ಧಾರ್ಮಿಕ ಕೇಂದ್ರಗಳಲ್ಲಿ ಲೌಡ್ ಸ್ಪೀಕರ್: ಮೂರು ವಾರಗಳಲ್ಲಿ ವರದಿಗೆ ಹೈಕೋರ್ಟ್ ಆದೇಶ
ಬೆಂಗಳೂರು. ಜೂ.17: ಧಾರ್ಮಿಕ ಕೇಂದ್ರಗಳಲ್ಲಿ ನಿರ್ದಿಷ್ಟ ಅವಧಿ ನಂತರವೂ ಲೌಡ್ ಸ್ಪೀಕರ್ ಬಳಕೆ ಮಾಡುತ್ತಿದ್ದರೆ ಅಂತಹ ಕೇಂದ್ರಗಳಲ್ಲಿ ಧ್ವನಿವರ್ಧಕ ಬಳಕೆ ತಡೆಗೆ ಕ್ರಮ ಕೈಗೊಂಡು 3 ವಾರಗಳಲ್ಲಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿದೆ.
ರಾಜ್ಯದಲ್ಲಿ ಶಬ್ಧ ಮಾಲಿನ್ಯ ನಿಯಂತ್ರಣ ಕಾಯಿದೆ ಕಟ್ಟುನಿಟ್ಟಿನ ಜಾರಿ ಮತ್ತು ನಗರದಲ್ಲಿ ಮಸೀದಿಗಳು ಧ್ವನಿ ವರ್ಧಕ ಬಳಸಿ ಶಬ್ಧ ಮಾಲಿನ್ಯ ಉಂಟಾಗುತ್ತಿರುವ ಕುರಿತು ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ
ಅರ್ಜಿಗಳ ಕುರಿತು ಮುಖ್ಯ ನ್ಯಾಯಮೂರ್ತಿ ರಿತುರಾಜ್
ಅವಸ್ಥಿ ನೇತೃತ್ವದ ವಿಭಾಗೀಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಸರ್ಕಾರದ ವಾದ ಆಲಿಸಿದ ಬಳಿಕ ನ್ಯಾಯಪೀಠ, ಧ್ವನಿವರ್ಧಕ ಬಳಕೆಗೆ ಕಾಯಂ ಅನುಮತಿ ನೀಡಲಾಗುತ್ತಿಲ್ಲ. ಶಬ್ಧ ಮಾಲಿನ್ಯ ನಿಯಮದಡಿ 2 ವರ್ಷದ ಮಟ್ಟಿಗೆ ತಾತ್ಕಾಲಿಕ ಅನುಮತಿ ನೀಡಲಾಗುತ್ತಿದೆ ಎಂದು ಹೇಳಿದೆ. ಆದರಂತೆ ಬೆಳಿಗ್ಗೆ 6 ಗಂಟೆ ನಂತರವೇ ಧ್ವನಿ ವರ್ಧಕ ಬಳಕೆ ಮಾಡಬೇಕು, ಆದರೆ ಕೆಲವೆಡೆ ದೇವಾಲಯಗಳು ಮತ್ತು ಮಸೀದಿಗಳು ಸೇರಿ ಎಲ್ಲೆಡೆ ಬೆಳಿಗ್ಗೆ 6ಕ್ಕೂ ಮುನ್ನವೇ ಧ್ವನಿ ವರ್ಧಕ ಬಳಕೆ ಮಾಡಲಾಗುತ್ತಿದ್ದು, ಅದನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಹೇಳಿತು.
ಅಲ್ಲದೆ, ಅನುಮತಿ ಇಲ್ಲದೆ ಧ್ವನಿ ವರ್ಧಕ ಬಳಕೆ ಮಾಡುವವರ ವಿರುದ್ಧ ಅಭಿಯಾನ ನಡೆಸಿ 3 ವಾರಗಳಲ್ಲಿ ಕೈಗೊಂಡ ಕ್ರಮದ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿತು.
ಸರ್ಕಾರದ ವಾದವೇನು?
ಸರ್ಕಾರದ ಪರ ವಾದ ಮಂಡಿಸಿದ ವಕೀಲರು. ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಲೌಡ್ ಸ್ಪೀಕರ್ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ರಾತ್ರಿ 10 ರಿಂದ 12 ರವರೆಗೆ ಉತ್ಸವ, ಸಮಾರಂಭಗಳ ವೇಳೆ ವಿಶೇಷ ಅನುಮತಿಗೆ ಅವಕಾಶವಿದ್ದು, ಅದೂ ಕೂಡ ವರ್ಷದಲ್ಲಿ 15 ದಿನಗಳ ಅವಧಿಗೆ ಮಾತ್ರ ನೀಡಲಾಗುವುದು. ಲೌಡ್ ಸ್ಪೀಕರ್ ಗೆ ಶಾಶ್ವತ ಅನುಮತಿ ನೀಡುತ್ತಿಲ್ಲ. ಜೊತೆಗೆ ಸರ್ಕಾರ ಧ್ವನಿವರ್ಧಕಗಳಿಗೆ ಅನುಮತಿ ನೀಡಲು ನಾನಾ ಹಂತದಲ್ಲಿ ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದರು.
ಧಾರ್ಮಿಕ ಕೇಂದ್ರಗಳಿಗೆ ಧ್ವನಿ ವರ್ಧಕಗಳ ಬಳಕೆಗೆ 2 ವರ್ಷಗಳವರೆಗೆ ಮಾತ್ರ ಲೈಸೆನ್ಸ್ ನೀಡಲಾಗುತ್ತಿದೆ .2 ವರ್ಷದ ನಂತರ ಲೈಸೆನ್ಸ್ ನವೀಕರಿಸಬಹುದು ಎಂದು ಅವರು ಹೇಳಿದರು.
ಆಗ ನ್ಯಾಯಪೀಠ, ಹಾಗಿದ್ದರೆ ರಾತ್ರಿ ವೇಳೆ ಧ್ವನಿವರ್ಧಕ ಬಳಕೆ ನಿಲ್ಲಿಸಲು ಕೈಗೊಂಡ ಕ್ರಮವೇನು ?.ಎಷ್ಟು ಧಾರ್ಮಿಕ ಕೇಂದ್ರಗಳಿಗೆ ನೋಟಿಸ್ ನೀಡಿದ್ದೀರಾ? ಧಾರ್ಮಿಕ ಸ್ಥಳಗಳ ಸರ್ವೆ ನಡೆಸಿ ಕ್ರಮ ಕೈಗೊಳ್ಳಿ .ರಾತ್ರಿ ವೇಳೆ ಧ್ವನಿವರ್ಧಕ ಬಳಕೆ ತಡೆಗೆ ಅಭಿಯಾನ ನಡೆಸಿ ಎಂದು ಆದೇಶಿಸಿತು.
ಅರ್ಜಿದಾರರ ಪರ ವಕೀಲರು, ಸರ್ಕಾರದ ನಿಯಮಗಳಲ್ಲಿ ಗೊಂದಲವಿದೆ, ಅದರಲ್ಲಿ ಸ್ಪಷ್ಟತೆ ಇಲ್ಲ. ಬೆಳಿಗ್ಗೆಯೇ ಶಬ್ಧ ಮಾಲಿನ್ಯ ಮಾಡುವವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ನಿಲುವು ತಿಳಿಸಲು ಸೂಚನೆ:
ನ್ಯಾಯಪೀಠ ಕಳೆದ ವಾರ, ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿ ವರ್ಧಕಗಳ ಬಗೆ ಯಾವ ಆಧಾರದಲ್ಲಿ, ಯಾವ ಕಾನೂನಿನಡಿ ಲೈಸನ್ಸ್ ನೀಡಲಾಗುತ್ತಿದೆ, ಅದಕ್ಕೆ ಅಧಿಕಾರವೆಲ್ಲಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಅರ್ಜಿದಾರರ ಪರ ವಕೀಲರು, ಪೊಲೀಸರು ಲೌಡ್ ಸ್ಪೀಕರ್ ಗೆ ಅನುಮತಿ ನೀಡುತ್ತಿದ್ದಾರೆ.ಹಬ್ಬ
ಹರಿದಿನಗಳಲ್ಲಿ ಸೀಮಿತ ಅವಧಿಗೆ ನೀಡಬಹುದು. ಆದರೆ ಅವ್ಯಾಹತವಾಗಿ ಸರ್ಕಾರ ಅನುಮತಿ ನೀಡುತ್ತಿದೆ. ಕೆಲವು ಮಸೀದಿಗಳಲ್ಲಿ ಈಗಲೂ ಲೌಡ್ ಸ್ಪೀಕರ್ ಬಳಸಲಾಗುತ್ತಿದೆ ಎಂದು ನ್ಯಾಯಪೀಠದ ಗಮನ ಸೆಳೆದರು.
ಅದಕ್ಕೆ ನ್ಯಾಯಪೀಠ, ಯಾವ ಕಾನೂನಿನಡಿ ಧ್ವನಿವರ್ಧಕಗಳಿಗೆ ಅನುಮತಿ ನೀಡುತ್ತಿದ್ದೀರಿ? ಲೌಡ್ ಸ್ಪೀಕರ್ ಗೆ ಯಾವ ನಿಯಂತ್ರಣ ವಿಧಿಸಲಾಗಿದೆ? ಶಬ್ದ ಮಾಲಿನ್ಯ ನಿಯಂತ್ರಣ ನಿಯಮ ಪಾಲಿಸಲಾಗಿದೆಯೇ ?ಶಾಶ್ವತ ಅನುಮತಿ ನೀಡಲು ಕಾನೂನಿನಡಿ ಅನುಮತಿ ಇದೆಯೇ ? ಯಾವ ಅಧಿಕಾರಿಗಳಿಗೆ ಲೈಸೆನ್ಸ್ ನೀಡುವ ಅಧಿಕಾರ ನೀಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಲು ಸರ್ಕಾರಕ್ಕೆ ಸೂಚನೆ ವಿಚಾರಣೆಯನ್ನು ಜೂ.17ಕ್ಕೆ ಮುಂದೂಡಿತು.
ಅಲ್ಲದೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಏನು ಮಾಡುತ್ತಿದೆ, ಧ್ವನಿ ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳಬೇಕಲ್ಲ. ಅದು ಮೂಕಪ್ರೇಕ್ಷಕನಂತೆ ಕೆಲಸ ಮಾಡುತ್ತಿದೆಯೇ ಎಂದು ನ್ಯಾಯಪೀಠ ಕೇಳಿತು.