ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ
T20 World Cup Final 2026: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ (ಮಾರ್ಚ್ 8) ನಡೆಯುವ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ-ನ್ಯೂಜಿಲ್ಯಾಂಡ್ ಮುಖಾಮುಖಿಯಾಗಲಿವೆ. ಈ ಕ್ಷಣಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಈ ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿಯಾದ್ರೆ ಏನಾಗಲಿದೆ ಎನ್ನುವ ಕುತೂಹಲ ಬಹುತೇಕ ಮಂದಿಯ ತಲೆಯಲ್ಲಿದೆ. ಹಾಗಾದ್ರೆ, ಇದೆಲ್ಲದಕ್ಕೂ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 8ರ ಭಾನುವಾರ ಸಂಜೆ 7 ಗಂಟೆಗೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಮೂರನೇ ಬಾರಿ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯಲಿದೆ.

ಟ್ರೋಫಿ ಗೆಲ್ಲುವ ಭರವಸೆಯಲ್ಲಿ ಭಾರತ
ಭಾರತ ತಂಡವು ಈಗಾಗಲೇ ಎರಡು ಬಾರಿ ಟಿ20 ವಿಶ್ವಕಪ್ ಕಿರೀಟವನ್ನು ತಮ್ಮದಾಗಿಸಿಕೊಂಡಿದೆ. 2007ರಲ್ಲಿ ಎಂ.ಎಸ್.ಧೋನಿ ನಾಯಕತ್ವದಲ್ಲಿ ಚೊಚ್ಚಲ ಟ್ರೋಫಿ ಗೆದ್ದರೆ, 2024ರಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಎರಡನೇ ಬಾರಿ ಚಾಂಪಿಯನ್ ಆಗಿತ್ತು. ಇದೀಗ 2026ರಲ್ಲಿ ಮತ್ತೆ ಫೈನಲ್ ಪ್ರವೇಶಿಸಿರುವ ಭಾರತ ಮತ್ತೊಮ್ಮೆ ಟ್ರೋಫಿ ಗೆಲ್ಲುವ ಭರವಸೆಯಲ್ಲಿದೆ.
ಮತ್ತೊಂದೆಡೆ, ನ್ಯೂಜಿಲೆಂಡ್ ತಂಡ ಈವರೆಗೆ ಒಂದೇ ಒಂದು ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಬಾರಿ ಚೊಚ್ಚಲ ವಿಶ್ವಕಪ್ ಕಿರೀಟವನ್ನು ತಮ್ಮದಾಗಿಸಿಕೊಳ್ಳುವ ಭರವಸೆಯಲ್ಲಿ ಕಿವೀಸ್ ಕಣಕ್ಕಿಳಿಯುತ್ತಿದೆ. ಸೆಮಿಫೈನಲ್ನಲ್ಲಿ ಟೀಂ ಇಂಡಿಯಾ ಆಂಗ್ಲರನ್ನು ಮಣಿಸಿ ಫೈನಲ್ ತಲುಪಿದರೆ, ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಅಂತಿಮ ಹಂತಕ್ಕೆ ಪ್ರವೇಶಿಸಿದೆ.
ಮಳೆ ಅಡ್ಡಿಯಾದರೆ ಏನು ಮಾಡಲಾಗುತ್ತದೆ?
ಒಂದು ವೇಳೆ ನಾಳೆ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಏನು ಮಾಡಬೇಕು ಎಂಬುದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸ್ಪಷ್ಟ ನಿಯಮಗಳನ್ನು ಹೊಂದಿದೆ. ಭಾನುವಾರದ ಪಂದ್ಯಕ್ಕೆ ಮಳೆ ಅಡ್ಡಿಯಾದ್ರೆ, ಫಲಿತಾಂಶಕ್ಕಾಗಿ ಎರಡೂ ತಂಡಗಳು ಕನಿಷ್ಠ 10 ಓವರ್ ಬ್ಯಾಟಿಂಗ್ ಮಾಡಬೇಕು. ಸಾಮಾನ್ಯ ಟಿ20 ಪಂದ್ಯಗಳಲ್ಲಿ ಕನಿಷ್ಠ 5 ಓವರ್ಗಳು ಸಾಕಾದರೂ, ವಿಶ್ವಕಪ್ ಫೈನಲ್ನಂತಹ ಮಹತ್ವದ ಪಂದ್ಯಗಳಿಗೆ ಐಸಿಸಿ ಈ ಮಿತಿಯನ್ನು 10 ಓವರ್ಗಳಿಗೆ ಹೆಚ್ಚಿಸಿದೆ.
ಮೀಸಲು ದಿನ ಪಂದ್ಯ ರದ್ದಾದ್ರೆ ಐಸಿಸಿ ನಿಲುವೇನು?
ಭಾನುವಾರ ಪಂದ್ಯ ಪೂರ್ಣ ಮುಗಿಯದಿದ್ದರೆ, ಮಾರ್ಚ್ 9ರ ಸೋಮವಾರವನ್ನು ಮೀಸಲು ದಿನವಾಗಿ ನಿಗದಿಪಡಿಸಲಾಗಿದೆ. ಮೊದಲ ದಿನ ಪಂದ್ಯ ಎಲ್ಲಿಗೆ ನಿಂತಿರುತ್ತದೆಯೋ, ಅಲ್ಲಿಂದಲೇ ಮರುದಿನ ಆಟವನ್ನು ಮುಂದುವರಿಸಲಾಗುತ್ತದೆ. ಒಂದು ವೇಳೆ ಮೀಸಲು ದಿನದಲ್ಲೂ ಮಳೆಯಿಂದ ಪಂದ್ಯ ನಡೆಯದಿದ್ದರೆ, ಐಸಿಸಿ ನಿಯಮಗಳ ಪ್ರಕಾರ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಜಂಟಿ ಚಾಂಪಿಯನ್ಗಳೆಂದು ಘೋಷಣೆ ಮಾಡಲಾಗುತ್ತದೆ. ಅಂದರೆ, ಟ್ರೋಫಿಯನ್ನು ಎರಡೂ ತಂಡಗಳು ಹಂಚಿಕೊಳ್ಳಬೇಕಾಗುತ್ತದೆ. ಆದರೆ ಅಹಮದಾಬಾದ್ ಹವಾಮಾನ ಇಲಾಖೆಯ ಮಾಹಿತಿಯಂತೆ ಭಾನುವಾರ ಮಳೆಯ ಸಾಧ್ಯತೆ ಕಡಿಮೆ ಇದ್ದು, ಮೋಡ ಕವಿದ ವಾತಾವರಣ ಇದ್ದರೂ ಸಂಪೂರ್ಣ ಪಂದ್ಯ ನಡೆಯುವ ನಿರೀಕ್ಷೆಯಿದೆ. ಮಳೆ ಬಾರದೆ, ಪಂದ್ಯ ಪೂರ್ಣವಾಗಿ ನಡೆಯಬೇಕು ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.












Click it and Unblock the Notifications