Get Updates
Get notified of breaking news, exclusive insights, and must-see stories!

ಒಡೆದ ವಲಸಿಗರ ಒಗ್ಗಟ್ಟು? ಅಷ್ಟಕ್ಕೂ ಅದರ ಹಿಂದಿನ ಮರ್ಮವೇನು? ಇಲ್ಲಿದೆ ಮಾಹಿತಿ!

ಬೆಂಗಳೂರು, ಆ. 12: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ವಲಸಿಗ ಸಚಿವರ ಪಾತ್ರ ಮಹತ್ವದ್ದಾಗಿತ್ತು. ಜೊತೆಗೆ ಅದು ಅತಿದೊಡ್ಡ ಆಪರೇಶನ್ ಕಮಲ ಎಂದು ವಿಪಕ್ಷಗಳು ಆರೋಪಿಸಿದ್ದವು. ತಮ್ಮ ರಾಜಕೀಯ ಭವಿಷ್ಯವನ್ನೇ ಸವಾಲಿಗೆ ಇಟ್ಟು, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ನಂಬಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದ 16 ಜನರ ಒಗ್ಗಟ್ಟು ಆರಂಭದಲ್ಲಿ ಬಿಜೆಪಿಗೆ ಸವಾಲಾಗಿತ್ತು. ಆದರೆ ದಿನ ಕಳೆದಂತೆ ಆ ಒಗ್ಗಟ್ಟು ಕಡಿಮೆ ಆಗುತ್ತಿದೆಯಾ? ಎಂಬ ಚರ್ಚೆ ಇದೀಗ ಶುರುವಾಗಿದೆ. ಜೊತೆಗೆ ಮಿತ್ರಮಂಡಳಿಯ ಸದಸ್ಯರು ತಮ್ಮ ವೈಯಕ್ತಿಕ ರಾಜಕೀಯ ಭವಿಷ್ಯದತ್ತ ಗಮನ ಕೊಡುತ್ತಿದ್ದಾರೆ ಎಂಬುದು ಅವರ ನಡೆಯಿಂದಲೇ ಬಹಿರಂಗವಾಗುತ್ತಿದೆ.

ಆರಂಭದಲ್ಲಿ ಒಬ್ಬರಿಗೆ ಬಿಜೆಪಿಯಲ್ಲಿ ತೊಂದರೆ ಆದರೂ ಎಲ್ಲರೂ ಪ್ರತಿಕ್ರಿಯೆ ಕೊಡುತ್ತಿದ್ದರು. ಜೊತೆಗೆ ಒಗ್ಗಟ್ಟಾಗಿ ನಿಲ್ಲುತ್ತಿದ್ದರು. ಬಿಜೆಪಿಯಲ್ಲಿಯೇ ಒಂದು ಪರ್ಯಾಯ ಶಕ್ತಿ ಎಂಬಂತೆ ಅದು ಕಂಡು ಬರುತ್ತಿತ್ತು. ಆದರೆ ಬಿಜೆಪಿ ನಾಯಕತ್ವ ಬದಲಾವಣೆ ಆಗುತ್ತಿದ್ದಂತೆಯೆ ವಲಸಿಗರ ಒಗ್ಗಟ್ಟು ಛಿದ್ರವಾದಂತೆ ಕಂಡು ಬರುತ್ತಿದೆ. ಅದಕ್ಕೆ ಕಾರಣಗಳೂ ಇವೆ. ಅಸ್ತಿತ್ವದ ಪ್ರಶ್ನೆ ಅದಕ್ಕೆ ಕಾರಣ ಎನ್ನಲಾಗುತ್ತಿದೆ. ಹೀಗಾಗುತ್ತಿರುವುದರ ಹಿಂದಿನ ಕಾರಣ ಏನು?

ನಂಬಿ ಬಂದ ನಾಯಕರಿಗೆ ಅಧಿಕಾರವಿಲ್ಲ!

ನಂಬಿ ಬಂದ ನಾಯಕರಿಗೆ ಅಧಿಕಾರವಿಲ್ಲ!

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆೆಸ್ ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದ ವಲಸಿಗರ ಮಿತ್ರಮಂಡಳಿ ಈಗ ಛಿದ್ರವಾಗಿದ್ದು, ಅಸ್ತಿತ್ವಕ್ಕಾಗಿ ಅಂತರ ಕಾಯ್ದುಕೊಳ್ಳುವ ಲೆಕ್ಕಾಚಾರ ಶುರುವಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆೆಸ್ ಪಕ್ಷದ 15 ಶಾಸಕರು ಹಾಗೂ ಪಕ್ಷೇತರ ಇಬ್ಬರು ಶಾಸಕರು ಮೈತ್ರಿ ಸರ್ಕಾರದ ಪತನ ಹಾಗೂ ಆ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆೆ ಬಂದ ಸಂದರ್ಭದಲ್ಲಿ ತಮ್ಮ ತಂಡದಲ್ಲಿ ಯಾರಿಗೇ ಅನ್ಯಾಾಯವಾಗಿದ್ದರೂ, ಎಲ್ಲರೂ ಒಟ್ಟಾಗಿ ಕುಳಿತು ಚರ್ಚಿಸಿ ತಮ್ಮ ತಂಡದ ಅನ್ಯಾಯವಾದವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತಿದ್ದರು. ಆದರೆ, ಈಗ ತಮ್ಮನ್ನು ಬಿಜೆಪಿಗೆ ಕರೆ ತಂದಿರುವ ಬಿ.ಎಸ್. ಯಡಿಯೂರಪ್ಪ ಅವರೇ ಅಧಿಕಾರದಲ್ಲಿ ಇಲ್ಲದ್ದರಿಂದ ಹಾಗೂ ಮಿತ್ರ ಮಂಡಳಿಯ ಸದಸ್ಯರ ನಡುವಿನ ವೈಯಕ್ತಿ ಪ್ರತಿಷ್ಠೆೆಯಿಂದಾಗಿ ಎಲ್ಲರೂ ತಮ್ಮ ರಾಜಕೀಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಲೆಕ್ಕಾಚಾರದ ರಾಜಕಾರಣ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಭವಿಷ್ಯದಲ್ಲಿ ಬಿಜೆಪಿಯೇ ಆಸರೆ ಎಂಬ ತೀರ್ಮಾನ?

ಭವಿಷ್ಯದಲ್ಲಿ ಬಿಜೆಪಿಯೇ ಆಸರೆ ಎಂಬ ತೀರ್ಮಾನ?

ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದು, ಸರ್ಕಾರದ ವಿರುದ್ಧ ಬಂಡಾಯ ಸಾರಿದ ಸಂದರ್ಭದಲ್ಲಿ ವಲಸಿಗರ ನಾಯಕತ್ವ ವಹಿಸಿಕೊಂಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡು ರಾಜೀನಾಮೆ ನೀಡಿದಾಗಿನಿಂದ ವಲಸಿಗರ ತಂಡ ಕ್ರಮೇಣ ವಿಭಜನೆ ಆಗುತ್ತಿದೆ ಎಂಬ ವಿಶ್ಲೇಷಣೆ ಕೇಳಿ ಬರುತ್ತಿದೆ. ಅದಕ್ಕೆ ಕಾರಣವೂ ಇದೆ. ವಲಸಿಗ ಸಚಿವರಾದ ಎಸ್.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್, ಡಾ. ಸುಧಾಕರ್, ಬೈರತಿ ಬಸವರಾಜ್, ಡಾ. ನಾರಾಯಣ ಗೌಡ ಹಾಗೂ ಮುನಿರತ್ನ ಅವರುಗಳು ಭವಿಷ್ಯದಲ್ಲಿ ಬಿಜೆಪಿಯಲ್ಲಿಯೇ ಗಟ್ಟಿ ನೆಲೆ ಕಂಡುಕೊಳ್ಳಲು ಬಿಜೆಪಿ ನಾಯಕತ್ವದ ಒಲವು ಗಳಿಸಲು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.


ವಸಲಿಗರು ಎಂಬ ಹಣೆಪಟ್ಟಿ ಕಳಚಿ ಬಿಜೆಪಿಯ ಗರ್ಭಗುಡಿಯಲ್ಲಿ ಗಟ್ಟಿಯಾಗಿ ನಿಲ್ಲಬೇಕೆಂಬ ಲೆಕ್ಕಾಚಾರದಲ್ಲಿ ಎಂಬ ಮಾತುಗಳು ಇದೀಗ ಕೇಳಿ ಬರುತ್ತಿವೆ. ಈ ಕಾರಣದಿಂದಾಗಿಯೇ ಸಚಿವ ಸಂಪುಟದಿಂದ ಆರ್. ಶಂಕರ್ ಹಾಗೂ ಶ್ರೀಮಂತ ಪಾಟೀಲ್ ಅವರನ್ನು ಬಿಟ್ಟಾಗ, ಮಹೇಶ್ ಕುಮಟಳ್ಳಿ ಅವರನ್ನು ಸಂಪುಟಕ್ಕೆೆ ಸೇರಿಸದೇ ಇದ್ದಾಗ ಹಾಗೂ ಮಸ್ಕಿ ಚುನಾವಣೆಯಲ್ಲಿ ಸೋತ ಪ್ರತಾಪ್ ಗೌಡ ಪಾಟೀಲ್‌ಗೆ ವಿಧಾನ ಪರಿಷತ್ ಸದಸ್ಯತ್ವ ಕೊಡಿಸುವದಕ್ಕೆ ಸಂಬಂಧಿಸಿದಂತೆ ಯಾರೂ ಚಕಾರ ಎತ್ತದೆ ಜಾಣ ಮೌನ ವಹಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪರಸ್ಪರ ಅಂತರ ಕಾಯ್ದುಕೊಳ್ಳುತ್ತಿರುವ ವಲಸಿಗರು?

ಪರಸ್ಪರ ಅಂತರ ಕಾಯ್ದುಕೊಳ್ಳುತ್ತಿರುವ ವಲಸಿಗರು?

ರಾಜ್ಯದಲ್ಲಿ ನಮ್ಮಿಂದಲೇ ಬಿಜೆಪಿ ಸರ್ಕಾರ ಬಂದಿದೆ. ನಮಗೆ ಅನ್ಯಾಯವಾದರೆ ಸಹಿಸುವುದಿಲ್ಲ ಎನ್ನುತ್ತಿದ್ದವರು, ಈಗ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿಚಾರದಲ್ಲಿ ಆಗಿರುವ ಅಸಮಾಧಾನದ ಸಂದರ್ಭದಲ್ಲಿ ಸಚಿವ ಆನಂದ್ ಸಿಂಗ್ ನಡೆಸಿದ ಹೋರಾಟಕ್ಕೆ ಉಳಿದ ವಲಸಿಗರು ಅಂತರ ಕಾಯ್ದುಕೊಂಡಂತೆ ಕಂಡುಬರುತ್ತಿದೆ. ಬುಧವಾರ ಸಚಿವ ಆನಂದ್ ಸಿಂಗ್ ಅವರು ರಾಜೀನಾಮೆ ಕೊಡುತ್ತೇನೆ ಎಂದಾಗಲೂ ಯಾರೊಬ್ಬರೂ ಆ ಬಗ್ಗೆ ಮಾತನಾಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.


ವಲಸಿಗ ಸಚಿವರು ಬಿಜೆಪಿ ಸೇರುವ ಮೊದಲು ಹಲವು ಶರತ್ತುಗಳನ್ನು ಹಾಕಿದ್ದರು ಎಂಬ ಮಾತಿದೆ. ಅದರಲ್ಲಿ ತಮಗೆ ಇದೇ ಖಾತೆಯನ್ನು ಕೊಡಬೇಕು ಎಂಬುದು ಒಂದು ಷರತ್ತು. ಆಗ ವಲಸಿಗರ ಷರತ್ತುಗಳಿಗೆ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ಕೂಡ ಒಪ್ಪಿತ್ತು ಎನ್ನಲಾಗಿದೆ. ಆದರೆ, ಈಗ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಆದ ಬಳಿಕ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರವ ಹಿಸಿಕೊಂಡಿದ್ದಾರೆ. ಜೊತೆಗೆ ಸಚಿವರಾದ ಬಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್ ಹಾಗೂ ಡಾ. ಕೆ. ಸುಧಾಕರ್ ಅವರಿಗೆ ತಾವು ಕೇಳಿದ್ದ ಖಾತೆಗಳು ಸಿಕ್ಕಿವೆ. ಹೀಗಾಗಿ ಅವರು ಒತ್ತಡ ಹಾಕುವ ರಾಜಕೀಯ ತಂತ್ರದಿಂದ ದೂರ ಸರಿಸಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ದೊಡ್ಡ ಕಾರಣವೂ ಇದೆ.

ಶುರುವಾಯ್ತಾ ಬಿಜೆಪಿಯಲ್ಲಿ ತಮ್ಮ ಭವಿಷ್ಯದ ಆತಂಕ?

ಶುರುವಾಯ್ತಾ ಬಿಜೆಪಿಯಲ್ಲಿ ತಮ್ಮ ಭವಿಷ್ಯದ ಆತಂಕ?

ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ, ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವ ಮಾಜಿ ಸಚಿವ, ಶಾಸಕ ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ಆರ್. ಶಂಕರ್, ರಮೇಶ್ ಜಾರಕಿಹೊಳಿ, ಚುನಾವಣೆಯಲ್ಲಿ ಸೋಲುಂಡಿರುವ ಎಂ.ಟಿ.ಬಿ. ನಾಗರಾಜ್, ಎಚ್. ವಿಶ್ವನಾಥ್ ಅವರಿಗೆ ಬಿಜೆಪಿಯಲ್ಲಿ ಭವಿಷ್ಯವಿದೆಯಾ? ಎಂಬ ಆತಂಕ ಶುರುವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಅವರಿಗೆಲ್ಲ ರಾಜಕೀಯ ಭವಿಷ್ಯದ ಆತಂಕ ಕಾಡುತ್ತಿದೆ. ಜೊತೆಗೆ ಬಿ.ಎಸ್. ಯಡಿಯೂರಪ್ಪ ಅವರೇ ಅಧಿಕಾರ ಕಳೆದುಕೊಂಡಿರುವುದರಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಲು ತಮಗೆ ಟಿಕೆಟ್ ಸಿಗುತ್ತದೆಯೋ? ಇಲ್ಲವೋ? ಎಂಬ ಆತಂಕದಲ್ಲಿ ಕೆಲ ವಲಸಿಗರಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರದ ಬಗ್ಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಹೇಳಿಕೆಗಳಿಂದಲೇ ಪರಿಸ್ಥಿತಿ ವಿವರಿಸಿದ ವಲಸಿಗರು!

ಹೇಳಿಕೆಗಳಿಂದಲೇ ಪರಿಸ್ಥಿತಿ ವಿವರಿಸಿದ ವಲಸಿಗರು!

"ಕಳೆದ ನಾಲ್ಕು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಾತನಾಡಿದ್ದ ಪ್ರತಾಪಗೌಡ ಪಾಟೀಲ್, "ನನಗೆ ಯಾವುದೇ ಸ್ಥಾನ ಸಿಕ್ಕಿಲ್ಲ. ಈ ಬಗ್ಗೆೆ ಎಲ್ಲರೂ ಅನುಕಂಪ ತೋರಿಸುತ್ತಾರೆ. ಜೊತೆಗೆ ಆನಂದ್ ಸಿಂಗ್‌ಗೆ ಸೂಕ್ತ ಖಾತೆ ಕೊಡಬೇಕಾಗಿತ್ತು. ವಲಸಿಗರಲ್ಲಿ ಒಗ್ಗಟ್ಟು ಇಲ್ಲದಿರುವುದು ಹೀಗಾಗುತ್ತಿದೆ" ಎಂದಿದ್ದರು.

ಜೊತೆಗೆ ಖಾತೆ ಬದಲಾವಣೆಗೆ ಪಟ್ಟು ಹಿಡಿದ್ದಿದ್ದ ಸಚಿವ ಎಂ.ಟಿ.ಬಿ. ನಾಗರಾಜ್ ಅವರು ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದಕ್ಕೆ ಸರಿಸಿದ್ದಾರೆ. ಈ ಬಗ್ಗೆ ಬುಧವಾರ ಮಾತನಾಡಿರುವ ಅವರು, "ಆನಂದ್ ಸಿಂಗ್ ರಾಜೀನಾಮೆ ವಿಚಾರ ಅವರ ವೈಯಕ್ತಿ ವಿಚಾರ. ಅವರಿಗೆ ಬೆಂಬಲ ನೀಡುವ ಬಗ್ಗೆೆ ನಾವು ಚರ್ಚಿಸಿಲ್ಲ. ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ. ನನ್ನನ್ನು ಎಂಎಲ್‌ಸಿ ಮಾಡಿ ಸಚಿವನನ್ನಾಾಗಿ ಮಾಡಿದ್ದಾರೆ. ಜೊತೆಗೆ ಸಚಿವ ಆರ್. ಅಶೋಕ್ ನನ್ನ ಬೆಂಬಲಕ್ಕೆೆನಿಂತಿದ್ದಾರೆ. ನಾನು ಬಿಜೆಪಿಯಲ್ಲಿಯೇ ಇರುತ್ತೇನೆ" ಎಂದಿದ್ದಾರೆ.

ಈ ಎಲ್ಲವನ್ನು ನೋಡಿದಾಗ ಒಟ್ಟಾರೆಯಾಗಿ ವಲಸಿಗ ಬಿಜೆಪಿ ನಾಯಕರ ಒಗ್ಗಟ್ಟು ಒಡೆದಿರುವುದು ಕಂಡು ಬರುತ್ತಿದೆ. ಇದು ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಗೆ ಅನುಕೂಲವಾದಂತಿದೆ. ಜೊತೆಗೆ ಎಲ್ಲ ನಾಯಕರೂ ತಮ್ಮ ತಮ್ಮ ವೈಯಕ್ತಿಕ ರಾಜಕೀಯ ಭವಿಷ್ಯದತ್ತ ಕಮನ ಕೊಟ್ಟಿರುವುದು ಕೂಡ ಬಿಜೆಪಿಗೆ ವರವಾಗಿ ಪರಿಣಸುವ ಸಾಧ್ಯೆತೆಯಿದೆ. ಸದ್ಯಕ್ಕೆ ಈ ಪರಿಸ್ಥಿತಿಯಿದ್ದು, ಮುಂದೆನಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.

Recommended Video

      BJPಯಲ್ಲಿ ಖಾತೆಗಾಗಿ ಶುರುವಾಯ್ತು ಮಂತ್ರಿಗಳ ರಾಜೀನಾಮೆಯ ಬ್ಲಾಕ್ ಮೇಲ್ | oneindia kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+