ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ: ಕುರ್ತಾ, ರುಮಾಲಿನಲ್ಲಿ ಮಿಂಚಿದ ಕನಕಪುರ ಬಂಡೆ
ಬೆಂಗಳೂರು: ಕರ್ನಾಟಕದ ನೂತನ ಹಾಗೂ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರಿಸಿದ್ದಾರೆ. ಮಾಡ್ರನ್ ಡ್ರಸ್ನಲ್ಲಿ ಕನಕಪುರ ಬಂಡೆ ಖ್ಯಾತಿಯ ಡಿಕೆಶಿ ಮಿಂಚಿದ್ದಾರೆ. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಜೂನ್ 3ರ ಬುಧವಾರ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದು, ಡಿಕೆಶಿ ಅವರೊಂದಿಗೆ 13 ಪ್ರಭಾವಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಡಿ.ಕೆ ಶಿವಕುಮಾರ್ ಅವರ ನೇತೃತ್ವದ ನೂತನ ಸರ್ಕಾರ ಅಧಿಕೃತವಾಗಿ ಜಾರಿಗೆ ಬಂದಿದೆ. ಲೋಕಭವನದಲ್ಲಿ ಗಾಜಿನ ಮನೆಯಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಿತು. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಡಿ.ಕೆ ಶಿವಕುಮಾರ್ ಅವರು ಕುರ್ತಾ, ರುಮಾಲಿನಲ್ಲಿ ಮಿಂಚಿದ್ದಾರೆ.
ಅಜ್ಜಯ್ಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಿ.ಕೆ ಶಿವಕುಮಾರ್ ಅವರಿಗೆ ಪ್ರಮಾಣ ವಚನ ಬೋಧನೆ ಮಾಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಿ.ಕೆ ಶಿವಕುಮಾರ್ ಅವರಿಗೆ ಪ್ರಮಾಣ ವಚನ ಬೋಧನೆ ಮಾಡಿದರು. ಡಿ.ಕೆ ಶಿವಕುಮಾರ್ ಅವರು, ಕೈಯಲ್ಲಿ ಸಂವಿಧಾನ ಪ್ರತಿಯನ್ನು ಹಿಡಿದುಕೊಂಡಿದ್ದರು. ನೊಣವಿನ ಕೆರೆಯ ಶ್ರೀ ವೀರಗಂಗಾಧರ ಜಗದ್ಗುರುಗಳು (ಅಜ್ಜಯ್ಯ) ಅವರ ಹೆಸರಿನಲ್ಲಿ ಡಿ.ಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಅವರು ಸಾರ್ವಜನಿಕರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದು ವಿಶೇಷವಾಗಿತ್ತು.

ಆರು ವರ್ಷಗಳ ಕಾಲ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಡಿಸಿಎಂ ಆಗಿ ಕಾರ್ಯನಿರ್ವಹಿಸಿದ ಕನಕಪುರ ಬಂಡೆ ಡಿ.ಕೆ.ಶಿವಕುಮಾರ್ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾವಚನ ಸ್ವೀಕರಿಸಿದ್ದಾರೆ. 18ನೇ ವಯಸ್ಸಿನಲ್ಲಿಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗ ಎನ್ಎಸ್ಯುಐ ಮೂಲಕ ರಾಜಕೀಯ ಪಾದಾರ್ಪಣೆ ಮಾಡಿದ ಶಿವಕುಮಾರ್ ಅತ್ಯಂತ ಕಿರಿಯ ವಯಸ್ಸಿಗೇ ವಿಧಾನ ಸಭೆ ಪ್ರವೇಶಿಸಿದರು. ಮೊದಲ ಬಾರಿ ಶಾಸಕರಾಗಿರುವಾಗಲೇ ಸಚಿವರಾಗಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡವರು.
ಹಿರಿಯ ನಾಯಕ ಎಸ್ ಬಂಗಾರಪ್ಪಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ 29ನೇ ವಯಸ್ಸಿಗೆ ಡಿಕೆಶಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 1989ರಲ್ಲಿ ಆಗ ಇದ್ದ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅನಾರೋಗ್ಯದ ಕಾರಣ ಪದತ್ಯಾಗ ಮಾಡಬೇಕಾಗಿ ಬಂತು. ಅವರು ಉತ್ತರಾಧಿಕಾರಿಯಾಗಿ ಬಂಗಾರಪ್ಪ ಆಯ್ಕೆಯಾದಾಗ ಡಿಕೆಶಿ ಅವರು ಬಂಧೀಖಾನೆ ಖಾತೆ ಸಹಾಯಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಕಷ್ಟ ಕಾಲದಲ್ಲಿ ಹೈ ಕಾಮಾಂಡ್ಗೆ ಆಸರೆಯಾಗಿ, ಗಾಂಧಿ ಪರಿವಾರಕ್ಕೆ ಡಿಕೆಶಿ ಆಪ್ತರಾದವರು. ಇದೇ ಕಾರಣಕ್ಕೆ ಕಾಂಗ್ರೆಸ್ ಹೈ ಕಮಾಂಡ್ ಸೋನಿಯಾ ಗಾಂಧಿ ಕೃಪಕಟಾಕ್ಷ ಡಿಕೆಶಿ ಮೇಲೆ ಸದಾ ಇರುತ್ತದೆ. ಪಕ್ಷದ ಪಾಲಿಗೆ ಆಪ್ತರಕ್ಷಕರಾದ ಡಿಕೆಶಿ ಅವರು ಈ ಕಾರಣದಿಂದಲೇ ರಾಜಕೀಯ ವಿರೋಧಿಗಳಿಗೆ ಟಾರ್ಗೆಟ್ ಸಹ ಹೌದು. ಇದರಿಂದಲೇ ಅವಮಾನ ಎದುರಿಸಿದರೂ ಟ್ರಬಲ್ ಶೂಟಿಂಗ್ನಲ್ಲಿ ಎತ್ತಿದ ಕೈ ಎನ್ನುವುದು ಅಷ್ಟೇ ಸತ್ಯ. ಪಕ್ಷ, ಸಂಘಟನೆಯಲ್ಲಿ ಏನೇ ಸಮಸ್ಯೆ ಎದುರಾದರೂ ಚಾಣಕ್ಯನಂತೆ ಡಿಕೆಶಿ ಸಮಸ್ಯೆ ಬಗೆಹರಿಸುವಲ್ಲಿ ಸದಾ ಮುಂದು.
ಬೆಂಗಳೂರನ್ನು ಸಿಲಿಕಾನ್ ಸಿಟಿ ಮಾಡಿದ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪಾಲಿಗೆ ಡಿಕೆಶಿ ನೀಲಿಗಣ್ಣಿನ ಹುಡುಗ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಪ್ರಭಾವಿ ನಾಯಕನಾಗಿ ಡಿಕೆಶಿ ಬೆಳೆಯಲು ಎಸ್ಎಂಕೆ ಸಹ ಕಾರಣ. ಕೃಷ್ಣ ಅವರು ಮುಖ್ಯಮಂತ್ರಿಯಾಗೋ ಮುನ್ನ ರಾಜ್ಯದಲ್ಲಿ ಆರಂಭಿಸಿದ ಪಾಂಚಜನ್ಯ ಐತಿಹಾಸಿಕ ಯಾತ್ರೆಯನ್ನು ಆಯೋಜಿಸಿದ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಆ ಮೂಲಕ ಪಕ್ಷದಲ್ಲಿ ಅತ್ಯುತ್ತಮ ಸಂಘಟಕ ಎಂಬ ಕೀರ್ತಿಗೂ ಡಿಕೆಶಿ ಪಾತ್ರರಾಗಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮೇಕದಾಟು ಯೋಜನೆಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ಕಾಂಗ್ರೆಸ್ ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಈ 11 ದಿನಗಳ ಪಾದಯಾತ್ರೆಗೆ ಅತ್ಯುತ್ತಮ ಸ್ಪಂದನೆ ಸಿಕ್ಕಿತ್ತು. ಕೋವಿಡ್ ಕಾರಣದಿಂದ ಪಾದಯಾತ್ರೆ ಮೊಟಕು ಗೊಂಡರೂ, ಕಾಂಗ್ರಸ್ಗೆ ಇದು ಬಲ ತುಂಬುವಲ್ಲಿ ಯಶಸ್ವಿಯಾಯಿತು. ಡಿಕೆಶಿ ಪಾದಯಾತ್ರೆ ಆಯೋಜಿಸಿದ ರೀತಿಯೂ ಪ್ರಶಂಸೆಗೆ ಪಾತ್ರವಾಗಿತ್ತು.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಗೆಲವು ಸಾಧಿಸುವಲ್ಲಿ ಡಿಕೆಶಿ ಪಾತ್ರ ಬಹಳ ಮುಖ್ಯವಾಗಿದ್ದರೂ, ತಮ್ಮದೇ ಸರಕಾರದಲ್ಲಿ ಸಂಪುಟದಿಂದ ದೂರವೂ ಉಳಿಯಬೇಕಾಗಿತ್ತು. ಆದರೂ ವಿಚಲತ ಗೊಳ್ಳದೇ ತಮ್ಮ ಟೈಮಿಗಾಗಿ ಕಾದ ಡಿಕೆಶಿಗೆ ಇದೀಗ ಕರುನಾಡ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಇರುವ ಆಂತರಿಕ ರಾಜಕೀಯ ಬಿಕ್ಕಟ್ಟು ಹಾಗೂ ಇತರೆ ಅನೇಕ ಸವಾಲುಗಳು ಇವರ ಮುಂದಿವೆ. ಜೊತೆಗೆ ಬೆಂಗಳೂರಿಗರು ಅನುಭವಿಸುತ್ತಿರುವ ಮೂಲಕ ಸೌಕರ್ಯ ಸಮಸ್ಯೆಗೆ ಹೇಗೆ ಸ್ಪಂದಿಸುತ್ತಾರೆ ಎನ್ನುವ ಕುತೂಹಲ ಸಹಜವಾಗಿಯೇ ಬೆಂಗಳೂರಿಗಿದ್ದು, ಡಿಕೆಶಿ ರಾಜ್ಯಭಾರ ಹೇಗಿರಲಿದೆ ಎಂಬುವುದನ್ನು ಕನ್ನಡಿಗರು ಕುತೂಹಲದಿಂದ ಕಾಯುತ್ತಿದ್ದಾರೆ.













Click it and Unblock the Notifications