ಹಿರಿಯ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ನಿಧನ
ಕಾರವಾರ, ಡಿಸೆಂಬರ್ 04: ಬಡಗುತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ ಹಿರಿಯ ಕಲಾವಿದ ಶ್ರೀಪಾದ ಹೆಗಡೆ ಹಡಿನಬಾಳು (65) ಅವರು ಅನಾರೋಗ್ಯದಿಂದ ಡಿ.3ರ ಗುರುವಾರ ರಾತ್ರಿ ನಿಧನರಾಗಿದ್ದಾರೆ.
ರಕ್ತದೊತ್ತಡದ ಸಮಸ್ಯೆಯಿಂದಾಗಿ ಅವರನ್ನು ಮಂಗಳವಾರ ಉಡುಪಿಯಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೆಲ ತಿಂಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದ ಶ್ರೀಪಾದ ಹೆಗಡೆ ಅವರು ಚೇತರಿಸಿಕೊಂಡಿದ್ದರು. ನಂತರ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು.
ಹಿರಿಯ ಯಕ್ಷಗಾನ ಕಲಾವಿದ ವಾಸುದೇವ ಸಾಮಗ ನಿಧನ
ಶ್ರೀಪಾದ ಹೆಗಡೆ ಅವರು ರಾಜ್ಯದ ಎಲ್ಲಾ ಪ್ರಖ್ಯಾತ ಮೇಳಗಳಲ್ಲೂ ಅತಿಥಿ ಕಲಾವಿದರಾಗಿ ಪಾತ್ರ ಮಾಡುತ್ತಿದ್ದರು. ಇಡಗುಂಜಿ ಮಹಾಗಣಪತಿ ಮೇಳದಲ್ಲಿ ಮೂಲ ಕಲಾವಿದರಾಗಿದ್ದರು. ಇಡಗುಂಜಿ ಮಹಾಗಣಪತಿ ಮೇಳದ 2ನೇ ತಲೆಮಾರಿನ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದರು. ಕೆರೆಮನೆ ಮತ್ತು ಕೊಂಡದಕುಳಿ ಮೇಳದಲ್ಲಿ ಅತಿಥಿ ಕಲಾವಿದರಾಗಿ ಹೆಚ್ಚು ಪಾತ್ರ ವಹಿಸಿದ್ದರು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಹಡಿನಬಾಳದ ಶ್ರೀಪಾದ ಹೆಗಡೆಯವರು 1953ರಂದು ಜನಿಸಿದರು. ಎಸ್ ಎಸ್ ಎಲ್ ಸಿವರೆಗೆ ಶಿಕ್ಷಣ ಪಡೆದಿದ್ದ ಅವರು, 1976, 77ರಲ್ಲಿ ಗುಂಡಬಾಳಾ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಯಕ್ಷಗಾನ ಪ್ರವೇಶಿಸಿದ್ದರು.
ಅತಿಥಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಕೊಂಡದಕುಳಿಯಲ್ಲಿ ಕುಟುಂಬಸ್ಥರೊಂದಿಗೆ ವಾಸವಾಗಿದ್ದರು. ಇವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಲಭಿಸಿವೆ. ಚಿಟ್ಟಾಣಿ ಹಾಗೂ ಮಹಾಬಲ ಹೆಗಡೆ ಕೆರೆಮನೆ ಅವರೊಂದಿಗೆ ಹಲವು ವರ್ಷಗಳ ಕಾಲ ಪಾತ್ರ ಮಾಡುವ ಮೂಲಕ ಮೆಚ್ಚುಗೆ ಗಳಿಸಿದ್ದರು.
Recommended Video
ಶುಕ್ರವಾರ ಹಡಿನಬಾಳದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.