ನಾನೇ ಮುಂದಿನ ಸಿಎಂ ಎಂದು ವಿಧಾನಸೌಧದಲ್ಲಿ ಓಡಾಡುತ್ತಿರುವವರು ಯಾರು?
ಬೆಂಗಳೂರು, ಜೂನ್ 7: ನಾಯಕತ್ವ ಬದಲಾವಣೆ ಮಾಡುವ ಇಂಗಿತ ದೆಹಲಿಯ ವರಿಷ್ಠರಿಗೆ ಇದೆಯೋ, ಇಲ್ಲವೋ, ಆದರೆ, ರಾಜಾಧಾನಿಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಳ್ಳಲಾರಂಭಿಸಿದೆ.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು, ಯಡಿಯೂರಪ್ಪನವರೇ ನಮ್ಮ ನಾಯಕರು ಎಂದು ಸಹಿ ಸಂಗ್ರಹಿಸಿರುವ ವಿಚಾರ, ಬಿಜೆಪಿಯೊಳಗೆ ಸಂಚಲನವನ್ನು ಮೂಡಿಸಿದೆ. ಸಹಿ ಸಂಗ್ರಹದ ಬಗ್ಗೆ ಕೆಲವು ಸಚಿವರು ಅಸಮಾಧಾನವನ್ನೂ ವ್ಯಕ್ತ ಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ರೇಣುಕಾಚಾರ್ಯ, "ಕೆಲವರು ನಾವೇ ಮುಂದಿನ ಮುಖ್ಯಮಂತ್ರಿಯೆಂದು, ಜೇಬಿನಲ್ಲಿ ಚೀಟಿ ಇಟ್ಟುಕೊಂಡು, ವಿಧಾನಸೌಧದ ಒಳಗೆ ಹೊರಗೆ ಓಡಾಡುತ್ತಿದ್ದಾರೆ"ಎಂದು ಅರವಿಂದ್ ಬೆಲ್ಲದ್ ಅವರ ಹೆಸರನ್ನು ಉಲ್ಲೇಖಿಸದೇ ಟೀಕಿಸಿದ್ದಾರೆ.

"ನಾನು ಸಣ್ಣ ಮನುಷ್ಯ, ಅವರು ದೊಡ್ಡ ಮನುಷ್ಯರು, ಅವರ ಮುಂದೆ ನಾನೇನೂ ಅಲ್ಲ, ಅವರು ಕಣ್ಣು ತೆರೆದರೆ ಭಷ್ಮವಾಗಿ ಬಿಡುತ್ತೇನೆ. ಪಕ್ಕದ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯ ಅವರಿಗೆ ಇದೆಯೇ'ಎಂದು ವ್ಯಂಗ್ಯವಾಗಿ ರೇಣುಕಾಚಾರ್ಯ ಅವರು ಬೆಲ್ಲದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ನೂರಾರು ಪಾದಯಾತ್ರೆ, ಸಾವಿರಾರು ಹೋರಾಟಗಳನ್ನು ಮಾಡಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾರೆಯೇ ವಿನಃ, ಯಾರದೋ ಹೆಸರಿನಲ್ಲಿ ಗೆದ್ದು ಬಂದು ಸಿಎಂ ಆಗಿಲ್ಲ"ಎಂದು ರೇಣುಕಾಚಾರ್ಯ ಅವರು ಸಿಎಂ ಮೇಲಿನ ನಿಯತ್ತನ್ನು ಮುಂದುವರಿಸಿದ್ದಾರೆ.
"ಒಂದು ಸಲ, ಎರಡು ಸಲ ಶಾಸಕರಾದವರು ಈಗ ಮಾತನಾಡುತ್ತಾರೆ. 150ಸ್ಥಾನವನ್ನು ಗೆದ್ದು ಬಂದು ತೋರಿಸಲಿ. ನಾನೇ, ಅವರಿಗೆ ಮುಖ್ಯಮಂತ್ರಿಯಾಗಲು ಬೆಂಬಲ ಸೂಚಿಸುತ್ತೇನೆ. ಈ ಆಟ ಎಲ್ಲಾ ಬಿಟ್ಟುಬಿಡಪ್ಪಾ"ಎಂದು ರೇಣುಕಾಚಾರ್ಯ ಅವರು ಅರವಿಂದ್ ಬೆಲ್ಲದ್ ಅವರಿಗೆ ಸವಾಲು ಹಾಕಿದ್ದಾರೆ.












Click it and Unblock the Notifications