ಮಾಂಸಾಹಾರ ಸ್ಟಾಲ್ ವಿವಾದ: ಗುಜರಾತ್ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ
ಅಹ್ಮದಾಬಾದ್, ನವೆಂಬರ್ 14: ಗುಜರಾತಿನ ವಡೋದರಾದಲ್ಲಿ ಮಾಂಸಾಹಾರಿ ಆಹಾರವನ್ನು ಮುಕ್ತವಾಗಿ ಮಾರಾಟ ಮಾಡುವುದನ್ನು ನಿಷೇಧ ಮಾಡಲಾಗಿದೆ. ಈ ನಡುವೆ ರಾಜಕೋಟ್ ಹಾಗೂ ಭಾವನನಗರದಲ್ಲಿಯೂ ಇದೇ ಆದೇಶವನ್ನು ಹೊರಡಿಸಲಾಗಿದೆ. ಈ ಬೆನ್ನಲ್ಲೇ ಈ ಮಾಂಸಾಹಾರಿ ಆಹಾರದ ವಿಚಾರದಲ್ಲೇ ಗುಜರಾತ್ ಬಿಜೆಪಿಯ ನಡುವೆ ಬಿರುಕು ಉಂಟಾಗಿದೆ.
ಮಾಂಸಾಹಾರಿ ಆಹಾರವನ್ನು ಮಾರಾಟ ಮಾಡುವ ಬೀದಿ ಬದಿ ಆಹಾರ ಅಂಗಡಿಗಳ ಮೇಲೆ ದಂಡ ವಿಧಿಸುವ ಕ್ರಮವನ್ನು ಕೈಗೊಳ್ಳಲು ಗುಜರಾತ್ನ ಕನಿಷ್ಠ ಮೂರು ಬಿಜೆಪಿ ಆಡಳಿತದ ನಾಗರಿಕ ಸಂಸ್ಥೆಗಳ ರಾಜಕೀಯ ಕಾರ್ಯಕಾರಿಣಿಗಳ ನಿರ್ಧಾರವು ಬಿಜೆಪಿ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯವನ್ನು ಸೃಷ್ಟಿ ಮಾಡಿದೆ.
ಇನ್ನು ಈ ನಡುವೆ ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಷನ್ನಲ್ಲಿಯೂ ಅಧಿಕಾರಿಯೊಬ್ಬರು ಮಾಂಸಾಹಾರಿ ಬಂಡಿಗಳನ್ನು ತೆಗೆದುಹಾಕಲು ಸೂಚನೆ ನೀಡಿದ್ದಾರೆ. ಬೀದಿ ಬದಿಯಲ್ಲಿ ಮಾಂಸಾಹಾರ ಮಾರಾಟ ಮಾಡುವವರ ಆಹಾರ ಬಂಡಿಗಳನ್ನು ತೆಗೆದು ಹಾಕಲು ಕ್ರಮ ಕೈಗೊಂಡಿದ್ದಾರೆ. ಆದರೆ ಈ ವಿಚಾರದಲ್ಲಿ ರಾಜ್ಯ ಬಿಜೆಪಿಯಲ್ಲಿ ಭಾರೀ ಸಂಚಲನ ಮೂಡಿದೆ. ಬಿಜೆಪಿ ರಾಜ್ಯ ಮುಖ್ಯಸ್ಥ ಸಿಆರ್ ಪಾಟೀಲ್, "ವೈಯಕ್ತಿಕ ನಂಬಿಕೆಗಳ" ಆಧಾರದ ಮೇಲೆ ಪ್ರಕಟಣೆಯನ್ನು ಹೊರಡಿಸುವುದು ನಿಲ್ಲಿಸಿ ಎಂದು ನಾಗರಿಕ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಮುಖ್ಯಸ್ಥ ಸಿಆರ್ ಪಾಟೀಲ್, "ನಾನು ವಡೋದರಾ ಹಾಗೂ ರಾಜಕೋಟ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಬೀದಿ ಬದಿಯಲ್ಲಿ ಇರುವ ಮಾಂಸಹಾರ ಅಂಗಡಿಗಳನ್ನು ತೆರವು ಮಾಡದಂತೆ ತಿಳಿಸಿದ್ದೇನೆ. ಇದು ಓರ್ವ ಬಿಜೆಪಿ ನಾಯಕನ ವೈಯಕ್ತಿಕ ನಿರ್ಧಾರ. ಬಿಜೆಪಿ ರಾಜ್ಯ ನಾಯಕತ್ವಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಾವು ರಾಜ್ಯಾದ್ಯಂತ ಈ ನಿರ್ಧಾರವನ್ನು ಕೈಗೊಂಡಿಲ್ಲ. ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದು ಬಿಜೆಪಿ ರಾಜ್ಯ ನಾಯಕತ್ವದ ನಿರ್ಧಾರವಲ್ಲ. ನಾವು ರಾಜ್ಯದಲ್ಲಿ ಈ ಆದೇಶವನ್ನು ನೀಡುವುದಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
ಆದೇಶ ಏನು ಹೇಳುತ್ತದೆ?
ರಸ್ತೆಗಳಲ್ಲಿ ಮಾಂಸಾಹಾರ ಮಾರಾಟವನ್ನು ನಿಷೇಧಿಸುವಂತೆ ಎಎಂಸಿ ಕಂದಾಯ ಸಮಿತಿ ಅಧ್ಯಕ್ಷ ಜೈನಿಕ್ ವಕೀಲ್ ಶನಿವಾರ ಪಾಲಿಕೆ ಆಯುಕ್ತರು ಮತ್ತು ಸ್ಥಾಯಿ ಸಮಿತಿಗೆ ಪತ್ರ ಬರೆದಿದ್ದಾರೆ. "ನಾವು ಗುಜರಾತ್ನ ಒಂದು ನಿಲುವು ಹಾಗೂ ಕರ್ಣಾವತಿ (ಅಹಮದಾಬಾದ್) ನಗರದ ಸಾಂಸ್ಕೃತಿಕ ಸಂಪ್ರದಾಯವನ್ನು ಗಮನದಲ್ಲಿಟ್ಟುಕೊಂಡು ನಾವು ಮಾಂಸ, ಕುರಿಮರಿ ಮತ್ತು ಮೀನುಗಳನ್ನು ಸಾರ್ವಜನಿಕವಾಗಿ ಮಾರಾಟ ಮಾಡುತ್ತಿರುವುದನ್ನು ನಾವು ನಿಷೇಧ ಮಾಡಲಾಗುತ್ತದೆ. ನಗರದ ಸಾರ್ವಜನಿಕ ರಸ್ತೆಗಳು, ಧಾರ್ಮಿಕ ಮತ್ತು ಶೈಕ್ಷಣಿಕ ಸ್ಥಳಗಳಲ್ಲಿ ಮಾಂಸಾಹಾರಿ ಆಹಾರದ ಗಾಡಿಗಳನ್ನು ಕೂಡಲೇ ತೆರವು ಮಾಡಬೇಕಾಗುತ್ತದೆ. ಅಲ್ಲದೆ, ಸ್ವಚ್ಛತೆ, ಜೀವನ ಮತ್ತು ನಮ್ಮ ಸಂಸ್ಕೃತಿಯನ್ನು ಪಾಲಿಸುವುದು ಹಾಗೂ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ," ಎಂದು ಈ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.
ಈ ಆದೇಶದ ವಿರುದ್ಧ ಬಿಜೆಪಿ ಸದಸ್ಯದರ ಆಕ್ರೋಶ
ಇನ್ನು ಈ ಬಗ್ಗೆ ಮಾತನಾಡಿದ ಮಾಜಿ ಬಿಜೆಪಿ ಐಟಿ ಸೆಲ್ ಅಧ್ಯಕ್ಷ ನಂದಿತಾ ಠಾಕೂರ್, "ಹಲವಾರು ಮಂದಿ ತಮ್ಮ ಜೀವನವನ್ನು ಸಾಗಿಸಲು ಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಸಾಹೇಬರು ಸಸ್ಯಹಾರಿ. ಆದರೆ ಮಾಂಸಹಾರಕ್ಕೆ ನಿಷೇಧ ಹೇರಿಲ್ಲ. ತಾನು ಮುಖ್ಯಮಂತ್ರಿ ಆಗಿದ್ದಾಗಲೂ ಹಾಗೂ ಪ್ರಧಾನ ಮಂತ್ರಿ ಆಗಿದ್ದಾಗಲೂ ಈ ಮಾಂಸಹಾರ ನಿಷೇಧದ ಕ್ರಮ ಕೈಗೊಂಡಿಲ್ಲ. ಜನರು ತಮ್ಮ ಜೀವನ ಸಾಗಿಸಲು ಬೇಕಾದ ಕೆಲಸವನ್ನು ಮಾಡಲು ಅವಕಾಶ ಇರಬೇಕು," ಎಂದು ಹೇಳಿದ್ದಾರೆ. ವಡೋದರಾದ ಬಿಜೆಪಿಯ ಹಿರಿಯ ಚುನಾಯಿತ ಪ್ರತಿನಿಧಿಯೊಬ್ಬರು, "ನಾನು ಸಸ್ಯಾಹಾರಿ, ಆದರೂ ನಾನು ಈ ನಿರ್ಧಾರವನ್ನು ಒಪ್ಪಲ್ಲ. ಮಾಂಸಾಹಾರಿ ಆಹಾರವನ್ನು ಮಾರಾಟ ಮಾಡುವ ಮಳಿಗೆಗಳು ಕೆಲವು ಕುಟುಂಬಗಳಿಗೆ ಜೀವನಾಧಾರವಾಗಿದೆ. ನಾವು ಹೇಗೆ ಒಬ್ಬರ ಆಹಾರದ ವಿರುದ್ಧ ದಬ್ಬಾಳಿಗೆ ಮಾಡಲು ಸಾಧ್ಯ. ನೈರ್ಮಲ್ಯ ಇರಬೇಕು ಎಂಬುವುದು ಬೇರೆ ವಿಚಾರ, ಆದರೆ ಈ ರೀತಿಯ ಆದೇಶ ಸರಿಯಲ್ಲ," ಎಂದು ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications