ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಎದುರಾಗಿದ್ದ ಕಂಟಕ ದೂರ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ!
ಬೆಂಗಳೂರು, ಆ. 11: ಸಚಿವ ಸಂಪುಟ ವಿಸ್ತರಣೆ ಬಳಿಕ ಒಂದೊಂದೆ ಅಸಮಾಧಾನ ರಾಜ್ಯ ಬಿಜೆಪಿಯಲ್ಲಿ ಸ್ಫೋಟವಾಗುತ್ತಿವೆ. ಸದ್ಯಕ್ಕೆ ನೂತನ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಎದುರಾಗಿದ್ದ ಕಂಟಕವೊಂದು ದೂರವಾಗಿದೆ. ಅದಕ್ಕೆ ಕಾರಣವಾಗಿರುವುದು ಸಚಿವ ಎಂ.ಟಿ.ಬಿ. ನಾಗರಾಜ ನಿರ್ಧಾರ. ಖಾತೆ ಹಂಚಿಕೆ ಖ್ಯಾತೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಬೆದರಿಕೆಯನ್ನು ಸಚಿವರಾದ ಆನಂದ್ ಸಿಂಗ್ ಹಾಗೂ ಎಂ.ಟಿ.ಬಿ. ನಾಗರಾಜ್ ಹಾಕಿದ್ದರು. ಒಂದೆಡೆ ಎಂ.ಟಿ.ಬಿ. ನಾಗರಾಜ ಅವರು ಸಿಎಂ ಬೊಮ್ಮಾಯಿ ಜೊತೆಗೆ ಮುನಿಸಿಕೊಂಡಿದ್ದರೆ, ಮತ್ತೊಂದೆಡೆ ಆನಂದ್ ಸಿಂಗ್ ಕೂಡ ತಮಗೆ ಕೊಟ್ಟಿರುವ ಖಾತೆಯನ್ನು ಒಪ್ಪಿಕೊಂಡಿಲ್ಲ.
ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ ಎದುರಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮತ್ತೆ ಮಾಜಿ ಸಿಎಂ ಯಡಿಯೂರಪ್ಪ ಆಸರೆಯಾಗಿದ್ದಾರೆ. ಸರ್ಕಾರಕ್ಕೆ ಎದುರಾಗಿದ್ದ ಕಂಟಕವನ್ನು ಯಡಿಯೂರಪ್ಪ ದೂರ ಮಾಡಿದ್ದಾರೆ. ಅಷ್ಟಕ್ಕೂ ಮಾಜಿ ಸಿಎಂ ಯಡಿಯೂರಪ್ಪ ಮಾಡಿದ್ದೇನು? ಸಚಿವ ಎಂ.ಟಿ.ಬಿ. ನಾಗರಾಜ ವಸತಿ ಖಾತೆಯಿಂದ ಹಿಂದಕ್ಕೆ ಸರಿದಿದ್ದು ಯಾಕೆ? ಮುಂದಿದೆ ಮಾಹಿತಿ!
ಎಂ.ಟಿ.ಬಿ. ನಾಗರಾಜ್ ಯುಟರ್ನ್!
ಕುತೂಹಲಕಾರಿ ಬೆಳವಣಿಗೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ನಿರ್ಧಾರದಿಂದ ಸಣ್ಣ ಕೈಗಾರಿಕಾ ಸಚಿವ ಎಂ.ಟಿ.ಬಿ. ನಾಗರಾಜ ಹಿಂದಕ್ಕೆ ಸರಿಸಿದ್ದಾರೆ. ತಾವು ಬಯಸಿದ ವಸತಿ ಖಾತೆ ಸಿಕ್ಕಿಲ್ಲ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಚಿವ ಎಂ.ಟಿ.ಬಿ. ಮುಂದಾಗಿದ್ದರು. ಆದರೆ ಬುಧವಾರ ವಿಕಾಸಸೌಧದಲ್ಲಿ ಸಣ್ಣ ಕೈಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ವಸತಿ ಖಾತೆಗೆ ಬೇಡಿಕೆ ಇಟ್ಟಿದ್ದ ಎಂ.ಟಿ.ಬಿ. ನಾಗರಾಜ್ ತಮ್ಮ ಬೇಡಿಕೆಯಿಂದ ಹಿಂದೆ ಸರಿದಿರುವುದು ಕುತೂಹಲ ಮೂಡಿಸಿದೆ. ತಮ್ಮ ಅಸಮಾಧಾನದ ಮಧ್ಯೆಯೂ ಇಲಾಖೆಯ ಸಭೆ ನಡೆಸುವ ಮೂಲಕ ಕುತೂಹಲಕ್ಕೆ ಕಾರಣವಾಗುವಂತೆ ನಡೆದುಕೊಂಡಿದ್ದಾರೆ. ವಸತಿ ಖಾತೆ ಬೇಡಿಕೆಯಿಂದ ಎಂ.ಟಿ.ಬಿ. ನಾಗರಾಜ್ ಹಿಂದಕ್ಕೆ ಸರಿಸಿದ್ದಾರಾ? ಎಂಬ ಪ್ರಶ್ನೆಗೆ ಅವರೇ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಇದೇ ಖಾತೆಯಲ್ಲಿ ಮುಂದುವರೆಯುತ್ತೇನೆ!
ಸಭೆಯ ಬಳಿಕ ಪ್ರತಿಕ್ರಿಯೆ ಕೊಟ್ಟಿರುವ ಸಚಿವ ಎಂ.ಟಿ.ಬಿ. ನಾಗರಾಜ ಅವರು, "ಆತ್ಮ ತೃಪ್ತಿಯಿಂದಲೇ ನಾನು ಸಣ್ಣ ಕೈಗಾರಿಕೆ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಕೈಗಾರಿಕೆಗಳ ಸ್ಥಿತಿಗತಿ ಕುರಿತು ಚರ್ಚಿಸಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಈಗಾಗಲೇ ನನ್ನ ಅಭಿಪ್ರಾಯ ಹೇಳಿದ್ದೇನೆ. ಅವರು ಕೆಲಸ ಮಾಡುತ್ತಿರಿ ಎಂದಿದ್ದಾರೆ. ನಾನು ಖಾತೆ ಬದಲಾವಣೆ ಬಗ್ಗೆ ಹೇಳಿದ್ದೇನೆ. ನನ್ನ ಬೇಡಿಕೆಗೆ ಸಿಎಂ ಬೊಮ್ಮಾಯಿ ಭರವಸೆ ಕೊಟ್ಟಿದ್ದಾರೆ. ನಾನು ಬೊಮ್ಮಾಯಿ ಅವರೊಂದಿಗೆ ಏನು ಮಾತನಾಡಿದ್ದೇನೆ ಎಂಬುದನ್ನು ಹೇಳಲ್ಲ. ಆದರೆ ಅವರು ಮುಂದಿನ ದಿನದಲ್ಲಿ ಸರಿ ಮಾಡೋಣ ಎಂದಿದ್ದಾರೆ. ಹೀಗಾಗಿ ನಾನು ಯಾವ ಹೈಕಮಾಂಡ್ ಭೇಟಿ ಮಾಡಲ್ಲ, ಹಿಂದೆಯೂ ಮಾಡಿಲ್ಲ, ಈಗಲೂ ಹೈಕಮಾಂಡ್ ಭೇಟಿ ಮಾಡಲ್ಲ" ಎಂದಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಕಾರಣ?
"ಸಚಿವ ಆನಂದ್ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡೋದು ಬಿಡೋದು ಅವರಿಗೆ ಸೇರಿದ್ದು. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಬಹುದು. ನೋವನ್ನು ನುಂಗಿಕೊಂಡಿದ್ದೇನೆ. 2023ರವರೆಗೆ ಈ ಇಲಾಖೆಯಲ್ಲೇ ಮುಂದುವರಿಯುತ್ತೇನೆ. ಈ ಪಕ್ಷಕ್ಕೆ ಬಂದಿದ್ದೇನೆ, ಇಲ್ಲೇ ಮುಂದುವರಿಯುತ್ತೇನೆ. ನಂಗೆ ಯಾಕೆ ಬಿಜೆಪಿ ಟಿಕೆಟ್ ಕೊಡಲ್ಲ? ಕೊಟ್ಟೆ ಕೊಡ್ತಾರೆ. ಸಾರ್ವಜನಿಕ ಸೇವೆಗೆಂದೇ ರಾಜಕೀಯಕ್ಕೆ ಬಂದಿದ್ದೇನೆ. ಎಲ್ಲಾ ಅಂತಸ್ತು ನನಗಿದೆ. ಜನರ ಸೇವೆ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ. ಯಾವುದೇ ಆಸೆ ಆಕಾಂಕ್ಷೆಗಳಿಗೆ ನಾನು ಆಸೆ ಪಟ್ಟವನಲ್ಲ. ರಾಜಕೀಯ ಹರಿಯುವ ನೀರು, ನಿಂತ ನೀರಲ್ಲ" ಎಂದು ಹೇಳುವ ಮೂಲಕ ತಮ್ಮ ರಾಜೀನಾಮೆ ಇರ್ಧಾರದಿಂದ ಎಂ.ಟಿ.ಬಿ. ನಾಗರಾಜ್ ಹಿಂದಕ್ಕೆ ಸರಿದಿದ್ದಾರೆ. ರಾಜೀನಾಮೆ ಕೊಡುವ ನಿರ್ಧಾರದಿಂದ ಹಿಂದೆ ಸರಿಯಲು ಮಾಜಿ ಸಿಎಂ ಯಡಿಯೂರಪ್ಪ ಕಾರಣ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಎಂಟಿಬಿ ನಾಗರಾಜ್ ಅವರಿಗೆ ಯಡಿಯೂರಪ್ಪ ಕೊಟ್ಟಿರುವ ಭರವಸೆ ಏನು? ಮುಂದಿದೆ.
ತಿಳಿ ಹೇಳಿದ ಮಾಜಿ ಸಿಎಂ ಯಡಿಯೂರಪ್ಪ!
ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದ ಸಚಿವ ಎಂ.ಟಿ.ಬಿ. ನಾಗರಾಜ್ ಅವರನ್ನು ಕರೆಸಿಕೊಂಡು ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾಗಿದೆ. ವಸತಿ ಖಾತೆಗೆ ಬೇಡಿ ಇಟ್ಟಿರುವುದು ಸರಿ. ಆದರೆ ಹೈಕಮಾಂಡ್ ಈಗಾಗಲೇ ಖಾತೆ ಹಂಚಿಕೆ ಮಾಡಿದೆ. ಈ ಸಂದರ್ಭದಲ್ಲಿ ಖಾತೆ ಮರು ಹಂಚಿಕೆ ಸಾಧ್ಯವಿಲ್ಲ. ನಾನು ಹೈಕಮಾಂಡ್ ಮೇಲೆ ಒತ್ತಡ ಹಾಕಬಹುದು. ಆದರೆ ಖಾತೆ ಬದಲಾವಣೆ ಕುರಿತು ಹೈಕಮಾಂಡ್ ಒಪ್ಪುವುದು ಕಷ್ಟ. ಒಂದೊಮ್ಮೆ ನೀವು ರಾಜೀನಾಮೆ ಕೊಟ್ಟಲ್ಲಿ ಬೇರೆಯವರಿಗೆ ಮಂತ್ರಿ ಸ್ಥಾನ ಕೊಡಬಹುದು. ಹೀಗಾಗಿ ದುಡುಕಬೇಡಿ. ನಾನು ಜೊತೆಗಿದ್ದೇನೆ. ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆ ಈಡೇರಿಸುತ್ತೇನೆ. ಈಗ ರಾಜೀನಾಮೆ ಬೇಡಿಕೆಯಿಂದ ಹಿಂದಕ್ಕೆ ಸರಿಯಿರಿ ಎಂದು ಯಡಿಯೂರಪ್ಪ ತಿಳಿ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಎಂಟಿಬಿ ನಾಗರಾಜ್ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಎಂಟಿಬಿ ನಾಗರಾಜ್ ಅವರು ವಸತಿ ಖಾತೆಗೆ ಬೇಡಿಕೆ ಇಟ್ಟಿದ್ದು ಯಾಕೆ? ಮುಂದಿದೆ.
ವಸತಿ ಖಾತೆಗೆ ಬೇಡಿಕೆ ಇಟ್ಟಿದ್ದರ ಹಿಂದಿದೆ ದೊಡ್ಡ ಕಾರಣ!
ಸಣ್ಣ ಕೈಗಾರಿಕಾ ಸಚಿವ ಎಂ.ಟಿ.ಬಿ. ನಾಗರಾಜ್ ಅವರು ವಸತಿ ಖಾತೆಗೆ ಬೇಡಿಕೆ ಇಟ್ಟಿದ್ದರ ಹಿಂದೆ ಮಹತ್ವದ ಕಾರಣವಿದೆ ಎನ್ನಲಾಗುತ್ತಿದೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಶರತ್ ಬಚ್ಚೇಗೌಡ ಚುನಾಯಿತರಾಗಿದ್ದಾರೆ. ಜೊತೆಗೆ ಈಗ ಕಾಂಗ್ರೆಸ್ ಸೇರುವ ಮೂಲಕ ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಅವರು ಶಾಸಕರಾಗಿರುವುದರಿಂದ ಸಹಜವಾಗಿಯೇ ಕ್ಷೇತ್ರದಲ್ಲಿ ಜನಪ್ರೀಯತೆ ಹೆಚ್ಚಾಗುತ್ತಿದೆ. ಹೀಗಾಗಿ ವಸತಿ ಖಾತೆಯನ್ನು ಪಡೆಯುವ ಮೂಲಕ ಜನರಿಗೆ ಸೂರು ಕಲ್ಪಿಸಿ ಕೊಡಲು ಸಚಿವ ಎಂ.ಟಿ.ಬಿ. ನಾಗರಾಜ್ ಮುಂದಾಗಿದ್ದರು. ಆ ಮೂಲಕ ಮುಂದಿನ ಚುನಾವಣೆ ವೇಳೆಗೆ ಮತ್ತೆ ಪ್ರಬಲಾಗಬಹುದು ಎಂಬ ಲೆಕ್ಕಾಚಾರವನ್ನು ಟವರು ಇಟ್ಟುಕೊಂಡಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ವಸತಿ ಖಾತೆಗೆ ಎಂಟಿಬಿ ಬೇಡಿಕೆ ಇಟ್ಟಿದ್ದರಂತೆ.
ಇದೀಗ ತಮ್ಮ ಖಾತೆ ಬೇಡಿಕೆಯಿಂದ ವಸತಿ ಸಚಿವ ಎಂ.ಟಿ.ಬಿ. ನಾಗರಾಜ್ ಹಿಂದಕ್ಕೆ ಸರಿದಿದ್ದಾರೆ. ಹೀಗಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರ ಪ್ರಯತ್ನದಿಂದ ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಎದುರಾಗಿದ್ದ ಕಂಟದ ದೂರವಾದಂತಾಗಿದೆ. ಇನ್ನು ಮತ್ತೊಂದೆಡೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸಚಿವ ಆನಂದ್ ಸಿಂಗ್ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಆದರೆ ರಾಜೀನಾಮೆ ಎಚ್ಚರಿಕೆಯನ್ನು ಅವರು ಮತ್ತೆ ಕೊಟ್ಟಿರುವುದು ತೀವ್ರ ಕುತೂಹಲಕ್ಕೆ ಕಾರನವಾಗಿದೆ. ಆನಂದ್ ಸಿಂಗ್ ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಕೂಡ ಯುಟರ್ನ್: ಇನ್ನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ನಿರ್ಧಾರದಿಂದ ಸಚಿವ ಆನಂದ್ ಸಿಂಗ್ ಕೂಡ ಹಿಂದಕ್ಕೆ ಸರಿಸಿದ್ದಾರೆ. ಪ್ರಮುಖ ಖಾತೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಆನಂದ್ ಸಿಂಗ್ ಸಚಿವಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದರು. ಆದರೆ ಶಾಸಕ ರಾಜೂಗೌಡ ಅವರು ವಿಜಯನಗರಕ್ಕೆ ತೆರಳಿ ಬೆಂಗಳೂರಿಗೆ ಸಚಿವ ಆನಂದ್ ಸಿಂಗ್ ಅವರನ್ನು ಕರೆತಂದಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಅವರು ಆನಂದ್ ಸಿಂಗ್ ಅವರೊಂದಿಗೆ ಮಾತನಾಡಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದರು. ಸಂಧಾನ ಸಫಲವಾಗಿದ್ದು, ಇಬ್ಬರೂ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಗೆ ನಿರ್ಧಾರ ಮಾಡಿದ್ದಾರೆ. ಜೊತೆಗೆ ಆನಂದ್ ಸಿಂಗ್ ರಾಜೀನಾಮೆ ನಿರ್ಧಾರದಿಂದ ಹಿಂದಕ್ಕೆ ಸರಿದಿರುವುದು ಸಿಎಂ ಬೊಮ್ಮಾಯಿ ಅವರಿಗೆ ಎದುರಾಗಿದ್ದ ಮತ್ತೊಂದು ಸಂಕಷ್ಟ ದೂರವಾದಂತಾಗಿದೆ.
Recommended Video