ಸ್ಯಾಂಟ್ರೊ ರವಿಯದ್ದು ಆತ್ಮಹತ್ಯೆ ಯತ್ನವೋ, ಕೊಲೆ ಯತ್ನವೋ?
ಸಿಐಡಿ ವಶದಲ್ಲಿದ್ದ ಸ್ಯಾಂಟ್ರೊ ರವಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಬಿಜೆಪಿ ವಿರುದ್ಧ ಟ್ವೀಟ್ ಮಾಡಿದೆ.
ಬೆಂಗಳೂರು, ಜನವರಿ 27; ಸಿಐಡಿ ವಶದಲ್ಲಿದ್ದ ಸ್ಯಾಂಟ್ರೊ ರವಿ ಆರೋಗ್ಯದಲ್ಲಿ ಏರುಪೇರಾಗಿದೆ. ಪೊಲೀಸರು ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಈ ವಿಚಾರ ಮುಂದಿಟ್ಟುಕೊಂಡು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಟ್ವೀಟ್ ಮಾಡಿದೆ. 'ಇದು ಆತ್ಮಹತ್ಯೆ ಯತ್ನವೋ, ಕೊಲೆ ಯತ್ನವೋ?' ಎಂದು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದೆ.
Santro Ravi: ತಪ್ಪಿತಸ್ಥನಾಗಿದ್ದರೆ ಸೂಕ್ತ ಕಾನೂನು ಕ್ರಮ, ಆರಗ ಜ್ಞಾನೇಂದ್ರ
ಶುಕ್ರವಾರ ಟ್ವೀಟ್ ಮಾಡಿರುವ ಪಕ್ಷ, 'ಸ್ಯಾಂಟ್ರೋ ರವಿಯೊಳಗೆ ಅಡಗಿದ್ದ ಬಿಜೆಪಿಗರ ಭಯಂಕರ ಸತ್ಯಗಳನ್ನು ಸಮಾಧಿ ಮಾಡಲು ಹೊರಟಿದೆಯೇ ಸರ್ಕಾರ? ಸಿಐಡಿ ಕಸ್ಟಡಿಯಲ್ಲಿರುವ ಸ್ಯಾಂಟ್ರೋ ರವಿ ಆತ್ಮಹತ್ಯೆಗೆ ಯತ್ನಿಸಿದ್ದಾನಂತೆ' ಎಂದು ಹೇಳಿದೆ.
Santro Ravi : ಸ್ಯಾಂಟ್ರೊ ರವಿಯನ್ನು ಸಿಐಡಿ ವಶಕ್ಕೆ ನೀಡಿದ ಕೋರ್ಟ್
'ಇದು ಆತ್ಮಹತ್ಯೆ ಯತ್ನವೋ, ಕೊಲೆ ಯತ್ನವೋ? ಸ್ಯಾಂಟ್ರೋ ರವಿಯನ್ನು ಮುಗಿಸುವ ಮೂಲಕ ಸರ್ಕಾರದ ರಹಸ್ಯಗಳನ್ನೂ ಮುಗಿಸುವ ಹುನ್ನಾರ ನಡೆದಿದೆಯೇ Basavaraj Bommai ಅವರೇ?' ಎಂದು ಮುಖ್ಯಮಂತ್ರಿಗಳನ್ನು ಕೇಳಿದೆ.
ಸ್ಯಾಂಟ್ರೋ ರವಿಯೊಳಗೆ ಅಡಗಿದ್ದ ಬಿಜೆಪಿಗರ ಭಯಂಕರ ಸತ್ಯಗಳನ್ನು ಸಮಾಧಿ ಮಾಡಲು ಹೊರಟಿದೆಯೇ ಸರ್ಕಾರ?
— Karnataka Congress (@INCKarnataka) January 27, 2023
ಸಿಐಡಿ ಕಸ್ಟಡಿಯಲ್ಲಿರುವ ಸ್ಯಾಂಟ್ರೋ ರವಿ ಆತ್ಮಹತ್ಯೆಗೆ ಯತ್ನಿಸಿದ್ದಾನಂತೆ.
ಇದು ಆತ್ಮಹತ್ಯೆ ಯತ್ನವೋ, ಕೊಲೆ ಯತ್ನವೋ?
ಸ್ಯಾಂಟ್ರೋ ರವಿಯನ್ನು ಮುಗಿಸುವ ಮೂಲಕ ಸರ್ಕಾರದ ರಹಸ್ಯಗಳನ್ನೂ ಮುಗಿಸುವ ಹುನ್ನಾರ ನಡೆದಿದೆಯೇ @BSBommai ಅವರೇ?
'ಪೊಲೀಸ್ ಕಸ್ಟಡಿಯಲ್ಲಿ ಸ್ಯಾಂಟ್ರೋ ರವಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ಸುದ್ದಿ ಬರುತ್ತಿದೆ. Araga Jnanendra ಅವರೇ, ಕಸ್ಟಡಿಯಲ್ಲಿರುವ ಆರೋಪಿಗೆ ರಕ್ಷಣೆ ನೀಡಲು ಸಾಧ್ಯವಾಗದಿರುವುದು ನಿಮ್ಮ ವೈಫಲ್ಯವೇ ಅಥವಾ ಷಡ್ಯಂತ್ರವೇ? ಆತನ ಜೊತೆಗಿರುವ ತಮ್ಮ ವ್ಯವಹಾರಗಳನ್ನು ಮುಚ್ಚಿಕೊಳ್ಳಲು ದಾರಿ ಹುಡುಕುತ್ತಿದ್ದೀರಾ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
Santro Ravi : ಸ್ಯಾಂಟ್ರೊ ರವಿ ಪ್ರಕರಣ ಸಿಐಡಿಗೆ ಹಸ್ತಾಂತರ
ಆಸ್ಪತ್ರೆಗೆ ದಾಖಲು; ಜನವರಿ 17ರಂದು ಸ್ಯಾಂಟ್ರೊ ರವಿಯನ್ನು ಸಿಐಡಿ ವಶಕ್ಕೆ ನೀಡಿ ಮೈಸೂರಿನ ಕೋರ್ಟ್ ಆದೇಶ ಹೊರಡಿಸಿತ್ತು. ಜನವರಿ 30ರ ತನಕ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.
ಮಧುಮೇಹದಿಂದ ಬಳಲುತ್ತಿರುವ ಸ್ಯಾಂಟ್ರೊ ರವಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಗುರುವಾರ ರಾತ್ರಿ ಸಿಐಡಿ ಪೊಲೀಸರು ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಶುಗರ್ ಮಟ್ಟ 400ಕ್ಕೂ ಅಧಿಕವಾಗಿತ್ತು. ಆದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿಯಮಿತ ಮಾತ್ರೆಗಿಂತ ಅಧಿಕ ಮಾತ್ರೆಗಳನ್ನು ಸೇವಿಸಿದ ಅನುಮಾನ ಅಧಿಕಾರಿಗಳಿಗೆ ಇದೆ. ವೈದ್ಯರ ಬಳಿಕ ಈ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹ ಮಾಡಿದ್ದಾರೆ.
ಬಿಪಿ, ಶುಗರ್ ಸೇರಿ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಸ್ಯಾಂಟ್ರೊ ರವಿ ಪೊಲೀಸರ ವಿಚಾರಣೆಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದನಾ? ಎಂಬ ಅನುಮಾನವಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವಿ ಆರೋಗ್ಯ ಸ್ಥಿರವಾಗಿದೆ.
ಸ್ಯಾಂಟ್ರೊ ರವಿ ಆಸ್ಪತ್ರೆಗೆ ದಾಖಲು ಮಾಡಿದ ಹಿನ್ನಲೆಯಲ್ಲಿ ಆಸ್ಪತ್ರೆ ಸುತ್ತ ಬಂದೋಬಸ್ತ್ ಹೆಚ್ಚಿಸಲಾಗಿದೆ. ಕೆಎಸ್ಆರ್ಪಿ ತುಕಡಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಗುಜರಾತ್ನಲ್ಲಿ ಬಂಧನ; ಸ್ಯಾಂಟ್ರೊ ರವಿ ಮೈಸೂರಿನ ವಿಜಯನಗರ ಠಾಣೆಯಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆತನನ್ನು ಪೊಲೀಸರು 11 ದಿನಗಳ ಬಳಿಕ ಗುಜರಾತ್ನಲ್ಲಿ ಬಂಧಿಸಿದ್ದರು. ಬಳಿಕ ಮೈಸೂರಿಗೆ ಕರೆತಂದಿದ್ದರು.
ಕರ್ನಾಟಕ ಸರ್ಕಾರ ಸ್ಯಾಂಟ್ರೊ ರವಿ ವಿರುದ್ಧದ ಎಲ್ಲಾ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಆದ್ದರಿಂದ ಸಿಐಡಿ ಪೊಲೀಸರು ಮೈಸೂರಿನ ಕೋರ್ಟ್ಗೆ ಆರೋಪಿ ಹಾಜರುಪಡಿಸಿ ಆತನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಸ್ಯಾಂಟ್ರೊ ರವಿ ವಿರುದ್ಧ ಪರಿಶಿಷ್ಟ ಮಹಿಳೆ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಗೂಂಡಾಗಿರಿ ಆರೋಪದ ಮೇಲೆ ಮೈಸೂರಿನ ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆತನ ಪತ್ನಿಯೇ ದೂರು ನೀಡಿದ್ದಳು.
ಪೊಲೀಸ್ ಇಲಾಖೆಯಲ್ಲಿನ ವರ್ಗಾವಣೆ ದಂಧೆಯಲ್ಲಿ ಸ್ಯಾಂಟ್ರೊ ರವಿ ತೊಡಗಿದ್ದ. ತನಗೆ ದೊಡ್ಡ ಮಟ್ಟದ ಅಧಿಕಾರಿಗಳು ತಿಳಿದಿದ್ದಾರೆ ಎಂದು ಹಣ ಪಡೆದು ವರ್ಗಾವಣೆ ಮಾಡಿಸುತ್ತಿದ್ದ ಎಂಬ ಆರೋಪವೂ ಇದೆ.
ಸ್ಯಾಂಟ್ರೊ ರವಿ ವಿಚಾರ ಕರ್ನಾಟಕದಲ್ಲಿ ರಾಜಕೀಯ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಇದೇ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರ ಮತ್ತು ಗೃಹ ಸಚಿವರ ವಿರುದ್ಧ ಟೀಕೆಗಳನ್ನು ಮಾಡುತ್ತಿದೆ.