ವಾರದಲ್ಲಿ ಅರೆಸ್ಟ್ ಆಗದಿದ್ರೆ ದಿವ್ಯಾ ಆಸ್ತಿ ಮುಟ್ಟುಗೋಲು: ದಾವೂದ್ ಕೇಸ್ ಲಾ ಅಪ್ಲೇ!
ಬೆಂಗಳೂರು, ಏ. 27: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಎರಡು ಮಹತ್ವದ ಬೆಳವಣಿಗೆ ಆಗಿವೆ. ಆರ್.ಡಿ. ಪಾಟೀಲ್ ಮತ್ತು ಮಹಾಂತೇಶ್ ಪಾಟೀಲ್ ಸಹೋದರ ಜೋಡಿಯ ಮಾದರಿಯಲ್ಲಿಯೇ ಶಾಮೀಲಾಗಿರುವ ಇನ್ನೊಂದು ಅಣ್ತಮ್ಮ ಜೋಡಿಗಾಗಿ ಸಿಐಡಿ ಬೇಟೆ ಆರಂಭಿಸಿದೆ. ಇನ್ನು ಇದೇ ಅಕ್ರಮಕ್ಕೆ ಸಂಬಂಧಿದಂತೆ ತಲೆ ಮರೆಸಿಕೊಂಡಿರುವ ದಿವ್ಯ ಹಾಗರಗಿ ವಾರದಲ್ಲಿ ಕೋರ್ಟ್ ಮುಂದೆ ಹಾಜರಾಗದಿದ್ರೆ ಅವರ ಆಸ್ತಿ ಮುಟ್ಟುಗೋಲು ಆಗಲಿದೆ!
ಇಂಜಿನಿಯರ್ ಅಣ್ತಮ್ಮ ಎಲ್ಲಿದ್ದೀಯಾ ?
ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಒಂದೊಂದೇ ಅಕ್ರಮ ಬಯಲಿಗೆ ಬರುತ್ತಿವೆ. ಆರ್.ಡಿ. ಪಾಟೀಲ್ ಮತ್ತು ಮಹಾಂತೇಶ್ ಪಾಟೀಲ್ ಬಂಧನಕ್ಕೆ ಒಳಗಾಗಿದ್ದಾರೆ. ಆರ್. ಡಿ. ಪಾಟೀಲ್ ಸುಮಾರು 50 ಅಭ್ಯರ್ಥಿಗಳಿಗೆ ಬ್ಲೂಟೂತ್ ಉಪಕರಣ ಕೊಟ್ಟು ಪರೀಕ್ಷೆ ಬರೆಸಿರುವ ಅನುಮಾನದ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿಸಿದ್ದಾರೆ. ಇನ್ನು ಪಾಟೀಲ್ ಸಹೋದರರ ಹಿಂದೆ ಇದ್ದು ಅಭ್ಯರ್ಥಿಗಳನ್ನು ಕರೆಸಿ ಡೀಲ್ ಕುದುರಿಸುತ್ತಿದ್ದ ಮತ್ತೊಂದು ಅಣ್ತಮ್ಮ ಜೋಡಿ ಬೇಟೆಗಾಗಿ ಸಿಐಡಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ: ಪಾಟೀಲ್ ಮನೆಯಲ್ಲಿ ಏಳು ಡಿವೈಸ್ ಪತ್ತೆ, ದಿವ್ಯಾ ಇನ್ನೂ ನಾಪತ್ತೆ
ನೀರಾವರಿ ಇಲಾಖೆಯ ಅಸಿಸ್ಟೆಂಟ್ ಇಂಜಿನಿಯರ್ ಮಂಜುನಾಥ್ ಮೇಳಕುಂದಿ ಮತ್ತು ಆತನ ಸಹೋದರ ರವೀಂದ್ರ ಮೇಳಕುಂದಿ ಭಾಗಿಯಾಗಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ನಾಪತ್ತೆಯಾಗಿರುವ ಮಂಜುನಾಥ್ ಮೇಳಕುಂದಿ ಮತ್ತು ರವೀಂದರ ಮೇಳಕುಂದಿ ಬಂಧನಕ್ಕಾಗಿ ಸಿಐಡಿ ಪೊಲೀಸರು ಅರೆಸ್ಟ್ ವಾರಂಟ್ ಜಾರಿ ಮಾಡಿದ್ದಾರೆ. ರವೀಂದ್ರ ಮೇಳಕುಂದಿ ಅಭ್ಯರ್ಥಿಗಳನ್ನು ಹುಡುಕಿ ಹಣ ಪಡೆಯುತ್ತಿದ್ದ. ಸಹೋದರ ಮಂಜುನಾಥ್ ಮೇಳಕುಂದಿ ಅಕ್ರಮದ ಮೂಲಕ ಪರೀಕ್ಷೆ ಬರೆಸುತ್ತಿದ್ದ. ಈ ಮೂಲಕ ಈ ಜೋಡಿ ಸಹ ಪಿಐಎಸ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ದಾವೂದ್ ಕೇಸ್ ಲಾ ಅಪ್ಲೇ!
ಆರೋಪಿಗಳು ಬರದಿದ್ರೆ ಆಸ್ತಿ ಗೋವಿಂದ: ತಲೆ ಮರೆಸಿಕೊಂಡಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಇಂಜಿನಿಯರ್ ಮಂಜುನಾಥ್ , ಸಹೋದರ ರವೀಂದ್ರ, ಶಿಕ್ಷಕಿ ಶಾಂತಿಬಾಯಿ, ಅರ್ಚನಾ, ಕಾಶೀನಾಥ್ ಅವರಿಗೆ ಸಿಐಡಿ ಪೊಲೀಸರು ಅರೆಸ್ಟ್ ವಾರಂಟ್ ಜಾರಿ ಮಾಡಿದ್ದಾರೆ. ಮುಂಬಯಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂಗೆ ಕೋರ್ಟ್ ಹೊರಡಿಸಿದ್ದ ವಿಶೇಷ ಅರೆಸ್ಟ್ ವಾರಂಟನ್ನು ಈ ಪ್ರಕರಣದಲ್ಲಿ ಪಡೆಯಲಾಗಿದೆ.
ವಾರಂಟ್ ಹೊರಡಿಸಿದ ಒಂದು ವಾರದಲ್ಲಿ ಆರೋಪಿಗಳು ನ್ಯಾಯಾಲಯ ಅಥವಾ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ತಪ್ಪಿದಲ್ಲಿ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದು. ಕಳೆದ ಹದಿನೈದು ದಿನದಿಂದ ತಲೆ ಮರೆಸಿಕೊಂಡಿರುವ ದಿವ್ಯ ಹಾಗರಗಿ ಗ್ಯಾಂಗ್ ಮತ್ತು ಮಂಜುನಾಥ್ ಸಹೋದರರಿಗೆ ಇದೀಗ ಎದೆಯಲ್ಲಿ ನಡುಕ ಶುರುವಾಗಿದೆ.
ಆರೋಪಿಗಳು ಅರೆಸ್ಟ್ ಆಗದಿದ್ದ ಪಕ್ಷದಲ್ಲಿ ಸಿಆರ್ ಪಿಸಿ ಸೆಕ್ಷನ್ 82 ಅಡಿ ಘೋಷಿತ ಆರೋಪಿ ಎಂದು ಪರಿಗಣಿಸಿ ಅರೋಪಿಗಳ ಆಸ್ತಿಗಳನ್ನು ತನಿಖಾಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳಬಹುದು. ಕಲಬುರಗಿಯ ಮೂರನೇ ಜೆಎಂಎಫ್ಸಿ ನ್ಯಾಯಾಲಯದ ಸಂತೋಷ್ ಶ್ರೀವಾತ್ಸವ ಅವರು ಈ ಮಹತ್ವದ ಆದೇಶ ಹೊರಡಿಸಿದ್ದು, ಎರಡು ಮೂರು ದಿನದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳು ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ.