ಪಿಎಸ್ಐ ನೇಮಕಾತಿ ಹಗರಣ; ಪ್ರಮುಖ ಆರೋಪಿ ಕೋರ್ಟ್ಗೆ ಶರಣು
ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ ಕಲಬುರಗಿಯಲ್ಲಿ ಕೋರ್ಟ್ ಮುಂದೆ ಶರಣಾಗಿದ್ದಾನೆ. ಜನವರಿ 18ರಂದು ಸಿಐಡಿ ಪೊಲೀಸರು ಬಂಧಿಸಲು ಬಂದಾಗ ಆತ ಪರಾರಿಯಾಗಿದ್ದ.
ಬೆಂಗಳೂರು, ಜನವರಿ 24; ಸಿಐಡಿ ಪೊಲೀಸರು ಬಂಧಿಸಲು ಬಂದಾಗ ಪರಾರಿಯಾಗಿದ್ದ ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ ಕೋರ್ಟ್ಗೆ ಶರಣಾಗಿದ್ದಾನೆ. ಆದರೆ ಆತ ಲೋಕಾಯುಕ್ತಕ್ಕೆ ನೀಡಿದ ದೂರು ಈಗ ಸುದ್ದಿಯಾಗುತ್ತಿದೆ.
ಜನವರಿ 18ರಂದು ಸಿಐಡಿ ಪೊಲೀಸರು ಬಂಧಿಸಲು ಬಂದಾಗ ಆರೋಪಿ ರುದ್ರಗೌಡ ಪಾಟೀಲ್ ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ನಿವಾಸದಿಂದ ಪರಾರಿಯಾಗಿದ್ದ. ಕಲಬುರಗಿ ಸಿಐಡಿ ಘಟಕದ ಡಿವೈಎಸ್ಪಿ ಪ್ರಕಾಶ್ ರಾಥೋಡ್ ಭಾನುವಾರ ರುದ್ರಗೌಡ ಪಾಟೀಲ್ಗೆ ನೋಟಿಸ್ ನೀಡಿ, ಜನವರಿ 23ರಂದು ಕಲಬುರಗಿ ಸಿಐಡಿ ಕಚೇರಿಗೆ ಹಾಜರಾಗಬೇಕು ಎಂದು ಸೂಚನೆ ನೀಡಿದ್ದರು.
ರುದ್ರಗೌಡ ಪಾಟೀಲ್ ಸೋಮವಾರ ಸಂಜೆ ಕಲಬುರಗಿ ಕೋರ್ಟ್ಗೆ ಶರಣಾಗಿದ್ದ. ಕೋರ್ಟ್ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ. ಕೋರ್ಟ್ಗೆ ಶರಣಾಗುವ ಮುನ್ನ ಆತ ಲೋಕಾಯುಕ್ತಕ್ಕೆ ಸಿಐಡಿ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾನೆ.

ದೂರಿನಲ್ಲಿ ಏನಿದೆ?; 8.4 ನಿಮಿಷದ ಆಡಿಯೋ ಪೆನ್ ಡ್ರೈವ್ ಜೊತೆ ರುದ್ರಗೌಡ ಪಾಟೀಲ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾನೆ. ಆರ್. ಡಿ. ಪಾಟೀಲ ಯುವ ಬ್ರಿಗೇಡ್ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಆತ ಈ ಕುರಿತು ಮಾತನಾಡಿದ್ದು, ಆರೋಪಿ ಶರಣಾದ ಬಳಿಕ ವಿಡಿಯೋ ಅಪ್ಲೋಡ್ ಮಾಡಲಾಗಿದೆ.
ಪಿಎಸ್ಐ ನೇಮಕಾತಿ ಪ್ರಕರಣದಿಂದ ಆರ್. ಡಿ. ಪಾಟೀಲ ಪಾರು ಮಾಡಲು ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲಗೆ 76 ಲಕ್ಷ ರೂ. ಲಂಚ ನೀಡಿದ್ದೇನೆ ಎಂದು ಆತ ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶಂಕರಗೌಡ ಪಾಟೀಲ 3 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ನನ್ನಿಂದ ಅಷ್ಟು ಹಣ ಹೊಂದಿಸಲು ಸಾಧ್ಯವಾಗುವುದಿಲ್ಲ ಬೇಕಿದ್ದರೆ 76 ಲಕ್ಷ ಹಣವನ್ನು ನೀಡುತ್ತೇನೆ ಎಂದು ಬ್ಯಾಂಕ್ ಆಫ್ ಬರೋಡ ಶಾಖೆಯಿಂದ ಹಣ ಡ್ರಾ ಮಾಡಿಕೊಂಡು ನನ್ನ ಅಳಿಯನ ಮೂಲಕ ತಲುಪಿಸಿದ್ದೇನೆ ಎಂದು ಆರ್. ಡಿ. ಪಾಟೀಲ ದೂರಿನಲ್ಲಿ ತಿಳಿಸಿದ್ದಾರೆ.
ಆಡಿಯೋದಲ್ಲಿ ಆರ್. ಡಿ. ಪಾಟೀಲ ಮಾತು ಸ್ಪಷ್ಟವಾಗಿ ಕೇಳುತ್ತದೆ. ಆದರೆ ಎದುರು ಮಾತನಾಡಿರುವ ವ್ಯಕ್ತಿಯ ಆಡಿಯೋ ಸ್ಪಷ್ಟವಾಗಿದೆ. ನನಗೆ ಪ್ರತಿದಿನವೂ ಮಹತ್ವದ್ದಾಗಿದೆ. ನನಗೆ ಲಂಡನ್ನಲ್ಲಿ ಭಕ್ತರಿದ್ದಾರೆ. ಅವರಿಂದ ಹಣದ ವ್ಯವಸ್ಥೆ ಮಾಡಿಸುತ್ತೇನೆ. ಉಳಿದ ಇಬ್ಬರು ತನಿಖಾಧಿಕಾರಿಗಳಿಗೂ ಹಣ ನೀಡುತ್ತೇನೆ ಎಂದು ಹೇಳಿರುವುದು ಆಡಿಯೋದಲ್ಲಿದೆ.
ಲೋಕಾಯುಕ್ತಕ್ಕೆ ದೂರು ನೀಡಿರುವ ಕುರಿತು ಕಲಬುರಗಿ ಲೋಕಾಯುಕ್ತ ಎಸ್ಪಿ ಎ. ಆರ್. ಕರ್ನೂಲ್ ಮಾತನಾಡಿದ್ದಾರೆ, "ಆರ್. ಡಿ. ಪಾಟೀಲ ದೂರನ್ನು ಲೋಕಾಯುಕ್ತರಿಗೆ ಕಳಿಸಿರುವ ಬಗ್ಗೆ ಮಾಹಿತಿ ಇಲ್ಲ. ಒಮ್ಮೊಮ್ಮೆ ಲೋಕಾಯುಕ್ತರೇ ತನಿಖೆ ನಡೆಸುತ್ತಾರೆ. ಅಗತ್ಯವಿದ್ದರೆ ಮಾತ್ರ ನಮಗೆ ಹಸ್ತಾಂತರ ಮಾಡುತ್ತಾರೆ" ಎಂದರು.
ಇಡಿ ದಾಳಿ ಮಾಡಿತ್ತು; ರುದ್ರಗೌಡ ಪಾಟೀಲ್ ಪಿಎಸ್ಐ ನೇಮಕಾತಿ ಹಗರಣದ ಕಿಂಗ್ ಪಿನ್. ಈ ಹಗರಣದಲ್ಲಿ ಕೋಟ್ಯಾಂತರ ರೂಪಾಯಿ ಹಣದ ವ್ಯವಹಾರ ನಡೆದಿರುವ ಬಗ್ಗೆ ಆರೋಪಗಳಿವೆ. ಆದ್ದರಿಂದ ಇಡಿ ಸಹ ಈ ಕುರಿತು ತನಿಖೆ ನಡೆಸುತ್ತಿದೆ.
ಜನವರಿ 18ರ ಗುರುವಾರ ರುದ್ರಗೌಡ ಪಾಟೀಲ್ರ ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ನಿವಾಸದ ಮೇಲೆ ಇಡಿ ದಾಳಿ ನಡೆದಿತ್ತು. ರಾತ್ರಿಯ ತನಕ ದಾಖಲೆಗಳ ಪರಿಶೀಲನೆ ನಡೆದಿತ್ತು.
ತುಮಕೂರಿನಲ್ಲಿ ರುದ್ರಗೌಡ ಪಾಟೀಲ್ ವಿರುದ್ಧ ದೂರು ಒಂದು ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಲು ಆತನನ್ನು ವಶಕ್ಕೆ ಪಡೆಯಲು ಸಿಐಡಿ ಪೊಲೀಸರು ತೆರಳಿದ್ದರು. ಆಗ ಅವರನ್ನು ತಳ್ಳಿ ರುದ್ರಗೌಡ ಪಾಟೀಲ್ ಪರಾರಿಯಾಗಿದ್ದ.












Click it and Unblock the Notifications