ಮಹದಾಯಿ ವಿಚಾರದಲ್ಲಿ ಸಿದ್ದರಾಮಯ್ಯರನ್ನು ಬೆಂಬಲಿಸಬೇಕು ಏಕೆ?
ಬೆಂಗಳೂರು, ಡಿಸೆಂಬರ್ 27: ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಮಾತುಕತೆ ಮೂಲಕ ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳುವಂತೆ ನ್ಯಾಯಮಂಡಳಿ ನೀಡಿರುವ ಸಲಹೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿ, ಈ ಬಗ್ಗೆ ಮಾತುಕತೆ ನಡೆಸೋಣ ಬನ್ನಿ ಎಂದು ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವರ್ಷ ಕಳೆದಿದೆ. ಆದರೆ, ಇಲ್ಲಿ ತನಕ ಒಮ್ಮೆ ಕೂಡಾ ಉತ್ತರ ಸಿಕ್ಕಿಲ್ಲ.
2016ರ ಸೆಪ್ಟೆಂಬರ್ ತಿಂಗಳಿನಿಂದ ಇಲ್ಲಿ ತನಕ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿದ್ದ ಗೋವಾ ಸರ್ಕಾರಕ್ಕೆ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿದ್ದು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಮನೆಯಲ್ಲಿ ಎಂಬುದು ಮರೆಯುವಂತಿಲ್ಲ.
2017ರ ಡಿಸೆಂಬರ್ 20ರಂದು ಗೋವಾ ಸಿಎಂ ಅವರ ಬಳಿ ಮಾಜಿ ಮುಖ್ಯಮಂತ್ರಿ, ರೈತ ಪರ ಚಿಂತಕ ಬೂಕನಕೆರೆಯ ಯಡಿಯೂರಪ್ಪ ಅವರು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಪತ್ರ ಕಳಿಸಿ ಎಂದು ಮನೋಹರ್ ಹೇಳಿದ್ದಾರೆ. ಮುಂದೇನಾಯ್ತು ಎಲ್ಲರಿಗೂ ತಿಳಿದಿದೆ. ಆದರೆ, ಸಿದ್ದರಾಮಯ್ಯ ಅವರ ಸರ್ಕಾರ ಮಾಡಿದ ಮನವಿಗಳಿಗೆ ಏಕೆ ಬೆಲೆ ಸಿಕ್ಕಿಲ್ಲ? ಎಂಬುದಕ್ಕೆ ಉತ್ತರ ಸಿಗಬೇಕಿದೆ.

ಗೋವಾ ಸಿಎಂ ನಮ್ಮ ಪತ್ರಕ್ಕೆ ಉತ್ತರಿಸುತ್ತಿಲ್ಲ ಏಕೆ?
ಗೋವಾ ಸಿಎಂ ಮನೋಹರ್ ಪರಿಕ್ಕಾರ್ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಬರೆದ ಪತ್ರದಿಂದ ಏನು ಉಪಯೋಗ. ಇದರ ಬದಲು ಕರ್ನಾಟಕ ಸರ್ಕಾರದ ಅಧಿಕೃತ ಪತ್ರಕ್ಕೆ ಒಮ್ಮೆಯಾದರೂ ಪ್ರತಿಕ್ರಿಯೆ ನೀಡಿದ್ದರೆ, ಅಧಿಕೃತ ದಾಖಲೆಯಾಗುತ್ತಿತ್ತು ನ್ಯಾಯಾಧೀಕರಣ ಹಾಗೂ ಕೋರ್ಟಿನ ಮುಂದೆ ಇಡಬಹುದಾಗಿತ್ತು. ಆದರೆ, ಬಿಜೆಪಿ ಆಂತರಿಕ ಮಾಡಿಕೊಂಡ ಪತ್ರ ವಿನಿಮಯದಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮುಂದಿನ ವಿಚಾರಣೆ ತನಕ ಸಮಯವಿದೆ
ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ನಡುವಿನ ಅರ್ಜಿ ವಿಚಾರಣೆಯನ್ನು ನ್ಯಾಯಾಧೀಕರಣ ಫೆಬ್ರವರಿ 06 ರಿಂದ 22, 2018ರ ಅವಧಿಯಲ್ಲಿ ಕೈಗೆತ್ತಿಕೊಳ್ಳಲಿದೆ. ಈ ಕುರಿತಂತೆ ನವೆಂಬರ್ 30, 2017ರಲ್ಲಿ ಆದೇಶ ಹೊರ ಬಂದಿದೆ. ಆದರೆ, ಈ ಅವಧಿಯೊಳಗೆ ಮೂರು ರಾಜ್ಯಗಳ ಸಿಎಂ, ಜಲ ಸಂಪನ್ಮೂಲ ಸಚಿವರು, ಮುಖ್ಯಕಾರ್ಯದರ್ಶಿಗಳು ಕುಳಿತು ಸೌಹಾರ್ದಯುತ ಮಾತುಕತೆ ನಡೆಸುವ ಅವಕಾಶವನ್ನು ನ್ಯಾಯಾಧೀಕರಣ ನೀಡಿದೆ. ಈ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಈಗಾಗಲೇ ಹಲವು ಬಾರಿ ಯತ್ನಿಸಿದೆ.

ಕರ್ನಾಟಕದ ನೀರಿನ ಬೇಡಿಕೆ, ಲೆಕ್ಕಾಚಾರ
ಒಟ್ಟಾರೆಯಾಗಿ ಮಹಾದಾಯಿ ಹಾಗೂ ಕಳಸಾ ಬಂಡೂರಿ ನಾಲೆಗಳಿಗಾಗಿ 7.56 ಟಿಎಂಸಿ ನೀರನ್ನು ಕರ್ನಾಟಕ ಸರ್ಕಾರ ಕೋರಿದೆ. ಅದು ಕೂಡಾ ಕುಡಿಯುವ ನೀರಿಗಾಗಿ ಬಳಸಲು ಮಾತ್ರ. ಒಟ್ಟಾರೆ, ಲಭ್ಯ 199 ಟಿಎಂಸಿ ಅಡಿ ನೀರಿನ ಶೇ75ರಷ್ಟು(ನ್ಯಾಯಾಧೀಕರಣದ 2003ರ ನಿರ್ಣಯದಂತೆ) 14.98 ಟಿಎಂಸಿಯಷ್ಟು ರಾಜ್ಯಕ್ಕೆ ಸಿಗಬೇಕಿದೆ. ಈ ಪಾಲು ರಾಜ್ಯದ ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳಿಗೆ ಸಿಗಬೇಕಿದೆ. ಮಿಕ್ಕಿದ್ದು ಮಲಪ್ರಭಾ ನದಿಗೆ ಹರಿಸಿ ಬರಪೀಡಿತ ಪ್ರದೇಶಗಳಿಗೆ ನೀರುಣಿಸಲು ಸರ್ಕಾರ ಮನವಿ ಸಲ್ಲಿಸಿದೆ.

ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿರುವ 100 ಟಿಎಂಸಿ
ಮಾಂಡೋವಿ(ಮಹಾನದಿ) ನೀರಲ್ಲಿ 7.56 ಟಿಎಂಸಿ ಪಾಲು ಕೇಳಿರುವ ಕರ್ನಾಟಕ ಸರ್ಕಾರಕ್ಕೆ ಅಗತ್ಯ ನೀರು ನೀಡಲು ಗೋವಾ ಹಾಗೂ ಮಹಾರಾಷ್ಟ್ರ ಹಿಂದೇಟು ಹಾಕುತ್ತಿದೆ.
ಕರ್ನಾಟಕದಲ್ಲಿ 29 ಕಿ.ಮೀ ಹಾಗೂ 52 ಕಿ.ಮೀ ಗೋವಾದಲ್ಲಿ ಹರಿಯುತ್ತದೆ. ಆದರೆ, 200 ಟಿಎಂಸಿ ನೀರು ವ್ಯರ್ಥವಾಗಿ ಅರಬ್ಬಿ ಸಮುದ್ರ ಸೇರುತ್ತಿದೆ. ಹೀಗೆ ವ್ಯರ್ಥವಾಗಿ ಸೇರುತ್ತಿರುವ ನೀರಿನ 100 ಟಿಎಂಸಿ ಪ್ರಮಾಣವನ್ನು ಮಲಪ್ರಭಾ ನದಿಗೆ ಹರಿಸಿ ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಿಗೆ ನೀರುಣಿಸಲು ನಡೆಸಿರುವ ಪ್ರಯತ್ನಕ್ಕೆ ನಿರಂತರ ಹೊಡೆತ ಬೀಳುತ್ತಿದೆ.











Click it and Unblock the Notifications