Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್
Bengaluru Home: ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಒಂಟಿ ಮನೆ ಯೋಜನೆ ವಿಚಾರದಲ್ಲಿ ಗುಡ್ನ್ಯೂಸ್ ಕೊಟ್ಟಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಒಂಟಿ ಮನೆ ಯೋಜನೆ (BBMP Onti Mane Yojane) ಬೆಂಗಳೂರಿನಲ್ಲಿ ಸ್ವಂತ ನಿವೇಶನ ಇಲ್ಲದ, ಆರ್ಥಿಕವಾಗಿ ಹಿಂದುಳಿದ ವರ್ಗಗಳು (SC/ST/OBC/ಅಲ್ಪಸಂಖ್ಯಾತರು) ಮತ್ತು ಬಡ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ಪ್ರಾಧಿಕಾರದಿಂದ 4.5 ಲಕ್ಷ ರೂಪಾಯಿಯ ವರೆಗೆ ಆರ್ಥಿಕ ನೆರವು ಅಥವಾ ಸಹಾಯಧನ ನೀಡುವ ಜನಪರ ವಸತಿ ಯೋಜನೆಯಾಗಿದೆ.
ಬಡವರಿಗೆ ತಮ್ಮ ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ನೆರವಾಗುವುದು, ಪ್ರತಿ ಫಲಾನುಭವಿಗೆ ಅಂದಾಜು 4.5 ಲಕ್ಷದವರೆಗೆ ಸಹಾಯಧನ (ಅನುದಾನ) ಲಭ್ಯ ಇದರಲ್ಲಿ ಸಿಗಲಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು, ಸ್ವಂತ ನಿವೇಶನ (ಜಾಗ) ಹೊಂದಿರಬೇಕು ಮತ್ತು ಹಿಂದುಳಿದ/ಬಡ ವರ್ಗಕ್ಕೆ ಸೇರಿರಬೇಕು ಎನ್ನುವುದು ಈ ಯೋಜನೆಗೆ ಇರುವ ಪ್ರಮುಖ ಷರತ್ತುಗಳಾಗಿವೆ.

ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಒಂಟಿ ಮನೆ ಯೋಜನೆಗೆ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಕೂಡಲೇ ಅನುದಾನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು. ತಿಂಗಳಾಂತ್ಯದೊಳಗಾಗಿ ಆಯ್ಕೆಯಾದ ಎಲ್ಲರಿಗೂ ಕಾರ್ಯದೇಶ ನೀಡಿ ಕೆಲಸ ಪ್ರಾರಂಭಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ನಿರ್ದೇಶನ ನೀಡಿದ್ದಾರೆ.
ವಿಶೇಷ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್ ಅವರು ಮಾತನಾಡಿ, ಜಿಬಿಎ ವ್ಯಾಪ್ತಿಯಲ್ಲಿ 27,585 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ತಂತ್ರಾಂಶದಲ್ಲಿ ಎಲ್ಲಾ ಬೀದಿ ಬದಿ ವ್ಯಾಪಾರಿಗಳ ಸಂಪೂರ್ಣ ಮಾಹಿತಿ ಲಭ್ಯವಿದೆ. ಶೀಘ್ರದಲ್ಲೇ ಹೊಸ ಗುರುತಿನ ಚೀಟಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದೆಂದು ಮಾಹಿತಿ ನೀಡಿದ್ದಾರೆ.
ನಗರದ 5 ನಗರ ಪಾಲಿಕೆಗಳಲ್ಲಿ ಈಗಾಗಲೇ ಗುರುತಿನ ಚೀಟಿಗಳ ವಿತರಣಾ ಕಾರ್ಯವನ್ನು ಪ್ರಾರಂಭಿಸಲಾಗಿತ್ತು. ವಿತರಿಸಿರುವ ಗುರುತಿನ ಚೀಟಿಗಳಲ್ಲಿ ಸರಿಯಾದ ಮಾಹಿತಿ ಲಭ್ಯವಿಲ್ಲವೆಂದು ಬೀದಿ ಬದಿ ವ್ಯಾಪಾರಿಗಳು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಸಂಬಂಧ ಮಾನ್ಯ ಉಚ್ಚ ನ್ಯಾಯಾಲಯವು ಸಂಪೂರ್ಣ ಮಾಹಿತಿಯುಳ್ಳ ಗುರುತಿನ ಚೀಟಿಗಳನ್ನು ವಿತರಿಸಲು ನಿರ್ದೇಶನ ನೀಡಿತ್ತು. ಅದರಂತೆ ಈಗ ಹೊಸ ಮಾದರಿಯಲ್ಲಿ ಗುರುತಿನ ಚೀಟಿಯನ್ನು ಸಿದ್ಧಪಡಿಸಲಾಗಿದ್ದು, ಎಲ್ಲಾ 5 ನಗರ ಪಾಲಿಕೆಗಳಲ್ಲಿ ಅದೇ ಮಾದರಿಯಲ್ಲಿ ಸಿದ್ಧಪಡಿಸಿ ವಿತರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.
ಕಲ್ಯಾಣ ಕಾರ್ಯಕ್ರಮಗಳಡಿ ಎಲೆಕ್ಟ್ರಿಕ್ ವೆಜಿಟೆಬಲ್ ಕಾರ್ಟ್, ಎಲೆಕ್ಟ್ರಿಕ್ ಫ್ರೂಟ್ ಕಾರ್ಟ್, ಎಲೆಕ್ಟ್ರಿಕ್ ಐಸ್ ಕ್ರೀಮ್ ಕಾರ್ಟ್, ಎಲೆಕ್ಟ್ರಿಕ್ ಫಾಸ್ಟ್ ಫುಡ್ ಕಾರ್ಟ್, ತ್ರಿಚಕ್ರ ವಾಹನ ಸೇರಿದಂತೆ ಒಟ್ಟು 3,236 ವಾಹನಗಳನ್ನು ಸಬ್ಸಿಡಿ ಮೂಲಕ ನೀಡಲಾಗುವುದು. ಈ ಸಂಬಂಧ ಎಲೆಕ್ಟ್ರಿಕ್ ವಾಹನಗಳ ಪ್ರಾತ್ಯಕ್ಷಿಕೆಯನ್ನು ಕೇಂದ್ರ ಕಚೇರಿಯಲ್ಲಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಜಿಬಿಎ ವ್ಯಾಪ್ತಿಯಲ್ಲಿ ಹಲವಾರು ಕಲ್ಯಾಣ ಕಾರ್ಯಕ್ರಮಗಳಾದ ಇ-ವೆಂಡಿಂಗ್ ವಾಹನ, ಹೊಲಿಗೆ ಯಂತ್ರ, ಪೌರಕಾರ್ಮಿಕರು/ವೃತ್ತಿನಿರತ ಮಹಿಳೆಯರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ವಿವಿಧ 14 ರೀತಿಯ ಕೌಶಲ್ಯ ತರಬೇತಿ ಕಾರ್ಯಕ್ರಮಗಳು, ಎಲೆಕ್ಟ್ರಿಕ್ ವೀಲ್ ಚೇರ್, ಸಾರಥಿ ಯೋಜನೆ, ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ಒಂಟಿ ಮನೆ ಯೋಜನೆ ಹಾಗೂ ಅಮೃತ ಮಹೋತ್ಸವ ಯೋಜನೆಗಳಿಗೆ ಸಂಬಂಧಿಸಿದಂತೆ ಎಷ್ಟು ಫಲಾನುಭವಿಗಳಿದ್ದಾರೆ ಎಂಬ ಪಟ್ಟಿಯನ್ನು ಕೂಡಲೇ ಅಂತಿಮಗೊಳಿಸಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೀದಿ ಬದಿ ವ್ಯಾಪಾರಿಗಳಿಗೆ ಕ್ಯೂ-ಆರ್ ಕೋಡ್
ಇನ್ನು ಬೆಂಗಳೂರಿನ ಬೀದಿ ವ್ಯಾಪಾರಿಗಳಿಗೆ ಕ್ಯೂ-ಆರ್ ಕೋಡ್ ಒಳಗೊಂಡ ಗುರುತಿನ ಚೀಟಿಯನ್ನು ಮಾರ್ಚ್ ತಿಂಗಳ ಅಂತ್ಯದೊಳಗಾಗಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ ಸಂಪೂರ್ಣ ಮಾಹಿತಿ ಒಳಗೊಂಡ ಗುರುತಿನ ಚೀಟಿಯನ್ನು ಮುದ್ರಿಸಿ ವಿತರಣೆ ಮಾಡಬೇಕು. ಈ ಸಂಬಂಧ ಮತದಾರರ ಗುರುತಿನ ಚೀಟಿ ಮಾದರಿಯಲ್ಲಿ ಗುರುತಿನ ಚೀಟಿಯನ್ನು ಮುದ್ರಿಸಿ ಅವಶ್ಯಕ ಮಾಹಿತಿಯನ್ನು ಗುರುತಿನ ಚೀಟಿಯಲ್ಲಿ ನೀಡಬೇಕು. ಉಳಿದ ಸಂಪೂರ್ಣ ಮಾಹಿತಿಯನ್ನು ಕ್ಯೂ-ಆರ್ ಕೋಡ್ನಲ್ಲಿ ಸಿಗುವಂತೆ ಸೂಚನೆ ಕೊಟ್ಟಿದ್ದಾರೆ.
ಬೀದಿ ವ್ಯಾಪಾರಿಗಳಿಗೆ ಹೊಸದಾಗಿ ನೀಡುವ ಗುರುತಿನ ಚೀಟಿಯಲ್ಲಿ ಯಾವುದೇ ಲೋಪದೋಷವಾಗಬಾರದು. ಎಲ್ಲಾ 5 ನಗರ ಪಾಲಿಕೆಗಳಲ್ಲಿ ಒಂದೇ ಮಾದರಿಯ ಗುರುತಿನ ಚೀಟಿಯನ್ನು ಮುದ್ರಿಸಿ ಮಾರ್ಚ್ ತಿಂಗಳಾಂತ್ಯದೊಳಗಾಗಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.












Click it and Unblock the Notifications