ಕರ್ನಾಟಕ ಬಿಜೆಪಿಯಲ್ಲಿ ಪರ್ಯಾಯ ನಾಯಕನದ್ದೇ ಚಿಂತೆ!
ಬೆಂಗಳೂರು, ಜೂನ್ 07; "ಎಲ್ಲಿಯವರೆಗೆ ಹೈಕಮಾಂಡ್ಗೆ ನನ್ನ ಮೇಲೆ ವಿಶ್ವಾಸವಿರುತ್ತದೆಯೋ ಅಲ್ಲಿಯವರೆಗೆ ನಾನು ಮುಂದುವರೆಯುತ್ತೇನೆ. ಯಾವ ದಿನ ಯಡಿಯೂರಪ್ಪನವರೇ ನೀವು ಬೇಡ ಅಂತಾರೊ ಆ ದಿನ ನಾನು ರಾಜೀನಾಮೆ ಕೊಟ್ಟು ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ" ಮುಖ್ಯಮಂತ್ರಿ ಯಡಿಯೂರಪ್ಪ ಭಾನುವಾರ ಹೇಳಿದ ಮಾತು ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟು ಮಾಡಿದೆ.
ಇದುವರೆಗೆ ಬಿಜೆಪಿಯಲ್ಲಿ ತೆರೆಮರೆಯಲ್ಲಿ ನಡೆಯುತ್ತಿದ್ದ ಕಿತ್ತಾಟಗಳು ಇತ್ತೀಚೆಗೆ ಬೀದಿಗೆ ಬಿದ್ದಿದೆ. ಕೆಲವು ದಿನಗಳ ಹಿಂದೆ ಸಚಿವ ಸಿ. ಪಿ. ಯೋಗೀಶ್ವರ್ ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಬಹಿರಂಗವಾಗಿಯೇ ಹೇಳಿಕೆ ನೀಡುವ ಮೂಲಕ ಕಿಡಿ ಹೊತ್ತಿಸಿದ್ದರು. ಅಷ್ಟೇ ಅಲ್ಲದೆ ಆಡಳಿತದಲ್ಲಿ ನಡೆಯುತ್ತಿರುವ ಹಸ್ತ ಕ್ಷೇಪದ ಬಗ್ಗೆ ಕೇಂದ್ರ ನಾಯಕರ ಬಳಿಗೆ ದೂರನ್ನು ಒಯ್ದಿದ್ದರು.
ಇದಾದ ಬಳಿಕ ಒಂದಷ್ಟು ಶಾಸಕರು ಸಚಿವರು ಮುಖ್ಯಮಂತ್ರಿ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿ ಯೋಗೀಶ್ವರ್ರನ್ನು ತರಾಟೆಗೆ ತೆಗೆದುಕೊಂಡರು. ಒಂದು ಹೆಜ್ಜೆ ಮುಂದೆ ಹೋದ ಬಿ. ವೈ. ವಿಜಯೇಂದ್ರ ಹೈಕಮಾಂಡ್ ಭೇಟಿ ಮಾಡಿ ಬಂದರು. ಆದರೂ ರಾಜ್ಯದ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತಂತೆ ದಿನದಿಂದ ದಿನಕ್ಕೆ ಬೇರೆ ಬೇರೆ ರೀತಿಯ ಮಾತುಗಳು ಕೇಳಿ ಬರುತ್ತಲೇ ಇದ್ದವು.
ಭಾನುವಾರ ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೆ ಮೊದಲ ಬಾರಿಗೆ ಮಾತನಾಡಿದರು. ಇದು ರಾಜಕೀಯ ಕಾರ್ಯತಂತ್ರವೋ, ಹೈಕಮಾಂಡ್ ನಾಯಕರಿಗೆ ಸಂದೇಶವೋ? ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ.

ಇದ್ದಕ್ಕಿದ್ದಂತೆ ರಾಜೀನಾಮೆಯ ಮಾತೇಕೆ?
ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಆಗಲೀ, ಸ್ವತಃ ಮುಖ್ಯಮಂತ್ರಿಯಾಗಲೀ ಯಾವುದೇ ರೀತಿಯ ಹೇಳಿಕೆಗಳನ್ನು ನೀಡದೆ ಮೌನಕ್ಕೆ ಶರಣಾಗಿದ್ದರು. ಆದರೆ ಇದೀಗ ಇದ್ದಕ್ಕಿದ್ದಂತೆ "ಹೈಕಮಾಂಡ್ ಸೂಚಿಸಿದರೆ ತಕ್ಷಣ ರಾಜೀನಾಮೆ ನೀಡುತ್ತೇನೆ. ಆದರೆ ಬಿಜೆಪಿ ಹೈಕಮಾಂಡ್ ನನ್ನ ಮೇಲೆ ಸಂಪೂರ್ಣ ವಿಶ್ವಾಸವಿಟ್ಟಿದೆ. ಎಲ್ಲಿಯವರೆಗೆ ಅಧಿಕಾರದಲ್ಲಿ ಇರುವಂತೆ ಹೇಳುತ್ತಾರೋ, ಅಲ್ಲಿಯವರೆಗೂ ನಾನು ಅಧಿಕಾರದಲ್ಲಿ ಮುಂದುವರೆಯುತ್ತೇನೆ. ಹೈಕಮಾಂಡ್ ರಾಜೀನಾಮೆ ನೀಡುವಂತೆ ನನಗೆ ಸೂಚಿಸಿದರೆ ತಕ್ಷಣ ರಾಜೀನಾಮೆ ನೀಡುತ್ತೇನೆ" ಎಂದು ವಿಧಾನಸೌಧದಲ್ಲಿ ಯಡಿಯೂರಪ್ಪ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಅಸಹಾಯಕರಾಗಿದ್ದಾರಾ ಮುಖ್ಯಮಂತ್ರಿ?
ಇಷ್ಟು ದಿನಗಳ ಕಾಲ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದ ಮುಖ್ಯಮಂತ್ರಿ ಈಗ ರಾಜೀನಾಮೆ ನೀಡುವ ಮಾತನಾಡಿದ್ದೇಕೆ? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಜತೆಗೆ ಮುಂದುವರೆದು ಒಂದಷ್ಟು ಮನದಾಳದ ಮಾತುಗಳನ್ನು ಆಡಿದ್ದು, "ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಬಿಜೆಪಿ ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಇಟ್ಟಿದೆ. ಪರ್ಯಾಯ ನಾಯಕ ಇಲ್ಲವೆಂಬ ಮಾತನ್ನು ನಾನು ಒಪ್ಪಲ್ಲ. ದೇಶ, ರಾಜ್ಯದಲ್ಲಿ ಪರ್ಯಾಯ ನಾಯಕರು ಇರುತ್ತಾರೆ" ಎಂದಿದ್ದಾರೆ. ಇನ್ನು ನಾಯಕತ್ವ ಬದಲಾವಣೆ ಕುರಿತಂತೆ ಕೆಲವು ಸಚಿವರು ಒತ್ತಾಯಿಸುತ್ತಿರುವ ಬಗ್ಗೆ ಮಾತನಾಡಿರುವ ಅವರು, "ನಾನು ಯಾರ ಬಗ್ಗೆಯೂ ಟೀಕೆ ಟಿಪ್ಪಣಿ ಮಾಡುವುದಿಲ್ಲ. ನನ್ನ ಮೇಲೆ ಹೈಕಮಾಂಡ್ಗೆ ವಿಶ್ವಾಸವಿರುವವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ. ಬೇಡ ಅಂದ್ರೆ ರಾಜೀನಾಮೆ ಕೊಡುತ್ತೇನೆ. ಆ ನಂತರವೂ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುವುದಾಗಿ" ಹೇಳಿರುವುದು ಯಡಿಯೂರಪ್ಪ ಅಸಹಾಯಕರಾಗಿದ್ದಾರೆ ಎಂಬುದನ್ನು ಸೂಚಿಸುತ್ತಿರುವಂತೆ ಕಾಣಿಸುತ್ತಿದೆ.

ರಾಜ್ಯದ ಬಗ್ಗೆ ಹೈಕಮಾಂಡ್ ಗೇಕೆ ನಿರ್ಲಕ್ಷ್ಯ?
ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಕ್ಕೆ ಹೈಕಮಾಂಡ್ ಒಲವು ತೋರಿಸಿರಲಿಲ್ಲ. ಸಮಿಶ್ರ ಸರ್ಕಾರದಲ್ಲಿದ್ದ ಭಿನ್ನಾಭಿಪ್ರಾಯಗಳನ್ನು ಉಪಯೋಗಿಸಿಕೊಂಡು ಒಂದಷ್ಟು ಸಚಿವರು ಮತ್ತು ಶಾಸಕರನ್ನು ಸೆಳೆದು ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ತಾವು ಮುಖ್ಯಮಂತ್ರಿಯಾದರು.
ತಾವು ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದಕ್ಕೆ ಹೈಕಮಾಂಡ್ ತನ್ನನ್ನು ಗೌರವಿಸಿ ಸನ್ಮಾನಿಸುತ್ತದೆ. ಅಷ್ಟೇ ಅಲ್ಲದೆ ಒಂದಷ್ಟು ಸಹಾಯವನ್ನು ಮಾಡುತ್ತದೆ ಎಂದು ನಂಬಿದ್ದರು. ಆದರೆ ಕೇಂದ್ರ ರಾಜ್ಯದ ವಿಚಾರದಲ್ಲಿ ಮಲತಾಯಿ ಧೋರಣೆಯನ್ನೇ ಇದುವರೆಗೂ ಮಾಡಿಕೊಂಡು ಬಂದಿರುವುದನ್ನು ನೋಡಿದರೆ ಹೈಕಮಾಂಡ್ಗೆ ಯಡಿಯೂರಪ್ಪ ಬಗ್ಗೆ ಒಲವು ಇಲ್ಲ ಎಂಬುದು ಗೊತ್ತಾಗಿ ಬಿಡುತ್ತದೆ.

ಬಿಎಸ್ ವೈ ಬೆಂಬಲಕ್ಕೆ ನಿಲ್ಲದ ಹೈಕಮಾಂಡ್
ಯಡಿಯೂರಪ್ಪ ಸಿಎಂ ಆದ ಬಳಿಕ ರಾಜ್ಯದಲ್ಲಿ ಇದುವರೆಗೆ ನೆಮ್ಮದಿಯ ವಾತಾವರಣವಂತು ಇಲ್ಲವೇ ಇಲ್ಲ. ಪಕ್ಷದಲ್ಲಿನ ಭಿನ್ನಾಭಿಪ್ರಾಯ, ಪ್ರಾಕೃತಿಕ ವಿಕೋಪ, ಕೊರೊನಾ ಸಂಕಷ್ಟ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದರೂ ಕೇಂದ್ರದಿಂದ ನಿಗದಿತ ನೆರವು ದೊರೆತಿಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಾರ್ವಜನಿಕವಾಗಿಯೇ ಆರೋಪ ಮಾಡಿದಾಗಲೂ ಅಂತಹ ಸಚಿವ, ಶಾಸಕರಿಗೆ ಹೈಕಮಾಂಡ್ ಎಚ್ಚರಿಕೆಯ ಸೂಚನೆ ನೀಡಿಲ್ಲ. ಇನ್ನೊಂದೆಡೆ ದೂರುಗಳನ್ನು ಹೊತ್ತು ಹೋದ ವಿಜಯೇಂದ್ರರಿಗೂ ಮಣೆ ಹಾಕಿದೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
Recommended Video

ತಲೆನೋವಾದ ಪರ್ಯಾಯ ನಾಯಕನ ಆಯ್ಕೆ
ಆರಂಭದಿಂದಲೂ ಬಿ. ಎಸ್. ಯಡಿಯೂರಪ್ಪರಿಂದ ಅಂತರ ಕಾಪಾಡಿಕೊಂಡೇ ಬರುತ್ತಿರುವ ಹೈಕಮಾಂಡ್ನ ಹಿಂದಿನ ಉದ್ದೇಶ ಏನಿದೆ? ಎಂಬುದೇ ಅರ್ಥವಾಗುತ್ತಿಲ್ಲ. ಅದು ಏನೇ ಇರಲಿ ಕೊರೊನಾ ಸಂಕಷ್ಟದಲ್ಲಿ ರಾಜ್ಯ ಸಿಲುಕಿ ನಲುಗುತ್ತಿರುವಾಗ ಹೈಕಮಾಂಡ್ ಪಕ್ಷದಲ್ಲಿನ ಆಂತರಿಕ ಸಮಸ್ಯೆಗಳನ್ನು ಬಗೆಹರಿಸದೆ ಇರುವುದು ಮತ್ತು ಮುಖ್ಯಮಂತ್ರಿಗಳು ರಾಜೀನಾಮೆಯ ಬಗ್ಗೆ ಮಾತನಾಡಿರುವುದು ಜನರಲ್ಲಿ ಗೊಂದಲವನ್ನುಂಟು ಮಾಡಿದೆ. ಇದೆಲ್ಲದರ ನಡುವೆಯೂ ಯಡಿಯೂರಪ್ಪ ನಂತರ ರಾಜ್ಯದಲ್ಲಿ ಪರ್ಯಾಯ ನಾಯಕ ಯಾರು? ಎಂಬುದನ್ನು ಹೈಕಮಾಂಡ್ ಘೋಷಣೆ ಮಾಡಿಲ್ಲ. ಇದು ಬಿಜೆಪಿಯಲ್ಲಿ ಸಮಸ್ಯೆಗಳು ದಿನದಿಂದ ದಿನಕ್ಕೆ ಉಲ್ಭಣಗೊಳ್ಳಲು ಕಾರಣವಾಗಿರಬಹುದೇನೋ?












Click it and Unblock the Notifications