ಮೆಹುಲ್ ಚೊಕ್ಸಿ ಪರಾರಿಗೆ ನೆರವಾಗಿದ್ದ ಸಿದ್ದರಾಮಯ್ಯ: ಬಿಎಸ್ವೈ ಆರೋಪ
ಬೆಂಗಳೂರು, ಫೆಬ್ರವರಿ 20: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ನ ಬಹುಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಮೆಹುಲ್ ಚೊಕ್ಸಿ ಜತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಂಟೇನು? ಚೊಕ್ಸಿ ಅವ್ಯವಹಾರದ ಬಗ್ಗೆ ತಿಳಿದಿದ್ದರೂ ಸಿದ್ದರಾಮಯ್ಯ ಸುಮ್ಮನಿದ್ದರೇ? ಚೊಕ್ಸಿ ಪರಾರಿಗೆ ನೆರವಾದರೆ? ಹೀಗೊಂದು ಸಂಶಯ ಎದುರಾಗಿದ್ದು, ಈ ಬಗ್ಗೆ ಬಿಜೆಪಿ ಪ್ರಶ್ನೆಗಳ ಸುರಿಮಳೆ ಹರಿಸಿದೆ.
ಉದ್ಯಮಿ ಮೆಹುಲ್ ಚೊಕ್ಸಿ ಅವರ ಅವ್ಯವಹಾರದ ಬಗ್ಗೆ 2015ರಲ್ಲೆ ಕಾಂಗ್ರೆಸ್ ಸರ್ಕಾರಕ್ಕೆ ತಿಳಿದಿತ್ತು. ಆದರೆ, ಅವರನ್ನು ರಕ್ಷಿಸುವಲ್ಲಿ ಕಾಂಗ್ರೆಸ್ ಮಹತ್ವದ ಪಾತ್ರ ವಹಿಸಿದೆ. ಈ ಬಗ್ಗೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರು ಉತ್ತರಿಸಲಿ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಪ್ರಶ್ನಿಸಿದ್ದಾರೆ.
ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಕೂಡಾ ಇದೇ ಪ್ರಶ್ನೆಯನ್ನು ಎತ್ತಿದ್ದಾರೆ. ಸಿದ್ದರಾಮಯ್ಯ ಅವರದ್ದು 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕರೆದಿರುವ ಯಡಿಯೂರಪ್ಪ ಅವರು ಮೆಹುಲ್ ಚೊಕ್ಸಿ ಹಗರಣದ ಬಗ್ಗೆ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನಡುವಿನ ಟ್ವಿಟ್ಟರ್ ಸಮರ ಇನ್ನೂ ನಿಂತಿಲ್ಲ. ಈ ವರ್ಷ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೇಂದ್ರದ ಘಟಾನುಘಟಿ ನಾಯಕರೆಲ್ಲ ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಸಮರ ಕೂಡಾ ಸಾರಿದ್ದಾರೆ.
ಕಾಂಗ್ರೆಸ್ಸಿಗೆ ಬಿಜೆಪಿಯಿಂದ ಪ್ರಶ್ನೆ
ಮೆಹುಲ್ ಚೊಕ್ಸಿ ಅವ್ಯವಹಾರದ ಬಗ್ಗೆ ಸ್ಥಳೀಯ ಪೊಲೀಸರಿಂದ ತನಿಖೆ ನಡೆಸಿ ಪ್ರಕರಣವನ್ನು ಕೈ ಬಿಡಲಾಯಿತು. ಜಾರಿ ನಿರ್ದೇಶನಾಲಯ, ಸಿಬಿಐಗೆ ಸಲ್ಲಿಸುವುದಾಗಿ ಹೇಳಿದ್ದ ಕರ್ನಾಟಕ ಸರ್ಕಾರ, ನಂತರ ಯೂ ಟರ್ನ್ ಹೊಡೆಯಿತು. ಈ ಮೂಲಕ ಚೊಕ್ಸಿಗೆ ರಕ್ಷಣೆ ನೀಡಿದೆ ಎಂದು ಸಂಬೀತ್ ಪಾತ್ರ ಆರೋಪಿಸಿದ್ದಾರೆ.
ಚೊಕ್ಸಿ ಹಗರಣ ಟ್ಯಾಗ್ ಬಳಸಿ ಟ್ವೀಟ್
ಚೊಕ್ಸಿ ಹಗರಣ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು, ಸಂವಿಧಾನ ಪಾರಂಗತ ಸಿದ್ದರಾಮಯ್ಯನವರೇ, ಪಲಾಯನವಾದ ಬಿಟ್ಟು ಚೊಕ್ಸಿ ಹಗರಣ, ಚೊಕ್ಸಿ ರಕ್ಷಣೆ ಬಗ್ಗೆ ಜನರಿಗೆ ಉತ್ತರ ಕೊಡಿ ಎಂದು ಕೇಳಿದ್ದಾರೆ. ಬಿಜೆಪಿಯವರು ಸಂವಿಧಾನವನ್ನು ತಿದ್ದಲು ಮುಂದಾಗಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳುವುದರಿಂದ ಅವರನ್ನು 'ಸಂವಿಧಾನ ಪಾರಂಗತ' ಎಂದು ಇಲ್ಲಿ ಸಂಬೋಧಿಸಿದ್ದಾರೆ.
ಚೊಕ್ಸಿ ಅವರನ್ನು ಪರಾರಿಯಾಗಲು ಬಿಟ್ತಿದ್ದು ಯಾರು?
ಮೈಸೂರಿನಲ್ಲಿ ಹುಲಿಗಳು ಹುಟ್ಟಿದ್ದು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ, ನಾಡನ್ನು ಕಟ್ಟಿ ಬೆಳೆಸಿದೆ, ಮೋದಿ ಅವರು ಮೈಸೂರಿನವರಿಗೆ ಅಪಮಾನ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಅವರು ಮಾಡಿದ್ದ ಟ್ವೀಟ್ ಗೆ ಉತ್ತರಿಸಿ, ಚೊಕ್ಸಿ ಅವರನ್ನು ಪರಾರಿಯಾಗಲು ಬಿಟ್ಟ ವಿಶೇಷ ಚೌಕಿದಾರ ಸಿದ್ದರಾಮಯ್ಯ ಅವರೇ ಇದೇನಾ ನಿಮ್ಮ 10 ಪರ್ಸೆಂಟ್ ಸರ್ಕಾರ ಎಂದು ಬಿಎಸ್ ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
|
ಚೊಕ್ಸಿ ವಿರುದ್ಧ ಜಾಮೀನು ರಹಿತ ವಾರೆಂಟ್ ಇತ್ತು
ಮೆಹುಲ್ ಚೊಕ್ಸಿ ವಿರುದ್ಧ ಬೆಂಗಳೂರಿನ ಕೋರ್ಟಿನಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಸುಮ್ಮನಿದ್ದು ಬಿಟ್ಟಿತು.