ರ ರಾಜಧಾನಿ ದೆಹಲಿಯನ್ನು ತಲುಪಿದೆ. ಈ ಯಾತ್ರೆಯಲ್ಲಿ ಖ್ಯಾತ ನಟ ಕಮಲ್ ಹಾಸನ್ ಅವರು ಭಾಗವಹಿಸಿದ್ದರು. ಕೊರೆಯುವ ಚಳಿಯಲ್ಲಿಯೂ ರಾಹುಲ್ ಗಾಂಧಿ ಟೀ ಶರ್ಟ್ ತೊಟ್ಟು, ರಾಜಘಾಟ್ಗೆ ಭೇಟಿ ನೀಡಿ ಪ್ರಾರ್ಥಿಸಿದ್ದರು. ಮಹಾತ್ಮ ಗಾಂಧಿ, ಪಂಡಿತ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಜಿ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದರು.
ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆಯು ಈಗಾಗಲೇ ಸುಮಾರು 2800 ಕಿ.ಮೀ ದೂರ ಕ್ರಮಿಸಿದೆ. ತಮಿಳು ನಾಡು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ ಹಾಗೂ ದೆಹಲಿಯಲ್ಲಿ ಕ್ರಮಿಸಿದೆ. ಜನವರಿ ಮೊದಲ ವಾರದಲ್ಲಿ ಉತ್ತರ ಪ್ರದೇಶವನ್ನು ಪ್ರವೇಶಿಸಲಿದೆ. ಉತ್ತರ ಪ್ರದೇಶದ ರಾಜಕೀಯ ನಾಯಕರಾದ ಅಖಿಲೇಶ್ ಯಾದವ್, ಮಾಯಾವತಿ ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅವರಿಗೆ ಕಾಂಗ್ರೆಸ್ ಆಹ್ವಾನ ನೀಡಿದೆ. ಕಾಶ್ಮೀರದ ಶ್ರೀನಗರದಲ್ಲಿ ಯಾತ್ರೆ ಕೊನೆಗಳ್ಳಲಿದೆ. ಯಾತ್ರೆಗೆ ಅಪಾರ ಜನಬೆಂಬಲ ದೊರೆತಿದೆ ಎಂದು ವರದಿಯಾಗಿದೆ.












Click it and Unblock the Notifications