ಪ್ರಾಜೆಕ್ಟ್ ವರ್ಷಧಾರೆ -ಮೋಡ ಬಿತ್ತನೆಗೆ ಆರಂಭ ವಿಘ್ನ
Recommended Video

ಬೆಂಗಳೂರು, ಆಗಸ್ಟ್ 23: 'ಪ್ರಾಜೆಕ್ಟ್ ವರ್ಷಧಾರೆ' ಹೆಸರಿನಲ್ಲಿ ಕರ್ನಾಟಕ ಸರ್ಕಾರದ ಬಹುಕೋಟಿ ವೆಚ್ಚದ ಮೋಡ ಬಿತ್ತನೆ ಕಾರ್ಯ ಆರಂಭವಾಗಿದೆ.
ಆದರೆ, ಈ ಯೋಜನೆಗೆ ಆರಂಭಿಕ ವಿಘ್ನಗಳು ಎದುರಾಗಿವೆ. ಈ ಹಿಂದೆ ವೈಫಲ್ಯ ಕಂಡಿರುವ ಇತಿಹಾಸವನ್ನು ಹೊತ್ತುಕೊಂಡು ವಿಮಾನ ಹಾರಾಡುತ್ತಿದೆ.
ಮೊದಲ ದಿನವಾದ ಸೋಮವಾರ ಸಂಜೆ ತುಂಬಾ ಉತ್ಸಾಹದಿಂದ ರಾಮನಗರ, ಮಾಗಡಿ ಮತ್ತು ಆನೇಕಲ್ ಭಾಗದಲ್ಲಿ ಕೆಲಹೊತ್ತು ಮೋಡ ಬಿತ್ತನೆ ಕಾರ್ಯ ನಡೆಸಲಾಯಿತು.
ಆದರೆ, ಮಂಗಳವಾರ ಹಾಗೂ ಬುಧವಾರದಂದು ಮೋಡಗಳ ಸಾಂದ್ರತೆಯ ಚಿತ್ರ ಮತ್ತು ಮಾಹಿತಿಯನ್ನು ನೀಡಬೇಕಿದ್ದ ರೆಡಾರ್ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಮೋಡ ಬಿತ್ತನೆ ವಿಳಂಬವಾಗಿದೆ.

35.77 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಮೋಡ ಬಿತ್ತನೆ ನಡೆಸುತ್ತಿದೆ. ಅಂದುಕೊಂಡತೆ ನಡೆದಿದ್ದರೆ ಆಗಸ್ಟ್ ಮೊದಲ ವಾರದಲ್ಲೇ ಮೋಡ ಬಿತ್ತನೆ ಆರಂಭವಾಗಬೇಕಿತ್ತು. ಆದರೆ, ಕೇಂದ್ರದಿಂದ ವಿವಿಧ ಪರವಾನಗಿಗಳನ್ನು ಪಡೆಯಲು ವಿಳಂಬವಾಗಿದ್ದರಿಂದ ತಡವಾಗಿ ಮೋಡ ಬಿತ್ತನೆ ಆರಂಭವಾಗುತ್ತಿದೆ.
ಮಳೆ ಬರುವ ಮೋಡಗಳಿಗೆ ಮೋಡ ಬಿತ್ತನೆ ಮಾಡುವುದರಿಂದ ಒಟ್ಟಾರೆ ಶೇಕಡಾ 10ರಷ್ಟು ಮಳೆ ಪ್ರಮಾಣ ಹೆಚ್ಚಾಗಬಹುದು ಎಂದುಕೊಳ್ಳಲಾಗಿದೆ.
ಒಟ್ಟು 60 ದಿನಗಳ ಕಾಲ ರಾಜ್ಯದಲ್ಲಿ ಮೋಡ ಬಿತ್ತನೆ ನಡೆಯಲಿದೆ. ಹೊಯ್ಸಳ ಸಂಸ್ಥೆಗೆ ಈ ಮೋಡ ಬಿತ್ತನೆ ಟೆಂಡರ್ ಪಡೆದಿದ್ದು 300 ಗಂಟೆ ಬಿತ್ತನೆ ನಡೆಸಲಿದೆ. ಗುರುವಾರದ ಬಳಿಕ ಎಚ್ಎಎಲ್ ವಿಮಾನ ನಿಲ್ದಾಣದಿಂದ ಮೋಡ ಬಿತ್ತನೆ ವಿಮಾನ ಹಾರಾಟ ಆರಂಭಿಸಲಿದೆ.
BQ-100 Beechcraft ವಿಮಾನದಲ್ಲಿ ಕುಳಿತು ಪಂಚಾಯತ್ ರಾಜ್ ಸಚಿವ ಎಚ್ ಕೆ ಪಾಟೀಲ್ ಹಾಗೂ ಕೃಷಿ ಸಚಿವ ಕೃಷ್ಣಭೈರೇಗೌಡ ಅವರು ಮೋಡ ಬಿತ್ತನೆ ಕಾರ್ಯವನ್ನು ವೀಕ್ಷಿಸಿದ್ದಾರೆ.
ಸುಮಾರು 50 ರಾಷ್ಟ್ರಗಳಲ್ಲಿ ಈ ಮೋಡ ಬಿತ್ತನೆ ತಂತ್ರಜ್ಞಾನ ಬಳಕೆಯಲ್ಲಿದೆ. ಕರ್ನಾಟಕದಲ್ಲಿ ಬರ ಪರಿಸ್ಥಿತಿಯಿಂದ ಸುಮಾರು 15,000 ಕೋಟಿ ರು ನಷ್ಟವಾಗಿದೆ. ಸರ್ಕಾರ ಸುಮಾರು 7,000 ಕೋಟಿ ರು ಬರ ಪರಿಹಾರ ಹಾಗೂ ನಿಯಂತ್ರಣ ಕಾರ್ಯಕ್ಕೆ ವಿನಿಯೋಗಿಸುತ್ತಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಹೇಳಿದರು.












Click it and Unblock the Notifications