ವಿ ಎಸ್ ಉಗ್ರಪ್ಪನವರಿಗೆ ಭಕ್ತರ ಬೆದರಿಕೆ: ಮಠದ ಸ್ಪಷ್ಟೀಕರಣ
ವಿ ಎಸ್ ಉಗ್ರಪ್ಪನವರಿಗೆ ರಾಮಚಂದ್ರಾಪುರ ಮಠದ ಭಕ್ತರು ಬೆದರಿಕೆ ಒಡ್ಡಿದ್ದಾರೆ, ಇದರ ಜೊತೆಗೆ ಫೇಸ್ಬುಕ್ನಲ್ಲಿ ಕೂಡಾ ವೈಯಕ್ತಿಕವಾಗಿ ದಾಖಲಿಸಿದ ಟೀಕೆ, ಟಿಪ್ಪಣಿಗಳಿಗೆ ಮಠ ಸ್ಪಷ್ಟೀಕರಣ ನೀಡಿದ್ದು ಇದೊಂದು ಆಧಾರ ರಹಿತ ಎಂದು ಹೇಳಿದೆ.
ಬೆಂಗಳೂರು, ಡಿ 22: ವಿ ಎಸ್ ಉಗ್ರಪ್ಪನವರಿಗೆ ರಾಮಚಂದ್ರಾಪುರ ಮಠದ ಭಕ್ತರು ಬೆದರಿಕೆ ಒಡ್ಡಿದ್ದಾರೆ ಎನ್ನುವ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿಗೆ ಮಠ ಗುರುವಾರ (ಡಿ 22) ಸ್ಪಷ್ಟೀಕರಣ ನೀಡಿದೆ.
ಇದರ ಜೊತೆಗೆ ಫೇಸ್ಬುಕ್ನಲ್ಲಿ ಕೂಡಾ ವೈಯಕ್ತಿಕವಾಗಿ ದಾಖಲಿಸಿದ ಟೀಕೆ, ಟಿಪ್ಪಣಿಗಳಿಗೆ ಮಠ ಸ್ಪಷ್ಟೀಕರಣ ನೀಡಿದ್ದು, ಶ್ರೀಮಠ ಹಾಗೂ ಶ್ರೀಮಠದ ಭಕ್ತರು ಯಾರಿಗೂ ಯಾವುದೇ ರೀತಿಯ ಜೀವಬೆದರಿಕೆ ಹಾಕಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಆ ರೀತಿ ಕೆಲಸಗಳಿಗೆ ಶ್ರೀಮಠವಾಗಲೀ, ಶ್ರೀಮಠದ ವ್ಯವಸ್ಥೆಗಳಾಗಲಿ ಯಾವತ್ತೂ ಪ್ರೇರಣೆಯನ್ನೂ ನೀಡಿರುವುದಿಲ್ಲ, ನೀಡುವುದೂ ಇಲ್ಲ. (ರಾಮಚಂದ್ರಾಪುರ ಮಠದ ಆಡಳಿತಕ್ಕೆ ಐಎಸ್ಓ)
ಶ್ರೀಗಳು, ಶ್ರೀಮಠ ಹಾಗೂ ಶ್ರೀಮಠದ ವ್ಯವಸ್ಥೆ ಮತ್ತು ಭಕ್ತರು - ಎಲ್ಲರೂ ಈ ದೇಶದ ಸಂವಿಧಾನ ಮತ್ತು ಕಾನೂನಿ ಚೌಕಟ್ಟಿನಲ್ಲಿಯೇ ವ್ಯವಹರಿಸುತ್ತಾರೆಯೇ ಹೊರತು, ಮೌಖಿಕವಾಗಿಯೋ, ಲಿಖಿತರೂಪದಲ್ಲಿಯೋ ಜೀವಬೆದರಿಕೆ ಒಡ್ಡುವ ಕೆಲಸವನ್ನು ಮಾಡುವುದಿಲ್ಲ ಎಂದು ಈ ಮಠ ಸ್ಪಷ್ಟನೆ ನೀಡಿದೆ.
ಈ ಹಿಂದೆಯೂ ಶ್ರೀಮಠದ ಭಕ್ತರ ಮೇಲೆ ಇಂತಹ ಆರೋಪಗಳು ಬಂದಿದ್ದವು. ಆದರೆ, ಅವೆಲ್ಲ ನಿರಾಧಾರ ಎಂಬುದು ಆನಂತರದ ದಿನಗಳಲ್ಲಿ ಸಾಬೀತಾಗಿದೆ.
ಈ ಪ್ರಕರಣದಲ್ಲೂ ಶ್ರೀಮಠದ ವಿರುದ್ಧದ ಸದರಿ ಆರೋಪವೂ ಸತ್ಯಕ್ಕೆ ದೂರವಾದುದು. ಮಾನ್ಯ ಉಗ್ರಪ್ಪ ಅವರಿಗೆ ಜೀವಬೆದರಿಕೆ ಒಡ್ಡಿದ ಪ್ರಕರಣದ ತನಿಖೆಗೆ ಸರಕಾರ ಆದೇಶಿಸುವುದಾದರೆ ಅದನ್ನೂ ಶ್ರೀಮಠ ಸ್ವಾಗತಿಸುತ್ತದೆ ಎಂದು ರಾಮಚಂದ್ರಾಪುರ ಮಠ, ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟಪಡಿಸಿದೆ.