ಕೋಲಾರ ಜಿಲ್ಲಾಡಳಿತ ಭವನ ಉದ್ಘಾಟನೆ, ಒಂದೇ ಸೂರಿನಡಿ 42 ಕಚೇರಿ
ಕೋಲಾರ, ಸೆಪ್ಟೆಂಬರ್ 20 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೋಲಾರ ಜಿಲ್ಲಾ ಪ್ರವಾಸದಲ್ಲಿದ್ದಾರೆ. 25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜಿಲ್ಲಾ ಕಚೇರಿಗಳ ಸಂಕೀರ್ಣವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಅಕ್ರಮ ಕಲ್ಲುಗಣಿಗಾರಿಕೆ ಆರೋಪ
ಈ ಜಿಲ್ಲಾಡಳಿತ ಭವನ ನಿರ್ಮಾಣದಿಂದ ವಿವಿಧ ಇಲಾಖೆಗಳ ಜಿಲ್ಲಾ ಕಚೇರಿಗಳು ಹಾಗೂ ಅವಶ್ಯಕ ನಾಗರಿಕ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗಲಿದೆ. ಪ್ರತಿನಿತ್ಯ ಜನರು ವಿವಿಧ ಇಲಾಖೆಗಳಿಗೆ ಅಲೆದಾಡುವುದನ್ನು ಇದು ತಪ್ಪಿಸಲಿದೆ.
ಸುಮಾರು 10 ಎಕರೆ ಪ್ರದೇಶದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣವಾಗಿದೆ. ಕರ್ನಾಟಕ ಗೃಹ ಮಂಡಳಿ ಭವನದ ಕಾಮಗಾರಿಯನ್ನು ಕೈಗೊಂಡಿತ್ತು. 2015ರ ಸೆಪ್ಟೆಂಬರ್ನಲ್ಲಿ ಕಟ್ಟಡದ ಕಾಮಗಾರಿಯನ್ನು ಆರಂಭಿಸಲಾಗಿತ್ತು. 2017ನೇ ಆಗಸ್ಟ್ನಲ್ಲಿ ಕಾಮಗಾರಿ ಮುಕ್ತಾಯಗೊಂಡಿದೆ.
ಮೂರು ಮಹಡಿಗಳ ಜಿಲ್ಲಾಡಳಿತ ಭವನದಲ್ಲಿ ಅತ್ಯಾಧುನಿಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಲಿಫ್ಟ್, ಅಗ್ನಿ ಶಾಮಕ ವ್ಯವಸ್ಥೆ, ಸಿಸಿಟಿವಿ, ಸ್ವಯಂ ಚಾಲಿತ ಸೌರ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಶೋತೃ ಭವನದಲ್ಲಿ 500 ಆಸನಗಳು, ಪ್ರತಿ ಮಹಡಿಯಲ್ಲಿ 100 ಆಸನಗಳ ಸಭಾಂಗಣವಿದೆ.
ಜಿಲ್ಲಾಡಳಿತ ಭವನದಲ್ಲಿ ವಿವಿಧ ಇಲಾಖೆಗಳು ಹಾಗೂ ನಿಗಮಗಳು ಸೇರಿದಂತೆ 42 ಕಚೇರಿಗಳಿವೆ. ಪ್ರತಿಯೊಂದು ಮಹಡಿಯಲ್ಲಿಯೂ ಸಾಮಾನ್ಯ ಸಭಾಂಗಣವಿದೆ. ನೆಲ ಮಹಡಿಯಲ್ಲಿ 11 ಕಚೇರಿಗಳು, ಮೊದಲನೇ ಮಹಡಿಯಲ್ಲಿ 10 ಕಚೇರಿಗಳು ಹಾಗೂ ಎರಡನೇ ಮಹಡಿಯಲ್ಲಿ 18 ಕಚೇರಿಗಳಿವೆ.
ನೆಲ ಮಹಡಿ : ಜಿಲ್ಲಾ ಆರೋಗ್ಯ ಇಲಾಖೆ, ಅಬಕಾರಿ ಜಿಲ್ಲಾಧಿಕಾರಿಗಳು, ಬ್ಯಾಂಕ್, ಸಣ್ಣ ಉಳಿತಾಯ ಇಲಾಖೆ, ತೂಕ ಮತ್ತು ಅಳತೆ, ಅಪರ ನಿರ್ದೇಶಕರು ಅಂಗವಿಕಲರ ಇಲಾಖೆ, ವಿ.ಐ.ಪಿ ಕೋಣೆ, ಜಿಲ್ಲಾ ಖಜಾಂಚಿ ಕಾರ್ಯಾಲಯ, ಜಿಲ್ಲಾ ಕಾರ್ಮಿಕ ಆಯುಕ್ತರು, ಪ್ರಚಾರ ಮಾಹಿತಿ ಮತ್ತು ಪ್ರಕಾಶನ, ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತರ ಕಚೇರಿ.
ಮೊದಲನೇ ಮಹಡಿ : ಜಿಲ್ಲಾಧಿಕಾರಿಗಳ ಕಚೇರಿ, ರಾಷ್ಟ್ರೀಯ ಮಾಹಿತಿ ಕೇಂದ್ರ, ಯೋಜನಾ ಮತ್ತು ಅಂಕಿ ಅಂಶಗಳು, ಮಾರುಕಟ್ಟೆ ಇಲಾಖೆ, ಜಿಲ್ಲಾ ನೋಂದಣಾಧಿಕಾರಿಗಳು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಲೋಕಸಭಾ ಸದಸ್ಯರು, ನೈಸರ್ಗಿಕ ಆಪತ್ತು ನಿರ್ವಹಣೆ ಹಾಗೂ ಚುನಾವಣೆ ವಿಭಾಗ.
ಎರಡನೇ ಮಹಡಿ : ಉಪ ನಿರ್ದೇಶಕರು, ಪಿಯು ಮಂಡಳಿ, ಗ್ರಾಹಕ ವೇದಿಕೆ, ಪಶು ಸಂಗೋಪನಾ ಇಲಾಖೆ, ಕರ್ನಾಟಕ ಸರಕಾರಿ ವಿಮಾ ಇಲಾಖೆ, ಉದ್ಯೋಗ ಮತ್ತು ತರಬೇತಿ ಇಲಾಖೆ, ರೇಷ್ಮೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಜಲಾನಯನ ಇಲಾಖೆ, ಗಣಿ ಮತ್ತು ಭೂವಿಜ್ಞಾನ, ಜವಳಿ ಇಲಾಖೆ, ಕೃಷಿ ಇಲಾಖೆ, ಸಹಕಾರ ಇಲಾಖೆ, ತೋಟಗಾರಿಕೆ ಇಲಾಖೆ, ಸಿಟಿ ಸರ್ವೆ ಪಿ.ಆರ್.ಓ, ಕರ್ನಾಟಕ ಗೃಹ ಮಂಡಳಿ ಕಚೇರಿಗಳು.
ಇತರ ಕಟ್ಟಡಗಳ ಉದ್ಘಾಟನೆ
* ಡಿ.ದೇವರಾಜ ಅರಸು ಭವನ : ಕೋಲಾರ ನಗರದಲ್ಲಿ 100*100 ಅಡಿ ವಿಸ್ತೀರ್ಣದ ದೇವರಾಜ ಅರಸು ಭವನ ನಿರ್ಮಾಣವಾಗಿದೆ. ಒಟ್ಟು 102.70 ಲಕ್ಷಗಳ ವೆಚ್ಚದಲ್ಲಿ ಭವನ ನಿರ್ಮಿಸಲಾಗಿದೆ.
* ಮಾಲೂರು ಸಾರ್ವಜನಿಕ ಆಸ್ಪತ್ರೆ : 3 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನು ನವೀಕರಣ ಮಾಡಲಾಗಿದೆ. ಆಸ್ಪತ್ರೆ 100 ಹಾಸಿಗೆಗಳನ್ನು ಹೊಂದಿದೆ. ಈ ಆಸ್ಪತ್ರೆಯಲ್ಲಿ ಐಸಿಯು, ವ್ಯವಸ್ಥೆ, ಸುವ್ಯವಸ್ಥಿತ ಕ್ಯಾಂಟೀನ್ ವ್ಯವಸ್ಥೆ ಇದೆ. ಈ ಆಸ್ಪತ್ರೆಯಿಂದ ಸುಮಾರು 2.50 ಲಕ್ಷ ಜನರಿಗೆ ಪ್ರಯೋಜನವಾಗಲಿದೆ.
* ತೊರ್ನಹಳ್ಳಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ : ಈ ಕೇಂದ್ರವನ್ನು 1.75 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದು 2.5 ಎಕರೆ ಸ್ಥಳಾವಕಾಶವನ್ನು ಹೊಂದಿದೆ. 6 ಬೆಡ್ಗಳ ವ್ಯವಸ್ಥೆ ಇರುವ ಆಸ್ಪತ್ರೆ ಇದಾಗಿದೆ. ಇದರಿಂದ ಸುತ್ತಮುತ್ತಲಿನ 15 ಸಾವಿರ ಜನರಿಗೆ ಅನುಕೂಲವಾಗಲಿದೆ.
ಶಂಕು ಸ್ಥಾಪನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಇಂದು ಗಾಂಧಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 3 ಕೋಟಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣ ಮಾಡಲಾಗುತ್ತಿದೆ.
ಯುವಜನ ಮತ್ತು ವಿದ್ಯಾರ್ಥಿಗಳನ್ನು ಗಾಂಧಿ ಚಿಂತನೆಗೆ ಒಳಪಡಿಸುವುದು. ಪ್ರಗತಿಪರ ವಿಚಾರಗಳ ಬಗ್ಗೆ ಆಗಾಗ್ಗೆ ಚರ್ಚೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದು ಗಾಂಧಿ ಭವನ ನಿರ್ಮಾಣದ ಉದ್ದೇಶವಾಗಿದೆ. ಗಾಂಧಿ ಭವನವು ಪುಟ್ಟ ಆಶ್ರಮ ಮಾದರಿಯ ಕುಟೀರದಂತಿದ್ದು ಸಭಾಂಗಣವನ್ನು ಹೊಂದಿರುತ್ತದೆ. ಮುಖ್ಯ ಕಟ್ಟಡದಲ್ಲಿ ವಿವಿಧೋದ್ದೇಶ ಸಭಾಂಗಣ, ಗ್ರಂಥಾಲಯವಿರುತ್ತದೆ.